Duniya Vijay: ದುನಿಯಾ ವಿಜಯ್ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ
ನಟ ದುನಿಯಾ ವಿಜಯ್ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ.
Duniya Vijay: ಸ್ಯಾಂಡಲ್ವುಡ್ನಲ್ಲಿ ಸದ್ಯ ಯಾವುದೂ ಸರಿಯಿಲ್ಲ. ಒಂದು ಕಡೆ ವಿಚ್ಛೇದನ, ಮತ್ತೊಂದು ಕಡೆ ಕೊಲೆ ಪ್ರಕರಣ. ಈ ನಡುವೆ ದುನಿಯಾ ವಿಜಯ್ ಮತ್ತು ಮೊದಲ ಪತ್ನಿ ನಾಗರತ್ನ ಅವರ ವಿಚ್ಛೇದನ ಪ್ರಕರಣವೂ ಮುನ್ನೆಲೆಗೆ ಬಂದಿದೆ. 2018ರಲ್ಲಿಯೇ ಪತ್ನಿಯಿಂದ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಇದೀಗ ಸುದೀರ್ಘ ಆರು ವರ್ಷದ ಬಳಿಕ ಈ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡ ಶಾಂತಿನಗರದ ಕೌಟುಂಬಿಕ ನ್ಯಾಯಾಲಯ, ದುನಿಯಾ ವಿಜಯ್ ಅವರ ಅರ್ಜಿಯನ್ನು ವಜಾ ಮಾಡಿದೆ.
ಕ್ರೌರ್ಯದ ಆಧಾರದ ಮೇಲೆ, ನಾಗರತ್ನ ಜತೆ ಬಾಳಲು ನನಗೆ ಇಷ್ಟವಿಲ್ಲ ಎಂದು ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ಮೇಲೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಮಹಿಳಾ ಆಯೋಗದ ವಿಚಾರಣೆ ಮುಂದೆಯೂ ಇದೇ ಮಾತನ್ನು ಹೇಳಿದ್ದರು. 2019ರ ಸಮಯದಲ್ಲಿ ಮಾಧ್ಯಮಗಳಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ಕೋರ್ಟ್ ಮಾತ್ರ ಸೂಕ್ತ ದಾಖಲೆಗಳ ಸಮೇತ ಸಾಬೀತುಪಡಿಸುವಂತೆ ತಿಳಿಸುತ್ತು. ಇದನ್ನು ಸಾಬೀತುಪಡಿಸಲು ವಿಫಲವಾಗಿದ್ದರಿಂದ ಅರ್ಜಿ ವಜಾ ಮಾಡಲಾಗಿದೆ.
2019ರ ವೇಳೆ ಮಹಿಳಾ ಆಯೋಗದ ಎದುರು ಬಂದಿದ್ದ ದುನಿಯಾ ವಿಜಯ್, ಮಕ್ಕಳ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ಕೊಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ, ತನಗೆ ಯಾವುದೇ ಜೀವನಾಂಶ ನೀಡಿಲ್ಲ ಎಂದು ನಾಗರತ್ನ ಹೇಳಿದ್ದರು. ಇದಕ್ಕೂ ಮುನ್ನ ಈ ಜೋಡಿಯ ನಡುವೆ ಸಂಧಾನವೂ ನಡೆದಿತ್ತು. ಆದರೆ, ಅದ್ಯಾವುದೂ ಹೆಚ್ಚು ದಿನ ಉಳಿಯಲಿಲ್ಲ. ಆದರೆ, ಯಾವುದೇ ಕಾರಣಕ್ಕೂ ಪತಿಯನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಈ ಕೇಸ್ ಮುಂದುಡಿಕೊಂಡೇ ಬಂದಿತ್ತು.
2016ರಲ್ಲಿ ದುನಿಯಾ ವಿಜಯ್, ಮೊದಲ ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ನೀಡದೇ ನಟಿ ಕೀರ್ತಿ ಗೌಡ ಅವರನ್ನು ಮದುವೆಯಾಗಿದ್ದರು. ಈ ವಿಚಾರವಾಗಿಯೇ ನಾಗರತ್ನ ಸಿಡಿದೆದ್ದಿದ್ದರು. ಈ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ನಾಗರತ್ನ, ನನಗೆ ನನ್ನ ಗಂಡ ಬೇಕು ಎಂದು ಮಹಿಳಾ ಆಯೋಗದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ, ನನಗೆ ನಾಗರತ್ನ ಜತೆ ಬದುಕಲು ಇಷ್ಟವಿಲ್ಲ. ಮಕ್ಕಳನ್ನು ನಾನು ನೋಡಿಕೊಳ್ಳುವೆ ಎಂದಿದ್ದರು. ಇದೀಗ ಅಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಕೋರ್ಟ್ ವಿಚ್ಛೇದನವನ್ನು ನೀಡಿಲ್ಲ.
ಇತ್ತೀಚಿನ ಕೆಲ ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ವಿಚ್ಛೇದನ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಂದ ಆರಂಭವಾದ ಈ ವಿಚ್ಛೇದನ ವಿಚಾರ, ಅದಾದ ಬಳಿಕ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಜೋಡಿಯೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ.