ಕನ್ನಡವನ್ನು ಅಪಹಾಸ್ಯ ಮಾಡಿದ್ದಕ್ಕೆ ಸೋನು ನಿಗಮ್‍ ಹಾಡನ್ನೇ ಡಿಲೀಟ್‍ ಮಾಡಿದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡವನ್ನು ಅಪಹಾಸ್ಯ ಮಾಡಿದ್ದಕ್ಕೆ ಸೋನು ನಿಗಮ್‍ ಹಾಡನ್ನೇ ಡಿಲೀಟ್‍ ಮಾಡಿದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ

ಕನ್ನಡವನ್ನು ಅಪಹಾಸ್ಯ ಮಾಡಿದ್ದಕ್ಕೆ ಸೋನು ನಿಗಮ್‍ ಹಾಡನ್ನೇ ಡಿಲೀಟ್‍ ಮಾಡಿದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ಚಿತ್ರಕ್ಕಾಗಿ ಸೋನು ನಿಗಮ್‍ ಹಾಡಿರುವ ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ …’ ಎಂಬ ಹಾಡನ್ನು ಡಿಲಿಟ್‌ ಮಾಡಿದೆ. ಚೇತನ್‍ ಸೋಸ್ಕಾ ಅವರಿಂದ ಅದೇ ಹಾಡನ್ನು ಹಾಡಿಸಿ, ಅದನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಕನ್ನಡವನ್ನು ಅಪಹಾಸ್ಯ ಮಾಡಿದ್ದಕ್ಕೆ ಸೋನು ನಿಗಮ್‍ ಹಾಡನ್ನೇ ಡಿಲೀಟ್‍ ಮಾಡಿದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ
ಕನ್ನಡವನ್ನು ಅಪಹಾಸ್ಯ ಮಾಡಿದ್ದಕ್ಕೆ ಸೋನು ನಿಗಮ್‍ ಹಾಡನ್ನೇ ಡಿಲೀಟ್‍ ಮಾಡಿದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಬಾಲಿವುಡ್‍ ಗಾಯಕ ಸೋನು ನಿಗಮ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಸೋನು ನಿಗಮ್‍ ಅವರಿಗೆ ಅಸಹಕಾರ ತೋರುವುದಕ್ಕೆ ತೀರ್ಮಾನಿಸಲಾಗಿತ್ತು.

ಈಗ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ಚಿತ್ರಕ್ಕಾಗಿ ಸೋನು ನಿಗಮ್‍ ಹಾಡಿರುವ ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ …’ ಎಂಬ ಹಾಡನ್ನು ಕಿತ್ತುಹಾಕಲು ತೀರ್ಮಾನಿಸಿದೆ. ಚೇತನ್‍ ಸೋಸ್ಕಾ ಅವರಿಂದ ಅದೇ ಹಾಡನ್ನು ಹಾಡಿಸಿ, ಅದನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ʻಸೋನು ನಿಗಮ್ ಆ ಗೌರವವನ್ನು ಉಳಿಸಿಕೊಂಡಿಲ್ಲʼ

ಈ ಕುರಿತು ಮಾತನಾಡಿರುವ ನಿರ್ದೇಶಕ ರಾಮ್‍ನಾರಾಯಣ್‍, ‘ಸೋನು ನಿಗಮ್‍ ಇತ್ತೀಚೆಗೆ ಆಡಿರುವ ಕೆಲವು ಮಾತುಗಳು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಅಂತಹವರು ಹಾಡಿದ ಹಾಡನ್ನು ಜನ ಕೇಳುವುದಕ್ಕೆ ಇಷ್ಟಪಡುತ್ತಾರಾ? ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ದೊಡ್ಡ ಅವಮಾನ ಮಾಡಿರುವ ಸೋನು, ಆ ಗೌರವವನ್ನು ಉಳಿಸಿಕೊಂಡಿಲ್ಲ. ಹಾಗಾಗಿ, ಅದನ್ನು ಧಿಕ್ಕರಿಸುತ್ತಾ, ಅವರು ಹಾಡಿರುವ ಹಾಡನ್ನು ಬದಲಾಯಿಸುವುದಕ್ಕೆ ತೀರ್ಮಾನಿಸಿದ್ದೇವೆ. ಅವರ ಬದಲು ಅದೇ ಹಾಡನ್ನು ಚೇತನ್‍ ಸೋಸ್ಕಾ ಅವರಿಂದ ಹಾಡಿಸಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದೇವೆ’ ಎಂದರು.

