ರಾಮ್ ಗೋಪಾಲ್ ವರ್ಮಾ ಅವರ ಡೇಂಜರಸ್ ನಟಿ ಕನ್ನಡಕ್ಕೆ; ಅಪ್ಸರ ರಾಣಿಗೆ ಬಾ ಅತಿಥಿ ಎಂದ ನಿರ್ದೇಶಕ ಎಂ ಶಂಕರ್
Apsara Rani: ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ "ಡೇಂಜರಸ್" ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರ "ಮುದುಡಿದ ಎಲೆಗಳು"ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು: ಮುದುಡಿದ ಎಲೆಗಳು ಎಂಬ ಕನ್ನಡ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಅಪ್ಸರ ರಾಣಿ ನಟಿಸಲಿದ್ದಾರೆ. ಹಿಂದಿ ಹಾಗೂ ತೆಲುಗು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ "ಡೇಂಜರಸ್" ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಎಂ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ "ಮುದುಡಿದ ಎಲೆಗಳು" ಚಿತ್ರದಲ್ಲಿ ಇವರು ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಸರ ರಾಣಿ ಅವರು ಅಭಿನಯಿಸಿದ ಹಾಡಿನ ಚಿತ್ರೀಕರಣ ಇತ್ತೀಚಿಗೆ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಕೆಮಿಸ್ಟ್ರಿ ಟೀಚರ್ ಮೋಡಿ
ದುಬಾರಿ ಕಾರೊಂದರಲ್ಲಿ ಕಾಲೇಜ್ ಗೆ ಕಾಲಿಟ್ಟ ಹುಡುಗಿಯ ಸೌಂದರ್ಯ ಹಾಗೂ ಸ್ಟೈಲ್ ಗೆ ಕಾಲೇಜು ಬಾಯ್ಸ್ ಮಾರು ಹೋಗುತ್ತಾರೆ. ಈ ಸುರಸುಂದರಿ ಹೊಸದಾಗಿ ಕಾಲೇಜು ಸೇರಿರುವ ಹುಡುಗಿ ಇರಬಹುದು ಎಂದು ಹುಡುಗರು ಆಲೋಚಿಸುತ್ತಿದ್ದಾಗ, ಅವರು ಕಾಲೇಜು ಸೇರಲು ಬಂದಿರುವ ಯುವತಿಯಲ್ಲ. ನಮಗೆ ಪಾಠ ಮಾಡಲು ಬಂದ ಕೆಮಿಸ್ಟ್ರಿ ಟೀಚರ್ ಅಂತ ಗೊತ್ತಾಗುತ್ತದೆ. ಇದನ್ನು ನಿರ್ದೇಶಕರು ಹಾಡಿನ ಮೂಲಕ ತೋರಿಸಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ ಈ ಹಾಡಿನಲ್ಲಿ ಅಪ್ಸರ ರಾಣಿ, ರಂಜಿತ್ ಕುಮಾರ್ ಹಾಗೂ ಪಂಕಜ್ ನಾರಾಯಣ್ ಅಭಿನಯಿಸಿದ್ದರು.
"ಮುದುಡಿದ ಎಲೆಗಳು" ಚಿತ್ರಕ್ಕೆ ಈಗಾಗಲೇ ಎಂಭತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ಭಾಗಗಳ ಚಿತ್ರೀಕರಣ ಮಾತ್ರ ಬಾಕಿಯದೆ. ಒಂದು ಹಾಡಿನ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಮತ್ತೊಂದು ಹಾಡು ತಜಿಕಿಸ್ತಾನದಲ್ಲಿ ಚಿತ್ರೀಕರಣಗೊಳ್ಳಲಿದೆ.
ರಿಯೋ ಪ್ರೊಡಕ್ಷನ್ ಫಿಲಂ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ಎಂ ಶಂಕರ್ ಅವರೆ "ಮುದುಡಿದ ಎಲೆಗಳು" ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಂಜನಿ ಈ ಚಿತ್ರದ ಸಹ ನಿರ್ಮಾಪಕಿ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣವಿದೆ
ರಂಜಿತ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಪಂಕಜ್ ನಾರಾಯಣ್, ಪಾವನ ಗೌಡ, ನಿಕಿತಾ ಸ್ವಾಮಿ, ಸೂರ್ಯದರ್ಶನ್, ಪ್ರೀತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಪ್ಸರ ರಾಣಿ, ಹರ್ಷಿಕಾ ಪೂಣಚ್ಛ, ರಮೇಶ್ ಭಟ್, ಭವ್ಯ, ಶೋಭ್ ರಾಜ್, ಶಂಕರ್ ಅಶ್ವತ್ಥ್, ಪೂನಂ ಪಾಂಡೆ, ಪದ್ಮಾ ವಾಸಂತಿ, ಜೋಸೈಮನ್ ಮುಂತಾದವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಒಟ್ಟಾರೆ, ತೆಲುಗು, ಹಿಂದಿ ನಟಿಯನ್ನು ಅತಿಥಿ ಪಾತ್ರದಲ್ಲಿ ಕರೆಸಿ ಪ್ರೇಕ್ಷಕರಿಗೆ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
