ನಿದ್ರಾದೇವಿ Next Door ಸಿನಿಮಾಕ್ಕೆ ಮುಹೂರ್ತ; ಪ್ರವೀರ್‌, ಶೈನ್‌ ಶೆಟ್ಟಿ ಸಿನಿಮಾಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಾಥ್‌
ಕನ್ನಡ ಸುದ್ದಿ  /  ಮನರಂಜನೆ  /  ನಿದ್ರಾದೇವಿ Next Door ಸಿನಿಮಾಕ್ಕೆ ಮುಹೂರ್ತ; ಪ್ರವೀರ್‌, ಶೈನ್‌ ಶೆಟ್ಟಿ ಸಿನಿಮಾಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಾಥ್‌

ನಿದ್ರಾದೇವಿ Next Door ಸಿನಿಮಾಕ್ಕೆ ಮುಹೂರ್ತ; ಪ್ರವೀರ್‌, ಶೈನ್‌ ಶೆಟ್ಟಿ ಸಿನಿಮಾಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಾಥ್‌

Upcoming Kannada Movies: ಪ್ರವೀರ್‌ ಶೆಟ್ಟಿ, ಶೈನ್‌ ಶೆಟ್ಟಿ ನಟನೆಯ ನಿದ್ರಾದೇವಿ Next Door ಎಂಬ ಸಿನಿಮಾಕ್ಕೆ ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೀರ್ ಶೆಟ್ಟಿಯ ಹೊಸ ಸಿನಿಮಾಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ.

ನಿದ್ರಾದೇವಿ Next Door ಸಿನಿಮಾಕ್ಕೆ ಮುಹೂರ್ತ; ಪ್ರವೀರ್‌ ಶೆಟ್ಟಿ ಸಿನಿಮಾ
ನಿದ್ರಾದೇವಿ Next Door ಸಿನಿಮಾಕ್ಕೆ ಮುಹೂರ್ತ; ಪ್ರವೀರ್‌ ಶೆಟ್ಟಿ ಸಿನಿಮಾ

ಬೆಂಗಳೂರು: ಹೊಸ ಕನ್ನಡ ಸಿನಿಮಾವೊಂದು ಸೆಟ್ಟೇರಿದೆ. ಸೈರನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರವೀರ್ ಶೆಟ್ಟಿ ಈಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ’ನಿದ್ರಾದೇವಿ Next Door’ ಸಾಥ್ ಕೊಟ್ಟಿದ್ದಾರೆ. ಈ ಸಿನಿಮಾಕ್ಕೆ ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ ರವಿಚಂದ್ರನ್‌ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಶೈನ್‌ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ಯುವ ಪ್ರತಿಭೆ ಸುರಾಗ್ ಸಾಗರ್ ನಿದ್ರಾದೇವಿ Next Door ಸಿನಿಮಾಕ್ಕೆ ನಿರ್ದೇಶಕರು. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರವೀರ್‌ ಶೆಟ್ಟಿಗೆ ನಾಯಕಿಯಾಗಿ ರಿಷಿಕಾ ನಾಯಕ್‌ ಬಣ್ಣ ಹಚ್ಚಲಿದ್ದಾರೆ. "ರವಿ ಸರ್ ನಮ್ಮ ಸಿನಿಮಾಗೆ ಕ್ಲಾಪ್ ಮಾಡಿದ್ದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರು ನಿದ್ದೆ ಇಲ್ಲದವರ ಜರ್ನಿಯನ್ನು ಈ ಸಿನಿಮಾ ಹೊಂದಿದೆ. ಅವ್ರಿಗೆ ಯಾಕೆ ನಿದ್ದೆ ಬರಲ್ಲ. ಇದಕ್ಕೆ ಪರಿಹಾರ ಏನು. ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕು" ಎಂದು ನಿರ್ದೇಶಕ ಸುರಾಗ್ ಸಾಗರ್ ಹೇಳಿದ್ದಾರೆ.

"ಪ್ರವೀಣ್ ಶೆಟ್ಟಿ ಅವರಿಗೋಸ್ಕರ್ ಈ ಪ್ರಾಜೆಕ್ಟ್ ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್ ನಲ್ಲಿಯೇ ಇಷ್ಟವಾಯ್ತು. ಪ್ರತಿಯೊಬ್ಬರು ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಜೀವನದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆ" ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ಹೇಳಿದ್ದಾರೆ.

"ನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ" ಎಂದು ನಾಯಕ ಪ್ರವೀರ್ ಶೆಟ್ಟಿ ಹೇಳಿದ್ದಾರೆ. "ಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಕ್ಯಾರಕ್ಟರ್ ಬೇರೆ ಇತ್ತು. ಈಗ ಕ್ಯಾರೆಕ್ಟರ್ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ" ಎಂದು ನಾಯಕಿ ರಿಷಿಕಾ ನಾಯಕ್ ಹೇಳಿದ್ದಾರೆ.

ಯುರೋಪ್ ನ ಪ್ರೇಗ್ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶನ ತರಬೇತಿ ಪಡೆದಿರುವ ಸುರಾಗ್ ಸಾಗರ್ ಎಂಟ್ರೋಪಿ ಕಿರುಚಿತ್ರದ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದೀಗ ಸುರಾಗ್ "ನಿದ್ರಾದೇವಿ Next Door’ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿ ಇದ್ದಾರೆ.

ಸೂರಂ ಮೂವೀಸ್ ಬ್ಯಾನರ್ನಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾತ್ಯಂತಕ್ಕೆ ’ನಿದ್ರಾದೇವಿ Next Door’ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಮನರಂಜನೆ ಸುದ್ದಿಗಳನ್ನು ಓದಿ

Whats_app_banner