Karataka Damanaka Trailer: ಊರು, ನೀರು, ತೇರು ಈ ಮೂರೂ ಬಿಟ್ಟವರು ಯಾರು? ಕುತಂತ್ರಿ ನರಿಗಳ ‘ಕರಟಕ ದಮನಕ’ ಟ್ರೇಲರ್ ರಿಲೀಸ್
ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾರ್ಚ್ 8ರ ಶಿವರಾತ್ರಿಯ ಪ್ರಯುಕ್ತ ಈ ಸಿನಿಮಾ ತೆರೆಕಾಣಲಿದ್ದು, ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆ ಬಗ್ಗೆ ವಿಭಿನ್ನ ಕಥೆಯ ಮೂಲಕ ಭಟ್ಟರ ಆಗಮನವಾಗಿದೆ.

Karataka Damanaka Trailer: ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ ಕರಟಕ ದಮನಕ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ವರೆಗೂ ಟ್ರೇಲರ್ ಯಾಕೆ ಬಂದಿಲ್ಲ ಎಂದು ಕಾದಿದ್ದೇ ಬಂತು, ಆದರೆ ಚಿತ್ರತಂಡ ಮಾತ್ರ ಹಾಡುಗಳನ್ನೇ ಬಿಡುಗಡೆ ಮಾಡಿ ಹಬ್ಬ ಮಾಡಿತ್ತು. ಇದೀಗ ನಾಳೆ (ಮಾ. 8) ಸಿನಿಮಾ ಬಿಡುಗಡೆ ಎನ್ನುತ್ತಿದ್ದಂತೆ, ಇಂದು (ಮಾ. 7) ಕರಟಕ ದಮನಕ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಕಾಕತಾಳೀಯ ಎಂಬಂತೆ ಹಾಡಿಗೂ, ಸದ್ಯದ ಪರಿಸ್ಥಿತಿಗೆ ತಕ್ಕಂತೆಯೇ ಸಿನಿಮಾದ ಕಥೆ ಮೂಡಿಬಂದಿದೆ.
ಕರಟಕ ದಮನಕ ಸಿನಿಮಾದಲ್ಲಿ ನೀರಿನ ವಿಚಾರವನ್ನೇ ಪ್ರಧಾನವಾಗಿರಿಸಿಕೊಂಡಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಅದರಂತೆ, ಬಿರು ಬೇಸಿಗೆಯ ಸಮಯದಲ್ಲಿ ನೀರಿಲ್ಲದಿದ್ದರೆ ಏನಾಗಬಹುದು ಎಂಬ ಎಳೆಯನ್ನೇ ಕಥೆಯ ರೂಪದಲ್ಲಿ ಹೆಣೆದು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ನಿರ್ದೇಶಕರು. ನೀರಿಲ್ಲದೇ ನಂದಿಕೋಲೂರು ಗ್ರಾಮವನ್ನೇ ತೊರೆದಿದ್ದಾರೆ ಹಳ್ಳಿ ಜನ. ಇದೇ ಹಳ್ಳಿಯಲ್ಲಿ ಒಂದಷ್ಟು ನೀರಿನ ರಾಜಕೀಯ, ಉಳ್ಳವರ ಹಾರಾಟ, ಬಿಸಿ ಬಿಸಿ ಈ ಊರಲ್ಲಿ ಹಸಿ ಬಿಸಿ ಪ್ಯಾರೂ ಕಾಣಿಸಿದೆ.
ಈ ನಡುವೆ ನಂದಿಕೋಲೂರು ಗ್ರಾಮದಲ್ಲಿ ಎದುರಾದ ನೀರಿನ ಸಮಸ್ಯೆ ಪರಿಹರಿಸಲು ಇವರಿಬ್ಬರ ಎಂಟ್ರಿಯಾಗುತ್ತದೆ. ಇದು ಸದ್ಯ ಟ್ರೇಲರ್ನಲ್ಲಿ ಕಂಡಿದ್ದು. ಅಲ್ಲಿಂದ ಹೇಗೆ ಕಥೆ ಸಾಗುತ್ತದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಊರು, ನೀರು, ತೇರಿನ ಕಥೆ ಹೇಳುತ್ತ ಈ ಮೂವರನ್ನು ಬಿಟ್ಟೋರು ಯಾರು ಎಂಬ ಪ್ರಶ್ನೆಗೆ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ. ಶಿವರಾಜ್ಕುಮಾರ್ ಮತ್ತು ಪ್ರಭುದೇವ ಮೊದಲ ಸಲ ಒಟ್ಟಿಗೆ ನಟಿಸಿರುವ ಕರಟಕ ದಮನಕ ಸಿನಿಮಾದಲ್ಲಿ ಶಿವಣ್ಣನಿಗೆ ಪ್ರಿಯಾ ಆನಂದ್ ಜೋಡಿಯಾದರೆ, ನಿಶ್ವಿಕಾ ಪ್ರಭುದೇವಗೆ ನಾಯಕಿಯಾಗಿದ್ದಾರೆ.
ಭಟ್ಟರಿಗೆ ಉತ್ತರ ಕರ್ನಾಟಕದ ಮಂದಿಯ ಸಲಾಂ
ಯೋಗರಾಜ್ ಭಟ್ ಮೂಲತಃ ಉತ್ತರ ಕರ್ನಾಟಕದವರು. ಅವರ ಪ್ರತಿ ಸಿನಿಮಾದಲ್ಲೂ ಅದರ ಎಳೆ ಇದ್ದೇ ಇರುತ್ತದೆ. ಅದರಲ್ಲೂ ಆ ಸೊಗಡಿನ ಹಾಡುಗಳಿಗೇ ಅವರು ಫೇಮಸ್. ಇದೀಗ ಕರಟಕ ದಮನಕ ಸಿನಿಮಾ ಮೂಲಕ ಉತ್ತರ ಕರ್ನಾಟಕ ಭಾಗದ ಬದುಕು ಮತ್ತು ಬವಣೆಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಬದುಕು ಹೇಗಿರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ಟ್ರೇಲರ್ನಲ್ಲಿ ಕಟ್ಟಿಕೊಟ್ಟಿದ್ದಾರೆ. ಯೋಗರಾಜ್ ಭಟ್ಟರ ಈ ಚಿತ್ರದ ಟ್ರೇಲರ್ಗೆ ಉತ್ತರ ಕರ್ನಾಟಕ ಮಂದಿಯಿಂದಲೂ ಮೆಚ್ಚುಗೆ ಸಿಗುತ್ತಿದೆ.
ಈಗಾಗಲೇ ಕಾಟೇರ ಸಿನಿಮಾ ಮೂಲಕ ದೊಡ್ಡ ಗೆಲುವು ದಾಖಲಿಸಿಕೊಂಡಿರುವ ರಾಕ್ಲೈನ್ ವೆಂಕಟೇಶ್, ಕರಟಕ ದಮನಕ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಜತೆಗೆ ಪೊಲೀಸ್ ಅಧಿಕಾರಿಯಾಗಿಯೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಭಿನ್ನ ಪಾತ್ರ ಪೋಷಣೆಯಲ್ಲಿ ಕಂಡಿದ್ದಾರೆ. ಪ್ರಭುದೇವ ಸಹ ಬಹುವರ್ಷಗಳ ಬಳಿಕ ಕನ್ನಡಕ್ಕೆ ಬಂದಿದ್ದೂ ಕುತೂಹಲ ದುಪ್ಪಟ್ಟಾಗಿದೆ.