ʻನಮ್ಮಿಂದ ತಪ್ಪಾಗಿದೆ ಕ್ಷಮಿಸಿʼ; ಸ್ಪಾರ್ಕ್ ಪೋಸ್ಟರ್ ವಿವಾದಕ್ಕೆ ತೆರೆ, ರಮೇಶ್ ಇಂದಿರಾ ಬಳಿ ಕ್ಷಮೆ ಕೇಳಿದ ನಿರ್ದೇಶಕ
ಸ್ಪಾರ್ಕ್ ಸಿನಿಮಾದ ಪೋಸ್ಟರ್ ವಿವಾದ ಇದೀಗ ತಣ್ಣಗಾಗಿದೆ. ಅನುಮತಿ ಇಲ್ಲದೆ ನಟ ರಮೇಶ್ ಇಂದಿರಾ ಅವರ ಫೋಟೋ ಬಳಸಿದ್ದಕ್ಕೆ, ಕಾನೂನು ಮೊರೆ ಹೋಗಲು ಶ್ರುತಿ ನಾಯ್ಡು ನಿರ್ಧರಿಸಿದ್ದರು. ಕೊನೆಗೆ ಸ್ಪಾರ್ಕ್ ಚಿತ್ರತಂಡ ಕ್ಷಮೆ ಕೇಳುವ ಮೂಲಕ ವಿವಾದವನ್ನು ತಣ್ಣಗೆ ಮಾಡಿದೆ.

ಪೋಸ್ಟರ್ ವಿಚಾರಕ್ಕೆ ವಿವಾದಕ್ಕೆ ಕಾರಣವಾಗಿತ್ತು ಸ್ಪಾರ್ಕ್ ಸಿನಿಮಾ. ಇದೀಗ ಇದೇ ಪೋಸ್ಟರ್ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್ ಹುಟ್ಟುಹಬ್ಬಕ್ಕೆ ಸ್ಪಾರ್ಕ್ ಚಿತ್ರ ತಂಡದಿಂದ ಏಪ್ರಿಲ್ 18ರಂದು ಹೊಸ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಿತ್ತು. ಈ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್ ವಿರುದ್ಧ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಸ್ಪಾರ್ಕ್ ಚಿತ್ರದ ನಿರ್ದೇಶಕರು ರಮೇಶ್ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ.
ಇನ್ನೊಮ್ಮೆ ಈ ತಪ್ಪು ಆಗದಿರಲಿ..
ಸ್ಪಾರ್ಕ್ ಸಿನಿಮಾಗೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರಿಗೆ ಮೊದಲ ಅನುಭವ. ಹೀಗಾಗಿ ಸಣ್ಣದೊಂದು ತಪ್ಪು ನಡೆದು ಹೋಗಿದೆ. ಆ ತಪ್ಪನ್ನು ಈಗ ತಿದ್ದಿಕೊಂಡಿದ್ದಾರೆ. “ರಮೇಶ್ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದು, ನಿಮ್ಮಿಂದ ಪರ್ಮಿಷನ್ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಆದರೆ ಅದು ಮಿಸ್ ಕಮ್ಯೂನಿಕೇಷನ್ ಆಗಿದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ. ಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ ಮಾಡಿ. ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ ಎಂದು ರಮೇಶ್ ಇಂದಿರಾ ಹೇಳಿದ್ದಾರೆ.
ಏನಿದು ವಿವಾದ?
ಪ್ರೇಮ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪೋಸ್ಟರ್ ನಲ್ಲಿ, ಒಬ್ಬ ರಾಜಕಾರಣಿಯ ಚಿತ್ರವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ನೀಡುವ ಚಿತ್ರವಿತ್ತು. ಆ ರಾಜಕಾರಣಿ ಖ್ಯಾತ ಕಲಾವಿದ ಕಂ ನಿರ್ದೇಶಕ ರಮೇಶ್ ಇಂದಿರಾ ಅವರದ್ದು. ಆ ಪೋಸ್ಟರ್ ರಮೇಶ್ ಇಂದಿರಾ ಅವರ ‘ಭೀಮ’ ಸಿನಿಮಾದ್ದಾಗಿತ್ತು. ಹೀಗಾಗಿ ಪೋಸ್ಟರ್ ನೋಡಿದ ಶ್ರುತಿ ನಾಯ್ಡು, ಚಿತ್ರತಂಡ ಹಾಗೂ ಪ್ರೇಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಅನುಮತಿ ಪಡೆಯದೇ ರಮೇಶ್ ಇಂದಿರಾ ಫೋಟೋ ಬಳಸಿದ್ದಕ್ಕೆ, ಕಾನೂನು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಇದೀಗ ಈ ವಿವಾದವು ತಣ್ಣಗಾಗಿದೆ.
ಸ್ಪಾರ್ಕ್ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪತ್ರಕರ್ತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚನಾ ಇಂದರ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ಸ್ಪಾರ್ಕ್ ಶೂಟಿಂಗ್ ಭರದಿಂದ ಸಾಗುತ್ತಿದೆ.