Dhananjay: ಬಡವರ ಮಕ್ಕಳು ಶ್ರೀಮಂತರಂತೆ ಮದುವೆ ಆಗ್ಬಾರ್ದಾ? ಇದು ಹೆಮ್ಮೆಯಿಂದ ಕಾಲರ್ ಎತ್ತೋ ಟೈಮ್; ವೀರಕಪುತ್ರ ಶ್ರೀನಿವಾಸ್ ಬರಹ
ನಟ ಡಾಲಿ ಧನಂಜಯ್- ಧನ್ಯತಾ ಜೋಡಿಯ ಅದ್ಧೂರಿ ಮದುವೆಯನ್ನು ಕೆಲವರು ಟೀಕೆ ಮಾಡಿದ್ದಾರೆ. ಬಡವರ ಮನೆ ಮಗ ಶ್ರೀಮಂತರಂತೆ ಮದುವೆ ಆಗೋದು ಬೇಕಿತ್ತಾ? ಎನ್ನುತ್ತಿದ್ದಾರೆ. ಈ ಟೀಕೆಗಳಿಗೆ ವೀರಕಪುತ್ರ ಶ್ರೀನಿವಾಸ್ ವಾಸ್ತವದ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

Dhananjay Wedding: ನಟ ಧನಂಜಯ್ ಮತ್ತು ಧನ್ಯತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಫೆ. 16) ಮೈಸೂರಿನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಎರಡೂ ಕುಟುಂಬಗಳ ಹಿರಿಯರು, ಆಪ್ತರು, ಸಿನಿಮಾ ಬಳಗ, ರಾಜಕೀಯ ಗಣ್ಯರ ಸಮ್ಮುಖದಲ್ಲಿ ಧನ್ಯತಾ ಅವರನ್ನು ವರಿಸಿದ್ದಾರೆ ಧನಂಜಯ್. ಚಾಮುಂಡೇಶ್ವರಿ ದೇವಸ್ಥಾನವನ್ನು ಹೋಲುವ ಸೆಟ್ ನಿರ್ಮಿಸಿ, ಬೃಹತ್ ಕಲ್ಯಾಣ ಮಂಟಪದಲ್ಲಿ ಗ್ರ್ಯಾಂಡ್ ಆಗಿಯೇ ಈ ಕಲ್ಯಾಣೋತ್ಸವ ನಡೆದಿದೆ. ಇದೀಗ ಇದೇ ಮದುವೆ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ರೀತಿಯಲ್ಲಿ ಕಾಮೆಂಟ್ ಹರಿದಾಡುತ್ತಿವೆ. ಬಡವರ ಮಕ್ಕಳು ಬೆಳಿಬೇಕು ಎಂದು, ಇಷ್ಟೊಂದು ಶ್ರೀಮಂತರಂತೆ ಮದುವೆ ಆಗುವುದು ಬೇಕಿತ್ತಾ ಎಂದೂ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಪುಸ್ತಕ ಪ್ರಕಾಶಕ, ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಬರಹ
ನಿಮ್ಮ ಏರಿಯಾದಲ್ಲಿರುವ ವೀರಕಪುತ್ರ ಶ್ರೀನಿವಾಸ ಅವರು ನನಗೆ ಗೊತ್ತು ಅಂತ ನನ್ನ ಪರಿಚಯದವರೊಬ್ಬರು ನಮ್ಮ ಏರಿಯಾದ ಶ್ರೀಮಂತರೊಬ್ಬರಿಗೆ ಹೇಳಿದ್ರಂತೆ. ಅವ್ರು ಕೂಡಲೇ ʼಓಹ್ ಅವ್ನಾ, ಮೊನ್ನೆ ಮೊನ್ನೆ ತನಕ ನಮ್ಮ ಮನೆ ಮುಂದೆ ಸೈಕಲ್ ಹೊಡ್ಕೊಂಡ್ ಹೋಗ್ತಾ ಬರ್ತಾ ಇದ್ದ" ಅಂದ್ರಂತೆ! ಅವರ ಪ್ರಕಾರ ನನ್ನ ಐಡೆಂಟಿಟಿ ಅಷ್ಟೇ! ನಾನು ಬಡವನಾಗಿದ್ದೆ ಅನ್ನೋದಷ್ಟೇ ಅವರಿಗೆ ಮುಖ್ಯವಾಗಿದೆ. ಮುಂದೆ ನಾನು ಏನೇ ಆದ್ರೂ ಅವರ ಪಾಲಿಗೆ ಮಾತ್ರ ಅಷ್ಟೇ ಆಗಿರ್ತೀನಿ. ಇದು ನಮ್ಮ ಮನಸ್ಥಿತಿ. ಬಡವ ನೀನು ಹೀಗೇ ಇರಬೇಕು ಅನ್ನೋ ಸಿದ್ದಸೂತ್ರಗಳನ್ನು ನಮ್ಮ ಮೇಲೆ ಹೇರಿಬಿಟ್ಟಿದ್ದಾರೆ.
