ಕಿಚ್ಚ ಸುದೀಪ್‌ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೀನಿ ಎಂದು ಮನೆ ಬಿಟ್ಟು ಓಡಿಬಂದಿದ್ದ ವ್ಯಕ್ತಿಯೀಗ ಸಿನಿಮಾ ನಿರ್ದೇಶಕ
ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್‌ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೀನಿ ಎಂದು ಮನೆ ಬಿಟ್ಟು ಓಡಿಬಂದಿದ್ದ ವ್ಯಕ್ತಿಯೀಗ ಸಿನಿಮಾ ನಿರ್ದೇಶಕ

ಕಿಚ್ಚ ಸುದೀಪ್‌ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೀನಿ ಎಂದು ಮನೆ ಬಿಟ್ಟು ಓಡಿಬಂದಿದ್ದ ವ್ಯಕ್ತಿಯೀಗ ಸಿನಿಮಾ ನಿರ್ದೇಶಕ

ಕುಡ್ಲ ನಮ್ದು ಊರು ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆ ಆಗಿವೆ. ಕಿಚ್ಚ ಸುದೀಪ್‌ ಅವರ ಅಭಿಮಾನಿಯಾಗಿರುವ ದುರ್ಗಾಪ್ರಸಾದ್‌, ಈ ಸಿನಿಮಾ ನಿರ್ಮಾಣ, ನಿರ್ದೇಶನ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇನ್ನೇನು ಜನವರಿ, ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಕುಡ್ಲ ನಮ್ದು ಊರು ಚಿತ್ರದ ಟ್ರೇಲರ್‌ ಬಿಡುಗಡೆ
ಕುಡ್ಲ ನಮ್ದು ಊರು ಚಿತ್ರದ ಟ್ರೇಲರ್‌ ಬಿಡುಗಡೆ

Kudla Nammd Uuru Movie Trailer Released: ಸಿನಿಮಾ ಎಂದರೆ ಹಾಗೆ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆದು ಬಿಡುತ್ತದೆ. ಹೀಗೆ ಸಿನಿಮಾ ಸೆಳೆತಕ್ಕೆ ಸಿಕ್ಕು ಚಿತ್ರರಂಗಕ್ಕೆ ಬಂದವರು, ಬರುತ್ತಿರುವವರು, ಬರುವವರ ಸಂಖ್ಯೆ ಲೆಕ್ಕಕ್ಕೆ ಸಿಗದಂಥದ್ದು. ಹೀಗೆ ಸಿನಿಮಾ ಸೆಳೆತಕ್ಕೆ ಸಿಕ್ಕು ಈಗ ತಾವೇ 'ಕುಡ್ಲ ನಮ್ದು ಊರು' ಎಂಬ ಒಂದು ಸಿನಿಮಾ ಮಾಡಿ ಅದನ್ನು ಪ್ರೇಕ್ಷಕರ ಮುಂದೆ ತರುತ್ತಿರಲು ತಯಾರಾಗಿರುವವರು ದುರ್ಗಾಪ್ರಸಾದ್‌ ಉರೂಫ್‌ ಅಲೋಕ್‌.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾಪ್ರಸಾದ್‌ (ಅಲೋಕ್‌) ಚಿಕ್ಕವಯಸ್ಸಿನಿಂದಲೇ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಂಡ ಪ್ರತಿಭೆ. ಸಿನಿಮಾ ಮೇಕಿಂಗ್‌ ಬಗ್ಗೆ ಅವರಿಗಿದ್ದ ಕುತೂಹಲವೇ ಇಂದು ದುರ್ಗಾಪ್ರಸಾದ್‌ ಅವರನ್ನು 'ಕುಡ್ಲ ನಮ್ದು ಊರು' ಎಂಬ ಸಿನಿಮಾದ ಮೂಲಕ ನಟ, ನಿರ್ಮಾಪಕ ಮತ್ತು ನಿರ್ದೇಶಕನನ್ನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುವಂತೆ ಮಾಡುತ್ತಿದೆ.

ಕಿಚ್ಚ ಸುದೀಪ್‌ ಅಭಿಮಾನಿಯ ಸಿನಿಮಾ ಕಥೆ...

ಅಂದಹಾಗೆ, ದುರ್ಗಾಪ್ರಸಾದ್‌ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ಅಪ್ಪಟ ಅಭಿಮಾನಿ. ಬಾಲ್ಯದಿಂದಲೇ ಸುದೀಪ್‌ ಅವರ ಸಿನಿಮಾಗಳನ್ನು ನೋಡುತ್ತ ಅವರ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಿರುವ ದುರ್ಗಾಪ್ರಸಾದ್‌, ಒಮ್ಮೆ ಮನೆಯಲ್ಲಿ ತಮ್ಮ ತಾಯಿಯ ಜೊತೆ ಜಗಳ ಮಾಡಿಕೊಂಡು, ಕೋಪದಿಂದ 'ಸುದೀಪ್‌ ಅವರ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡುತ್ತೇನೆ' ಎಂದು 'ಕುಡ್ಲ' (ಮಂಗಳೂರು)ದಿಂದ ಬಸ್‌ ಹತ್ತಿಕೊಂಡು ಬೆಂಗಳೂರಿಗೆ ಬಂದಿದ್ದರಂತೆ!

