ಕನ್ನಡ ಸುದ್ದಿ  /  Entertainment  /  Sandawlood News Kiccha Sudeep Joins Forces With Kabali Asuran Producer Next To Be Bankrolled By Kalaippuli S Thanu Mnk

Kichcha 46: ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್; ಸುದೀಪ್‌ ಜತೆ ಕೈ ಜೋಡಿಸಿದ ಕಬಾಲಿ, ಅಸುರನ್‌ ನಿರ್ಮಾಪಕ

ವಿಕ್ರಾಂತ್‌ ರೋಣ ಬಳಿಕ ಸಿನಿಮಾ ಘೋಷಣೆ ಮಾಡದ ನಟ ಸುದೀಪ್, ಇದೀಗ ತಮಿಳು ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೂ ಕೂಡ ಪ್ಯಾನ್‌ ಇಂಡಿಯಾ ಚಿತ್ರ ಎಂಬುದು ವಿಶೇಷ

ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್; ಸುದೀಪ್‌ ಜತೆ ಕೈ ಜೋಡಿಸಿದ ಕಬಾಲಿ, ಅಸುರನ್‌ ನಿರ್ಮಾಪಕ
ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್; ಸುದೀಪ್‌ ಜತೆ ಕೈ ಜೋಡಿಸಿದ ಕಬಾಲಿ, ಅಸುರನ್‌ ನಿರ್ಮಾಪಕ

Kichcha 46: ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಸೋಷಿಯಲ್‌ ಮೀಡಿಯಾದಲ್ಲಿ ತರಹೇವಾರಿ ಉತ್ತರಗಳು ಹರಿದಾಡುತ್ತಿದ್ದವು. ಆದರೆ, ಅದಕ್ಕೆ ಸೂಕ್ತ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಹೀಗಿರುವಾಗಲೇ ಚುನಾವಣೆ ಪ್ರಚಾರದ ಸಂದರ್ಭದಲ್ಲಿಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದರು. ಇದೇ ಮೇ 22ರಂದು ಒಂದು ಸಿನಿಮಾದ ಪ್ರೋಮೋ ಶೂಟ್‌ ಶುರುವಾಗಲಿದೆ. ಜೂನ್ 1ರಂದು ಆ ಸಿನಿಮಾ ಲಾಂಚ್‌ ಆಗಲಿದೆ ಎಂದಿದ್ದರು. ಈಗ ಆ ಚಿತ್ರದ ಬಗ್ಗೆಯೇ ಅಪ್‌ಡೇಟ್‌ ಮಾಹಿತಿ ಲಭ್ಯವಾಗಿದೆ.

ತಮಿಳಿನಲ್ಲಿ ದೊಡ್ಡ ದೊಡ್ಡ ಹಿಟ್‌ ಮತ್ತು ಹೈ ಬಜೆಟ್‌ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್‌ ಇದೀಗ ಸುದೀಪ್‌ ಅವರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ರಜನಿಕಾಂತ್‌ ಜತೆಗೆ ಕಬಾಲಿ, ಧನುಷ್‌ ಜತೆ ಅಸುರನ್‌ ಚಿತ್ರಕ್ಕೆ ಇದೇ ವಿ ಕ್ರಿಯೇಷನ್ಸ್‌ ಅಡಿಯಲ್ಲಿ ಕಲೈಪುಲಿ ಎಸ್‌ ದಾನು ಬಂಡವಾಳ ಹೂಡಿದ್ದರು. ಈ ಹಿಂದೆ ಸುದ್ದಿಯಾದಂತೆ, ವಿಕ್ರಾಂತ್‌ ರೋಣ ಸಿನಿಮಾ ಖ್ಯಾತಿಯ ಅನೂಪ್‌ ಭಂಡಾರಿ ಜತೆಗೆ ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಸುದೀಪ್‌ ಭಾಗವಹಿಸಬಹುದೇ ಎಂಬ ಕುತೂಹಲವಿತ್ತು. ಇದೀಗ ಆ ಕೌತುಕಕ್ಕೆ ಬ್ರೇಕ್‌ ಬಿದ್ದಿದ್ದು, ಜೂ. 1ರಂದು ಆ ಸಿನಿಮಾ ನಿರ್ದೇಶಕರು ಯಾರು ಎಂಬ ವಿಚಾರ ಬಯಲಾಗಲಿದೆ.

ಈ ಹಿಂದೆಯೇ ಸುದೀಪ್‌ ಕೊಟ್ಟಿದ್ದರು ಮಾಹಿತಿ

ಚುನಾವಣಾ ಪ್ರಚಾರದ ನಡುವೆಯೇ ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್‌ ಮಾಹಿತಿ ಹಂಚಿಕೊಂಡಿದ್ದರು. "ಮೂರು ಸಿನಿಮಾಗಳ ಪೈಕಿ ಒಂದು ಸಿನಿಮಾದ ಕೆಲಸ ಶುರುವಾಗುತ್ತಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಇದೇ ಮೇ 22ರಂದು ಒಂದು ಸಿನಿಮಾದ ಪ್ರೋಮೋ ಶೂಟ್‌ ಶುರುವಾಗಲಿದೆ. ಜೂನ್ 1ರಂದು ಆ ಸಿನಿಮಾ ಲಾಂಚ್‌ ಆಗಲಿದೆ. ಚಿತ್ರದ ಸ್ಕ್ರಿಪ್ಟ್‌ ಮತ್ತು ಸಿನಿಮಾ ಮೂಡಿಬರಲಿರುವ ಶೈಲಿಯೂ ನನ್ನನ್ನೂ ಅಚ್ಚರಿಗೆ ದೂಡಿದೆ" ಎಂದಿದ್ದರು.

ಆಟೋಗ್ರಾಫ್‌ ನಿರ್ದೇಶಕ ಚೇರನ್‌ ಜತೆ ಸಿನಿಮಾ?

ಕಿಚ್ಚ ಸುದೀಪ್‌ ಬಗ್ಗೆ ಸದ್ಯ ಹರಿದಾಡುತ್ತಿರುವ ಹೊಸ ಸುದ್ದಿಯೆಂದರೆ, ತಮಿಳಿನ ಖ್ಯಾತ ನಿರ್ದೇಶಕ ಚೇರನ್‌ ಜತೆ ಕಿಚ್ಚ ಸಿನಿಮಾ ಮಾಡಲಿದ್ದಾರಂತೆ. ತಮಿಳಿನಲ್ಲಿ ಆಟೋಗ್ರಾಫ್‌ ಸಿನಿಮಾ ನಿರ್ದೇಶನ ಮಾಡಿದ್ದ ಚೇರನ್‌, ಅದಾದ ಬಳಿಕ ಸಾಕಷ್ಟು ಚಿತ್ರಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಆ ಚಿತ್ರವನ್ನೇ ಸುದೀಪ್‌ ಕನ್ನಡದಲ್ಲೂ ರಿಮೇಕ್‌ ಮಾಡಿದ್ದರು. ಸುದೀಪ್‌ಗೂ ಈ ಸಿನಿಮಾ ದೊಡ್ಡ ಮೈಲೇಜ್‌ ತಂದುಕೊಟ್ಟಿತ್ತು. ಈಗ ಈ ನಿರ್ದೇಶಕರ ಸಿನಿಮಾದಲ್ಲಿಯೇ ಸುದೀಪ್‌ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿ ಕ್ರಿಯೇಷನ್ಸ್‌ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