ಇದು ಡಾಲಿ ಧನಂಜಯ್ ಅವರಿಗೂ ತಪ್ಪಲಿಲ್ಲ; ಅವ್ರು ಬಡವರಾಗಿದ್ರು. ಬಡವರ ಮಕ್ಕಳು ಬೆಳೀಬೇಕು ಅಂದ್ರು. ಆದ್ರೆ ಶ್ರೀಮಂತನಂತೆ ಮದುವೆಯಾಗಿಬಿಟ್ರು ಅನ್ನೋದು ತುಂಬಾ ಜನರ ಚಿಂತೆಗೆ ಕಾರಣವಾಗಿರುವ ವಿಷಯ. ಅಷ್ಟಕ್ಕೂ ಡಾಲಿ ಅವರು ಬಡವರ ಮಕ್ಕಳು ಬೆಳೀಬೇಕು ಅಂದ್ರು ನಿಜ. ಬೆಳೆದ ಮೇಲೂ ಬಡವನಂತೆ ಬದುಕಿ ಅಂತ ಹೇಳಿದ್ರಾ?
ವಾಸ್ತವದಲ್ಲಿ...
- ಬಡವನ ಮಗ ಬೆಳ್ದ ಅನ್ನೋದು ನಮ್ಮ ಖುಷಿಯಾಗಬೇಕಿತ್ತು.
- ಬಡವನ ಮಗ ಇಡೀ ರಾಜ್ಯವೇ ನೋಡುವಂತೆ ಮದುವೆಯಾಗ್ತಿದ್ದಾನೆ ಅಂತ ಹೆಮ್ಮೆಪಡಬೇಕಿತ್ತು.
- ಬಡವನ ಮಗ ಇಡೀ ಶಕ್ತಿಕೇಂದ್ರವನ್ನೇ ತನ್ನ ಮದುವೆಗೆ ಕರೆಸಿಕೊಂಡ ಅಂತ ಕಾಲರ್ ಏರಬೇಕಿತ್ತು.
- ಬಡವನ ಮಗನ ಮದುವೆಗೆ ಸೆಲೆಬ್ರಿಟಿಗಳೂ ಕ್ಯೂ ನಿಂತ್ರು ಅನ್ನೋದು ಉದಾಹರಣೆಯಾಗ್ಬೇಕಿತ್ತು.
- ಬಡವನ ಮಗ ಶ್ರೀಮಂತರನ್ನೂ ನಾಚಿಸುವಂತೆ ಮದುವೆಯಾದ ಅನ್ನೋದು ಸ್ಫೂರ್ತಿಯಾಗಬೇಕಿತ್ತು.
- ನಾವೂ ಹೀಗೆ ಬೆಳೀಬೇಕು ಅನ್ನೋ ಹಠ ಹುಟ್ಟಬೇಕಿತ್ತು.
