ಚಿತ್ರದ ಹೃದಯವನ್ನೇ ಪಕ್ಕಕ್ಕಿಟ್ಟು ಬಿಡುಗಡೆ ಮಾಡಬೇಕಾಯ್ತು; ‘ಸಂಜು ವೆಡ್ಸ್ ಗೀತಾ 2’ ಮರು ಬಿಡುಗಡೆ ಬಗ್ಗೆ ನಾಗಶೇಖರ್ ಮನದ ಮಾತು
ಸಂಜು ವೆಡ್ಸ್ ಗೀತಾ 2’ ಚಿತ್ರ ಮರುಬಿಡುಗಡೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಜೂನ್ 06ರಂದು ಚಿತ್ರ ಮರುಬಿಡುಗಡೆ ಆಗುತ್ತಿರುವ ವಿಷಯವನ್ನು ಎಚ್ಟಿ ಕನ್ನಡ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಪ್ರಕಟಿಸಿತ್ತು. ಈಗ ಚಿತ್ರದ ನಿರ್ದೇಶಕ ನಾಗಶೇಖರ್ ಅದನ್ನು ಖಚಿತ ಪಡಿಸಿದ್ದಾರೆ. (ವರದಿ: ಚೇತನ್ ನಾಡಿಗೇರ್)

ಸಂಜು ವೆಡ್ಸ್ ಗೀತಾ 2’ ಚಿತ್ರ ಮರುಬಿಡುಗಡೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಜೂನ್ 06ರಂದು ಚಿತ್ರ ಮರುಬಿಡುಗಡೆ ಆಗುತ್ತಿರುವ ವಿಷಯವನ್ನು ಎಚ್ಟಿ ಕನ್ನಡ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಪ್ರಕಟಿಸಿತ್ತು. ಈಗ ಚಿತ್ರದ ನಿರ್ದೇಶಕ ನಾಗಶೇಖರ್ ಅದನ್ನು ಖಚಿತ ಪಡಿಸಿದ್ದಾರೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿರುವುದು ಏಕೆ? ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘21 ನಿಮಿಷ ಗ್ರಾಫಿಕ್ಸ್ ಕೆಲಸ ಇತ್ತು. ಅದನ್ನು ಸೇರಿಸಿ ಕ್ಯೂಬ್ಗೆ ಕಳಿಸೋಣ ಎನ್ನುವಷ್ಟರಲ್ಲಿ ಚಿತ್ರಕ್ಕೆ ತಡೆಯಾಜ್ಞೆ ಬಂದಿತ್ತು. ಹಾಗಾಗಿ, ಅದನ್ನು ಸೇರಿಸುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ತಡೆಯಾಜ್ಞೆ ರದ್ದಾದರೂ, ದೃಶ್ಯಗಳನ್ನು ಸೇರಿಸಲು ಆಗದೇ, ಹಾಗೆಯೇ ಬಿಡುಗಡೆ ಮಾಡಬೇಕಾಯಿತು. ನಿಜ ಹೇಳಬೇಕೆಂದರೆ, ಆ 21 ನಿಮಿಷಗಳೇ ಚಿತ್ರದ ಹೃದಯ. ಬೇರೆ ದಾರಿ ಇರಲಿಲ್ಲ. ಅದನ್ನು ಪಕ್ಕಕ್ಕಿಟ್ಟು ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು. ಈ ವಿಷಯ ನಿರ್ಮಾಪಕರಿಗೂ ಗೊತ್ತಿತ್ತು. ಆದರೆ ಬೇರೆ ದಾರಿ ಇರಲಿಲ್ಲ. ಸದ್ಯಕ್ಕೆ ಅಂದುಕೊಂಡಂತೆ ಸಿನಿಮಾ ಬಿಡುಗಡೆ ಮಾಡೋಣ. ನಂತರ 21 ನಿಮಿಷಗಳಷ್ಟು ಸೇರಿಸಿ, ಹೊಸದಾಗಿ ಮರುಬಿಡುಗಡೆ ಮಾಡಿದರಾಯಿತು ಎಂಬ ತೀರ್ಮಾನಕ್ಕೆ ಎಲ್ಲರೂ ಬಂದೆವು.
