ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ; ಜುಲೈ 18ರ ವರೆಗೂ ಪರಪ್ಪನ ಅಗ್ರಹಾರದಲ್ಲಿ ಡಿ ಗ್ಯಾಂಗ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಸೇರಿ ಎಲ್ಲ 17 ಮಂದಿಗೂ ಮತ್ತೆ ಜೈಲೇ ಗತಿಯಾಗಿದೆ! ಅಂದರೆ, ಜುಲೈ 18ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.

Darshan Thoogudeepa: ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ಇಂದು (ಜುಲೈ 04) ಮತ್ತೆ ನಡೆಯಿತು. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಸೇರಿ ಎಲ್ಲ 17 ಮಂದಿಗೂ ಮತ್ತೆ ಜೈಲೇ ಗತಿಯಾಗಿದೆ! ಅಂದರೆ, ಜುಲೈ 18ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ನಟ ದರ್ಶನ್ ಸೇರಿ ಕೊಲೆ ಪ್ರಕರಣದ ಎಲ್ಲ 17 ಆರೋಪಿಗಳು ಇಂದು ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ, ಭದ್ರತೆಯ ಜತೆಗೆ ಅಭಿಮಾನಿಗಳು ಜಮಾಯಿಸುವ ಕಾರಣದಿಂದ ಕೋರ್ಟ್ಗೆ ಕರೆತಂದು, ಮುಖಾಮುಖಿ ವಿಚಾರಣೆ ಬದಲು, ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಆರೋಪಿಗಳನ್ನು ಜಡ್ಜ್ ಮುಂದೆ ಕರೆ ತಂದು ವಿಚಾರಣೆ ನಡೆಸಲಾಯಿತು. ಈ ವೇಳೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜುಲೈ 18ರ ವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.
ಪರಪ್ಪನ ಅಗ್ರಹಾರ ಸೇರಿ ತುಮಕೂರಿನ ಜೈಲಿನಲ್ಲಿಯೂ ಒಂದಷ್ಟು ಆರೋಪಿಗಳನ್ನು ಬಂಧಿಸಿ ಇಡಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡೂ ಜೈಲಿನಲ್ಲಿದ್ದ ಆರೋಪಿಗಳು ಜಡ್ಜ್ ಮುಂದೆ ಕರೆತರಲಾಗಿತ್ತು. ಒಬ್ಬೊಬ್ಬ ಆರೋಪಿಗಳ ಹೆಸರನ್ನು ಜಡ್ಜ್ ಕರೆಯುತ್ತಿದ್ದಂತೆ, ಹಾಜರಿದ್ದವರು ತಾವು ಇದ್ದೇವೆ ಎಂಬುದನ್ನು ಹೇಳಲು ಕೈ ಮೇಲಕ್ಕೆತ್ತಿ ಖಾತರಿಪಡಿಸಿದರು. ಹಾಗಾದರೆ, ಜಾಮೀನಿನ ಕಥೆ ಏನಾಯ್ತು? ಸದ್ಯದ ಮಾಹಿತಿ ಪ್ರಕಾರ, ಪ್ರಕರಣ ತೀವ್ರತೆ ಅರಿತು ಯಾರಿಗೂ ಸದ್ಯಕ್ಕೆ ಜಾಮೀನು ಸಿಗುವ ಸೂಚನೆ ಇಲ್ಲ ಎನ್ನಲಾಗುತ್ತಿದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂನ್ 8ರಂದು ಅಪಹರಿಸಲಾಗಿತ್ತು. ಬಳಿಕ ಅದೇ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ನಟ ದರ್ಶನ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಆಧಾರದ ಮೇಲೆ ಸದ್ಯ ಎಲ್ಲ 17 ಮಂದಿ ಸದ್ಯ ಜೈಲು ಸೇರಿದ್ದಾರೆ.
ಈ ನಡುವೆ ರೇಣುಕಾಸ್ವಾಮಿ ಸಾಚಾ ಅಲ್ಲ, ನಟ ದರ್ಶನ್ ಮಾಡಿದ್ದೇ ಸರಿ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದರೆ, ಇನ್ನು ಕೆಲವರು ಕಾನೂನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಸ್ಯಾಂಡಲ್ವುಡ್ನ ಆಪ್ತರು ನಟ ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದಾರೆ.
ವಿಭಾಗ