ಆದ್ರೆ ನಾವ್ ಮಾತ್ರ ಬಡವನ ಮಗ ಇಷ್ಟು ವೈಭವದಿಂದ ಮದ್ವೆಯಾಗಿಬಿಟ್ಟ ಅಂತ ಒದ್ದಾಡ್ತಿದ್ದೀವಿ. ಅದ್ಯಾಕೆ ಬಡವರ ಮಕ್ಕಳು ಖರ್ಚು ಮಾಡಬಾರದ? ದುಡಿದಿದ್ದೆಲ್ಲವನ್ನೂ ಬ್ಯಾಂಕ್ ಅಕೌಂಟಿನಲ್ಲೋ, ಬ್ಲಾಕ್ ಮನಿಯಾಗಿಸಿಕೊಂಡೋ ಕೂತಿರಬೇಕಿತ್ತಾ? ಅಯ್ಯೋ ನಾನು ಬಡವನಾಗಿದ್ದೆ. ಆದ್ದರಿಂದ ನಾನು ಶ್ರೀಮಂತನಾದ್ರೂ ಶ್ರೀಮಂತನಂತೆ ವರ್ತಿಸಬಾರದು. ಬಡವನಾಗಿಯೇ ಬದುಕಬೇಕು ಅಂತ ಯೋಚಿಸಬೇಕಿತ್ತಾ? ಅಷ್ಟಕ್ಕೂ ಡಾಲಿ ದುಡಿದ ಹಣ, ಎಲ್ಲಿಗೆ ಹೋಗ್ತಿದೆ? ಅದಕ್ಕೂ ಮೊದಲು ಇದೊಂದು ವಿಷ್ಯ ಓದಿಬಿಡಿ. ಕೇಂದ್ರ ಸರ್ಕಾರ ಪ್ರತಿ ನಾಲ್ಕುವರ್ಷಕ್ಕೊಮ್ಮೆ ತನ್ನ ನೌಕರರಿಗೆ ಎಲ್ ಟಿ ಸಿ ಸ್ಕೀಮ್ ಒದಗಿಸುತ್ತೆ. ಅದರ ಅಡಿಯಲ್ಲಿ ನೌಕರ ಮತ್ತವರ ಕುಟುಂಬ ಪ್ರವಾಸ ಹೋಗಿ ಬರಲು ಆಗುವ ಟಿಕೆಟ್ ಖರ್ಚನ್ನು ಕೇಂದ್ರ ಸರ್ಕಾರವೇ ಭರಿಸುತ್ತೆ. ಸಂಬಳ ಕೊಟ್ಮೇಲೆ, ಇದೆಲ್ಲಾ ಯಾಕೆ ಕೊಡಬೇಕು? ಸರ್ಕಾರಕ್ಕೆ ತಲೆ ಕೆಟ್ಟಿದೆಯಾ? ಇಲ್ಲ... ಸರ್ಕಾರ ಹೇಗೆ ಯೋಚನೆ ಮಾಡುತ್ತೆ ಅಂದ್ರೆ, ನೀವು ನಾಲ್ಕು ವರ್ಷ ಕೂಡಿಟ್ಟ ಹಣವನ್ನು ಬೇರೊಂದು ಕಡೆಗೆ ಪ್ರವಾಸ ಮಾಡಿ ಖರ್ಚು ಮಾಡಿ ಅನ್ನುತ್ತೆ. ಆ ನಿಮ್ಮ ಕೂಡಿಟ್ಟ ಹಣ ಆ ದೂರದೂರಿನ ಒಬ್ಬ ಟ್ಯಾಕ್ಸಿಯವನಿಗೆ, ಲಾಡ್ಜ್ ಅವನಿಗೆ, ಗೈಡಿಗೆ, ಬಟ್ಟೆ ಅಂಗಡಿಯವನಿಗೆ, ಅವರಿಗೆ, ಇವರಿಗೆ ಸೇರಲಿ ಅನ್ನುತ್ತೆ. ಅಂದರೆ ದೇಶದ ಪ್ರತಿ ಪ್ರಜೆಗೂ ಎಷ್ಟೋ ಅಷ್ಟು ಆದಾಯ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ.
