ನಿರ್ದೇಶಕ ನಾಗಾಭರಣರ ನಾಡಪ್ರಭು ಕೆಂಪೇಗೌಡ ಕುರಿತ ಸಿನಿಮಾದಲ್ಲಿ ನಟಿಸುವ ನಾಯಕ ಇವರೇ! ಫಸ್ಟ್ ಲುಕ್ ಬಿಡುಗಡೆ
ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಪ್ರಯುಕ್ತ ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ ಮೂಡಿಬರಲಿರುವ ನಾಡಪ್ರಭು ಕೆಂಪೇಗೌಡ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Nadaprabhu Kempegowda: ನಾಡಪ್ರಭು ಕೆಂಪೇಗೌಡ ಸಿನಿಮಾ ಕುರಿತು ಸ್ಯಾಂಡಲ್ವುಡ್ನಲ್ಲಿ ಒಂದಿಲ್ಲೊಂದು ಸುದ್ದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಹಿರಿಯ ನಿರ್ದೇಶಕ ನಾಗಾಭರಣ ಈ ಹಿಂದೆಯೇ ಬೆಂಗಳೂರು ಕಟ್ಟಿದ ಕೆಂಪೇಗೌಡರ ಕುರಿತ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದರು. ಆದರೆ, ಸಿನಿಮಾ ಮಾತ್ರ ಶುರುವಾಗಿರಲಿಲ್ಲ. ಇದೀಗ ಸದ್ದಿಲ್ಲದೆ, ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಕೆಲಸಕ್ಕೆ ಇಳಿದಿದ್ದಾರೆ. ಹಾಗಾದರೆ, ಕೆಂಪೇಗೌಡ ಪಾತ್ರಧಾರಿ ಯಾರು? ಅದಕ್ಕೂ ಉತ್ತರ ಸಿಕ್ಕಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಸಿನಿಮಾ ಮಾಡಬೇಕೆಂಬುದು ನಿರ್ದೇಶಕ ನಾಗಾಭರಣ ಅವರ ಎರಡು ದಶಕಗಳ ಕನಸು. ಇದೀಗ ಆ ಕನಸು ಸಾಕಾರಗೊಳ್ಳುತ್ತಿದೆ. ಡಾಲಿ ಧನಂಜಯ್ ಜತೆಗೆ ಈ ಸಿನಿಮಾ ಘೋಷಣೆ ಮಾಡಿದ್ದಾರೆ ನಾಗಾಭರಣ. ಕೆಂಪೇಗೌಡ ಪಾತ್ರದಲ್ಲಿ ಧನಂಜಯ್ ನಟಿಸಲಿದ್ದು, ಕೆಂಪೇಗೌಡ ಜಯಂತಿ ನಿಮಿತ್ತ (ಜೂನ್ 21) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಖಡಕ್ ಮುಖಾರವಿಂದದಲ್ಲಿ ಧನಂಜಯ್ ಮಿಂಚಿದ್ದಾರೆ. ಜತೆಗೆ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ದುಡಿಯಲಿದ್ದಾರೆ ಎಂಬುದನ್ನೂ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಅನಾವರಣ ಮಾಡಿದ್ದಾರೆ ನಿರ್ದೇಶಕ ನಾಗಾಭರಣ.
ತಾಂತ್ರಿಕ ಬಳಗ ಹೀಗಿದೆ...
ನಾಡಪ್ರಭು 'ಕೆಂಪೇಗೌಡ' ಕುರಿತ ಸಿನಿಮಾ ತೆರೆಮೇಲೆ ತರಬೇಕೆಂಬುದು ನಿರ್ದೇಶಕ ನಾಗಾಭರಣ ಅವರ ಬಹುವರ್ಷಗಳ ಕನಸು. ಆ ಕನಸಿಗೆ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ಕೆಂಪೇಗೌಡ ಪಾತ್ರದಲ್ಲಿ ಎದುರಾಗುವುದರ ಜತೆಗೆ ಡಾಲಿ ಪಿಚ್ಚರ್ಸ್ ಅರ್ಪಿಸುವ ಈಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಎಂ.ಎಸ್. ಶಿವರುದ್ರಪ್ಪ, ಶುಭಂ ಗುಂಡಾಲ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಪರಿಕಲ್ಪನೆ, ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ನಾಗಾಭರಣ ಅವರದ್ದು.
ವಾಸುಕಿ ಗಾನ, ಅದ್ವೈತ್ ಕ್ಯಾಮರಾ
ಸಹಕಥೆ ಪ್ರತಿಭಾ ನಂದಕುಮಾರ್, ಕಾರ್ಯಕಾರಿ ನಿರ್ಮಾಪಕರಾಗುವುದರ ಜತೆಗೆ ಸಹ ನಿರ್ದೇಶಕರಾಗಿ ಪನ್ನಗ ಭರಣ ಕೆಲಸ ಮಾಡಲಿದ್ದಾರೆ. ಸಂಗೀತ ನಿರ್ದೇಶನ ವಾಸುಕಿ ವೈಭವ್ ಅವರ ಜವಾಬ್ದಾರಿ. ಅದ್ವೈತ್ ಗುರುಮೂರ್ತಿ ಈ ಚಿತ್ರದ ಛಾಯಾಗ್ರಾಹಕರಾಗಿರಲಿದ್ದಾರೆ. ಸದ್ಯ ಕೆಂಪೇಗೌಡ ಜಯಂತಿ ನಿಮಿತ್ತ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸಿನಿಮಾ ಚಿತ್ರೀಕರಣ ಯಾವಾಗಿನಿಂದ ಶುರು? ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಎಂಬಿತ್ಯಾದಿ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲಿದೆ.
ಉತ್ತರಕಾಂಡದಲ್ಲಿ ಧನಂಜಯ್ ಬಿಜಿ
ಧನಂಜಯ್ ನಟನೆಯ ಕೋಟಿ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಪರಮ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕಾಮನ್ ಮ್ಯಾನ್ನ ಪರದಾಟಗಳನ್ನು ತೆರೆಗೆ ತರಲಾಗಿತ್ತು. ಇದಲ್ಲದೆ, ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಸಿನಿಮಾದಲ್ಲೂ ಧನಂಜಯ್ ನಟಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿದಿದ್ದು, ಉತ್ತರ ಕರ್ನಾಟಕ ಭಾಷಾ ಸೊಗಡು, ಅಲ್ಲಿನ ಕಥೆ ಈ ಚಿತ್ರದ ಹೈಲೈಟ್. ಅಣ್ಣಾ ಫ್ರಂ ಮೆಕ್ಸಿಕೊ, ಜೀಬ್ರಾ ಸೇರಿ ಇನ್ನೂ ಹಲವು ಸಿನಿಮಾಗಳು ಇವರ ಬತ್ತಳಿಕೆಯಲ್ಲಿವೆ.
