ಕಷ್ಟದಲ್ಲಿ ತನ್ನೊಂದಿಗಿದ್ದ ಮಾವನಿಗೆ ಧನ್ಯವಾದ ಅರ್ಪಿಸಿದ ಶಿವರಾಜ್ ಕುಮಾರ್ ಪತ್ನಿ; ಅಮೆರಿಕಾದಲ್ಲೂ ಜತೆ ನಿಂತ ಶಾಸಕ ಭೀಮಣ್ಣ
ಶಿವರಾಜ್ ಕುಮಾರ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಸಹಕರಿಸಿದ ಭೀಮಣ್ಣ ನಾಯ್ಕ್ ಅವರಿಗೆ ಗೀತಾ ಶಿವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಶಾಸಕ ಭೀಮಣ್ಣ ನಾಯ್ಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಸಹಕರಿಸಿದ ಭೀಮಣ್ಣ ನಾಯ್ಕ್ ಅವರ ಬಗ್ಗೆ ಕೆಲ ಸಂಗತಿಗಳನ್ನು ಬರೆದು ಧನ್ಯವಾದ ತಿಳಿಸಿದ್ದಾರೆ. ನಟ ಶಿವರಾಜ್ಕುಮಾರ್ ಅವರು ಅಮೆರಿಕದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಮತ್ತೆ ಭಾರತಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಜನ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ಹಿಂದೆಯೂ ಅವರ ಆರೋಗ್ಯದ ಬಗ್ಗೆ ಗೀತಾ ಶಿವರಾಜ್ ಕುಮಾರ್ ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಅಮೆರಿಕಾದಲ್ಲಿ ಕಳೆದ ಆ ದಿನಗಳ ಬಗ್ಗೆ ಮತ್ತು ಭೀಮಣ್ಣ ನಾಯ್ಕ್ ಮಾಡಿದ ಸಹಾಯದ ಬಗ್ಗೆ ಅವರು ಹಂಚಿಕೊಂಡಿದ್ದಾರೆ.
ಹೀಗಿತ್ತು ಗೀತಾ ಶಿವರಾಜ್ ಕುಮಾರ್ ಪೋಸ್ಟ್
ಅಲ್ಲಿಯೂ ಸೈ
ಇಲ್ಲಿಯೂ ಸೈ
ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ ನನಗೆ ಭೀಮ್ ಮಾಮ. ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ, ಆದರೆ ಕೆಲಸ ಎಲ್ಲರಿಗಿಂತ ಜಾಸ್ತಿ. ಯಾವತ್ತು ಕಡಿಮೆ ಆಗದ ಪ್ರೀತಿ ವಿಶ್ವಾಸ. ಅವರಿಗೆ ಕುಟುಂಬದವರಾಗಲಿ, ಊರಿನ ಜನರಾಗಲಿ ಎಲ್ಲರು ಒಂದೇ.
ಮಾಮ ಅಮೆರಿಕಾದ ಮಿಯಾಮಿ ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದರು. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ಕತ್ತಲಾದಾಗ ಅವರ ಮೊಬೈಲ್ ಫೋನಿಗೆ ಮುಂಜಾವು. ಅವರ ಕ್ಷೇತ್ರದ ಜನರ ಕರೆಗಳು ಬರುತ್ತಿದ್ದವು ಎಲ್ಲರ ಜೊತೆ ಸ್ವಲ್ಪವೂ ಬೇಜಾರಿಲ್ಲದೆ ಮಾತನಾಡುತಿದ್ದರು. ದೂರದ ಊರಿನಲ್ಲಿದರು, ಕ್ಷೇತ್ರ ಹಾಗು ಕ್ಷೇತ್ರದ ಜವಾಬ್ದಾರಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಿಲ್ಲ.
ನಮ್ಮ ಪ್ರೀತಿಯ ಭೀಮ್ ಮಾಮ, ನಿಮಗೆ ಶಾಸಕರು. ನಮ್ಮ ಕುಟುಂಬದ ಸುಖ ದುಃಖ ಎರಡರಲ್ಲೂ ಸದಾ ಜೊತೆಗೆ ನಿಂತವರು. ನಿಮ್ಮ ಶಾಸಕರಾಗಿ ಅವರು ಸದಾ ನಿಮ್ಮ ಜೊತೆಯಲ್ಲಿ ನಿಂತಿರಲಿ, ಹಾಗು ಅವರ ಮತ್ತು ನಿಮ್ಮ ಮುಗುಳ್ನಗೆ ಎಂದಿಗೂ ಮಾಸದಿರಲಿ ಎಂದು ದೇವರಲ್ಲಿ ನಾನು ಹಾಗು ಶಿವ ರಾಜಕುಮಾರ್ ಅವರು ಕೇಳಿಕೊಳ್ಳುತೇವೆ.
ಇಂತಿ,
ಗೀತಾ ಶಿವರಾಜಕುಮಾರ್ ಹಾಗೂ ಶಿವರಾಜಕುಮಾರ್
ಅಮೆರಿಕಾದ ಮಿಯಾಮಿ ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಭೀಮಣ್ಣ ಎಷ್ಟು ಕಾಳಜಿವಹಿಸಿದ್ದರು ಎಂಬುದನ್ನು ತಿಳಿಸಿದ್ದಾರೆ. ಒಂದು ಕಡೆ ತಮ್ಮ ಕರ್ತವ್ಯ, ಇನ್ನೊಂದೆಡೆ ಶಿವಣ್ಣನ ಆರೈಕೆ ಎಲ್ಲದಕ್ಕೂ ಸಹಕರಿಸಿದ್ಧಾರೆ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಎಲ್ಲರೂ ಜತೆಗಿದ್ದ ಫೋಟೋ ಹಂಚಿಕೊಂಡಿದ್ದಾರೆ. ಅಮೇರಿಕಾದಲ್ಲಿದ್ದರೂ ಅವರ ಕ್ಷೇತ್ರದ ಜನರಿಗೆ ಸಹಾಯ ಮಾಡುತ್ತಿದ್ದರು. ಯಾವುದೇ ಕರೆ ಬಂದರೂ ಸ್ವೀಕರಿಸಿ ಮಾತಾಡುತ್ತಿದ್ದರು ಎಂದಿದ್ದಾರೆ.
