ಟೀಕೆಗಳಿಗೆ ಹೆದರಿದ್ರಾ Seetha Rama Serial ಸೀತಮ್ಮ? ಕಾಮೆಂಟ್ ಆಪ್ಷನ್ ಆಫ್ ಮಾಡಿ ಹೊಸ ವಿಡಿಯೋ ಶೇರ್ ಮಾಡಿದ ವೈಷ್ಣವಿ ಗೌಡ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ, ತಮ್ಮ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್ ಆಪ್ಷನ್ ಆಫ್ ಮಾಡಿ ರಮ್ಮಿ ಆಟದ ಜಾಹೀರಾತಿನ ವಿಡಿಯೋ ಶೇರ್ ಮಾಡಿದ್ದಾರೆ.

Seetha Rama Serial Actress Vaishnavi Gowda: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ರ ಬದಲು ಸಂಜೆ 5:30ಕ್ಕೆ ಸೀತಾ ರಾಮ ಸೀರಿಯಲ್ ಪ್ರಸಾರ ಕಾಣುತ್ತಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್ ಅಂತ್ಯವಾಗಲಿದೆ, ಆ ಕಾರಣಕ್ಕೆ ಜೀ ಕನ್ನಡ ವಾಹಿನಿ ಇಂಥ ನಿರ್ಧಾರ ಕೈಗೊಂಡಿರಬಹುದು ಎಂದೂ ಹೇಳಲಾಗಿತ್ತಿದೆ. ಆದರೆ, ಧಾರಾವಾಹಿ ಅಂತ್ಯದ ಬಗ್ಗೆ ಈ ವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ಕಥೆಯಲ್ಲಿ ಮಾತ್ರ ಹೊಸ ಹೊಸ ಟ್ವಿಸ್ಟ್ಗಳು ವೀಕ್ಷಕನಿಗೆ ಸಿಗುತ್ತಿವೆ. ಈ ನಡುವೆ ಇದೇ ಸೀರಿಯಲ್ನ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋ ಮೂಲಕ ಆಗಮಿಸಿದ್ದಾರೆ.
ಹೌದು, ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಿರುವ ನಟಿ ವೈಷ್ಣವಿ ಗೌಡ, ಆಗೊಂದು ಈಗೊಂದು ಬಗೆಬಗೆ ವಿಡಿಯೋ, ಫೋಟೋ ಗೊಂಚಲುಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಕಮರ್ಷಿಯಲ್ ಉತ್ಪನ್ನಗಳನ್ನೂ ಪ್ರಮೋಟ್ ಮಾಡುತ್ತಿರುತ್ತಾರೆ. ಇದೀಗ ಇದೇ ನಟಿ, ಹೊಸ ಜಾಹೀರಾತೊಂದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಜಾಹೀರಾತು ಶೇರ್ ಮಾಡಿ, ಕಾಮೆಂಟ್ ಬಾಕ್ಸ್ ಆಪ್ಷನ್ ಆಫ್ ಮಾಡಿದ್ದಾರೆ. ಅಷ್ಟಕ್ಕೂ ಅದು ರಮ್ಮಿ ಕುರಿತ ಜಾಹೀರಾತು.
ಜಾಲತಾಣಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುವ ಸಿನಿಮಾ ಸೆಲೆಬ್ರಿಟಿಗಳು, ನಟನೆ ಮಾತ್ರವಲ್ಲದೆ, ಜಾಹೀರಾತು ಮೂಲಗಳಿಂದಲೂ ಹೆಚ್ಚೆಚ್ಚು ಸಂಪಾದನೆ ಮಾಡುತ್ತಾರೆ. ಕೆಲವರು ಬ್ರಾಂಡ್ಗಳ ರಾಯಭಾರಿಗಳಾದರೆ, ಇನ್ನು ಕೆಲವರು ತಮ್ಮದೇ ಪ್ರಾಡಕ್ಟ್ಗಳನ್ನು ಪ್ರಮೋಟ್ ಮಾಡುತ್ತಿರುತ್ತಾರೆ. ಈ ನಡುವೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಲವೊಂದು ಉತ್ಪನ್ನಗಳಿಂದ ಕೆಲವು ಸೆಲೆಬ್ರಿಟಿಗಳು ದೂರ ಉಳಿದಿದ್ದರೆ, ಇನ್ನು ಕೆಲವರು ಅಂಥ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಟೀಕೆಗೊಳಗಾದವರಿದ್ದಾರೆ.
