ಐಎಎಸ್ ರೋಹಿಣಿ ಸಿಂಧೂರಿಗೂ, ರಾಗಿಣಿ ಅಭಿನಯದ ಈ ‘ಸಿಂಧೂರಿ’ ಸಿನಿಮಾಕ್ಕೂ ಇರುವ ಸಂಬಂಧವೇನು?
ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಅಭಿನಯದ ‘ಸಿಂಧೂರಿ’ ಚಿತ್ರಕ್ಕೆ ಇಂದು ಚಾಲನೆ ಸಿಕ್ಕಿದೆ. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದೆ. ಹೆಸರು ಕೇಳಿದವರೆಲ್ಲಾ, ಇದು IAS ಅಧಿಕಾರಿ ರೋಹಿಣಿ ಸಿಂಧೂರಿ ಕಥೆ ಇರಬಹುದು ಎಂದು ಅಂದಾಜಿಸುತ್ತಿದ್ದಾರೆ. (ವರದಿ: ಚೇತನ್ ನಾಡಿಗೇರ್)

ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಅಭಿನಯದ ‘ಸಿಂಧೂರಿ’ ಚಿತ್ರಕ್ಕೆ ಇಂದು ಚಾಲನೆ ಸಿಕ್ಕಿದೆ. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದೆ. ಹೆಸರು ಕೇಳಿದವರೆಲ್ಲಾ, ಇದು IAS ಅಧಿಕಾರಿ ರೋಹಿಣಿ ಸಿಂಧೂರಿ ಕಥೆ ಇರಬಹುದು ಎಂದು ಅಂದಾಜಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ, ರೋಹಿಣಿ ಸಿಂಧೂರಿ ಪಾತ್ರವನ್ನು ಮಾಡಿದರೆ, ಧರ್ಮ ಕೀರ್ತಿರಾಜ್ ಅವರದ್ದು ಡಿ.ಕೆ. ರವಿ ಅವರ ಪಾತ್ರವಿರಬಹುದು ಎಂದು ಹೇಳುತ್ತಿದ್ದಾರೆ.
ನಿಜಕ್ಕೂ ಇದು ರೋಹಿಣಿ ಸಿಂಧೂರಿ ಅವರ ಕಥೆಯಾ? ಖಂಡಿತಾ ಇಲ್ಲ ಎನ್ನುತ್ತಿದ್ದಾರೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆಯನ್ನು ಸಹ ಅವರೇ ರಚಿಸುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ’ಶೀರ್ಷಿಕೆ ಕೇಳಿ ಹಲವರು ಇದು ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ ಕೇಳಿದ್ದಾರೆ. ರೋಹಿಣಿ ಸಿಂಧೂರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಇದೊಂದು ಮರ್ಡರ್ ಮಿಸ್ಟ್ರಿ. ಇಲ್ಲಿ ರಾಗಿಣಿ ಮತ್ತು ಧರ್ಮ ಜೋಡಿಯಾಗಿ ನಟಿಸುತ್ತಿಲ್ಲ. ಇಲ್ಲಿ ರಾಗಿಣಿ ಚಿತ್ರದ ನಾಯಕಿ ಅಲ್ಲ. ಅವರು ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿ ಅಭಿನಯಿಸುತ್ತಿದ್ದಾರೆ’ ಎಂದರು.
ಇದಕ್ಕೂ ಮೊದಲು ರಾಗಿಣಿ ಅಭಿನಯದಲ್ಲಿ ‘ಬಿಂಗೋ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು ಶಂಕರ್. ಆ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ‘‘ಬಿಂಗೋ’ ಚಿತ್ರದ ಚಿತ್ರೀಕರಣ ಮಾಡುವಾಗ, ರಾಗಿಣಿ ಅವರಿಗೆ ನನ್ನ ಕೆಲಸ ಇಷ್ಟವಾಗಿ, ಜೊತೆಯಾಗಿ ಇನ್ನೊಂದು ಸಿನಿಮಾ ಮಾಡೋಣ ಎಂದರು. ಆ ಸಂದರ್ಭದಲ್ಲಿ ಈ ಕಥೆಯ ಒಂದೆಳೆ ಹೇಳಿದೆ. ಅವರಿಗೆ ಇಷ್ಟವಾಗಿ ಈ ಚಿತ್ರ ಮಾಡೋಣ ಎಂದರು. ಚಿತ್ರಕಥೆ ಬರೆದೆ. ಎಲ್ಲರಿಗೂ ಇಷ್ಟವಾಗಿ ಇವತ್ತು ಚಿತ್ರ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಧರ್ಮ ಕೀರ್ತಿರಾಜ್, ಚಾಕಲೋಟ್ ಬಾಯ್ ಆಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರದ್ದು ವಿರುದ್ಧವಾದ ಪಾತ್ರ. ತಮ್ಮ ಪಾತ್ರಕ್ಕಾಗಿ ಧರ್ಮ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ನಾಯಕಿ ಇನ್ನೂ ಫೈನಲ್ ಆಗಬೇಕಿದೆ’ ಎಂದರು.
ಮಹಿಳಾ ಪ್ರಧಾನ ಚಿತ್ರ ಮಾಡೋದು ಸವಾಲಿನ ಕೆಲಸ ಎನ್ನುವ ರಾಗಿಣಿ, ‘ಜನರನ್ನು ಚಿತ್ರಮಂದಿರಗಳಿಗೆ ಕರೆಸೋದು ಕಷ್ಟದ ಕೆಲಸ. ಇವತ್ತಿನ ಟ್ರೆಂಡ್ಗೆ ಚಿತ್ರ ಮಾಡಬೇಕೆಂದರೆ ಮೊದಲು ನಾವು ಬದಲಾಗಬೇಕು. ಈ ಕಥೆ ಅಸಾಧಾರಣವಾಗಿದೆ ಎಂದು ನಾನು ಹೇಳುತ್ತಿಲ್ಲ, ಆದರೆ ಖಂಡಿತಾ ವಿಭಿನ್ನವಾಗಿದೆ. ಈ ಹೆಸರಲ್ಲೇ ಕೆಂಪು ಬಣ್ಣವಿದೆ. ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ. ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಮಹತ್ವವಿದೆ. ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾಅಂಶಗಳು ಸಹ ಇವೆ’ ಎಂದರು.
ಧರ್ಮ ಕೀರ್ತಿರಾಜ್ ಮಾತನಾಡಿ, ‘ನನ್ನ ಪಾತ್ರದ ಬಗ್ಗೆ ಕೇಳಿ ಬಹಳ ಖುಷಿಯಾಯ್ತು. ಇಲ್ಲಿ ನಾನು ಮತ್ತು ರಾಗಿಣಿ ಜೋಡಿಯಲ್ಲ. ನಮ್ಮಿಬ್ಬರ ನಡುವೆ ಸಾಕಷ್ಟು ಹಗ್ಗಜಗ್ಗಾಟವಿದೆ. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ’ ಎಂದರು.
‘ಸಿಂಧೂರಿ’ ಚಿತ್ರವನ್ನು ಎಸ್. ರಮೇಶ್ ಬನಶಂಕರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮೇ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸಕಲೇಶಪುರ ಮುಂತಾದ ಕಡೆ 45 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ಹಿತೇನ್ ಹಾಸನ್ ಸಂಗೀತ, ಹರೀಶ್ ಅವರ ಸಂಭಾಷಣೆ ಇದೆ. (ವರದಿ: ಚೇತನ್ ನಾಡಿಗೇರ್)