ಶಿವರಾತ್ರಿ ಹಬ್ಬದ ದಿನ ಬರಲಿದೆ ‘ಗಂಗೆ ಗೌರಿ’ ಚಿತ್ರದ ಟೀಸರ್; ಬಹುವರ್ಷಗಳ ಬಳಿಕ ಕನ್ನಡದಲ್ಲೊಂದು ಪೌರಾಣಿಕ ಸಿನಿಮಾ
ಬಹುವರ್ಷಗಳ ಬಳಿಕ ಕನ್ನಡದಲ್ಲಿ ಪೌರಾಣಿಕ ಕಥಾಹಂದರವುಳ್ಳ ಗಂಗೆ ಗೌರಿ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಮಹಾ ಶಿವರಾತ್ರಿಯ ಪ್ರಯುಕ್ತ ಗಂಗೆ ಗೌರಿ ಸಿನಿಮಾದ ಟೀಸರ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.

Gange Gowri Teaser: ಶಿವರಾತ್ರಿ ಬಂದೇ ಬಿಡ್ತು. ದೇಶದಾದ್ಯಂತ ಶಿವನ ಆರಾಧನೆ ಮುಗಿಲು ಮುಟ್ಟಲಿದೆ. ಈ ನಡುವೆ ಇದೇ ಹಬ್ಬದ ನಿಮಿತ್ತ ಶಿವನಿಗೆ ಸಂಬಂಧಿಸಿದ ಗಂಗೆ ಗೌರಿ ಚಿತ್ರದ ಟೀಸರ್ ಹೊರತರುತ್ತಿದೆ ಚಿತ್ರತಂಡ. ಬಿ.ಎ. ಪುರುಷೋತ್ತಮ್ ನಿರ್ದೇಶನದ ಗಂಗೆ ಗೌರಿ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಶಿವನ ಪೂಜಿಸುವ ದಿನವೇ ಚಿತ್ರತಂಡದಿಂದ ವಿಶೇಷ ಟೀಸರ್ ಬಿಡುಗಡೆಯಾಗುತ್ತಿದೆ. ವಿಶೇಷ ಏನೆಂದರೆ, ಕನ್ನಡದಲ್ಲಿ ಬಹು ವರ್ಷಗಳ ಬಳಿಕ ಗಂಗೆ ಗೌರಿ ಹೆಸರಿನ ಪೌರಾಣಿಕ ಸಿನಿಮಾವೊಂದು ಸಿದ್ಧವಾಗಿದೆ.
ಸಿನಿಮಾದಲ್ಲಿ ಏನಿರಲಿದೆ?
ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ? ಇದರಲ್ಲಿ ಕೈಲಾಸವನ್ನು ಸೌಹಾರ್ದತೆಗೆ ಹೋಲಿಸಲಾಗಿದೆ. ಹುಲಿ, ನಂದಿ, ಹಾವು, ನವಿಲು ಹಾಗೂ ಇಲಿ. ಒಂದಕ್ಕೊಂದು ವೈರತ್ವ ಇದ್ದು, ಒಂದನ್ನು ಕಂಡರೆ ಮತ್ತೊಂದಕ್ಕೆ ಆಗುವುದಿಲ್ಲ. ಆದರೂ ಇವುಗಳು ಒಟ್ಟಿಗೆ ಇರುತ್ತವೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಇವೆಲ್ಲಾ ಅಂಶಗಳನ್ನು ಗಂಗೆ ಗೌರಿ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಭಕ್ತಿ ಪ್ರಧಾನ ಚಿತ್ರ ’ಗಂಗೆ ಗೌರಿ’ ಅಂದುಕೊಂಡಂತೆ ಸದ್ಯ ಡಬ್ಬಿಂಗ್ ಹಂತದಲ್ಲಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೆ.ಎನ್.ನಾಗೇಶ್ಕುಮಾರ್ ಮತ್ತು ’ನಮ್ಮ ಕರ್ನಾಟಕ ಸೇನೆ’ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಬ್ಬದ ದಿನದಂದು ರಾಜ್ಯದ ಎಲ್ಲಾ ಕಡೆ ನಡೆಯುವ ಸಮಾರಂಭಗಳಲ್ಲಿ ಟೀಸರ್ನ್ನು ತೋರಿಸಲು ಯೋಜನೆ ರೂಪಿಸಲಾಗಿದೆಯಂತೆ.
333ನೇ ಸಿನಿಮಾ
ಹಿರಿಯ ನಟ ಗಣೇಶ್ರಾವ್ ಕೇಸರ್ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 333ನೇ ಚಿತ್ರ ಎಂಬುದು ವಿಶೇಷ. ಮಧುಕಾರ್ತಿಕ್- ಪ್ರಜ್ವಲ್ ಜಂಟಿಯಾಗಿ ಜಿಆರ್ ಫಿಲಂಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತುಳಜಾ ಬಾಯಿ, ರೂಪಾ ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರಕಥೆ ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಬಿ.ಎ. ಪುರುಷೋತ್ತಮ್ ಅವರದು 27ನೇ ಚಿತ್ರವಾಗಿದೆ.
ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?
ರಂಗಭೂಮಿ ನಟಿ ರಾಣೆಬೆನ್ನೂರಿನ ರೂಪಾಲಿ ಮೂರು ಶೇಡ್ಗಳಲ್ಲಿ ಅಂದರೆ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೆಯಾಗಿ ನಿಖಿತಾಸ್ವಾಮಿ ನಟಿಸಿದ್ದಾರೆ. ಶೋಭರಾಜ್, ಜಯಸಿಂಹ ಮುಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಶ್ರೀನಿವಾಸಗೌಡ, ಬಸವರಾಜ ದೇಸಾಯಿ, ಮಾಲಾ ಡಿಂಗ್ರಿ ನಾಗರಾಜ್, ಧನಲಕ್ಷಿ, ಜಿಮ್ ಶಿವು, ಋತು ಸ್ಪರ್ಶ, ಗೀತಾ, ರಕ್ಷಾ ಗೌಡ ನಟಿಸಿದ್ದಾರೆ. ರಾಜ್ ಭಾಸ್ಕರ್ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ, ಸಂಕಲನ ಗ್ರಾಫಿಕ್ಸ್-ಡಿಐ ಅನಿಲ್ ಅವರದಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