ಇದೀಗ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿರುವ, ದಶಕಗಳಿಂದಲೂ ಕರುನಾಡಿನ ಮನೆ ಮಂದಿಯನ್ನು ರಂಜಿಸುತ್ತ ಬಂದಿರುವ ನಟಿ ವೈಷ್ಣವಿ ಗೌಡ, ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಬಾಕ್ಸ್ ಆಪ್ಷನ್ ಆಫ್ ಮಾಡಿ, ರಮ್ಮಿ ಆಟದ ಜಾಹೀರಾತನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಈಗಲೇ ರಮ್ಮಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಆಡಿ ಎಂದಿದ್ದಾರೆ ಸೀತಾ ರಾಮ ಸೀರಿಯಲ್ ಸೀತಮ್ಮ.
ಕಿಚ್ಚ ಸುದೀಪ್ಗೂ ತಟ್ಟಿತ್ತು ಬಿಸಿ
ಈ ಹಿಂದೆ ಕಿಚ್ಚ ಸುದೀಪ್ ಸೇರಿ ಹಲವು ಸ್ಟಾರ್ ಸೆಲೆಬ್ರಿಟಿಗಳೂ ಈ ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಸೆಲೆಬ್ರಿಟಿಗಳು ಜನರ ದಿಕ್ಕನ್ನು ತಪ್ಪಿಸಬಾರದು ಎಂದು ಸ್ವತಃ ಸುದೀಪ್ ಅಭಿಮಾನಿಗಳು ಈ ಹಿಂದೆ ಅಭಿಯಾನವನ್ನೇ ಆರಂಭಿಸಿದ್ದರು. ಕನ್ನಡಪರ ಸಂಘಟನೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಕಾಂಟ್ರಾಕ್ಟ್ನಿಂದ ಸುದೀಪ್ ಹಿಂದೆ ಸರಿದಿದ್ದರು. ಸುದೀಪ್ ಮಾತ್ರವಲ್ಲದೆ, ಗಾಯಕ ಚಂದನ್ ಶೆಟ್ಟಿ ಸಹ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು.
ನೆಟ್ಟಿಗರ ಅಭಿಪ್ರಾಯ
ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರು ಸಾಕಷ್ಟು ಮಂದಿ. ಅಂಥ ಸೆಲೆಬ್ರಿಟಿಗಳ ಫ್ಯಾಶನ್, ಇಷ್ಟ, ಕಷ್ಟದ ಜತೆಗೆ ಹೆಲ್ತ್, ಫಿಟ್ನೆಟ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸೆಲೆಬ್ರಿಟಿಗಳ ಒಳ್ಳೆಯ ಕೆಲಸಕ್ಕೆ ಶಹಬ್ಬಾಸ್ ಎಂದು ಕಾಮೆಂಟ್ನಲ್ಲಿ ನೆಟ್ಟಿಗರು ಟೈಪಿಸಿದರೆ, ಬೇಡದ ಕೆಲಸಕ್ಕೆ ಮುಂದಾದಾಗ, ಸಮಾಜದ ಮೇಲೆ ದುಷ್ಪರಿಣಾಮ ಬೀರುವ ದೃಶ್ಯಗಳಲ್ಲಿ, ಜಾಹೀರಾತುಗಳಲ್ಲಿ ಕಂಡಾಗ, ಟೀಕಿಸಿದ್ದೂ ಇದೆ. ಇದೀಗ ನಟಿ ವೈಷ್ಣವಿ ಗೌಡ, ಟೀಕೆಗಳಿಗೆ ಹೆದರಿ ಕಾಮೆಂಟ್ ಬಾಕ್ಸ್ ಆಫ್ ಮಾಡಿ ರಮ್ಮಿ ಜಾಹೀರಾತು ನೀಡಿದ್ದಾರೆ.