ʻಒಂದು ಹಾಡಿಗೆ ಸಾಕಷ್ಟು ಸತಾಯಿಸಿದ್ದಾರೆʼ

ಈ ಹಾಡನ್ನು ಸೋನು, ಮೂರು ತಿಂಗಳ ಹಿಂದೆ ಹಾಡಿದ್ದರಂತೆ. ‘ಹಾಡಿಗೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. ಮನೋಮೂರ್ತಿ, ಯೋಗರಾಜ್‍ ಭಟ್‍ ಮತ್ತು ಸೋನು ನಿಗಮ್ ಅವರದ್ದು ಅದ್ಭುತ ಕಾಂಬಿನೇಷನ್‍. ಮೂವರು ಸೇರಿ ಮಾಡಿರುವ ಹಾಡುಗಳು ಯಶಸ್ವಿಯಾಗಿವೆ. ಅದೇ ಕಾರಣಕ್ಕೆ ಅವರಿಂದ ಈ ಹಾಡನ್ನು ಹಾಡಿಸಲಾಯಿತು. ಮೂರು ತಿಂಗಳ ಹಿಂದೆ ಈ ಹಾಡನ್ನು ಹಾಡಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ಸೋನು ಸಾಕಷ್ಟು ಆಟ ಆಡಿಸಿ, ಈ ಹಾಡನ್ನು ಹಾಡಿದ್ದರು. ಈ ಹಾಡಿಗೆ ಅವರು ಎಷ್ಟು ಸಂಭಾವನೆ ತೆಗೆದುಕೊಂಡರು ಗೊತ್ತಿಲ್ಲ. ಸಂಪೂರ್ಣ ಜವಾಬ್ದಾರಿಯನ್ನು ಮನೋಮೂರ್ತಿ ತೆಗೆದುಕೊಂಡಿದ್ದರು. ಇಲ್ಲಿ ನಷ್ಟಕ್ಕಿಂತ ಹೆಚ್ಚಾಗಿ ಅವರು ಮಾಡಿದ್ದು ದೊಡ್ಡ ತಪ್ಪು. ತಪ್ಪು ಮಾಡಿ ಕೊನೆಗೆ ಕ್ಷಮೆ ಕೇಳಿದರೆ ಹೇಗೆ? ಈ ತರಹದ ಘಟನೆಗಳನ್ನು ಎಷ್ಟು ಸಹಿಸಿಕೊಳ್ಳುವುದು? ಎಷ್ಟು ಕ್ಷಮಿಸುವುದು? ನಮ್ಮ ನಿಲುವು ಗೊತ್ತಾಗಲಿ ಎಂಬ ಕಾರಣಕ್ಕೇ ಈ ಹಾಡನ್ನು ಕಿತ್ತು ಹಾಕಿದ್ದೇವೆ. ಈ ವಿಷಯವನ್ನು ಯೋಗರಾಜ್‍ ಭಟ್‍ ಮತ್ತು ಮನೋಮೂರ್ತಿ ಅವರಿಗೂ ಹೇಳಿದ್ದೇವೆ. ಅವರು ಸಹ ತಮ್ಮ ಸಹಮತ ಸೂಚಿಸಿದ್ದಾರೆ’ ಎಂದರು.

ನಿರ್ಮಾಪಕ ಸಂತೋಷ್‍ ಮಾತನಾಡಿ, ‘ನನಗೆ ಸೋನು ಕ್ಷಮೆ ಕೇಳಿದ ರೀತಿ ಸರಿ ಹೋಗಲಿಲ್ಲ. ಅವರ ನಡವಳಿಕೆ ಸರಿ ಇಲ್ಲ. ಹಾಗಾಗಿ, ಅವರು ಹಾಡಿದ ಹಾಡನ್ನು ಕಿತ್ತು ಹಾಕುವುದಕ್ಕೆ ತೀರ್ಮಾನ ಮಾಡಿದ್ದೇವೆ. ಕನ್ನಡಿಗರಾಗಿ ಅವರ ನಡವಳಿಕೆ ಸಾಕಷ್ಟು ನೋವು ತಂದಿದೆ. ನಾವು ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿಲ್ಲ’ ಎಂದರು.

ಮೇ 23ಕ್ಕೆ ತೆರೆಗೆ

‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಬಿರುಸಿನ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಮುಳುಗಿದೆ. ಅಂದಹಾಗೆ, ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಮೂಲಕ ನಾಡಿನ ಮನೆ ಮಾತಾದ ಹಾಸ್ಯ ನಟ ಮಡೆನೂರು ಮನು, ರಾಮಾಚಾರ ಸೀರಿಯಲ್‌ ಮೂಲಕ ಗಮನ ಸೆಳೆದಿರುವ ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.