Ramya U Turn: ನಟ್ಟು ಬೋಲ್ಟ್ ವಿವಾದ, ಡಿಕೆಶಿ ಹೇಳಿಕೆಗೆ ನಟಿ ರಮ್ಯಾ ವಿರೋಧ, ಕಲಾವಿದರು ಟಾರ್ಗೆಟ್ ಆಗುತ್ತಿದ್ದಾರೆ ಎಂದ ಮೋಹಕತಾರೆ
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ "ಕಲಾವಿದರ ನಟ್ ಬೋಲ್ಟ್ ಟೈಟ್ ಮಾಡುವೆ" ಎಂದಿದ್ದರು. ಈ ಹಿಂದೆ ಈ ಹೇಳಿಕೆಯನ್ನು ಸಮರ್ಥಿಸಿದ್ದ ಮೋಹಕತಾರೆ ರಮ್ಯಾ ಇದೀಗ ಯು ಟರ್ನ್ ಹೊಡೆದಿದ್ದಾರೆ. ಕಲಾವಿದರು ರಾಜಕಾರಣಿಗಳಿಗೆ ಸುಲಭವಾಗಿ ಟಾರ್ಗೆಟ್ ಆಗುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ಸ್ಯಾಂಡಲ್ವುಡ್ ಕಲಾವಿದರ ಕುರಿತು ಕಿಡಿಕಾರಿದ್ದರು. ಚಿತ್ರರಂಗದ ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡುವೆ ಎಂದು ಡಿಕೆಶಿ ಹೇಳಿರುವ ಮಾತು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದೇ ಸಮಯದಲ್ಲಿ ಚಿತ್ರನಟಿ , ರಾಜಕಾರಣಿ ರಮ್ಯಾ ಅವರು ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಇದೀಗ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಯು ಟರ್ನ್ ಹೊಡೆದಿದ್ದಾರೆ. ಡಿಕೆಶಿ ಮಾತನ್ನು ಒಪ್ಪದ ಅವರು "ಕಲಾವಿದರು ರಾಜಕಾರಣಿಗಳಿಗೆ ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ" ಎಂದಿದ್ದಾರೆ.
ರಮ್ಯಾ ಯುಟರ್ನ್
"ಡಿಕೆ ಶಿವಕುಮಾರ್ ಅವರು ಹೇಳಿದ್ದು ಸಂಪೂರ್ಣವಾಗಿ ತಪ್ಪಲ್ಲ. ಕಲಾವಿದರು ಸಾರ್ವಜನಿಕರ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರುತ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ನಂಬಿಕೆಗಳಿಗೆ ತಕ್ಕಂತೆ ನಾವು ಆಗಾಗ ಧ್ವನಿ ಎತ್ತುತ್ತೇವೆ. ನೀವು ಯಾವ ಕಡೆಗೆ ಇದ್ದೀರೋ ಆ ವಿಚಾರಕ್ಕೆ ತಕ್ಕಂತೆ ಧ್ವನಿ ಎತ್ತುವಿರಿ. ಪ್ರಜಾಪ್ರಭುತ್ವದಲ್ಲಿ ಇದು ಅತ್ಯಂತ ಅಗತ್ಯವೂ ಹೌದು. ಡಾ. ರಾಜ್ಕುಮಾರ್ ಅವರು ಇದಕ್ಕೆ ಉತ್ತಮ ಉದಾಹರಣೆ. ಅವರು ಗೋಕಾಕ್ ಚಳವಳಿಗೆ ನೀಡಿದ ಬೆಂಬಲ ಮರೆಯುವಂತೆ ಇಲ್ಲ" ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
"ಕಲಾವಿದರು ಯಾವುದೇ ಕಾರ್ಯದಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎನ್ನುವುದು ಅವರ ವೈಯಕ್ತಿಕ ಆದ್ಯತೆ. ಸಿನಿಮಾರಂಗದ ಕೆಲವು ನನ್ನ ಆತ್ಮೀಯರು ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಹಂಚಿಕೊಳ್ಳುತ್ತಾರೆ. ಸಾರ್ವಜನಿಕವಾಗಿ ಹೇಳಲು ಹೋಗುವುದಿಲ್ಲ. ಏಕೆಂದರೆ, ಅವರ ಕೆಲಸ ನಿರಂತರ ವಿಮರ್ಶೆಗೆ ಒಳಗಾಗುವ ಸಾಧ್ಯತೆ ಇದೆ. ಅವರು ಟ್ರೋಲ್ಗೆ ಒಳಗಾಗಬಹುದು. ಇದು ಇವರ ಚಿತ್ರರಂಗ, ಭವಿಷ್ಯಕ್ಕೆ ಮಾರಕವಾಗಬಹುದು" ಎಂದು ನಟಿ ರಮ್ಯಾ ಹೇಳಿದ್ದಾರೆ.
"ಕಲಾವಿದರು ರಾಜಕಾರಣಿಗಳಿಗೆ ಸುಲಭವಾಗಿ ಟಾರ್ಗೆಟ್ ಆಗುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಕಲಾವಿದರು ರಾಜಕಾರಣಿಗಳಿಗೆ ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ. ರಾಜಕಾಣಿಗಳು ಕಲಾವಿದರ ವಿರುದ್ಧ ಬೆದರಿಕೆ ಒಡ್ಡುವ ಧೋರಣೆ ಬಿಡಬೇಕು. ಇದೇ ಕಾರಣಕ್ಕೆ ಅವರು ಧ್ವನಿ ಎತ್ತುತ್ತಿಲ್ಲ" ಎಂದು ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಇದಕ್ಕೂ ಮೊದಲು ರಮ್ಯಾ ಅವರು ಡಿಕೆ ಶಿವಕುಮಾರ್ ಹೇಳಿಕೆಯನ್ನು ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದರು. ಹೊಸಕೋಟೆಯಲ್ಲಿ ಇವರು ಡಿಕೆಶಿ ಮಾತನ್ನು ಸಮರ್ಥಿಸಿಕೊಂಡಿದ್ದರು. ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಮಾಧ್ಯಮದವರಿಗೆ ದಿವ್ಯಾ ಸ್ಪಂದನ ಹೀಗೆ ಹೇಳಿದ್ದರು. "ಸಾಹೇಬ್ರು ಹೇಳಿರುವ ವಿಚಾರದಲ್ಲಿ ಯಾವುದೇ ತಪ್ಪು ಇಲ್ಲ. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು. ಡಾಕ್ಟರ್ರಾಜ್ ಕುಮಾರ್ಅವರು ನೆಲ ಜಲ ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ನದಿ, ಜಲಾಶಯಗಳ ಬಗ್ಗೆ ಕಲಾವಿದರು ಮಾತನಾಡಬೇಕು" ಎಂದು ಅವರು ಹೇಳಿಕೆ ನೀಡಿದ್ದರು. ಇದೀಗ ನಟಿ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ. ಕಲಾವಿದರು ರಾಜಕಾರಣಿಗಳ ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ ಎಂದಿದ್ದಾರೆ.