ಸಿನಿಮಾ ಸೆಳೆತ ನಟ, ನಿರ್ಮಾಪಕ, ನಿರ್ದೇಶಕನನ್ನಾಗಿಸಿತು...

ಆರಂಭದಲ್ಲಿ ಕಿಚ್ಚ ಸುದೀಪ್‌ ಅವರನ್ನು ನೋಡಬೇಕು, ಅವರ ಮನೆಯಲ್ಲಾದರೂ ಕೆಲಸ ಮಾಡಬೇಕು ಎಂಬ ಹಠದಿಂದ ಬೆಂಗಳೂರಿಗೆ ಬಂದಿದ್ದ ದುರ್ಗಾಪ್ರಸಾದ್‌ ಅವರಿಗೆ ಇಲ್ಲಿ ಆದಂತಹ ಅನುಭವಗಳು, ಅವರನ್ನು ವಾಪಾಸ್‌ ಕುಡ್ಲ (ಮಂಗಳೂರು)ದತ್ತ ಹೋಗುವಂತೆ ಮಾಡಿತು. ಆ ಬಳಿಕ ಸಿನಿಮಾಕ್ಕೆ ಬರುವ ಮುನ್ನ ಸಾಕಷ್ಟು ಕಲಿತುಕೊಂಡು ಬರಬೇಕು ಎಂಬುದನ್ನು ಅರಿತುಕೊಂಡ ದುರ್ಗಾಪ್ರಸಾದ್‌, ತಮ್ಮ ಇಂಟಿರಿಯರ್‌ ಡಿಸೈನಿಂಗ್‌ ಕೆಲಸದ ನಡುವೆಯೇ ಸಿನಿಮಾ ಮೇಕಿಂಗ್‌ ಬಗ್ಗೆಯೂ ಸಾಕಷ್ಟು ತಿಳಿದುಕೊಂಡರು. ಅಂತಿಮವಾಗಿ ತಾನು ಕೂಡ ಒಂದು ಸಿನಿಮಾ ಮಾಡಬಲ್ಲೆ ಎಂಬ ವಿಶ್ವಾಸ ಬಂದ ನಂತರ ದುರ್ಗಾಪ್ರಸಾದ್‌ ತಾವೇ ಕಥೆ, ಚಿತ್ರಕಥೆ ಬರೆದು ನಟಿಸಿ, ನಿರ್ದೇಶಿಸುವ 'ಕುಡ್ಲ ನಮ್ದು ಊರು' ಎಂಬ ಸಿನಿಮಾವನ್ನು ಕೈಗೆತ್ತಿಕೊಂಡರು.

ಸಿನಿಮಾ ಬಿಡುಗಡೆ ಯಾವಾಗ?

ಇನ್ನು ದುರ್ಗಾಪ್ರಸಾದ್‌ ಜೊತೆಗೆ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ 'ಕುಡ್ಲ ನಮ್ದು ಊರು' ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ 'ಕುಡ್ಲ ನಮ್ದು ಊರು' ಚಿತ್ರತಂಡ ಇದೀಗ ಸಿನಿಮಾದ ಟ್ರೇಲರ್‌ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿದೆ. ಹೊಸ ವರ್ಷದ ಆರಂಭದಲ್ಲಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

ತಾಂತ್ರಿಕ ಬಳಗ

'ಕೃತಾರ್ಥ ಪ್ರೊಡಕ್ಷನ್' ಬ್ಯಾನರಿನಲ್ಲಿ ನಿರ್ಮಾಣವಾಗಿರುವ 'ಕುಡ್ಲ ನಮ್ದು ಊರು' ಸಿನಿಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್‌ (ಅಲೋಕ್‌) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. 'ಕುಡ್ಲ ನಮ್ದು ಊರು' ಸಿನೆಮಾದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್‌ ಶಿವರಾಮ್‌ ಸಂಗೀತ ಸಂಯೋಜಿಸಿದ್ದಾರೆ. ಸಿನೆಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್‌ ಆರ್‌. ಶೆಟ್ಟಿ ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್‌ ಎಸ್‌. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ.

ಹೀಗಿದೆ ಪಾತ್ರವರ್ಗ

ಯುವನಟ ದುರ್ಗಾಪ್ರಸಾದ್‌ 'ಕುಡ್ಲ ನಮ್ದು ಊರು' ಸಿನೆಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್‌, ಪ್ರಕಾಶ್‌ ತುಮ್ಮಿನಾಡು, ಸ್ವರಾಜ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್‌, ನಿರೀಕ್ಷಾ ಶೆಟ್ಟಿ, ದಿಲೀಪ್‌ ಕಾರ್ಕಳ, ಪ್ರಜ್ವಲ್‌ ಮೊದಲಾದವರು 'ಕುಡ್ಲ ನಮ್ದು ಊರು' ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Whats_app_banner