‘ಕರ್ನಾಟಕದಲ್ಲೇ ನನ್ನ ಸಾವು, ಅದೇ ನನ್ನ ಕೊನೆಯ ಆಯ್ಕೆ!’ ಆತ್ಮಹತ್ಯೆ ಬಗ್ಗೆ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ VIDEO
ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ವಿಜಯಲಕ್ಷ್ಮೀ, ಇತ್ತೀಚಿನ ಕೆಲ ದಿನಗಳಿಂದ ವಿವಾದದ ಮೂಲಕವೇ ಸುದ್ದಿಯಲ್ಲಿದ್ದಾರೆ. ಇದೀಗ ನಾಮ್ ತಮಿಳರ್ ಪಾರ್ಟಿಯ ಸೀಮಾನ್ ವಿರುದ್ಧ ಮತ್ತೆ ಬಂಡಾಯವೆದ್ದು, ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.

Vijayalakshmi: ಬಹುಭಾಷಾ ನಟಿ ವಿಜಯಲಕ್ಷ್ಮೀ ಸದ್ಯ ಸಿನಿಮಾ ಹೊರತುಪಡಿಸಿ, ವಿವಾದಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಸೂರ್ಯವಂಶ, ಜೋಡಿಹಕ್ಕಿ, ನಾಗಮಂಡಲ ಸೇರಿ ಹಲವು ಕ್ಲಾಸಿಕ್ ಹಿಟ್ಗಳನ್ನು ನೀಡಿದ್ದ ಈ ನಟಿ, ಕಾಂಟ್ರವರ್ಸಿಗಳಿಂದಲೇ ಆಗಾಗ ಮುನ್ನೆಲೆಗೆ ಬರುತ್ತಿರುತ್ತಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಮಗದೊಂದು ವಿಡಿಯೋ ಶೇರ್ ಮಾಡಿ, ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ, ಕರ್ನಾಟಕದಲ್ಲಿಯೇ ನನ್ನ ಸಾವು ಎಂದು ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತಮಿಳುನಾಡಿನ ನಾಮ್ ತಮಿಳರ್ ಪಕ್ಷದ ಸೀಮಾನ್ ತನ್ನನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ 2011ರಲ್ಲಿ ಚೆನ್ನೈನ ವಲಸರವಕ್ಕಂ ಪೊಲೀಸರಿಗೆ ದೂರು ನೀಡಿದ್ದರು. ಅಂದಿನಿಂದ ಈ ಪ್ರಹಸನ ನಡೆಯುತ್ತಲೇ ಬಂದಿದೆಯಾದರೂ, ಸ್ಪಷ್ಟತೆ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಿರುವಾಗಲೇ ಇದೀಗ ಮತ್ತೊಂದು ಹೊಸ ವಿಡಿಯೋ ಮೂಲಕ ಆಗಮಿಸಿದ್ದಾರೆ ವಿಜಯಲಕ್ಷ್ಮೀ. ಈ ಸಲ ವಿಡಿಯೋದಲ್ಲಿ ಮತ್ತೊಮ್ಮೆ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಏನಿದೆ ಹೊಸ ವಿಡಿಯೋದಲ್ಲಿ?
ಮನೆಯಿಂದಲೇ ವಿಡಿಯೋ ಮಾಡಿದ ವಿಜಯಲಕ್ಷ್ಮೀ, "ನಾಮ್ ತಮಿಳರ್ ಪಕ್ಷದ ಸೀಮಾನ್ ನನ್ನನ್ನು ಮದುವೆಯಾಗುವುದಾಗಿ ಹೇಳಿಕೊಂಡು 3 ವರ್ಷ ಸಂಸಾರ ಮಾಡಿ ನನ್ನ ಜೀವನ ಹಾಳು ಮಾಡಿದ್ದಾನೆ. ಹಾಗಾಗಿ ನಾನು ಸೀಮಾನ್ ಜತೆಗೆ ಮಾತನಾಡಬೇಕು. ಆತನಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ನನ್ನ ಕೊನೆಯ ವಿಡಿಯೋ. ಎರಡು ದಿನಗಳ ನಂತರ ಕರ್ನಾಟಕದಲ್ಲಿ ನನ್ನ ಸಾವಾಗಲಿದೆ. ನಾನು ಹೇಗೆ ಸತ್ತೆ ಎಂಬುದು ನಿಮಗೆ ತಿಳಿಯುತ್ತದೆ" ಎಂದಿದ್ದಾರೆ.
ನಡು ನೀರಲ್ಲಿ ಕೈ ಬಿಟ್ಟು ಮೋಸ ಮಾಡಿದ
"ನಾನು ಸೀಮಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು, ನನ್ನ ಸಹೋದರಿಗೆ ಸಮಸ್ಯೆ ಎದುರಾದಾಗ. ಆಗಿನ್ನು ಸೀಮಾನ್ ಅವಿವಾಹಿತರಾಗಿದ್ದ. ನನಗೆ ಮದುವೆಯಾಗುವುದಾಗಿಯೂ ಭರವಸೆ ನೀಡಿ, ಮೂರು ವರ್ಷಗಳ ಕಾಲ ನನ್ನೊಂದಿಗಿದ್ದು, ನನ್ನ ಜೀವನವನ್ನು ಹಾಳು ಮಾಡಿದ. ರಹಸ್ಯವಾಗಿ ನನ್ನನ್ನು ಮದುವೆಯಾಗಿ, ಎಲ್ಲಿಯೂ ಬಹಿರಂಗಪಡಿಸದೆ, ನನ್ನ ಇಡೀ ಜೀವನವನ್ನು ನಾಶ ಮಾಡಿದ. ನಂತರ ಕೆಲವು ಸಮಸ್ಯೆ ಎದುರಾದಾಗ ನನ್ನನ್ನು ನಡು ನೀರಲ್ಲ ಬಿಟ್ಟು ಹೋದರು" ಎಂದು ವಿಜಯಲಕ್ಷ್ಮೀ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಾರ್ಚ್ 19ರಂದು ಕೋರ್ಟ್ಗೆ ಹಾಜರ್
ನಾಮ್ ತಮಿಳರ್ ಪಕ್ಷದ ಸೀಮಾನ್ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸೀಮಾನ್ ವಿರುದ್ಧ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ವಿಜಯಲಕ್ಷ್ಮಿ ಅವರಿಗೆ ಇದೇ ಮಾ. 19ರಂದು ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. 2011ರಲ್ಲಿ ನೀಡಿದ್ದ ದೂರನ್ನು 2012ರಲ್ಲೇ ವಾಪಸ್ ಪಡೆಯುವುದಾಗಿ ನಟಿ ವಿಜಯಲಕ್ಷ್ಮಿ ಪತ್ರ ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ಇದೀಗ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ಕೈಬಿಡಬೇಖು ಎಂದು ಸೀಮಾನ್ ಅರ್ಜಿಯಲ್ಲಿ ಹೇಳಿದ್ದರು. ಈ ವಿಚಾರಣೆಗೆ ಇದೀಗ ಮಾ. 19ಕ್ಕೆ ದಿನಾಂಕ ನಿಗದಿಯಾಗಿದೆ.