Rishab Shetty Birthday: ಜುಲೈ 7 ರಿಷಬ್ ಶೆಟ್ಟಿ ಹುಟ್ಟುಹಬ್ಬ; ಶೆಟ್ರ ಬರ್ತ್ಡೇಗೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ಡೇಟ್?
Rishab Shetty Birthday: ಕಾಂತಾರ ಸಿನಿಮಾದ ಮೂಲಕ ದೇಶ-ವಿದೇಶದ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ನಟ ರಿಷಬ್ ಶೆಟ್ಟಿಗೆ ಜುಲೈ 7ರಂದು ಅಂದರೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಏನಾದರೂ ಗ್ಲಿಂಪ್ಸ್ ಅಥವಾ ಸಣ್ಣ ಝಲಕ್ ಪ್ರಕಟವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಬೆಂಗಳೂರು: ಕನ್ನಡ ನಟ ರಿಷಬ್ ಶೆಟ್ಟಿಗೆ ಜುಲೈ 7 ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಕಾಂತಾರ ಚಾಪ್ಟರ್ 1ರ ಮೊದಲ ಝಲಕ್ನಲ್ಲಿಯೇ ಪ್ರೇಕ್ಷಕರ ಕುತೂಹಲ ಕೆರಳಿಸಿರುವ ಕಾಂತಾರ ತಂಡ, ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಏನಾದರೂ ಬಿಗ್ಅಪ್ಡೇಟ್ ನೀಡುವ ನಿರೀಕ್ಷೆಯಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಾಂತಾರ ಚಾಪ್ಟರ್ 1ರ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ತ್ರಿಶೂಲಧಾರಿಯಾಆಗಿ ರಿಷಬ್ ಶೆಟ್ಟಿ ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರು. ಇದೀಗ ಟೀಸರ್ ರಿಲೀಸ್ ಆಗಿ ಆರು ತಿಂಗಳು ಕಳೆದಿದ್ದು, ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಏನಾದರೂ ಬಿಗ್ಅಪ್ಡೇಟ್ ಹೊರಬೀಳುವುದು ಪಕ್ಕಾ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ರಿಷಬ್ ಶೆಟ್ಟಿಗೆ ವಯಸ್ಸೆಷ್ಟು?
ಕನ್ನಡ ನಟ ರಿಷಬ್ ಶೆಟ್ಟಿಗೆ 40 ವರ್ಷ ವಯಸ್ಸಾಗಿದ್ದು, 41ನೇ ವರ್ಷಕ್ಕೆ ನಾಳೆ ಕಾಲಿಡಲಿದ್ದಾರೆ. ರಿಷಬ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ 1983ರ ಜುಲೈ 7ರಂದು ಜನಿಸಿದರು. ಇವರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಆರಂಭಿಕ ಶಾಲೆ ಪಡೆದರು. ಪದವಿಯನ್ನು ಬೆಂಗಳೂರಿನ ಶಿಕ್ಷಣ ಸಂಸ್ಥೆಯಲ್ಲಿ ಪಡೆದರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು.
ಕಾಂತಾರ ಸಿನಿಮಾದ ಇತ್ತೀಚಿನ ಅಪ್ಡೇಟ್
ರಿಷಬ್ ಶೆಟ್ಟಿ ಮತ್ತು ಟೀಮ್ ಕಾಂತಾರ ಸಿನಿಮಾದ ಕುರಿತು ಎಲ್ಲೂ ರಹಸ್ಯ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ. ಕುಂದಾಪುರದಲ್ಲಿ ಮೊದಲ ಹಂತದ ಶೂಟಿಂಗ್ ಆರಂಭವಾಗಿದೆ ಎಂಬ ಸುದ್ದಿ ಮಾತ್ರ ಹೊರಬಂದಿದೆ. ಇದೇ ರೀತಿ ಕಾಂತಾರ ಹೀರೋಯಿನ್ ಕುರಿತೂ ಸಿನಿತಂಡ ಪ್ರಕಟಣೆ ಹೊರಡಿಸಿಲ್ಲ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದ ಪ್ರೀ ಪೊಡಕ್ಷನ್ ಕೆಲಸಗಳು ಮುಗಿದಿವೆ. ಕಾಂತಾರ ಚಾಪ್ಟರ್ 1ರ ಶೂಟಿಂಗ್ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ಹಾಕಲಾಗಿದೆ. ಇಲ್ಲೇ ಒಂದಿಷ್ಟು ಶೂಟಿಂಗ್ ನಡೆದಿದೆ.
ಕಾಂತಾರ ಸಿನಿಮಾಕ್ಕೆ ಕೆಲವು ದಿನಗಳ ಹಿಂದೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಹೀರೋಯಿನ್ ಯಾರು ಎಂದು ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ಆದರೆ, ವದಂತಿಗಳ ಪ್ರಕಾರ ರುಕ್ಮಿಣಿ ವಸಂತ್ ಅವರು ಈ ಸಿನಿಮಾಕ್ಕೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಇವರು ಸ್ಕ್ರೀನ್ ಟೆಸ್ಟ್ ಮಾಡಿದ್ದು, ಶೂಟಿಂಗ್ನಲ್ಲೂ ಭಾಗಿಯಾಗುತ್ತಿರಬಹುದು ಎನ್ನಲಾಗಿದೆ. ರುಕ್ಮಿಣಿ ವಸಂತ್ ಸದ್ಯ ಶ್ರೀಮುರಳಿ ಜತೆ ಭಘೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಪ್ರೈಮ್ ವಿಡಿಯೋ ಇಂಡಿಯಾ ಮುಂಬೈನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಥಿಯೇಟರ್ ರಿಲೀಸ್ ಆದ ಬಳಿಕ ಪ್ರೈಮ್ನಲ್ಲಿ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾಕ್ಕೆ ಡೆಡಿಕೇಟೆಡ್ ಆಗಿ ಯಕ್ಷಗಾನ ನೃತ್ಯ ರೂಪಕ ಪ್ರದರ್ಶಿಸಲಾಗಿತ್ತು.
ನಾನು ಕಾಂತಾರ ಸಿನಿಮಾಕ್ಕೆ ಪ್ಯಾನ್ ಇಂಡಿಯಾ ಕಲಾವಿದರನ್ನು ಸೇರಿಸಿಕೊಂಡಿಲ್ಲ ಎಂದು ರಿಷಬ್ ಶೆಟ್ಟಿ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. "ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಕ್ಕೆ ವಿವಿಧ ಭಾಷೆಯ ಕಲಾವಿದರನ್ನು ಸೇರಿಸಿಕೊಳ್ಳುತ್ತಾರೆ. ನನಗೆ ಇದರಲ್ಲಿ ನಂಬಿಕೆಯಲ್ಲ. ಕಾಂತಾರದಲ್ಲಿ ಇದ್ದದ್ದು ಸ್ಥಳೀಯ ಕಲಾವಿದರೇ. ಹೀಗಿದ್ದರೂ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಯಿತು. ಜನರಿಗೆ ಶಿವನ ಪಾತ್ರ ಮುಖ್ಯ. ಆ ಪಾತ್ರ ಜನರನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.