Amruthadhaare Serial: ಒಲವಿನ ಸುಳಿಯಲಿ ಸಿಲುಕ್ತಾರಾ ಗೌತಮ್- ಭೂಮಿಕಾ?; ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಕ ಜೋಡಿಯ ಹೊಸ ಕಥೆ ಅಮೃತಧಾರೆ
45 ವರ್ಷದ ಉದ್ಯಮಿ ಗೌತಮ್ ದಿವಾನ್ ಮತ್ತು 35 ವರ್ಷದ ಭೂಮಿಕಾ ಮಧ್ಯಮ ವರ್ಗದ ವಿದ್ಯಾವಂತ ಮಹಿಳೆ. ನಮ್ಮ ಕಥಾನಾಯಕ ಮತ್ತು ಕಥಾನಾಯಕಿ ತಮ್ಮ ಕುಟುಂಬದ ಸಲುವಾಗಿ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದರಾಗಿದ್ದಾರೆ. ಈ ಒಂಟಿ ಜೀವಗಳೆರಡು ಒಂದಾದರೆ ಅದೇ ಒಲವಿನ ಅಮೃತಧಾರೆ
Amruthadhare Serial: ಕಿರುತೆರೆ ಪ್ರೇಕ್ಷಕರಿಗೆ ಸದಾ ಬಗೆಬಗೆ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ನೀಡುತ್ತ ಬಂದ ಜೀ ಕನ್ನಡ ಇದೀಗ ಮಧ್ಯ ವಯಸ್ಕ ಜೋಡಿಯ ಮತ್ತೊಂದು ಪ್ರೇಮ್ಕಹಾನಿ ಮೂಲಕ ಆಗಮಿಸುತ್ತಿದೆ. ಆ ಧಾರಾವಾಹಿಯೇ ಅಮೃತಧಾರೆ. ಈ ಸೀರಿಯಲ್ ಇದೇ ಮೇ 29 ರಿಂದ ಸಂಜೆ 7:00ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಹೆಣ್ಣು ಮಕ್ಕಳು ಹೀಗೂ ಇರಬಹುದು ಎಂದು ತೋರಿಸಿಕೊಟ್ಟ ಕಥೆಯೇ ಸತ್ಯ, ಇನ್ನು ಭಗವಂತನೇ ಭೂಮಿಗೆ ಬಂದರೆ ಏನಾಗಬಹುದು ಎಂದು ಕುತೂಹಲ ಸೃಷ್ಟಿಸಿ ಮನಗೆದ್ದ ಕಥೆ ಭೂಮಿಗೆ ಬಂದ ಭಗವಂತ. ಇನ್ನು.. ಹಿಟ್ಲರ್ ಕಲ್ಯಾಣ, ಶ್ರೀರಸ್ತು ಶುಭಮಸ್ತು ಕಥೆಗಳು ಕನ್ನಡಿಗರನ್ನು ಮನರಂಜಿಸೋಕೆ ಸದಾ ಸನ್ನದ್ಧ ಎಂಬುವಂತೆ ಪ್ರಸಾರವಾಗುತ್ತಿವೆ. ಹೀಗೆ ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡಿಕೊಂಡು ಬಂದಿರುವ ಜೀ ಕನ್ನಡ ಇದೀಗ ಅಮೃತಧಾರೆ ಕಥೆಯನ್ನು ತನ್ನ ವೀಕ್ಷಕರ ಮುಂದಿಡುತ್ತಿದೆ.
ಎರಡು ಜೀವಗಳನ್ನು ಬೆಸೆಯೋ ಮದುವೆ ಆಗೋ ವಯಸ್ಸಲ್ಲೇ ಆಗಬೇಕು ಅನ್ನೋದು ಸಮಾಜದ ನಿಲುವು! ಇಲ್ಲಿ ಕಥಾನಾಯಕ ಗೌತಮ್- ಕಥಾನಾಯಕಿ ಭೂಮಿಕಾ ಅವರವರ ಕುಟುಂಬದ ಸಲುವಾಗಿ ಶ್ರಮಿಸುತ್ತಲೇ ತಮ್ಮ ಕನಸುಗಳನ್ನೇ ಬದಿಗಿಟ್ಟಿದ್ದಾರೆ. ಮದುವೆಯನ್ನು ಮುಂದೂಡಿ, ಈಗ ಎಲ್ಲ ಇದ್ದೂ ಒಂಟಿಯಾಗಿದ್ದಾರೆ. ಒಂಟಿ ಜೀವಗಳೆರೆಡೂ ಒಂದಾಗೋದು ಹೇಗೆ? ಒಂದಾದ್ರೆ ಒಲವಿನ ಅಮೃತಧಾರೆ ಆಗಲೇಬೇಕಲ್ಲವೇ ಅನ್ನುವುದು 'ಅಮೃತಧಾರೆ' ಧಾರವಾಹಿಯ ಕಥಾ ಹಂದರ.
45 ವರ್ಷದ ಉದ್ಯಮಿ ಗೌತಮ್ ದಿವಾನ್ ಮತ್ತು 35 ವರ್ಷದ ಭೂಮಿಕಾ ಮಧ್ಯಮ ವರ್ಗದ ವಿದ್ಯಾವಂತ ಮಹಿಳೆ. ನಮ್ಮ ಕಥಾನಾಯಕ ಮತ್ತು ಕಥಾನಾಯಕಿ ತಮ್ಮ ಕುಟುಂಬದ ಸಲುವಾಗಿ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದರಾಗಿದ್ದಾರೆ. ಈ ಒಂಟಿ ಜೀವಗಳೆರಡು ಒಂದಾದರೆ ಅದೇ ಒಲವಿನ ಅಮೃತಧಾರೆಯಾಗಲಿದೆ.
ಈಗಾಗಲೇ ಪ್ರೊಮೋ ನೋಡಿರುವ ಹಾಗೆ ನಾಯಕ ನಾಯಕಿಯ ಕೋಳಿ ಜಗಳ ವೀಕ್ಷಕರಲ್ಲಿ ಕೌತುಕ ಸೃಷ್ಟಿಸಿದೆ. ಇಬ್ಬರೂ ಹೊಂದಿಕೊಂಡಿದ್ದರೆ ಅದೊಂದು ಬೊಂಬಾಟ್ ಕಥೆ. ಅದೇ ಇಬ್ಬರೂ ಕಿತ್ತಾಡಿಕೊಂಡಿದ್ದರೆ ಅದು ಬೇರೇನೆ ಕಥೆ. ಹೀಗೆ ಸದಾ ಹಾವು ಮುಂಗುಸಿ ಥರ ಕಿತ್ತಾಡ್ತಿರೋ ನಮ್ಮ ನಾಯಕ ನಾಯಕಿ ಒಲವಿನ ಸುಳಿಯಲ್ಲಿ ಸಿಕ್ಕಿ ಬೀಳ್ತಾರಾ? ಇವರಿಬ್ರೂ ಒಂದಾಗುತ್ತಾರಾ? ಒಂದಾದರೆ ಆ ಕಥೆ ಮುಂದೆ ಹೇಗಿರತ್ತೆ ಅನ್ನೋದು ಕೌತುಕದ ಪ್ರಶ್ನೆ.
ವಿಶಿಷ್ಟ ಕಥೆಯ ಪಾತ್ರಗಳಿಗೆ ಅದ್ದೂರಿ ತಾರಗಣವೇ ಜೀವ ತುಂಬುತ್ತಿದೆ. ಹೆಸರಾಂತ ನಟ ರಾಜೇಶ್ ನಟರಂಗ ನಾಯಕರಾಗಿ ಮತ್ತು ನಟಿ ಛಾಯಾಸಿಂಗ್ ಕನ್ನಡಿಗರನ್ನು ಮನರಂಜಿಸೋಕೆ ಸಜ್ಜಾಗಿದ್ದಾರೆ. ಇನ್ನೂ ಬಹು ತಾರಾಂಗಣದ ಈ ಧಾರಾವಾಹಿಯಲ್ಲಿ ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ವನಿತಾ ವಾಸು, ಅಮೃತ ನಾಯಕ್, ಶಶಿ ಹೆಗ್ಡೆ ಮತ್ತು ಕಿರುತೆರೆಯಲ್ಲಿ ಮಿಂಚಿದ ಸಾರಾ ಅಣ್ಣಯ್ಯ ಅಭಿನಯಿಸುತ್ತಿದ್ದಾರೆ.
ಇನ್ನು ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೀರ್ತಿ ಅಕ್ಷಯ್ ಸಂಸ್ಥೆ ಹೊತ್ತಿದ್ದು. ಬೆಳ್ಳಿತೆರೆಯಲ್ಲಿ ರಾಕಿ ಭಾಯ್ಗೆ ಆಕ್ಷನ್ ಕಟ್ ಹೇಳಿದ ಮಹೇಶ್ ರಾವ್ ಈಗ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಉತ್ತಮ್ ಮಧು ನಿರ್ದೇಶಿಸಲಿದ್ದಾರೆ. ಕಿರುತೆರೆಯ ಹಲವಾರು ಹಿಟ್ ಸಾಂಗ್ಗಳನ್ನು ನೀಡಿರೋ ಸುನಾದ್ ಗೌತಮ್ ಶೀರ್ಷಿಕೆ ಗೀತೆಗೆ ಸಂಗೀತ ನೀಡಿದ್ದು, ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಸಾಹಿತ್ಯ ರಚಿಸಿದ್ದಾರೆ. ಇದೇ ಮೇ 29ರ ಸೋಮವಾರದಿಂದ ಸಂಜೆ 7ಕ್ಕೆ ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.