ಕ್ಷಮಿಸಿ ಕರ್ನಾಟಕ; ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹೇಳಲು ಒತ್ತಾಯಿಸಿದ್ದನ್ನು ಅವರು ಪಹಲ್ಗಾಮ್ ಘಟನೆಗೆ ಹೋಲಿಸಿದ್ದರು. ಇದರಿಂದ ಅವರನ್ನು ಕರ್ನಾಟಕದಿಂದ ಬ್ಯಾನ್ ಮಾಡಲು ನಿರ್ಧಾರಿಸಲಾಗಿತ್ತು. ಈ ಬೆನ್ನಲ್ಲೇ ಸೋನು ಕನ್ನಡಿಗರ ಕ್ಷಮೆ ಕೇಳಿದ್ದಾರೆ.

ಕನ್ನಡ ಹಾಡು ಹೇಳಲು ಒತ್ತಾಯಿಸಿದ್ದನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಆರಂಭದಿಂದಲೂ ತಮ್ಮ ನಿಲುವೇ ಸರಿ ಎನ್ನುತ್ತಿದ್ದ ಗಾಯಕ ಇದೀಗ ಕನ್ನಡ ಜನತೆಯ ಮುಂದೆ ಮುಂಡಿಯೂರಿದ್ದಾರೆ. ಕ್ಷಮಿಸಿ ಕರ್ನಾಟಕ ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳುವಂತೆ ಸೋನು ನಿಗಮ್ಗೆ ಒತ್ತಾಯ ಮಾಡಲಾಗಿತ್ತು. ಆಗ ರೊಚ್ಚಿಗೆದ್ದ ಗಾಯಕ ಈ ಘಟನೆಯನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದರು. ‘ಕನ್ನಡ ಕನ್ನಡ ಎನ್ನುವುದಕ್ಕೆ ಪಹಲ್ಗಾಮ್ ದಾಳಿ ನಡೆದಿದ್ದು‘ ಎಂದು ಅವರು ಹೇಳಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕ ರಾಜ್ಯದಾದ್ಯಂತ ಜನರು ನಮ್ಮ ನೆಚ್ಚಿನ ಗಾಯಕನ ಮಾತಿಗೆ ರೋಷಗೊಂಡಿದ್ದರು. ಅಲ್ಲದೇ ಸೋನು ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಆರಂಭದಿಂದಲೂ ತಮ್ಮ ನಿಲುವು ಸರಿ ಎಂದು ವಾದಿಸುತ್ತಿದ್ದ ಸೋನು ನಿಗಮ್ ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಕೇಳಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
‘ಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗಿರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು, ನಿಮ್ಮನ್ನು ಸದಾ ಪ್ರೀತಿಸುತ್ತೇನೆ‘ ಎಂದು ಸೋನು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸೋನು ನಿಗಮ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಮಾತ್ರವಲ್ಲ ಇವರನ್ನು ಕನ್ನಡ ಚಿತ್ರರಂಗದಿಂದ, ಕರ್ನಾಟಕದಿಂದ ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಈ ಎಲ್ಲಾ ವಿರೋಧದ ನಡುವೆಯೂ ಸೋನು ನಿಗಮ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಎಫ್ಐಆರ್ ಕೂಡ ದಾಖಲಿಸಿತ್ತು.
ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿನ್ನೆ (ಮೇ 5) ಸಭೆ ನಡೆಸಿ ಸೋನು ನಿಗಮ್ ಅವರನ್ನು ಬ್ಯಾನ್ ಮಾಡುವ ಬಗ್ಗೆ ಚರ್ಚೆ ನಡೆಸಿತ್ತು. ಆಗಲೂ ಪ್ರಜ್ಞಾವಂತ ಕನ್ನಡಿಗರು ತಪ್ಪು ಯಾರದ್ದು ಎಂದು ನಿರ್ಧಾರ ಮಾಡಲಿ ಒಂದು ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಬರಹ ಬರೆದುಕೊಂಡಿದ್ದ ಸೋನು ಕೊನೆಗೂ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದಾರೆ.
ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು ಸೋನು ನಿಗಮ್ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಇಲ್ಲದ ಸಮಯದಲ್ಲಿ ಚಂದನವನ ಕೈ ಬೀಸಿ ಕರೆದಿತ್ತು. ಸುಮಾರು 1000 ದಷ್ಟು ಹಾಡುಗಳಿಗೆ ಧ್ವನಿಯಾಗಿರುವ ಸೋನು ಕಂಠಕ್ಕೆ ಕರುನಾಡಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ಕನ್ನಡಿಗರಿಗೆ ಅವರು ಅವಮಾನ ಮಾಡಿದ್ದು, ಕನ್ನಡಿಗರ ಮನದಲ್ಲಿ ಅವರ ಬಗ್ಗೆ ಆಕ್ರೋಶ ಭುಗಿಲೇಳಲು ಕಾರಣವಾಗಿತ್ತು.