ಈ ಚಿತ್ರವನ್ನು ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರಿಗೆ ತೋರಿಸಿದರಂತೆ. ‘ಅವರು ಸಹ ಚಿತ್ರ ಮೆಚ್ಚಿಕೊಂಡು, ತಮ್ಮ ‘ಸ್ನೇಹ ಲೋಕ’ ಚಿತ್ರದ ಉದಾಹರಣೆ ನೀಡಿದರು. ಆ ಚಿತ್ರ ಸಹ ಮರುಬಿಡುಗಡೆ ಆದಾಗ 100 ದಿನ ಪ್ರದರ್ಶನ ಕಂಡಿತ್ತು. ಒಳ್ಳೆಯ ಸಿನಿಮಾ ಯಾವತ್ತೂ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಬಿಟ್ಟು ಹೋಗಿದ್ದ 21 ನಿಮಿಷಗಳಷ್ಟು ದೃಶ್ಯಗಳನ್ನು ಸೇರಿಸಿ ಸಿನಿಮಾ ಸೇರಿಸಿ ಬಿಡುಗಡೆ ಮಾಡುತ್ತಿದ್ದೇವೆ. ಇದೇ ನಿಜವಾದ ಸಿನಿಮಾ. ಇದು ನನ್ನ ನಿಜವಾದ ಕನಸು. ಈಗ ಆ ಕನಸು ನನಸಾಗುತ್ತಿದೆ. 21 ನಿಮಿಷ ಸೇರಿಸಿದ ಮೇಲೆ ಚಿತ್ರದ ಶೇಪ್ ಬದಲಾಯಿತು. ಈಗ ಚಿತ್ರದ ಅವಧಿ ಎರಡು ಗಂಡೆ 23 ನಿಮಿಷ ಆಗಿದೆ. ಜೂನ್ 06ಕ್ಕೆ ಹಲವು ದೇಶಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ರೀವರ್ಕ್ ಮಾಡುವುದಕ್ಕೆ 50 ಲಕ್ಷ ಖರ್ಚಾಗಿದೆ. ನಿರ್ಮಾಪಕರು ಮತ್ತೆ ಖರ್ಚು ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಇವತ್ತಿಂದ ಚಿತ್ರದ ಪ್ರಚಾರ ಶುರುವಾಗಲಿದೆ ಎನ್ನುವ ನಾಗಶೇಖರ್, ‘ಜೂನ್ 02ರಂದು ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಲಿದೆ. ದುಬೈನಲ್ಲಿ ಪ್ರೀಮಿಯರ್ ಶೋ ಮಾಡಿ ಎಂಬ ಆಫರ್ ಬಂದಿದೆ. ಇಂದು ಕನ್ನಡ ಚಿತ್ರರಂಗದ 22 ನಿರ್ದೇಶಕರು ಈ ಚಿತ್ರವನ್ನು ನೋಡುತ್ತಿದ್ದಾರೆ. ಎಸ್. ನಾರಾಯಣ್, ಎಸ್. ಮಹೇಂದರ್, ಆರ್. ಚಂದ್ರು, ಎ.ಪಿ. ಅರ್ಜುನ್ ಮುಂತಾದವರು ಚಿತ್ರ ನೋಡುತ್ತಿದ್ದಾರೆ’ ಎಂದರು.
ಮರುಬಿಡುಗಡೆಯಾದ ಚಿತ್ರಗಳು ಗೆಲ್ಲುತ್ತವೆ ಎನ್ನುವುದಕ್ಕೆ ಹಿಂದಿಯಲ್ಲಿ ‘ಸನಮ್ ತೇರಿ ಕಸಮ್’ ಚಿತ್ರ ಉದಾಹರಿಸಿದ ಅವರು, ‘ಆ ಬಿಡುಗಡೆ ಆದಾಗ ಲಾಸ್ ಆಗಿತ್ತು. ಒಂಬತ್ತು ವರ್ಷಗಳ ನಂತರ ಪುನಃ ಬಿಡುಗಡೆ ಆದಾಗ, ಚಿತ್ರ ಒಳ್ಳೆಯ ಗಳಿಕೆ ಮಾಡಿತು. ಕಾಲ ಬದಲಾಗಿರಬಹುದು. ಜನ ಬದಲಾಗಿಲ್ಲ. ಒಳ್ಳೆಯ ಸಿನಿಮಾಗಳನ್ನು ಅವರು ಯಾವತ್ತೂ ನೋಡುತ್ತಾರೆ. ಅವರಿಗೆ ತಲುಪಿಸುವುದಷ್ಟೇ ನಮ್ಮ ಕೆಲಸ. ಸಿನಿಮಾ ರೀಚ್ ಆಗಬೇಕೆಂದರೆ, ಪ್ರಚಾರ ಮಾಡಬೇಕು’ ಎಂದರು. (ವರದಿ: ಚೇತನ್ ನಾಡಿಗೇರ್)