ಸ್ವಾತಿಷ್ಟ ಕೃಷ್ಣನ್- ವಿನಯ್ ರಾಜ್ಕುಮಾರ್ ಮದುವೆ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ, ಏನ್ರೀ ಇದು ಸದ್ದಿಲ್ಲದೆ ದೊಡ್ಮನೆ ಕುಡಿಯ ಕಲ್ಯಾಣ
ನಟಿ ಸ್ವಾತಿಷ್ಟ ಕೃಷ್ಣನ್ ಮತ್ತು ಕನ್ನಡ ನಟ ವಿನಯ್ ರಾಜ್ ಕುಮಾರ್ ವಿವಾಹವಾಗಿದ್ದಾರೆಯೇ? ಇನ್ಸ್ಟಾಗ್ರಾಂನಲ್ಲಿ ಸ್ವಾತಿಷ್ಟ ಹಂಚಿಕೊಂಡಿರುವ ಫೋಟೋಗಳು ಅಭಿಮಾನಿಗಳಿಗೆ ಇಂತಹ ಪ್ರಶ್ನೆ ಏಳುವಂತೆ ಮಾಡಿತ್ತು. ಇದಕ್ಕೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಉತ್ತರ ಕನ್ನಡ ಮೂಲದ ತಮಿಳು ನಟಿ ಸ್ವಾತಿಷ್ಟ ಕೃಷ್ಣನ್ ಇನ್ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಕ್ಕದಲ್ಲಿ ಕುಳಿತ ವರ ಬೇರಾರೂ ಅಲ್ಲ. ನಮ್ಮ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್. ಒಂದೆಡೆ ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿವಾಹ ವಿಚ್ಛೇದನ ವಿಷಯದಿಂದ ದೊಡ್ಮನೆಯ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಇನ್ನೊಂದೆಡೆ ಈ ಮದುವೆ ಶುಭ ಸುದ್ದಿ ನಮಗೆ ಗೊತ್ತೇ ಆಗಿಲ್ವಲ್ಲ ಎಂದು ಸಾಕಷ್ಟು ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಆದರೆ, ಈ ಫೋಟೋಗೆ ನಟಿ ಸ್ವಾತಿಷ್ಟ ಕೃಷ್ಣನ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. "ಅಯ್ಯೋ, ನಾನು ಸ್ಪಷ್ಟವಾಗಿ ಬರೆದಿದ್ದೇನೆ, ಹೀಗಿದ್ದರೂ ಹೀಗಾಯ್ತ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಾತಿಷ್ಟ ಕೃಷ್ಣನ್- ವಿನಯ್ ರಾಜ್ಕುಮಾರ್ ಮದುವೆ ಫೋಟೋ
ಇತ್ತೀಚೆಗೆ ಸ್ವಾತಿಷ್ಟ ಕೃಷ್ಣನ್ ತನ್ನ ಇನ್ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲಿನ ಸ್ಲೈಡ್ನಲ್ಲಿ ಕೇವಲ ಮದುಮಗಳು ಸ್ವಾತಿಷ್ಟ ಕೃಷ್ಣನ್ ಫೋಟೋ ಇತ್ತು. ಎರಡು ಮತ್ತು ಮೂರನೇ ಸ್ಲೈಡ್ನಲ್ಲೂ ಮದುಮಗಳ ಫೋಟೋ ಇತ್ತು. ಮದು ಮಗ ಯಾರು ಎಂಬ ಅಚ್ಚರಿಯಿಂದಲೇ ಫ್ಯಾನ್ಸ್ ಮುಂದಿನ ಫೋಟೋ ನೋಡಿದ್ದಾರೆ. ಅಲ್ಲಿದ್ದದ್ದು ಕನ್ನಡ ನಟ ವಿನಯ್ ರಾಜ್ ಕುಮಾರ್. ಇದೇನೂ ಸುದ್ದಿ ಇಲ್ಲದೆ, ಸದ್ದಿಲ್ಲದೆ ಮದುವೆಯಾದ್ರ ಎಂದು ಸಾಕಷ್ಟು ಜನರು ಅಂದುಕೊಂಡರು ಫ್ಯಾನ್ಸ್. ಕೇವಲ ಕರ್ನಾಟಕ ಮತ್ತು ತಮಿಳುನಾಡಿನ ಅಭಿಮಾನಿಗಳಿಗೆ ಇದು ಒಂದು ಕ್ಷಣ ಅಚ್ಚರಿ ತಂದಿತ್ತು.
ಮದುವೆ ಫೋಟೋದ ಹಿಂದಿನ ರಹಸ್ಯ
ಒಂದಿಷ್ಟು ಜನರಿಗೆ ಈ ಫೋಟೋದ ಹಿಂದಿನ ರಹಸ್ಯ ಗೊತ್ತಾಯಿತು. ಇದು ಇತ್ತೀಚೆಗೆ ಬಿಡುಗಡೆಯಾದ ಒಂದು ಸರಳ ಪ್ರೇಮಕಥೆ ಸಿನಿಮಾದ ಫೋಟೋಗಳು ಎಂದು ಅರ್ಥ ಆಯ್ತು. ಬಳಿಕ ಒಂದಿಷ್ಟು ಜನರು ಸ್ವಾತಿಷ್ಟ ಹಂಚಿಕೊಂಡ ಫೋಟೋದ ಮೇಲೆ ಕಣ್ಣಾಡಿಸಿದ್ದಾರೆ. "ಒಂದು ಸರಳ ಪ್ರೇಮಕಥೆ, ಬಿಹಾಂಡ್ ದಿ ಸೀನ್ಸ್. ಈ ಸಿನಿಮಾವನ್ನು ತುಂಬಾ ಇಷ್ಟಪಟ್ಟೆ. ಅನುರಾಗ, ಅತಿಶಯ ಮತ್ತು ಎಲ್ಲಾ ಸಿಬ್ಬಂದಿಗೆ ನನ್ನ ಪ್ರೀತಿಯ ಹಾರೈಕೆ" ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ವಿಶೇಷವೆಂದರೆ, ಮೊದಲಿಗೆ ಫೋಟೋ ಹಂಚಿಕೊಂಡಾಗ ಇಷ್ಟುದ್ದ ಶೀರ್ಷಿಕೆ ಹಂಚಿಕೊಂಡಿರಲಿಲ್ಲ. ಈ ಫೋಟೋವನ್ನು ಅಭಿಮಾನಿಗಳು ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದ ಬಳಿಕ ಕ್ಯಾಪ್ಷನ್ಗೆ ಇಷ್ಟೆಲ್ಲ ಸೇರಿಸಿದ್ದಾರೆ. ಅದಕ್ಕೂ ಮೊದಲು ಫ್ರಮ್ ದಿ ಅರ್ಚೀವ್ಸ್ ಎಂದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಕಾಮೆಂಟ್ ಮೂಲಕವೂ ನಟಿ ಪ್ರತಿಕ್ರಿಯೆ ನೀಡಿದ್ದಾರೆ. "ಅಯ್ಯೋ ಇದು ಸಿನಿಮಾದ ಬಿಹಾಂಡ್ ದಿ ಸೀನ್ ಫೋಟೋಗಳು" ಎಂದು ಪುನರ್ ಉಚ್ಚರಿಸಿದ್ದಾರೆ.
