ʻಅಪ್ಪನ ಆಸೆ ಈಡೇರಿಸುವ ಸಮಯ ಹತ್ತಿರ ಬಂದಿದೆʼ ಎನ್ನುತ್ತ ʻಸೂತ್ರಧಾರಿʼ ಚಿತ್ರದ ಕನವರಿಕೆಯಲ್ಲಿ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ, ಅಪ್ಪನ ಆಸೆ ಈಡೇರಿಸುವ ಸನಿಹದಲ್ಲಿದ್ದಾರೆ. ಅಂದರೆ, ಗಾಯಕ, ಸಂಗೀತ ನಿರ್ದೇಶಕನಾದ ಬಳಿಕ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅದರಂತೆ, ಅವರ ಚೊಚ್ಚಲ ಚಿತ್ರ ʻಸೂತ್ರಧಾರಿʼ ಮೇ 9ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

ಹಾಡು, ಸಂಗೀತ ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡವರು ಚಂದನ್ ಶೆಟ್ಟಿ. ಬಿಗ್ ಬಾಸ್ ವಿಜೇತರಾಗಿ ಅಲ್ಲಿಂದಲೂ ಜನಪ್ರಿಯತೆಯ ಮುನ್ನೆಲೆಗೆ ಬಂದ ಚಂದನ್ ಶೆಟ್ಟಿ, ತಮ್ಮ ಹಾಡುಗಳಿಂದಲೇ ಫೇಮಸ್. ಇದೀಗ ಇದೇ ಚಂದನ್ ಶೆಟ್ಟಿ, ಅಪ್ಪನ ಆಸೆ ಈಡೇರಿಸುವ ಸನಿಹದಲ್ಲಿದ್ದಾರೆ. ಅಂದರೆ, ಗಾಯಕ, ಸಂಗೀತ ನಿರ್ದೇಶಕನಾದ ಬಳಿಕ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅದರಂತೆ, ಚೊಚ್ಚಲ ʻಸೂತ್ರಧಾರಿʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ (ಮೇ 9) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ನಿರ್ಮಾಣ ಮಾಡಿರುವ ಸಿನಿಮಾ ಈ ʻಸೂತ್ರಧಾರಿʼ. ಕಿರಣ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನಸೆಳೆದ ಈ ಸಿನಿಮಾ ಮೇ 9ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಇದೇ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಇಡೀ ತಂಡಕ್ಕೆ ಶುಭಕೋರಿದ್ದರು.
ರವಿಚಂದ್ರನ್ ಹೇಳಿದ್ದೇನು?
ಚಂದನ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ ರವಿಚಂದ್ರನ್, "ನಿರ್ಮಾಪಕ ನವರಸನ್ ಅವರನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಅವರ ಮುಖದಲ್ಲಿ ಸದಾ ನಗು ಇರುತ್ತದೆ. ಒಬ್ಬ ನಿರ್ಮಾಪಕ ತನ್ನ ಚಿತ್ರವನ್ನು ಹೆಚ್ಚು ಪ್ರೀತಿಸಬೇಕು. ಅದಕ್ಕೆ ಈ ಸಮಾರಂಭ ಸಾಕ್ಷಿ. ಹಾಡುಗಳ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ನಾಯಕನಾಗಿ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಟ್ರೇಲರ್ ವಿಭಿನ್ನವಾಗಿದೆ. ಚಿತ್ರ ಕೂಡ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ" ಎಂದರು ಕ್ರೇಜಿಸ್ಟಾರ್.
ʻನವರಸನ್ ನಮ್ಮ ಸಾಕಷ್ಟು ಇವೆಂಟ್ ಗಳನ್ನು ಮಾಡಿಕೊಟ್ಟಿದ್ದಾರೆ. ನಾನು ಚಂದನ್ ಶೆಟ್ಟಿ ಅವರ ಹಾಡುಗಳಿಗೆ ಅಭಿಮಾನಿ. ಅವರ ಕೆಲವು ಹಾಡುಗಳನ್ನು ಗುನುಗುತ್ತಿರುತ್ತೇನೆ. ಈ ಚಿತ್ರದ ಮೂಲಕ ಅವರು ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದರು ಶಿವರಾಜಕುಮಾರ್.
ಅಪ್ಪನ ಆಸೆ ಈಡೇರಿಸುವ ಸಮಯ ಬಂತು..
ಮೊದಲ ಸಲ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಂದನ್ ಶೆಟ್ಟಿ, ಆ ಬಗ್ಗೆ ತಮ್ಮ ಖುಷಿ ಹಂಚಿಕೊಂಡರು. "ಹಿಂದೆ ಹೇಳಿದಂತೆ ನಾನು ಹೀರೋ ಆಗಬೇಕೆಂದು ಆಸೆ ಪಟ್ಟವರು ನಮ್ಮ ಅಪ್ಪ. ಅವರ ಆಸೆ ಈಡೇರುವ ದಿನ ಸಮೀಪಿಸಿದೆ. ಇದೇ ಮೇ 9ಕ್ಕೆ ನಮ್ಮ ಚಿತ್ರ ʻಸೂತ್ರಧಾರಿʼ ಬಿಡುಗಡೆಯಾಗಲಿದೆ. ಇಂದಿನ ಸಮಾರಂಭಕ್ಕೆ ಚಿತ್ರರಂಗದ ಹಿರಿಯರಾದ ಶಿವರಾಜಕುಮಾರ್ ಹಾಗೂ ರವಿಚಂದ್ರನ್ ಅವರು ಬಂದು ನಮಗೆ ಆಶೀರ್ವದಿಸಿದ್ದು ಹೇಳಿಕೊಳ್ಳಲಾಗದಷ್ಟು ಆನಂದವಾಗಿದೆ" ಎಂಬುದು ಚಂದನ್ ಶೆಟ್ಟಿ ಮಾತು.
ರವಿಚಂದ್ರನ್ ಹಾಗೂ ಶಿವಣ್ಣ ಅವರು ಬಂದು ನಮ್ಮ ಚಿತ್ರಕ್ಕೆ ಬಂದು ಹಾರೈಸಿದ್ದು ಬಹಳ ಖುಷಿಯಾಗಿದೆ. ಇಬ್ಬರಿಗೂ ನಾನು ಚಿರಋಣಿ ಎಂದರು ನಿರ್ಮಾಪಕ ನವರಸನ್. ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟರಾದ ತಬಲ ನಾಣಿ, ರಮೇಶ್, ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಭಾಷಣೆ ಬರೆದಿರುವ ಕಿನ್ನಾಳ್ ರಾಜ್ ಮುಂತಾದವರು ʻಸೂತ್ರಧಾರಿʼ ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ ಸೇರಿ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.