ರವಿಚಂದ್ರನ್ ಹಳ್ಳಿಮೇಷ್ಟ್ರು ಸಿನಿಮಾದಲ್ಲಿದ್ದ ಈ ಪುಟ್ಟ ಬಾಲಕ ಈಗ ಕನ್ನಡ ಕಿರುತೆರೆಯಲ್ಲಿ ಸಖತ್ ಫೇಮಸ್; ಯಾರು ಅಂತ ಗೆಸ್ ಮಾಡಿ
ರವಿಚಂದ್ರನ್ ನಟನೆಯ ‘ಹಳ್ಳಿಮೇಷ್ಟ್ರು‘ ಸಿನಿಮಾದಲ್ಲಿ 3 ಜನ ಹುಡುಗರು ಸಖತ್ ಫೇಮಸ್. ಪರಿಮಳಕ್ಕ ಪರಿಮಳಕ್ಕ ಎನ್ನುತ್ತಾ ನಾಯಕಿಯ ಹಿಂದೆ ಸುತ್ತುತ್ತಿದ್ದ ಆ ಮೂವರಲ್ಲಿ ಒಬ್ಬ ಹುಡುಗ ಈಗ ಕನ್ನಡ ಕಿರುತೆರೆಯ ಖ್ಯಾತ ನಟ. ಇವರು ಜೀ ಕನ್ನಡದ ಧಾರಾವಾಹಿಯೊಂದರಲ್ಲೂ ಪಾತ್ರ ಮಾಡುತ್ತಿದ್ದಾರೆ. ಯಾರಿವರು ಅಂತ ಗೆಸ್ ಮಾಡಿ.

ಹಳೆಯ ಸಿನಿಮಾಗಳಲ್ಲಿ ಬಾಲ ನಟರಾಗಿ ಎಂಟ್ರಿ ಕೊಟ್ಟು ನಂತರ ಒಂದಿಷ್ಟು ವರ್ಷಗಳ ಕಾಲ ತೆರೆಮರೆಗೆ ಸರಿದು ಮತ್ತೆ ಹಿರಿತೆರೆ, ಕಿರುತೆರೆಯಲ್ಲಿ ಮಿಂಚುತ್ತಿರುವ ಸಾಕಷ್ಟು ಕಲಾವಿದವರು ನಮ್ಮ ನಡುವೆ ಇದ್ದಾರೆ. ಅವರಲ್ಲಿ ಹಲವರನ್ನು ನಾವು ಗುರುತಿಸುವುದು ಕಷ್ಟವಾಗುತ್ತದೆ. ಅಷ್ಟು ಬದಲಾಗಿರುತ್ತಾರೆ. ಪುನೀತ್ ರಾಜ್ಕುಮಾರ್, ಮಾಸ್ಟರ್ ಆನಂದ್ ಸೇರಿದಂತೆ ಹಲವರು ಬಾಲನಟರಾಗಿ ಖ್ಯಾತಿ ಪಡೆದು ನಂತರ ಮತ್ತೆ ತೆರೆ ಮೇಲೆ ನಟನೆಯ ಛಾಪು ತೋರಿದವರು. ಈ ನಟ ಕೂಡ ಬಾಲನಟನಾಗಿ ಸಿನಿಮಾಗಳಲ್ಲಿ ಮಿಂಚಿದವರು. ಸದ್ಯ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.
ರವಿಚಂದ್ರನ್, ಫರಿನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಕಪ್ಪೆರಾಯ ಎನ್ನುವ ಹುಡುಗ ನಿಮಗೆ ನೆನಪಿರಬಹುದು. ಅವನ ಜೊತೆಗೆ ಇನ್ನೂ ಇಬ್ಬರು ಹುಡುಗರು ಇರುತ್ತಾರೆ. ನಾಯಕಿ ಪರಿಮಳ ಹಿಂದೆ ಹಿಂದೆ ಸುತ್ತಾತ್ತಾ ‘ಅಕ್ಕ ನಿನ್ ಗಂಡ ಹೆಂಗಿರಬೇಕು‘ ಎನ್ನುತ್ತಾ ಹಾಡು ಹೇಳಿ ಕುಣಿದಿರುವುದು ನಿಮಗೆ ನೆನಪಿರಬಹುದು. ಹೌದು ಆ ಮೂವರಲ್ಲಿ ಬಾಲಕರಲ್ಲಿ ಒಬ್ಬ ಈಗ ಕನ್ನಡ ಕಿರುತೆರೆಯ ಪ್ರಸಿದ್ಧ ನಟ. ಇವರು ಸಿನಿಮಾಗಳಲ್ಲೂ ಮಾಡಿದ್ದಾರೆ. ಅಲ್ಲದೇ ಇವರ ಪತ್ನಿ ಕೂಡ ಕಿರುತೆರೆ ನಟಿ.
