‘ದರ್ಶನ್ ಮೇಲಿರೋ ಕೋಪ, ಸಿಟ್ಟನ್ನ ಕೆಲವರು ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ’; ದಿನಕರ್ ತೂಗುದೀಪ
ಶುಕ್ರವಾರ (ಜ. 24) ರಂದು ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಬೆನ್ನಲ್ಲೇ ಶೋ ಮುಗಿದ ಬಳಿಕ ಇಡೀ ತಂಡ, ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಅಭಿಪ್ರಾಯ ಕೇಳಿದೆ. ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಮಾಡುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ ದಿನಕರ್.

Dinakar Thoogudeepa: ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ ಶುಕ್ರವಾರ ಬಿಡುಗಡೆ ಆಗಿದೆ. ವಿರಾಟ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಂಜನಾ ಆನಂದ್ ನಾಯಕಿ. ಜಯಣ್ಣ ಮತ್ತು ಭೋಗೇಂದ್ರ ಸಿನಿಮಾ ಶೀರ್ಷಿಕೆಗೆ ತಕ್ಕಂತೆಯೇ ರಾಯಲ್ ಆಗಿಯೇ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇತ್ತ ಶೋ ಮುಗಿದ ಬಳಿಕ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ಗಳಿಗೆ ಭೇಟಿ ನೀಡುತ್ತಿರುವ ರಾಯಲ್ ಚಿತ್ರತಂಡಕ್ಕೂ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಶುಕ್ರವಾರ ಸಿನಿಮಾ ರಿಲೀಸ್ ಆದ ದಿನವೇ, ಬೆಂಗಳೂರಿನ ಮಾಲ್ಗೆ ದಿಢೀರ್ ಭೇಟಿ ನೀಡಿದೆ ಇಡೀ ತಂಡ.
ದಿನಕರ್ ತೂಗುದೀಪ್ ಆರೋಪ ಏನು?
"ನಮಸ್ಕಾರ.. ತುಂಬ ಖುಷಿಯಾಯ್ತು. ಫ್ಯಾಮಿಲಿ ಜತೆಗೆ ಬಂದು ಸಿನಿಮಾ ನೋಡಿದ್ದು. ಬೆಳಗ್ಗೆಯಿಂದ ವಿಮರ್ಶೆಗಳನ್ನು ಚೆಕ್ ಮಾಡ್ತಿದ್ದೇವೆ. ಎಲ್ಲರಿಂದಲೂ ರಿಪೋರ್ಟ್ ಕೇಳ್ತಿದ್ದೇವೆ. ಎಲ್ಲರೂ ಸೂಪರ್ ಎನ್ನುತ್ತಿದ್ದಾರೆ. ಆದರೆ, ಬುಕ್ ಮೈ ಶೋನಲ್ಲಿ ಕೆಲವರು ಸುಮ್ ಸುಮ್ನೆ ನೆಗೆಟಿವ್ ರಿವ್ಯೂವ್ ಹಾಕ್ತಿದ್ದಾರೆ. ಬರೀ ಒಂದೊಂದು ಸ್ಟಾರ್ ಕೊಡ್ತಿದ್ದಾರೆ. ಬೇಕು ಬೇಕು ಅಂತ ತುಂಬ ಜನ ಪ್ರಯತ್ನಪಡ್ತಿದ್ದಾರೆ. ನೀವು ಸಪೋರ್ಟ್ ಮಾಡಿದರೆ, ಅವರದ್ದು ಏನೇ ಪ್ರಯತ್ನ ಇದ್ದರೂ ನಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನೀವು ಗೆಲ್ಲಿಸುತ್ತಿರಿ ಅನ್ನೋ ನಂಬಿಕೆ ಇದೆ. ನಮ್ಮ ಸೆಲೆಬ್ರಿಟೀಸ್ ನೀವು."
ದರ್ಶನ್ ಮೇಲಿರೋ ಕೋಪ ನನ್ನ ಮೇಲೆಕೇ?
"ತುಂಬ ಜನ ಪ್ರಯತ್ನ ಪಡ್ತಿದ್ದಾರೆ. ಅದ್ಯಾಕೆ ಅಂತ ಗೊತ್ತಿಲ್ಲ. ದರ್ಶನ್ ಮೇಲಿರುವ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ. ಇಂಥ ಹೊತ್ತಲ್ಲಿ ನೀವುಗಳು ನಮಗೆ ಸಪೋರ್ಟ್ ಮಾಡಬೇಕು. ನೀವು ನಮ್ಮ ಜೊರತೆ ಇರೋವರೆಗೂ ನಮಗೆ ಆನೆ ಬಲ ಇದ್ದಂಗೆ. ನಾವು ಧೈರ್ಯವಾಗಿ ಮುಂದೆ ನಿಂತಿರ್ತೀವಿ. ಅವರು ಏನೇ ಪ್ರಯತ್ನಪಟ್ಟರೂ ಅವರನ್ನು ಗೆಲ್ಲಿಸಲು ಬಿಡಲ್ಲ ಎಂಬುದೂ ಗೊತ್ತು. ನಮ್ಮ ಬೆನ್ನ ಹಿಂದೆ ನಿಂತಿದ್ದೀರಾ. ನಮ್ಮನ್ನು ಗೆಲ್ಲಿಸುತ್ತೀರಾ ಅನ್ನೋ ಆತ್ಮವಿಶ್ವಾಸ ಇದೆ. ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ ದಿನಕರ್ ತೂಗುದೀಪ.
ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ರಾಯಲ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ನಾಯಕ ನಾಯಕಿಯಾಗಿ ನಟಿಸಿದರೆ, ರಘು ಮುಖರ್ಜಿ ಖಳನ ಗತ್ತಿನಲ್ಲಿ ಎದುರಾಗಿದ್ದಾರೆ. ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ರವಿ ಭಟ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂಕೇತ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ರವಿ ವರ್ಮ ಸಾಹಸ ನಿರ್ದೇಶನವಿದೆ. ಪ್ರೇಮ್ ಮತ್ತು ಜಯಂತ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
