‘ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹೃದಯಾಘಾತಕ್ಕೆ ಆರಡಿ ಮೃಗ ದರ್ಶನ್ ಕಾರಣ!’; ಬಿಗ್ ಬಾಸ್ ಸ್ಪರ್ಧಿಯ ಆರೋಪ
ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದಿನ ಅವರ ಒಂದಷ್ಟು ಬೇಡದ ಕೆಲಸಗಳು ಇದೀಗ ಮುನ್ನೆಲೆಗೆ ಬರುತ್ತಿವೆ. ಆ ಪೈಕಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ನಟ ದರ್ಶನ್ ಮಾನಸಿಕ ಹಿಂಸೆ ನೀಡಿದ್ದರು ಎಂದು ಬಿಗ್ಬಾಸ್ ಸ್ಪರ್ಧಿ ಆರೋಪಿಸಿದ್ದಾರೆ.

Prashanth Sambargi on Darshan: ನಟ ದರ್ಶನ್ ಕೊಲೆ ಆರೋಪದಡಿ ಬಂಧಿಯಾಗಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಲ್ಲಿಂದ ಅಪಹರಿಸಿ ಬೆಂಗಳೂರಿಗೆ ಕರೆದು ತಂದು ಚಿತ್ರಹಿಂಸೆ ನೀಡಿ ದರ್ಶನ್, ಪವಿತ್ರಾ ಗೌಡ ಮತ್ತವರ ಗ್ಯಾಂಗ್ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಎಲ್ಲರ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದ ಜತೆಗೆ ಈ ಹಿಂದಿನ ಕೆಲವು ಘಟನೆಗಳು ಮುನ್ನೆಲೆಗೆ ಬರಲಾರಂಭಿಸಿವೆ.
ನಟ ದರ್ಶನ್ ಅವರ ಈ ಹಿಂದಿನ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರ ಕಣ್ಮರೆಯೂ ಇದೀಗ ಮತ್ತೆ ಆಕ್ಟೀವ್ ಆಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಬಿಗಿಯಾದಷ್ಟು, ಮಲ್ಲಿ ನಾಪತ್ತೆ ವಿಚಾರವೂ ಬೆಳಕಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದ ದರ್ಶನ್ ಅವರ ಮ್ಯಾನೇಜರ್ ಆಗಿದ್ದ ಮಲ್ಲಿ ದಿಢೀರ್ ನಾಪತ್ತೆಯಾಗಲು ಅವರ ತಲೆ ಮೇಲೆ ಕೋಟಿ ಕೋಟಿ ಸಾಲ ಇತ್ತಂತೆ ಅನ್ನೋ ಆರೋಪವಿದೆ. ನಟ ದರ್ಶನ್ ಅವರಿಂದಲೂ ಹಣ ಎಗರಿಸಿ ಪರಾರಿಯಾಗಿದ್ದ ಎಂದೂ ಹೇಳಲಾಗುತ್ತಿದೆ. ಆದರೆ, ಸದ್ಯ ಅವರೆಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಉತ್ತರವಿಲ್ಲ.
ಇದರ ಜತೆಗೆ ದರ್ಶನ್ ಅವರ ಫಾರ್ಮ್ಹೌಸ್ನಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಎಷ್ಟೋ ಕೆಲಸಗಾರರು ದರ್ಶನ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಹೀಗಿರುವಾಗಲೇ ಬಿಗ್ಬಾಸ್ ಕನ್ನಡದ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಸಹ ಇದೀಗ ನಟ ದರ್ಶನ್ ವಿರುದ್ಧ ಮುಗಿಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಪ್ರಶಾಂತ್, ತಮ್ಮ ಆಪ್ತನಿಗೆ ಹೃದಯಾಘಾತವಾಗಲು ದರ್ಶನ್ ಕಾರಣ ಎಂದಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ಸಂಬರಗಿ ಪೋಸ್ಟ್ನಲ್ಲಿ ಏನಿದೆ?
ಪ್ರಶಾಂತ್ ಸಂಬರಗಿ ಹೇಳಿದ್ದೇನು?
"ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು TV ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರೋ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ ಹಾರ್ಟ್ ಅಟ್ಯಾಕ್ ಆಯಿತು. ಇದಕ್ಕೆ ಕಾರಣ, ರೌಡಿ ಬಾಸ್ (D boss is now R Boss rowdy boss) ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ" ಎಂದು ಬರೆದುಕೊಂಡಿದ್ದಾರೆ.
ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಮಾತು
"ಚಿತ್ರದುರ್ಗದಲ್ಲಿಯೇ ಇದ್ದ ರೇಣುಕಾಸ್ವಾಮಿಗೆ ಒಂದು ಫೋನ್ ಮಾಡಿ, ಯಾಕೆ ಹೀಗೆ ಮಾಡಿದೆ ರಾಸ್ಕಲ್ ಅಂದಿದ್ರೆ, ಅವನು ಅಣ್ಣಾ ತಪ್ಪಾಯ್ತು ಅಂತ ಹೇಳ್ತಿದ್ದ. ನಮಗಷ್ಟೇ ಅಲ್ಲ ಯಾವ ಹೆಣ್ಮಕ್ಕಳಿಗೂ ಹೀಗೆ ಮಾಡಬೇಡ ಅಂದಿದ್ರೆ ದರ್ಶನ್ ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ, ಅದನ್ನ ಬಿಟ್ಟು ಮಾಡಿದ್ದೇನು? ದರ್ಶನ್ ನೀನು ನಿನಗೆ ಗೊತ್ತಿಲ್ಲದಂತೆ ಆಹಾರವಾದೆ. ಯಾರಿಗೆ ಆಹಾರ ಆದೆ, ಯಾಕೆ ಆಹಾರ ಆದೆ ಎಂಬುದು ನಿನಗೆ ಖಂಡಿತ ಗೊತ್ತಿಲ್ಲ. ಗೊತ್ತಿದ್ದಿದ್ದರೆ ಖಂಡಿತ ಈ ತಪ್ಪು ಮಾಡುತ್ತಿರಲಿಲ್ಲ" ಎಂದಿದ್ದಾರೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್.
ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆ..
"ದರ್ಶನ್ ಆಚೆ ಬಂದೇ ಬರ್ತಾನೆ. ಬಂದ ಮೇಲೂ ಅವನು ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆಯಾಗ್ತಾನೆ. ಅಂಧಾಭಿಮಾನಿಗಳು ಏನೇ ಹೇಳಿದ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಹಂದಿಯಾಗಿದ್ರೆ ಎಷ್ಟೋ ಬೆಲೆ ಇರುತ್ತೆ, ಅವನಿಗೆ ಬೆಲೆ ಇರಲ್ಲ" ಎಂದೂ ಅಗ್ನಿ ಶ್ರೀಧರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಿಭಾಗ