ಮುತ್ತುರಾಜ, ಡಾ ರಾಜಕುಮಾರ್ ಆದ ಕಥೆ ಗೊತ್ತೆ? ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಂಡು ಖ್ಯಾತಿ ಪಡೆದ ಮೂವರು ಕುಮಾರರು
ಕನ್ನಡ ಸುದ್ದಿ  /  ಮನರಂಜನೆ  /  ಮುತ್ತುರಾಜ, ಡಾ ರಾಜಕುಮಾರ್ ಆದ ಕಥೆ ಗೊತ್ತೆ? ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಂಡು ಖ್ಯಾತಿ ಪಡೆದ ಮೂವರು ಕುಮಾರರು

ಮುತ್ತುರಾಜ, ಡಾ ರಾಜಕುಮಾರ್ ಆದ ಕಥೆ ಗೊತ್ತೆ? ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಂಡು ಖ್ಯಾತಿ ಪಡೆದ ಮೂವರು ಕುಮಾರರು

ಡಾ. ರಾಜಕುಮಾರ್‌ ಅವರ ಮೂಲ ಹೆಸರು ಮುತ್ತುರಾಜು ಆದರೆ, ಕಲ್ಯಾಣ್‍ ಕುಮಾರ್‌ ಹೆಸರು ಚೊಕ್ಕಣ್ಣ ಆಗಿತ್ತು. ಉದಯಕುಮಾರ್ ಅವರ ಹೆಸರು ಸೂರ್ಯನಾರಾಯಣ ಶಾಸ್ತ್ರಿ ಎಂದಾಗಿತ್ತು. ಮೂವರೂ ಸಿನಿಮಾಗಾಗಿ ತಮ್ಮ ಹೆಸರು ಬದಲಿಸಿಕೊಂಡಿದ್ದಲ್ಲದೆ, ಸಿನಿಮಾ ಹೆಸರಿನಿಂದಲೇ ಜನಪ್ರಿಯರಾದವರು. (ಬರಹ: ಚೇತನ್‌ ನಾಡಿಗೇರ್‌)

ಮುತ್ತುರಾಜ, ಡಾ ರಾಜಕುಮಾರ್ ಆದ ಕಥೆ ಗೊತ್ತೆ? ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಂಡು ಖ್ಯಾತಿ ಪಡೆದ ಮೂವರು ಕುಮಾರರು
ಮುತ್ತುರಾಜ, ಡಾ ರಾಜಕುಮಾರ್ ಆದ ಕಥೆ ಗೊತ್ತೆ? ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಂಡು ಖ್ಯಾತಿ ಪಡೆದ ಮೂವರು ಕುಮಾರರು (Photo Credit: zee5.com)

ಕನ್ನಡದ ಸಾಕಷ್ಟು ಜನಪ್ರಿಯ ನಟ-ನಟಿಯರು ಸಿನಿಮಾಗಾಗಿ ತಮ್ಮ ಮೂಲ ಹೆಸರುಗಳನ್ನು ಬದಲಿಸಿ, ಇನ್ನೊಂದು ಹೆಸರಿನೊಂದಿಗೆ ಜನಪ್ರಿಯತೆ, ಖ್ಯಾತಿ, ಯಶಸ್ಸನ್ನು ಪಡೆದಿದ್ದಾರೆ. ಅಂಥವರ ಪೈಕಿ ಪ್ರಮುಖರಾದವರೆಂದರೆ ಅದು ಡಾ. ರಾಜಕುಮಾರ್‌. ಹಾಗೆ ನೋಡಿದರೆ, ಕುಮಾರತ್ರಯರಲ್ಲಿ ಮೂವರೂ ತಮ್ಮ ಹೆಸರು ಬದಲಿಸಿಕೊಂಡವರೇ. ಡಾ. ರಾಜಕುಮಾರ್‌ ಅವರ ಮೂಲ ಹೆಸರು ಮುತ್ತುರಾಜು ಆದರೆ, ಕಲ್ಯಾಣ್‍ ಕುಮಾರ್‌ ಹೆಸರು ಚೊಕ್ಕಣ್ಣ ಆಗಿತ್ತು. ಉದಯಕುಮಾರ್ ಅವರ ಹೆಸರು ಸೂರ್ಯನಾರಾಯಣ ಶಾಸ್ತ್ರಿ ಎಂದಾಗಿತ್ತು. ಮೂವರೂ ಸಿನಿಮಾಗಾಗಿ ತಮ್ಮ ಹೆಸರು ಬದಲಿಸಿಕೊಂಡಿದ್ದಲ್ಲದೆ, ಸಿನಿಮಾ ಹೆಸರಿನಿಂದಲೇ ಜನಪ್ರಿಯರಾದವರು.

ಮುತ್ತುರಾಜು, ಡಾ. ರಾಜಕುಮಾರ್‌ ಎಂದು ಹೆಸರು ಬದಲಾಯಿಸಿಕೊಂಡಿದ್ದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. 1953ರಲ್ಲಿ ಗುಬ್ಬಿ ವೀರಣ್ಣ, ಸಿ.ಆರ್‌. ಬಸವರಾಜ್‍ ಮತ್ತು ಎ.ವಿ. ಮೇಯಪ್ಪ ಚೆಟ್ಟಿಯಾರ್‌ ಪಾಲುದಾರಿಕೆಯಲ್ಲಿ ‘ಗುಣಸಾಗರಿ’ ಚಿತ್ರವನ್ನು ಮಾಡಿದ್ದರು. ಹೊನ್ನಪ್ಪ ಭಾಗವತರ್ ಮತ್ತು ಪಂಡರಿಬಾಯಿ ಅಭಿನಯದ ಈ ಚಿತ್ರವು ಯಶಸ್ವಿಯೂ ಆಗಿತ್ತು. ಈ ಚಿತ್ರದ ನಂತರ ‘ಬೇಡರ ಕಣ್ಣಪ್ಪ’ ಚಿತ್ರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿತ್ತು. ಈ ಚಿತ್ರವು ಅದೇ ಹೆಸರಿನ ನಾಟಕವನ್ನಾಧರಿಸಿದ್ದು, ನಾಟಕದಲ್ಲಿ ಕಾಶಿ ಮತ್ತು ಶಾಸ್ತ್ರಿ ಪಾತ್ರಗಳಲ್ಲಿ ನಟಿಸಿದ್ದ ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್‌ ಅವರೇ ಚಿತ್ರದಲ್ಲೂ ತಮ್ಮ ಪಾತ್ರಗಳನ್ನು ನಿರ್ವಹಿಸಬೇಕೆಂದು ಹಿರಿಯರು ನಿರ್ಧರಿಸಿದ್ದರು. ಚಿತ್ರತಂಡದವರು ಸೂಕ್ತ ನಾಯಕನ ಹುಡುಕಾಟದಲ್ಲಿದ್ದರು.

ಹೀಗಿರುವಾಗಲೇ, ಒಮ್ಮೆ ನಿರ್ದೇಶಕ ಎಚ್‍.ಎಲ್‍.ಎನ್‍. ಸಿಂಹ ಅವರು ಮದರಾಸಿನಿಂದ ತಮ್ಮ ಸ್ವಂತ ಊರಾದ ನಂಜನಗೂಡಿಗೆ ಹೋಗಿದ್ದರಂತೆ. ಬಸ್‍ ನಿಲ್ದಾಣದಲ್ಲಿ ಮುತ್ತುರಾಜು ಅವರ ಭೇಟಿಯಾಯಿತಂತೆ. ಮುತ್ತುರಾಜು ತಮ್ಮ ಪತ್ನಿ ಪಾರ್ವತಿ ಮತ್ತು ತಾಯಿಯ ಜೊತೆಗೆ ಶ್ರೀಕಂಠೇಶ್ವರನ ದರ್ಶನ ಪಡೆದು, ಮೈಸೂರಿಗೆ ಹೊರಟಿದ್ದರಂತೆ. ಮುತ್ತುರಾಜು ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಸಿಂಹ ಅವರಿಗೂ ಹಳೆಯ ಪರಿಚಯ. ಮುತ್ತುರಾಜುವನ್ನು ನೋಡುತ್ತಿದ್ದಂತೆಯೇ, ಕಣ್ಣಪ್ಪನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಎಂದನಿಸಿತಂತೆ. ಆದರೆ, ತಕ್ಷಣಕ್ಕೆ ಹೇಳಲಿಲ್ಲ. ಆ ಸಂದರ್ಭದಲ್ಲಿ ಮುತ್ತುರಾಜು, ಸುಬ್ಬಯ್ಯ ನಾಯ್ಡು ಅವರ ಕಂಪನಿಯ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದು, ಕಂಪನಿಯು ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿತ್ತಂತೆ. ಹುಬ್ಬಳ್ಳಿಗೆ ಹೋಗಬೇಕು ಎಂದು ಮುತ್ತುರಾಜು ಹೊರಟರಂತೆ.

ನಂಜನಗೂಡಿನಿಂದ ಮದರಾಸಿಗೆ ವಾಪಸ್ಸಾದ ನಂತರ ವೀರಣ್ಣನವರ ಬಳಿ ಮುತ್ತುರಾಜುವಿನ ವಿಷಯ ಪ್ರಸ್ತಾಪಿಸಿದರಂತೆ. ಅದಕ್ಕೆ ವೀರಣ್ಣ ಸಹ ಒಪ್ಪಿ ಮುತ್ತುರಾಜುಗೆ ಪತ್ರ ಬರೆದು ಅವರನ್ನು ಮದರಾಸಿಗೆ ಕರೆಸಿಕೊಂಡಿದ್ದಾರೆ. ಮದರಾಸಿಗೆ ಹೋದ ಮುತ್ತುರಾಜು ಆಡಿಷನ್‍ನಲ್ಲಿ ಭಾಗವಹಿಸಿ, ಅದರಲ್ಲಿ ಆಯ್ಕೆಯಾಗಿ, ‘ಬೇಡರ ಕಣ್ಣಪ್ಪ’ ಚಿತ್ರದ ನಾಯಕರಾಗಿದ್ದಾರೆ. ಆದರೆ, ಚಿತ್ರಕ್ಕೆ ಹೊಂದುವಂತೆ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಮೇಯಪ್ಪ ಚೆಟ್ಟಿಯಾರರು ಹೇಳಿದರಂತೆ. ಆದರೆ, ಮುತ್ತುರಾಜುಗೆ ತಮ್ಮ ತಂದೆ-ತಾಯಿ ಇಟ್ಟ ಹೆಸರು ಬದಲಾಯಿಸಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲವಂತೆ. ಕೊನೆಗೆ ಹಿರಿಯರ ಒತ್ತಾಯದ ಮೇಲೆ ಹೆಸರು ಬದಲಿಸಿಕೊಳ್ಳುವುದಕ್ಕೆ ಒಪ್ಪಿದ್ದಾರೆ. ಸರಿ, ಏನು ಹೆಸರು ಇಡಬೇಕು? ಎಂಬ ಚರ್ಚೆ ಆಯಿತಂತೆ. ಮುತ್ತುರಾಜ, ರಾಜಕುಮಾರನ ಠೀವಿಯಲ್ಲಿ ಬಾಳಲಿ ಎಂಬ ಕಾರಣಕ್ಕೆ ಸಿಂಹ ಅವರು ರಾಜಕುಮಾರ್‌ ಎಂದು ಬದಲಾಯಿಸಿದರಂತೆ.

ಈ ಹೆಸರು ಇಡುವುದಕ್ಕೆ ಇನ್ನೂ ಒಂದು ಕಾರಣವಿದೆ ಎಂಬ ಪ್ರತೀತಿ ಇದೆ. ಆಗ ಹಿಂದಿ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡವರು ರಾಜ್‍ ಕಪೂರ್‌ ಮತ್ತು ದಿಲೀಪ್‍ ಕುಮಾರ್‌. ಅವರಿಬ್ಬರ ಮೊದಲ ಪದಗಳನ್ನು ತೆಗೆದು ರಾಜಕುಮಾರ್‌ ಎಂಬ ಹೆಸರಿಡಲಾಯಿತು ಎಂದೂ ಹೇಳಲಾಗುತ್ತದೆ. ಕಾರಣ ಏನೇ ಇರಲಿ, ಅಂದಿನಿಂದ ರಾಜಕುಮಾರ್‌ ಎಂದು ಬದಲಾದ ಮುತ್ತುರಾಜು ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಪ್ರಸಿದ್ಧರಾಗಿದ್ದಾರೆ.

1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಚಿತ್ರವು ಹಿಂದಿ ಮತ್ತು ತೆಲುಗಿಗೆ ರೀಮೇಕ್‍ ಆಗಿದ್ದಷ್ಟೇ ಅಲ್ಲ, ತಮಿಳಿಗೂ ಡಬ್‍ ಆಯಿತು. ವಿಶೇಷವೆಂದರೆ, ತೆಲುಗಿನ ‘ಕಾಳಹಸ್ತಿ ಮಹಾತ್ಮ್ಯಂ’ ಚಿತ್ರದಲ್ಲೂ ಡಾ. ರಾಜಕುಮಾರ್ ‍ನಟಿಸಿದ್ದಷ್ಟೇ ಅಲ್ಲ, ತಮ್ಮ ಪಾತ್ರಕ್ಕೆ ತಾವೇ ಡಬ್‍ ಮಾಡಿದ್ದರು. ಅವರು ಪರಭಾಷೆಯಲ್ಲಿ ನಟಿಸಿದ್ದು ಅದೊಂದೇ ಚಿತ್ರದಲ್ಲಿ. ‘ಕಾಳಹಸ್ತಿ ಮಹಾತ್ಮ್ಯಂ’ ಚಿತ್ರದ ನಂತರ ರಾಜಕುಮಾರ್ ಅವರು ಯಾವುದೇ ಪರಭಾಷೆಯ ಚಿತ್ರದಲ್ಲೂ ನಟಿಸಲಿಲ್ಲ ಎಂಬುದು ವಿಶೇಷ. (ಬರಹ: ಚೇತನ್‌ ನಾಡಿಗೇರ್‌)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in