ಚಂದನವನದಲ್ಲಿ ಸಿದ್ಧವಾಗಿದೆ ʻಬಂಡೆ ಸಾಹೇಬ್ʼ; ಇದು ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತ ಸಿನಿಮಾ
ಕೆಲವು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ರೌಡಿ ಶೀಟರ್ವೊಬ್ಬನನ್ನು ಸೆರೆಹಿಡಿಯುವ ವೇಳೆ ಶೂಟೌಟ್ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಕುರಿತಾದ ಚಿತ್ರವೊಂದು ಸ್ಯಾಂಡಲ್ವುಡ್ನಲ್ಲಿ ನಿರ್ಮಾಣವಾಗಿದೆ. ನೈಜಘಟನೆ ಆಧರಿತ ಈ ಚಿತ್ರಕ್ಕೆ ಬಂಡೆ ಸಾಹೇಬ್ ಎಂದು ಹೆಸರಿಡಲಾಗಿದೆ.

Bande Saheb: ಕನ್ನಡದಲ್ಲಿಯೂ ಆಗೊಂದು ಈಗೊಂದು ನೈಜ ಘಟನೆ ಆಧರಿತ ಸಿನಿಮಾಗಳು ತೆರೆಗೆ ಬರುತ್ತಿರುತ್ತವೆ. ಆದರೆ, ಹೆಚ್ಚು ಸದ್ದು ಮಾಡಿ, ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳ ಸಂಖ್ಯೆ ಕಡಿಮೆ. ಇದೀಗ ಪೊಲೀಸ್ ಅಧಿಕಾರಿಯೊಬ್ಬರ ಕುರಿತಾದ ಸಿನಿಮಾವೊಂದು ಸ್ಯಾಂಡಲ್ವುಡ್ನಲ್ಲಿ ಸಿದ್ಧವಾಗಿದೆ. ಸದ್ದಿಲ್ಲದೆ ಸಿದ್ಧವಾಗಿ, ಶೂಟಿಂಗ್ ಸಹ ಮುಗಿಸಿಕೊಂಡು ಬಿಡುಗಡೆಯ ಸನಿಹ ಬಂದು ನಿಂತಿದೆ. ಆ ಚಿತ್ರವೇ ಬಂಡೆ ಸಾಹೇಬ್.
ಕಳೆದ ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಬಂಡೆ ಸಾಹೇಬ್ ಎಂದು ಹೆಸರಿಡಲಾಗಿದೆ.
ಚಿತ್ರದಲ್ಲಿ ಬಂಡೆ ಮಲ್ಲಿಕಾರ್ಜುನ್ ಪಾತ್ರದಲ್ಲಿ ನಾಯಕನಾಗಿ ಸಂತೋಷ್ ರಾಮ್ ನಟಿಸಿದ್ದಾರೆ. "ಕೃಷ್ಣ ರುಕ್ಮಿಣಿ" ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಹಾಗೂ "ಟೋನಿ" ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಸಂತೋಷ್ ರಾಮ್, "ಪಂಟ್ರು" ಚಿತ್ರದ ಮೂಲಕ ನಾಯಕನಾದರು. ಸಂತೋಷ್ ರಾಮ್ ಅವರಿಗೆ ನಾಯಕನಾಗಿ ಇದು ಎರಡನೇ ಚಿತ್ರ. ದಕ್ಷ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ಎನ್ನುತ್ತಾರೆ ನಾಯಕ ಸಂತೋಷ್ ರಾಮ್.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿ. ವೀರಣ್ಣ ಕೊರಳ್ಳಿ, ಬಿರಾದಾರ್, ಸಿಂಬಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಲ್ಲಿಗೆ ಸಿನಿ ಕಂಬೈನ್ಸ್ ಬ್ಯಾನರ್ನಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ ಕೊರಳ್ಳಿ ನಿರ್ಮಿಸಿರುವ ಈ ಚಿತ್ರವನ್ನು ಚಿನ್ಮಯ್ ರಾಮ್ ನಿರ್ದೇಶಿಸಿದ್ದಾರೆ. "ಕುರುಕ್ಷೇತ್ರ", " ದಿ ವಿಲನ್" ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿನ್ಮಯ್ ರಾಮ್ ಬಂಡೆ ಸಾಹೇಬ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.
ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ನಾಲ್ಕು ಹಾಡುಗಳಿವೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವೀರಣ್ಣ ಕೊರಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮುಂಜಾನೆ ಮಂಜು ಛಾಯಾಗ್ರಹಣ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ "ಬಂಡೆ ಸಾಹೇಬ್" ಚಿತ್ರಕ್ಕಿದೆ.
