ನಾಗಿಣಿ ಭರಣ ನಿರ್ದೇಶನದ ಜೀನಿಯಸ್ ಮುತ್ತ ಚಿತ್ರಕ್ಕೆ ಸಾಥ್ ನೀಡಿದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ
ಹಿರಿಯನಿರ್ದೇಶಕ ನಾಗಾಭರಣ ಅವರ ಪತ್ನಿ ನಾಗಿಣಿ ಭರಣ, ಜೀನಿಯಸ್ ಮುತ್ತ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ತಂಡಕ್ಕೆ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಶುಭ ಕೋರಿದರು.

Genius Mutta Kannada Movie: ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ ಜೀನಿಯಸ್ ಮುತ್ತ ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಜಿ.ಎಸ್ ಲತಾ ಜೈ ಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ ಜೀನಿಯಸ್ ಮುತ್ತನಾಗಿ ಮಾಸ್ಟರ್ ಶ್ರೇಯಸ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಚಿನ್ನಾರಿಮುತ್ತನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.
"ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಅದು ಸಾಧ್ಯವಾಗಿರಲಿಲ್ಲ. ಆದರೆ ಲತಾ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಲು ಪ್ಲಾನ್ ಮಾಡಿದ್ದರು. ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕೆಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ದ ಮಾಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ" ಎಂದರು.
ಸಿನಿಮೋತ್ಸವಗಳಲ್ಲಿ ಮುತ್ತನ ಪ್ರದರ್ಶನ
ಮುಂದುವರಿದು ಮಾತನಾಡಿದ ಅವರು, "ಮಾಸ್ಟರ್ ಶ್ರೇಯಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ನೋಡಿದವರು ಮೆಚ್ಚುಗೆ ಮಾತುಗಳಾಡಿದ್ದಾರೆ. ಆಗಸ್ಟ್ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ" ಎಂದು ನಿರ್ದೇಶಕಿ ನಾಗಿಣಿ ಭರಣ ತಿಳಿಸಿದರು.
ಪತ್ನಿ ಚಿತ್ರದ ಬಗ್ಗೆ ನಾಗಾಭರಣ ಮಾತು
ಪತ್ನಿ ಸಿನಿಮಾ ಬಗ್ಗೆ ಮಾತನಾಡಿದ ನಾಗಾಭರಣ, "ನಾಗಿಣಿ ಅವರು ಈಗ ಸ್ವತಂತ್ರ ನಿರ್ದೇಶನ ಮಾಡಿದ್ದಾರಷ್ಟೇ. ಆದರೆ ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಹಿಂದಿನಿಂದ ಸಹಕಾರ ನೀಡುತ್ತಿದ್ದರು. ಈಗ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ" ಎಂದರು ಪತಿ ಟಿ.ಎಸ್ ನಾಗಾಭರಣ.
"ನಾನು ಭರಣ ಸರ್ ಅವರ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟಿಸಬೇಕೆಂದು ಆಸೆಯಾಯಿತು. ಈ ಚಿತ್ರದಲ್ಲಿ ಜೀನಿಯಸ್ ಮುತ್ತನಾಗಿ ಅಭಿನಯಿಸಿದ್ದೇನೆ. ಅವಕಾಶ ನೀಡಿದ ಅಮ್ಮನಿಗೆ ಹಾಗೂ ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದರು ಮಾಸ್ಟರ್ ಶ್ರೇಯಸ್.
ವಿಜಯ್ ರಾಘವೇಂದ್ರ ಏನಂದ್ರು?
"ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಬಾರಿ. ಏಕೆಂದರೆ ನನ್ನನ್ನು ಎಲ್ಲರೂ ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿ ಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ" ಎಂದು ವಿಜಯ ರಾಘವೇಂದ್ರ ತಿಳಿಸಿದರು.
"ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ ನೀವೇ ನಿರ್ದೇಶನ ಮಾಡಬೇಕೆಂದು ನಾಗಿಣಿ ಭರಣ ಅವರ ಬಳಿ ಹೇಳಿದೆ. ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ನನಗೆ ಕಥೆ ಹೇಳಿದರು. ನಂತರ ಜೀನಿಯಸ್ ಮುತ್ತ ಚಿತ್ರ ಆರಂಭವಾಯಿತು. ಈಗ ಬಿಡುಗಡೆ ಹಂತ ತಲುಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದರು ನಿರ್ಮಾಪಕಿ ಲತಾ ಜೈಪ್ರಕಾಶ್. ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಪನ್ನಗಾಭರಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತದ ಬಗ್ಗೆ ಬಾಪು ಪದ್ಮನಾಭ ಮಾಹಿತಿ ನೀಡಿದರು.