ಅಭಿಮಾನಿಗಳ ಕಾಮೆಂಟ್
ಸ್ವಾತಿಷ್ಟ ಕೃಷ್ಣನ್ ಅವರು ಈ ಫೋಟೋಗಳಿಗೆ ಕ್ಯಾಪ್ಷನ್ ಬರೆದರೂ ಅದನ್ನು ನೋಡದ ಸಾಕಷ್ಟು ಅಭಿಮಾನಿಗಳು "ಕಂಗ್ರಾಜ್ಯುಲೇಷನ್" "ಜೋಡಿ ಚೆನ್ನಾಗಿದೆ" "ಜೋಡಿ ಚೆನ್ನಾಗಿಲ್ಲ" ಎಂದೆಲ್ಲ ಕಾಮೆಂಟ್ ಮಾಡುವುದನ್ನು ಮುಂದುವರೆಸಿದ್ದಾರೆ. ವಿಷಯ ಗೊತ್ತಾದ ಬಳಿಕ ಕೆಲವರು "ಜೋಡಿ ಚೆನ್ನಾಗಿದೆ, ಇಬ್ಬರೂ ಮದುವೆಯಾಗಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ರಾಘವೇಂದ್ರ ಎಚ್ಎಸ್ ಎಂಬವರು ವಿನಯ್ ರಾಜ್ ಕುಮಾರ್ ಅವರನ್ನು ಕಾಮೆಂಟ್ನಲ್ಲಿ ಗೊತ್ತಿಲ್ಲದೆ ಇರುವವರಿಗೆ ಹೀಗೆಂದು ಪರಿಚಯಿಸಿದ್ದಾರೆ. "ಸ್ವಾತಿಷ್ಟ ಕೃಷ್ಣನ್ ಅವರ ಫಾಲೋವರ್ಗಳಿಗೆ ಮತ್ತು ತಮಿಳು ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ಇದು ಒಂದು ಸರಳ ಪ್ರೇಮಕಥೆಯ ಸಿನಿಮಾ ಫೋಟೋ. ಈ ನಾಯಕ ಸಾಮಾನ್ಯ ಹೊಸ ನಟನಲ್ಲ. ಈತನ ಲೆಜೆಂಡ್ ಡಾ. ರಾಜ್ಕುಮಾರ್ ಅವರ ಮೊಮ್ಮಗ. ಬ್ರಾಂಡ್ ಇಮೇಜ್ಗೆ ಕುಂದಾಗದಂತೆ ತನ್ನ ಸಿನಿಮಾಗಳಿಗೆ ಉತ್ತಮ ಸ್ಕ್ರಿಪ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುವ ನಟ" ಎಂದು ಪರಿಚಯಿಸಿದ್ದಾರೆ.
ಒಟ್ಟಾರೆ ನಟಿ ಸ್ವಾತಿಷ್ಟ ಕೃಷ್ಣನ್ ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೊಂಡದ್ದು ಅಂತೂ ನಿಜ. ಯಾರು ಈ ಸ್ವಾತಿಷ್ಟ ಕೃಷ್ಣನ್? ಇವರು ಉತ್ತರ ಕನ್ನಡ ಜಿಲ್ಲೆ ಮೂಲದವರು. ಚೆನ್ನೈನಲ್ಲಿ ನೆಲೆಸಿರುವ ಸ್ವಾತಿಷ್ಟಗೆ ಒಂದು ಸರಳ ಪ್ರೇಮಕಥೆ ಮೊದಲ ಕನ್ನಡ ಸಿನಿಮಾ. ಇದಕ್ಕೂ ಮೊದಲು ಹಾಫ್ ಬಾಯ್ಲ್ ಎಂಬ ತಮಿಳು ವೆಬ್ ಸರಣಿಯಲ್ಲಿ ನಟಿಸಿದ್ದರು. ಜತೆಗೆ, ತಮಿಳಿನ ಜಡಾ, ಕೀ, ವಿಕ್ರಮ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ಪ್ರೀತಿಸಿ ಮದುವೆಯಾದರೂ, ಅದ್ಯಾಕೋ ಈ ಜೋಡಿಯ ನಡುವೆ ಮೊದಲಿನ ಪ್ರೀತಿ ಈಗಿಲ್ಲ. ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಏರಿಳಿತಗಳು ಘಟಿಸಿವೆ. ಮುನಿಸುಗಳು ಮನೆ ಮಾಡಿವೆ. ಈ ಜೋಡಿಯ ಪ್ರೀತಿಯ ಬಂಧ ತುಂಡಾಗಲು ಮೂರನೇಯವರ ಆಗಮನವೂ ಕಾರಣ ಎಂದೂ ಪುಕಾರು ಹಬ್ಬುತ್ತಿದೆ. ಒಂದು ಹೆಜ್ಜೆ ಮುಂದೆ ಹೋಗಿ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಜತೆಗಿನ ಸಂಬಂಧ ಕಡಿತಗೊಳಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಶ್ರೀದೇವಿಯಿಂದಲೂ ಉತ್ತರ ಬಂದಿದೆ. ಇದೇ ಸಮಯದಲ್ಲಿ ವಿನಯ್ ರಾಜ್ ಕುಮಾರ್ ವಿವಾಹದ ಫೋಟೋ ಒಂದು ಕ್ಷಣ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