ಇದು ಧನಂಜಯ್ ಅವರ ಮದುವೆಯಲ್ಲಿಯೂ ಆಗಿದೆ. ಪೆಂಡಾಲ್ ಹಾಕೋರಿಗೆ, ಕಸ ಗುಡಿಸೋರಿಗೆ, ಊಟ ಬಡಿಸೋರಿಗೆ, ಹೂ ಮಾರೋರಿಗೆ, ತರಕಾರಿಗೆ, ದವಸ ಧಾನ್ಯಕ್ಕೆ, ಪ್ರಿಂಟಿಂಗ್ ಪ್ರೆಸ್, ಫೋಟೋ, ವಿಡಿಯೋ, ಬೌನ್ಸರ್, ಟ್ರಾವೆಲ್ಸ್, ಹೋಟೆಲ್ಸ್...ಹೀಗೆ ಧನಂಜಯ್ ದುಡಿದ ಹಣ ನೂರಾರು ಬಡವರಿಗೆ ತಲುಪಿದೆ. ಈ ಎಲ್ಲದರ ಗುತ್ತಿಗೆ ಪಡೆದವರ ಕುಟುಂಬಗಳು ಚೆನ್ನಾಗಿರುತ್ತವೆ. ಅಂದ್ರೆ ಬೇಸರವೇಕೆ?
ನಮ್ಮ ಕಷ್ಟವೇ ಅದು. ನಮಗೆ ಹಾಗೆಲ್ಲ ಸುಮ್ನೆಇರೋಕಾಗಲ್ಲ! ಒಂದು ಕಾಲಕ್ಕೆ ನೈತಿಕ ಪೊಲೀಸ್ ಗಿರಿ ಅನ್ನೋ ಪದ ತುಂಬಾ ಚರ್ಚೆಯಾಗ್ತಿತ್ತು. ಪ್ರತಿ ಸರ್ಕಾರವೂ ಅದನ್ನು ಖಂಡಿಸುತಿತ್ತು. ಜನಸಾಮಾನ್ಯರಂತೂ ಅದರ ವಿರುದ್ಧ ಮಾತನಾಡಿದ್ದೇ ಮಾತನಾಡಿದ್ದು. ಆದ್ರೆ ಇವತ್ತಿಗೆ ಇಡೀ ಸೊಶಿಯಲ್ ಮೀಡಿಯಾವೇ ನೈತಿಕ ಪೊಲೀಸ್ ಗಿರಿಯಲ್ಲಿ ತೊಡಗಿಸಿಕೊಂಡಿದೆ. ಸೋಶಿಯಲ್ ಮೀಡಿಯಾ ಅಂದ್ರೆ ಬೇರೇನೂ ಅಲ್ಲ ನಾವು ನೀವು! ಅವರವರ ಪಾಡಿಗೆ ಅವರನ್ನು ಬದುಕಲು ಬಿಡುವುದಕ್ಕಿಂತ ಹೆಚ್ಚಿನ ದೊಡ್ಡತನ ಯಾವುದಿದೆ ಹೇಳಿ?
ಕೊನೆಮಾತು; ಬಡವನ ಮಗ ಬೆಳ್ದ ಮತ್ತು ರಾಜ್ಯವೇ ನೋಡುವಂತೆ ಮದುವೆಯಾದ ಅನ್ನೋದು ಬೇಸರಕ್ಕೆ ಕಾರಣವಾಗಬಾರದು.ಬಡವರ ಮಕ್ಕಳಿಗೆ ಮಾದರಿಯಾಗಬೇಕು. ಆದ್ರೆ ಡಾಲಿ ತರ ಮದ್ವೆಯಾಗ್ತೀನಿ ಅಂತ ಹಠತೊಟ್ಟು ಸಾಧಿಸಬೇಕು. ಬಡವರ ಮಕ್ಕಳು ಡಾಲಿ ತರ ಆಗಲಿ. ಡಾಲಿ ಅವರ ವೈವಾಹಿಕ ಜೀವನಕ್ಕೆ ಶುಭಾಶಯಗಳು ಎಂದಿದ್ದಾರೆ.
