ನೀವು ತಲೆ ತಗ್ಗಿಸೋ ಕೆಲಸ ನಾನು ಯಾವತ್ತೂ ಮಾಡಲ್ಲ, ನನ್ನ ಫ್ಯಾನ್ಸ್ಗಳು ಯಾವತ್ತಿದ್ದರೂ ತಲೆ ಎತ್ಕೊಂಡೇ ನಡೀಬೇಕು; ಯಶ್
ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಅವರ ಹಳೇ ವಿಡಿಯೋಗಳು ವೈರಲ್ ಆಗುತ್ತಿವೆ.

Yash talks about fans: ಸಣ್ಣ ತಪ್ಪು ಮಾಡಿದ ಏಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಅವರ ಹತ್ತಾರು ಸಹಚರರು ವಿಚಾರಣೆ ಎದುರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿವೆ. ನಟ ದರ್ಶನ್ ಅವರ ಅಭಿಮಾನಿ ಬಳಗ, ಅವರನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ದರ್ಶನ್ ಅಭಿಮಾನಿ ಸಂಘದಿಂದಲೇ ಹಿಂದೆ ಸರಿದಿದ್ದಾರೆ. ಇದೀಗ ಇಷ್ಟೆಲ್ಲ ಘಟನಾವಳಿಗಳ ನಡುವೆ ಯಶ್ ಮಾತನಾಡಿದ ಹಳೇ ವಿಡಿಯೋಗಳು ಮುನ್ನೆಲೆಗೆ ಬಂದಿವೆ.
ನಟ ಯಶ್ ಅವರು ತಮ್ಮ ಅಭಿಮಾನಿಗಳನ್ನು ಹೇಗೆ ಟ್ರೀಟ್ ಮಾಡುತ್ತಾರೆ, ತಮ್ಮ ಅಭಿಮಾನಿಗಳು ಹೇಗಿರಬೇಕು ಎಂಬುದಕ್ಕೆ ಸಾಕ್ಷ್ಯ ಎಂಬುದಕ್ಕೆ ನಟನ ಈ ಹಿಂದಿನ ಒಂದಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಹೇಳಿಬರುತ್ತಿದ್ದಂತೆ, ಯಶ್ ಅವರ ಮಾತುಗಳ ಕಿರು ಝಲಕ್ಗಳನ್ನು ರಾಕಿಂಗ್ಸ್ಟಾರ್ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಅಭಿಮಾನಿಯಾಗಿದ್ದಕ್ಕೂ ಸಾರ್ಥಕ ಎಂದೂ ಹೇಳುತ್ತಿದ್ದಾರೆ. ಹಾಗಾದರೆ ನಟ ಯಶ್ ತಮ್ಮ ಫ್ಯಾನ್ಸ್ ಬಗ್ಗೆ ಹೇಳಿದ್ದೇನು? ಇಲ್ಲಿದೆ ಓದಿ.
ರೇಣುಕಾಸ್ವಾಮಿ ಸಹ ನಟ ದರ್ಶನ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಿರುತ್ತಿದ್ದ ರೇಣುಕಾಸ್ವಾಮಿ, ಬೇರೆ ಬೇರೆ ಹೆಸರಿನ ಖಾತೆಯನ್ನು ತೆರೆದು ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಮೆಸೆಜ್ ಮಾಡುತ್ತಿದ್ದ. ಅಶ್ಲೀಲ ಮತ್ತು ಅಸಭ್ಯವಾಗಿ ಪವಿತ್ರಾಗೆ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ನಟ ದರ್ಶನ್ ಸೇರಿ 17 ಮಂದಿ ಆ ಅಭಿಮಾನಿಯ ಉಸಿರನ್ನೇ ನಿಲ್ಲಿಸಿದ್ದರು. ನಟ ದರ್ಶನ್ ಮತ್ತವರ ಸಹಚರರ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಜ್ಯ ಮಾತ್ರವಲ್ಲದೆ, ರಾಷ್ಟ್ರವ್ಯಾಪಿ ಈ ವಿಚಾರ ಸದ್ದು ಮಾಡಿತ್ತು. ಇದೆಲ್ಲದರ ನಡುವೆ ನಟ ಯಶ್ ಅವರ ವಿಡಿಯೋಗಳು ವೈರಲ್ ಆಗುತ್ತಿವೆ.
ಯಶ್ ಹೇಳಿದ್ದೇನು?
"ನಾನು ಅಭಿಮಾನಿಗಳ ಜತೆ ಸೇರಿದಾಗ ಒಂದೇ ಮಾತನ್ನು ಹೇಳಲು ಇಷ್ಟಪಡುತ್ತೇನೆ. ನೀವು ತಲೆ ತಗ್ಗಿಸೋ ಅಂಥ ಕೆಲಸ ನಾನು ಯಾವತ್ತೂ ಮಾಡಲ್ಲ. ಯಶ್ ಅಭಿಮಾನಿಗಳು ಅಂತ ಅಂದ್ರೆ ತಲೆ ಎತ್ತಿಕೊಂಡೇ ನಡೀಬೇಕು" ಎಂದಿದ್ದಾರೆ. ಯಾವಾಗಲೂ ನನ್ನ ಅಭಿಮಾನಿಗಳು ಎಂಬುದಕ್ಕಿಂತ ಅವರ ಜೀವನಕ್ಕೆ, ಅವರ ಮನೆಗಳಿಗೆ ಹೀರೋಗಳಾಗಲಿ. ಕಷ್ಟಪಟ್ಟು ಸಂಪಾದನೆ ಮಾಡಿ, ಕಷ್ಟಗಳನ್ನು ಹೋಗಲಾಡಿಸಿಕೊಳ್ಳಲಿ" ಎಂದು ನಟ ಯಶ್ ಹೇಳಿದ್ದಾರೆ.
ಟಾಕ್ಸಿಕ್ನಲ್ಲಿ ಯಶ್ ಬಿಜಿ
ಕೆಜಿಎಫ್ ಸಿನಿಮಾ ಮೂಲಕ ನ್ಯಾಶನಲ್ ಲೆವೆಲ್ನಲ್ಲಿ ಸದ್ದು ಮಾಡಿದ ನಟ ಯಶ್ ಸದ್ಯ ಟಾಕ್ಸಿಕ್ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಮಲಯಾಳಿ ನಿರ್ದೇಶಕಿ ಗೀತು ಮೋಹನ್ದಾಸ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ನೂರಾರು ಕೋಟಿ ಬಜೆಟ್ನಲ್ಲಿ ಸ್ಟಾರ್ ಕಲಾವಿದರು ಈ ಸಿನಿಮಾದ ಭಾಗವಾಗಲಿದ್ದಾರೆ.
