ಅಂಕಿತಾ ಕುಂಡು ದನಿಗೂಡಿಸಿರುವ ಅನ್ಲಾಕ್ ರಾಘವ ಸಿನಿಮಾ ಹೊಸ ಹಾಡು ಬಿಡುಗಡೆಗೊಳಿಸಿದ ಸಪ್ತಮಿ ಗೌಡ
ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಿರುವ ಅನ್ಲಾಕ್ ರಾಘವ ಸಿನಿಮಾ ಫೆಬ್ರವರಿ 7 ರಂದು ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾದ 2 ಹಾಡುಗಳು ರಿಲೀಸ್ ಆಗಿವೆ. ಇತ್ತೀಚೆಗೆ ನಟಿ ಸಪ್ತಮಿಗೌಡ, ಈ ಚಿತ್ರದ 3ನೇ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅನ್ಲಾಕ್ ರಾಘವ ಸಿನಿಮಾ ಟೈಟಲ್ ಎಷ್ಟು ವಿಭಿನ್ನವಾಗಿದೆಯೋ ಈ ಚಿತ್ರದ ಹಾಡುಗಳೂ ಅಷ್ಟೇ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿವೆ. ಚಿತ್ರದ ಮೂರನೇ ಹಾಡು ʻರಾಘವ ರಾಘವ' ಬಿಡುಗಡೆ ಆಗಿದೆ. ಇದು ಮೆಲೋಡಿಯಸ್ ರೊಮ್ಯಾಂಟಿಕ್ ಸಾಂಗ್ ಆಗಿದೆ. ಚಿತ್ರದಲ್ಲಿ ಜಾನಕಿ ಪಾತ್ರದಲ್ಲಿ ಮೋಡಿ ಮಾಡಲಿರುವ ಮುದ್ದು ಮುಖದ ನಾಯಕಿ ರೆಚಲ್, ರಾಘವನಿಗಾಗಿ ಹಾಡುವ ಹಾಡು ಇದಾಗಿದೆ. ಧನಂಜಯ ಅವರ ನೃತ್ಯ ಸಂಯೋಜನೆಯಲ್ಲಿ, ಗಾಯಕಿ ಅಂಕಿತಾ ಕುಂಡು ಅವರ ಮ್ಯಾಜಿಕಲ್ ವಾಯ್ಸ್ನಲ್ಲಿ ಮೂಡಿ ಬಂದಿರುವ ಹಾಡಿಗೆ, ವಾಸುಕಿ ವೈಭವ್ ಬರೆದಿರುವ ಸಾಲುಗಳು ಹಾಡಿನ ವೈಭವವನ್ನು ಹೆಚ್ಚಿಸಿವೆ.
ಹಾಡು ಬಿಡುಗಡೆಗೊಳಿಸಿದ ಸಪ್ತಮಿ ಗೌಡ
ಇತ್ತೀಚೆಗೆ ನಟಿ ಸಪ್ತಮಿ ಗೌಡ, ಈ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕೋಟೆನಗರಿ ಚಿತ್ರದುರ್ಗದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ʻರಾಘವ ರಾಘವʼ ಹಾಡಿನಲ್ಲಿ ಹೀರೋ ಮಿಲಿಂದ್ ಹಾಗೂ ನಾಯಕಿ ರೆಚಲ್ ಕೆಮೆಸ್ಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ದುರ್ಗದ ಪ್ರಕೃತಿ ಸೊಬಗು, ಬೆಟ್ಟ, ಗುಡ್ಡ, ಬಂಡೆ, ರಸ್ತೆ, ಗಲ್ಲಿಗಳ ಮಧ್ಯೆ ಸಾಗುವ ಈ ಹಾಡು, ಸಂಗೀತ ಪ್ರಿಯರನ್ನು ರೊಮ್ಯಾಂಟಿಕ್ ಲೋಕಕ್ಕೆ ಕೊಂಡೊಯ್ಯುತ್ತದೆ. ಈಗಾಗಲೇ ಬಿಡುಗಡೆಯಾಗಿರುವ ಅನ್ಲಾಕ್ ರಾಘವ ಚಿತ್ರದ ʻನನ್ ಹುಡುಗಿʼ ಹಾಗೂ ʻಲಾಕ್ ಲಾಕ್ ಲಾಕ್ʼ ಹಾಡುಗಳು ಯುವ ಹೃದಯಗಳ ಹಾಟ್ ಫೇವರೇಟ್ ಆಗಿದೆ. A2 ಮ್ಯೂಸಿಕ್ನಲ್ಲಿ ಈಗ ಬಿಡುಗಡೆಯಾಗಿರುವ ʻರಾಘವ ರಾಘವʼ ಗೀತೆ ಕೂಡಾ ಕೇಳುಗರ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿದೆ.
ಫೆಬ್ರವರಿ 7 ರಂದು ತೆರೆಗೆ ಬರುತ್ತಿರುವ ಸಿನಿಮಾ
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸಿರುವ ಅನ್ಲಾಕ್ ರಾಘವ ಸಿನಿಮಾ, ಫೆಬ್ರವರಿ 7 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಧು ಕೋಕಿಲ ಅವರ ಕಾಮಿಡಿ, ಯುವ ನಾಯಕ ಮಿಲಿಂದ್ ಹಾಗೂ ಲವ್ ಮಾಕ್ಟೇಲ್ 2 ಚೆಲುವೆ ರೆಚಲ್ ಡೇವಿಡ್ ಜೋಡಿ ತೆರೆ ಮೇಲೆ ಮೋಡಿ ಮಾಡಲಿದೆ. ರಾಮಾ ರಾಮಾ ರೇ ಹಾಗೂ ಮ್ಯಾನ್ ಆಫ್ ದಿ ಮ್ಯಾಚ್ ಖ್ಯಾತಿಯ ಡಿ ಸತ್ಯಪ್ರಕಾಶ್, ಅನ್ಲಾಕ್ ರಾಘವ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ದೀಪಕ್ ಮಧುವನಳ್ಳಿ ನಿರ್ದೇಶನದ ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಮಾಡಿರುವ, ರಾಜು ಜೇಮ್ಸ್ ಬಾಂಡ್ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಅನ್ಲಾಕ್ ರಾಘವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಛಾಯಾಗ್ರಾಹಕ ಲವಿತ್, ಪ್ರತಿಯೊಂದು ದೃಶ್ಯಗಳನ್ನೂ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಚಿತ್ರಕ್ಕೆ ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಪ್ರಮುಖ ಪಾತ್ರಗಳಲ್ಲಿ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ.
