ಶಿವರಾಜ್ ಕುಮಾರ್ಗೆ ಸರ್ಜರಿ ಯಶಸ್ವಿ, ಅಮೆರಿಕದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೃತಕ ಮೂತ್ರಪಿಂಡ ಅಳವಡಿಕೆ- ಡಾಕ್ಟರ್ ಮನೋಹರ್ ಹೀಗಂದ್ರು
ಅಮೇರಿಕಾದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ಪಡೆದುಕೊಂಡ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆಂದು ಡಾ. ಮನೋಹರ್ ತಿಳಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಕೂಡ ಶಿವಣ್ಣನ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ಅದಾದ ನಂತರದಲ್ಲಿ ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋದಲ್ಲಿ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿ ಮಿಯಾಮಿಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದರು. ನಿನ್ನೆ (ಡಿಸೆಂಬರ್ 24) ಶಿವರಾಜ್ ಕುಮಾರ್ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶಿವಣ್ಣನಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಈ ಬಗ್ಗೆ ಮಾತನಾಡಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವಣ್ಣ
ಶಿವರಾಜ್ ಕುಮಾರ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಡಾ. ಮನೋಹರ್ ಹೇಳಿದ್ದಾರೆ. ಅವರ ಮೂತ್ರಪಿಂಡಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದಿದ್ದಾರೆ. ಹೀಗೆ ಮಾಡುವುರಿಂದ ರೋಗ ಸಂಪೂರ್ಣವಾಗಿ ಗುಣವಾಗುತ್ತದೆ ಎಂದಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ಅವರದೇ ಕರುಳನ್ನು ಬಳಸಿ ಕೃತಕ ಮೂತ್ರಪಿಂಡವನ್ನು ಮತ್ತೆ ಅಳವಡಿಸಲಾಗಿದೆ. ಶಿವಣ್ಣ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತ್ಯಂತ ಧೈರ್ಯವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಚಿಕಿತ್ಸೆ ಪಡೆದ ನಂತರವೂ ಅವರು ಹೊಂದಿಕೊಳ್ಳುತ್ತಿದ್ದಾರೆ. ರೆಸ್ಪಾನ್ಸ್ ಮಾಡುತ್ತಿದ್ದಾರೆ ಎಂದಿದ್ಧಾರೆ. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಹಾಗೂ ನಂತರವೂ ಅವರು ತುಂಬಾ ಸ್ಟೇಬಲ್ ಆಗಿದ್ದಾರೆ ಎಂದಿದ್ದಾರೆ.
ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ. ಅವರು ಮಾನಸಿಕ ಮತ್ತು ದೈಹಿಕವಾಗಿ ಅಷ್ಟು ಗಟ್ಟಿಯಾಗಿರುವ ಕಾರಣ ಏನೂ ಆಗಲಾರದು. ಅವರು ಬೇಗ ಗುಣಮುಖರಾಗಿ ನಿಮ್ಮನ್ನು ಮತ್ತೆ ಭೇಟಿಯಾಗುತ್ತಾರೆ. ನಿಮ್ಮ ಪ್ರಾರ್ಥನೆ ಹಾಗೂ ಹಾರೈಕೆಯಿಂದ ಕೆಲವು ವಾರಗಳ ನಂತರ ಅವರು ಗುಣಮುಖರಾಗುತ್ತಾರೆ ಎಂದಿದ್ದಾರೆ.
ಶಿವರಾಜ್ ಕುಮಾರ್ ಪತ್ನಿ ಏನಂದ್ರು?
“ಶಿವರಾಜ್ ಕುಮಾರ್ ಗುಣಮುಖರಾಗುತ್ತಿದ್ದಾರೆ. ನಾವು ಇಲ್ಲಿಗೆ ಯಾಕೆ ಬಂದಿದ್ದೇವೋ ಆ ಕಾರ್ಯ ಯಶಸ್ವಿಯಾಗಿದೆ. ನೀವೆಲ್ಲರೂ ಅವರಿಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದೀರಿ. ನಿಮ್ಮೆಲ್ಲರ ಆಶಿರ್ವಾದ ಹಾರೈಕೆ ಅವರ ಮೇಲಿದೆ. ಇದನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ಡಾಕ್ಟರ್ ನಮ್ಮ ಪಾಲಿಗೆ ದೇವರಾಗಿದ್ದಾರೆ” ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಸ್ವಲ್ಪ ದಿನಗಳಲ್ಲಿ ಶಿವರಾಜ್ ಕುಮಾರ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕೆ ಕೆಲವು ಪ್ರೊಟೊಕಾಲ್ ಇರುತ್ತದೆ. ಯಾರೂ ಗಾಬರಿಯಾಗುವ ಅವಶ್ಯಕತೆೆ ಇಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಅವರ ಫೋಟೋಗಳನ್ನು ಸಹ ಶೇರ್ ಮಾಡುತ್ತೇವೆ ಎಂದಿದ್ದಾರೆ. ಆದರೆ ಇನ್ನು ಮೂರಿಂದ, ನಾಲ್ಕು ದಿನ ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ. ಅವರು ಚೇತರಿಸಿಕೊಳ್ಳಲಿ ಎಂದಿದ್ದಾರೆ.