ಪ್ರಜ್ವಲ್ ಪ್ರಕರಣ ತಣ್ಣಗಾಗ್ತಿದ್ದಂತೆ ಸದ್ದು ಮಾಡ್ತಿದೆ ತನಿಷಾ ಕುಪ್ಪಂಡ ‘ಪೆನ್ಡ್ರೈವ್’! ವರ್ತೂರ್ ಸಂತೋಷ್ ಸಮ್ಮುಖದಲ್ಲಿ ಅನಾವರಣ
ಇಷ್ಟು ದಿನ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಪೆನ್ಡ್ರೈವ್ ಸರದಿ. ಅಂದರೆ, ಪೆನ್ಡ್ರೈವ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಬೆಂಕಿ ತನಿಷಾ.

Tanisha Kuppanda: ಪೆನ್ಡ್ರೈವ್ ಅಂದ ತಕ್ಷಣ ಜನ್ರ ನೋಟವೇ ಬೇರೆ ಕಡೆಗೆ ಹೊರಳುತ್ತದೆ. ಮುಖದಲ್ಲಿ ಒಂದು ಸಣ್ಣ ನಗು ಮೂಡುತ್ತದೆ. ಕರ್ನಾಟಕದಲ್ಲಿ ಅಂಥದ್ದೊಂದು ಸದ್ದು ಮಾಡಿದೆ ಆ ಒಂದು ಸಣ್ಣ ಎಲೆಕ್ಟ್ರಾನಿಕ್ ಉಪಕರಣ. ಅಂದರೆ, ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳಿರುವ ಪೆನ್ಡ್ರೈವ್ಅನ್ನು ಹಾಸನದ ತುಂಬೆಲ್ಲ ಹಂಚಿಕೆ ಮಾಡಲಾಗಿತ್ತು. ಅದರಲ್ಲಿನ ಅಶ್ಲೀಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿಯೂ ಸದ್ದು ಮಾಡಿದ್ದವು. ಆ ಆರೋಪದ ಮೇಲೆಯೇ ಎಲೆಕ್ಷನ್ನಲ್ಲಿ ಸೋತು ಸದ್ಯ ಜೈಲು ಸೇರಿದ್ದಾರೆ. ಈ ನಡುವೆ ಚಂದನವನದಲ್ಲಿಯೂ ಬೇರೊಂದು ಪೆನ್ಡ್ರೈವ್ ಸುದ್ದಿಯಲ್ಲಿದೆ!
ಬಿಗ್ಬಾಸ್ ಮೂಲಕ ನಾಡಿನ ತುಂಬೆಲ್ಲ ಗುರುತಿಸಿಕೊಂಡವರಲ್ಲಿ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್. ಬಿಗ್ ಮನೆಯಲ್ಲಿದ್ದಾಗ ಆಪ್ತ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಮನೆಯಿಂದ ಆಚೆ ಬಂದ ಮೇಲೂ ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಇದೀಗ ಇದೇ ಜೋಡಿ ಪೆನ್ಡ್ರೈವ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಅಂದರೆ, ತನಿಷಾ ಕುಪ್ಪಂಡ ಪೆನ್ಡ್ರೈವ್ ಹೆಸರಿನ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೆಬಾಸ್ಟಿಯನ್ ಡೇವಿಡ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಹಾಗಾದರೆ ಏನಿದು ಪೆನ್ಡ್ರೈವ್?
ಸಹಜವಾಗಿ ಪೆನ್ಡ್ರೈವ್ ಎಂದ ತಕ್ಷಣ, ಇದು ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನೇ ಆಧರಿಸಿದ ಚಿತ್ರವೇ? ಎಂಬ ಅನುಮಾನ ಮೂಡುತ್ತದೆ. ಆದರೆ, ಇದು ಯಾವ ಥರದ ಸಿನಿಮಾ ಎಂಬ ಬಗ್ಗೆ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ರಿವೀಲ್ ಮಾಡಿಲ್ಲ. ಕೆಲ ಮೂಲಗಳ ಪ್ರಕಾರ, ಈ ಶೀರ್ಷಿಕೆಗೂ, ಪ್ರಜ್ವಲ್ ರೇವಣ್ಣ ಸಿನಿಮಾಕ್ಕೂ ಯಾವುದೇ ಸಂಬಂಧವೂ ಇಲ್ಲವಂತೆ. ಈ ಎಲ್ಲದರ ಬಗ್ಗೆ ಜುಲೈ 4ರಂದೇ ಉತ್ತರ ಸಿಗಲಿದೆ. ಅಂದರೆ, ಗುರುವಾರ ಈ ಸಿನಿಮಾದ ಅದ್ಧೂರಿ ಮುಹೂರ್ತ ನಡೆಯಲಿದೆ.
ಇದೀಗ ಇದೇ ಪೆನ್ಡ್ರೈವ್ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಗೀತ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಆಗಮಿಸಲಿದ್ದಾರೆ. ಅದೇ ರೀತಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಿದ್ದಾರೆ. ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳೂ ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ..
ಪೆನ್ಡ್ರೈವ್ ಸಿನಿಮಾ ನಾಯಕಿ ಪ್ರಧಾನ ಚಿತ್ರ ಎಂಬ ಅನುಮಾನ ಕಾಡುತ್ತಿದೆ. ಸದ್ಯಕ್ಕೆ ತನಿಷಾ ಕುಪ್ಪಂಡ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಇವರ ಜತೆಗೆ ಸಂಜನಾ ನಾಯ್ಡು, ರಾಧಿಕಾ, ಅರ್ಚನಾ, ಭಾಗ್ಯ, ಗೀತಪ್ರಿಯಾ, ರೇಣುಕಾ, ಗೀತಾ ಇನ್ನೂ ಹಲವು ಕಲಾವಿದರು ನಟಿಸುತ್ತಿದ್ದಾರೆ. ಲಯನ್ ಆರ್ ವೆಂಕಟೇಶ್ ಹಾಗೂ ಲಯನ್ ಎಸ್ ವೆಂಕಟೇಶ್ 'ಪೆನ್ಡ್ರೈವ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಬಿಗ್ಬಾಸ್ನಿಂದ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ ತನಿಷಾ ಕುಪ್ಪಂಡ. ಸಿನಿಮಾ ಮಾತ್ರವಲ್ಲದೆ, ಬಗೆಬಗೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಇವೆಂಟ್ಗಳಲ್ಲಿಯೂ ಕಾಣಿಸಿಕೊಂಡು, ಗಳಿಕೆ ಹಾದಿ ಹಿಡಿದಿದ್ದಾರೆ. ಈ ನಡುವೆ ಹೊಸ ಸಿನಿಮಾಗಳ ಅವಕಾಶಗಳೂ ತನಿಷಾಗೆ ಒಲಿದು ಬರುತ್ತಿವೆ. ಒಂದು ಕಾಲದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದ ತನಿಷಾ ಬದುಕಲ್ಲೀಗ ಹೊಸ ಬೆಳಕು ಮೂಡಿದೆ.
