ಇಬ್ಬರು ನಿರ್ದೇಶಕರು, ಇಬ್ಬರು ನಾಯಕರು, ಇಬ್ಬರು ನಿರ್ಮಾಪಕರು ಇದು ರಮೇಶ್ ಸುರೇಶ್ ಸಿನಿಮಾ ಸ್ಪೇಷಾಲಿಟಿ
ರಮೇಶ್ ಸುರೇಶ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಾಧುಕೋಕಿಲ ಪ್ರಮುಖ ಪಾತ್ರ ನಿಭಾಯಿಸಿರುವ ಈ ಸಿನಿಮಾದಲ್ಲಿ ಬೆನಕ ಗುಬ್ಬಿ ವೀರಣ್ಣ, ಯಶು ರಾಜ್ ನಾಯಕರಾಗಿ ನಟಿಸಿದ್ದಾರೆ. ಜೂನ್ 21ರಂದು ಈ ಚಿತ್ರ ಬಿಡುಗಡೆ ಆಗಲಿದೆ.

Ramesh Suresh Movie: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಕಾಮಿಡಿ ಸಿನಿಮಾಗಳ ಕೊರತೆ ಎದ್ದು ಕಾಣುತ್ತಿದೆ. ಈ ಮೊದಲು ಸಾಲು ಸಾಲು ಹಾಸ್ಯಪ್ರಧಾನ ಸಿನಿಮಾಗಳೇ ಆಗಮಿಸಿ, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಇದೀಗ ಅದ್ಯಾಕೋ ಅವುಗಳ ಸಂಖ್ಯೆ ತೀರಾ ಇಳಿಕೆ ಕಂಡಿದೆ. ಹೀಗಿರುವಾಗಲೇ ಇದೀಗ ರಮೇಶ್ ಸುರೇಶ್ ಸಿನಿಮಾ ಕಾಮಿಡಿ ಕಚಗುಳಿ ಇಡಲು ಆಗಮಿಸಿದೆ. ಇತ್ತೀಚಿಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸಾಧುಕೋಕಿಲ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದಲ್ಲಿ ಯಶ್ ರಾಜ್ ಮತ್ತು ಬೆನಕ ಗುಬ್ಬಿ ವೀರಣ್ಣ ನಾಯಕರಾಗಿದ್ದಾರೆ.
ಆರ್ ಕೆ ಟಾಕೀಸ್ ಲಾಂಛನದಲ್ಲಿ ಪಿ.ಕೃಷ್ಣ ಹಾಗೂ ಬಿ.ಶಂಕರ್ ಅವರು ನಿರ್ಮಾಣ ಮಾಡಿರುವ, ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿದೆ ರಮೇಶ್ ಸುರೇಶ್ ಸಿನಿಮಾ. ಗುಬ್ಬಿ ವೀರಣ್ಣ ಅವರ ಮರಿಮಗ ಬೆನಕ ಹಾಗೂ ಯಶು ರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ರಮೇಶ್ ಸುರೇಶ್ ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ನಟರಾದ ಸಂತೋಷ್ ಆರ್ಯನ್, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ತಂಡಕ್ಕೆ ಶುಭ ಕೋರಿದರು.ಇಬ್ಬರು ನಿರ್ಮಾಪಕರು, ಇಬ್ಬರು ನಿರ್ದೇಶಕರು ಹಾಗೂ ಇಬ್ಬರು ನಾಯಕರಿರುವುದು ಈ ಚಿತ್ರದ ವಿಶೇಷ.
ಜೂನ್ 21ರಂದು ಚಿತ್ರ ಬಿಡುಗಡೆ
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಆರ್ ಕೆ ಟಾಕೀಸ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ಮೊದಲ ಹೆಜ್ಜೆಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಅವರ ನಿರ್ದೇಶನದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟೀಸರ್ ಹಾಗೂ ಹಾಡುಗಳು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಚಿತ್ರ ಜೂನ್ 21 ರಂದು ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ಕೃಷ್ಣ ಹಾಗೂ ಶಂಕರ್ ಅವರು ತಿಳಿಸಿದರು.
ಹಾಸ್ಯದ ಜತೆಗೆ ಸಂದೇಶ..
ನಮಗೆ ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಮಾತನಾಡಿದ ನಿರ್ದೇಶಕರಾದ ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ, ಇದೊಂದು ಕಾಮಿಡಿ ಜಾನರ್ ನ ಚಿತ್ರವಾದರೂ ಒಳ್ಳೆಯ ಸಂದೇಶವುಳ್ಳ ಚಿತ್ರ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು.
ನಮ್ಮ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಯಾಗಲಿ, ಅನವಶ್ಯಕ ಸನ್ನಿವೇಶಗಳಾಗಲಿ ಯಾವುದೂ ಇಲ್ಲ. ಜನರಿಗೆ ಬೇಸರವಾಗದಂತೆ ಉತ್ತಮ ಮನೋರಂಜನೆಯ ನೀಡುವ ಚಿತ್ರವಿದು. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು "ರಮೇಶ್ ಸುರೇಶ್" ಪಾತ್ರಧಾರಿಗಳಾದ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶು ರಾಜ್. ಚಿತ್ರದಲ್ಲಿ ನಟಿಸಿರುವ ಬಹುಭಾಷ ನಟ ಸತ್ಯಪ್ರಕಾಶ್, ನೀನಾಸಂ ರಂಗನಾಥ್, ಉಮಾ ಮುಂತಾದವರು ಈ ಚಿತ್ರದ ಕುರಿತು ಮಾತನಾಡಿದರು. ಚಂದನ ಸೇಗು ಈ ಚಿತ್ರದ ನಾಯಕಿ. ಸಾಧುಕೋಕಿಲ ಅವರು ರಮೇಶ್ ಸುರೇಶ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.