ಸದ್ಯ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಯೊಂದರಲ್ಲಿ ನಾಯಕಿನ ಅಣ್ಣನ ಪಾತ್ರ ಮಾಡುತ್ತಿರುವ ಈ ನಟ ತಮ್ಮ ವಿಭಿನ್ನ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇಂತಹ ಮಕ್ಕಳು ಇರಲೇಬಾರದು ಎಂದು ಜನರು ದೂಷಿಸುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ ಈ ನಟ. ಹಾಗಾದರೆ ಯಾರು ಈ ಹುಡುಗ, ಇವರು ನಟಿಸುತ್ತಿರುವ ಧಾರಾವಾಹಿ ಯಾವುದು ಎಂದು ಯೋಚಿಸುತ್ತಿದ್ದೀರಾ. ಹಾಗಾದರೆ ಮುಂದೆ ಓದಿ.
ಇವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟ್ಯೂಬ್ಲೈಟ್, ಅಬ್ಬಾಬ್ಬಾ, ಒಂದು ಗಂಟೆಯ ಕಥೆ, ಮುಂದುವರೆದ ಅಧ್ಯಾಯ, ಮುಂದಿನ ನಿಲ್ದಾಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸುವ ಮೂಲಕ ಹೆಸರು ಮಾಡಿದ್ದಾರೆ. ಇವರು ಡಾನ್ಸ್ ಕೊರಿಯೊಗ್ರಾಫರ್ ಕೂಡ ಹೌದು.
ಲಕ್ಷ್ಮೀ ನಿವಾಸದ ಹರೀಶ್
ಹಳ್ಳಿಮೇಷ್ಟ್ರು ಚಿತ್ರದ ಈ ಬಾಲನಟ ಬೇರಾರು ಅಲ್ಲ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಹರೀಶ್. ಲಕ್ಷ್ಮೀ ಹಾಗೂ ಶ್ರೀನಿವಾಸರ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬರ ಹರೀಶ. ತಮ್ಮ ಸ್ವಾರ್ಥವನ್ನಷ್ಟೇ ನೋಡುವ ಹರೀಶ್–ಸಂತು ಪಾತ್ರಗಳು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೀಕ್ಷಕರಲ್ಲಿ ಅಸಮಾಧಾನ ತರಿಸುತ್ತವೆ. ಬೇಬಿ ಬೇಬಿ ಎನ್ನುತ್ತಾ ಹೆಂಡತಿ ಹಿಂದೆ ಸುತ್ತುವ ಬೇಜವಾಬ್ದಾರಿ ಗಂಡ ಹಾಗೂ ಮಗನ ಪಾತ್ರದಲ್ಲಿ ಅಜಯ್ ರಾಜ್ ಮನೋಜ್ಞವಾಗಿ ನಟಿಸಿದ್ದಾರೆ.
ಇದೀಗ ಹಳ್ಳಿಮೇಸ್ಟ್ರು ಸಿನಿಮಾದ ಅಜಯ್ ರಾಜ್ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಳ್ಳಿಮೇಷ್ಟ್ರು ಚಿತ್ರದ ಕಪ್ಪೆರಾಯನ ಸ್ನೇಹಿತ ಪಾತ್ರದಲ್ಲಿ ಮಿಂಚಿದ್ದ ಅಜಯ್ ರಾಜ್ ಸದ್ಯ ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇವರ ಹೆಂಡತಿ ಪದ್ಮಿನಿ ದೇವನಹಳ್ಳಿ ಕೂಡ ಕನ್ನಡ ಕಿರುತೆರೆ ನಟಿ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಸೊಸೆ ಪಾತ್ರದಲ್ಲಿ ನಟಿಸಿದ್ದರು. ಈ ಜೋಡಿಗೆ ಇತ್ತೀಚೆಗೆ ಗಂಡು ಮಗುವಿನ ಜನನವಾಗಿತ್ತು. ಅಜಯ್ ಮುಕ್ತ ಮುಕ್ತದಂತಹ ಪ್ರಸಿದ್ಧ ಧಾರಾವಾಹಿಯಲ್ಲೂ ನಟಿಸಿದ್ದರು. ಮಹಾದೇವಿ ಧಾರಾವಾಹಿಯಲ್ಲೂ ಇವರು ಮುಖ್ಯಪಾತ್ರದಲ್ಲಿ ನಟಿಸಿದ್ದರು.