Kichcha Sudeep: ಕಿಚ್ಚನಿಗೆ ಬೆದರಿಕೆ ಪತ್ರ ಬರೆದಿದ್ದು ಬೇರಾರು ಅಲ್ಲ ಸುದೀಪ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರಮೇಶ್ ಕಿಟ್ಟಿ!
ಕಿಚ್ಚನಿಗೆ ಬೆದರಿಕೆ ಪತ್ರ ಬರೆದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಪತ್ರ ಬರೆದಿದ್ದು ನಮ್ಮವರೇ ಎಂದು ಸುದೀಪ್ ಈ ಹಿಂದೆ ಹೇಳಿದ್ದರು. ಅದರಂತೆ ಈ ಪ್ರಕರಣದಲ್ಲಿ ಸುದೀಪ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರ ಕೈವಾಡ ಇದ್ದದ್ದು ಬೆಳಕಿಗೆ ಬಂದಿದೆ.
Kichcha Sudeep: ಚುನಾವಣೆಯ ಬಿಸಿ ಬಿಸಿ ಪ್ರಚಾರದ ನಡುವೆ ಕಿಚ್ಚ ಸುದೀಪ್ ಸಹ ಸುದ್ದಿಯಾಗಿದ್ದರು. ಅನಾಮಧೇಯ ವ್ಯಕ್ತಿಯಿಂದ ಸುದೀಪ್ಗೆ ಬೆದರಿಕೆ ಪತ್ರ ಬಂದಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಆ ಬೆದರಿಕೆ ಪತ್ರ ಬರೆದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ 2004ರಲ್ಲಿ ಒಂದು ಸಿನಿಮಾ ನಿರ್ದೇಶನವನ್ನೂ ಮಾಡಿದ್ದ ರಮೇಶ್ ಕಿಟ್ಟಿ ಎಂಬುವವರೇ ಬೆದರಿಕೆ ಪತ್ರ ಬರೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಹೀಗೆ ಪತ್ರ ಬರೆಯುವುದಕ್ಕೆ ಹಣಕಾಸು ವಿಚಾರವೇ ಮುಖ್ಯ ಕಾರಣ ಎಂಬ ಅಸಲಿಯತ್ತೂ ಹೊರಬಿದ್ದಿದೆ. ಆ ಕಾರಣಕ್ಕೆ ರಮೇಶ್ ಕಿಟ್ಟಿ ಬೆದರಿಕೆ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಸುದೀಪ್ ಚಾರಿಟೇಬಲ್ ಟ್ರಸ್ಟ್ ಹೆಸರಿನ ಸಂಸ್ಥೆಯಡಿ 2 ಕೋಟಿ ಹಣ ಹೂಡಿಕೆ ಮಾಡಿ, ಸರ್ಕಾರಿ ಶಾಲೆಗಳ ಉದ್ದಾರ ಮತ್ತು ಶಾಲೆ ದತ್ತು ಕೆಲಸವನ್ನು ರಮೇಶ್ ಕಿಟ್ಟಿ ಮಾಡುತ್ತ ಬಂದಿದ್ದರು.
ಹೀಗೆ ಹೂಡಿಕೆ ಮಾಡಿದ ಹಣವನ್ನು ಸುದೀಪ್ ಅವರ ಬಳಿ ಮರಳಿ ಕೇಳಿದ್ದಾರಂತೆ. ಅದನ್ನು ನೀಡಲು ಸುದೀಪ್ ನಿರಾಕರಿಸಿದ್ದಕ್ಕೆ ಈ ರೀತಿಯ ಬೆದರಿಕೆ ಪತ್ರ ಕಳುಹಿಸಿರುವುದಾಗಿ ಪ್ರಕರಣ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರಂತೆ.
ಸುದೀಪ್ ರಾಜಕೀಯ ಸೇರುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಮನೆಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಈ ಪತ್ರದಲ್ಲಿ ಸುದೀಪ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಲ್ಲದೆ, ಖಾಸಗಿ ವಿಡಿಯೋಗಳನ್ನು ರಿಲೀಸ್ ಮಾಡುವುದಾಗಿ ಬೆದರಿಸಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ನಲ್ಲಿ ಸುದೀಪ್ಗೆ ಮೊದಲ ಪತ್ರ ಬಂದಿದ್ದು ಸುದೀಪ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕಳೆದ ತಿಂಗಳು ಮತ್ತೆ ಪತ್ರ ಬಂದಾಗ ಕಿಚ್ಚ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಸುದೀಪ್ ಆಪ್ತ ಜಾಕ್ ಮಂಜು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತಮಗೆ ಬಂದ ಪತ್ರಗಳ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸುದೀಪ್ "ಅಡ್ರೆಸ್ ಗೊತ್ತಿದೆ ಎಂದ ಮಾತ್ರಕ್ಕೆ ಹೀಗೆ ಪೋಸ್ಟ್ ಮಾಡುತ್ತಾರೆ. ಇದು ರಾಜಕೀಯದಲ್ಲಿ ಇರುವವರು ಮಾಡಿದ ಕೆಲಸ ಅಲ್ಲ. ನಮ್ಮ ಸಿನಿಮಾದವರದ್ದೇ ಕುಮ್ಮಕ್ಕಿದು. ಯಾರು ಪತ್ರ ಬರೆದಿದ್ದಾರೆ ಎಂಬ ವಿಚಾರ ಹೊರಗಡೆ ಬರುತ್ತದೆ. ನಾನೇ ಹೊರಗೆ ತೆಗೆಯುತ್ತೇನೆ. ನಾನು ಸುಮ್ಮನೆ ಕೂರುವವನಲ್ಲ. ಕೆಲವು ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಅದಕ್ಕೆ ಬದ್ಧವಾಗಿದ್ದೇನೆ. ಎಲ್ಲಾ ಪಕ್ಷದಲ್ಲೂ ನನಗೆ ಆತ್ಮೀಯರು ಇದ್ದಾರೆ. ನನ್ನ ಪರ ಇರುವವರಿಗಾಗಿ ನಾವು ಕೆಲವು ನಿರ್ಧಾರ ತೆಗೆದುಕೊಂಡಿದ್ದೇನೆ. ಅವರಿಗೆ ಉತ್ತರ ಕೊಟ್ಟೇ ಕೊಡುತ್ತೇನೆ. ನಾನು ಸರಿಯಾದ ದಾರಿಯಲ್ಲಿಯೇ ಇದ್ದೇನೆ" ಎಂದಿದ್ದರು.