Chitral Rangaswamy: ‘ಅಭಿಮಾನ ಇರಬೇಕೇ ಹೊರತು ಅಂಧಾಭಿಮಾನ ಇರಬಾರದು!’ ಕಿಚ್ಚನ ಬಗ್ಗೆ ಚಿತ್ರಾಲ್ ರಂಗಸ್ವಾಮಿ ಬೇಸರ
ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಇದೀಗ, ಬಿಗ್ಬಾಸ್ನಲ್ಲಿ ಅವಕಾಶ ಸಿಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಬಗ್ಗೆಯೂ ಮೌನ ಮುರಿದ್ದಿದ್ದಾರೆ ಚಿತ್ರಾಲ್.

Chitral Rangaswamy about Sudeep: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಈ ಬಾರಿಯ ಆಯ್ಕೆ ಪ್ರಕ್ರಿಯೆಯೂ ಕೊಂಚ ವಿಭಿನ್ನವಾಗಿತ್ತು. ಒಂದಷ್ಟು ಮಂದಿ ನೇರವಾಗಿ ಆಯ್ಕೆಯಾದರೆ, ಇನ್ನು ಕೆಲವರು ವೋಟಿಂಗ್ ಮೂಲಕ ಬಿಗ್ ಬಾಸ್ ಪ್ರವೇಶಿಸಬೇಕಾಯ್ತು. ಆ ಪೈಕಿ ಕೊನೇ ಕ್ಷಣದಲ್ಲಿ ವೋಟಿಂಗ್ನಲ್ಲಿ ಹೆಚ್ಚು ಅಂಕ ಪಡೆಯದ ನಟಿ, ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಹಿಂದೆ ಸರಿದಿದ್ದರು. ಇದೀಗ ಆವತ್ತಿನ ಕ್ಷಣವನ್ನು, ಆ ಬೇಸರವನ್ನು ಮತ್ತೆ ತೋಡಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ ಚಿತ್ರಾಲ್, ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ.
"ನಾನು ಸುದೀಪ್ ಅವರ ಅಭಿಮಾನಿಯಲ್ಲೊಬ್ಬಳು. ಅವರ ನಟನೆಗಿಂತ ಅವರ ಸಂದರ್ಶನಗಳು ನನಗಿಷ್ಟ. ಅವರ ಮಾತಿನ ಶೈಲಿ, ಟಕ್ ಅಂತ ಕೌಂಟರ್ ಸ್ಟೈಲ್ ನನಗೆ ಇಷ್ಟವಾಗುತ್ತಿತ್ತು. ಅದೇ ರೀತಿ ನಾನೂ ಸಹ ಕೆಲವು ಇಂಟರ್ವ್ಯೂವ್ಗಳಲ್ಲಿ ಮಾತನಾಡಿದ ವಿಡಿಯೋ ನೋಡಿ, ಲೇಡಿ ಕಿಚ್ಚ ಎಂದು ಸಾಕಷ್ಟು ಮಂದಿ ಕಾಂಪ್ಲಿಮೆಂಟ್ ಕೊಟ್ಟಿದ್ದರು. ಆದರೆ, ಅಸಲಿಗೆ ನಾನು ಇರೋದೇ ಹಾಗೆ. ನಾನು ಸುದೀಪ್ ಅವರನ್ನು ಕಾಪಿ ಮಾಡುತ್ತಿಲ್ಲ. ಅದು ನನ್ನ ಸ್ಟೈಲ್" ಎಂದಿದ್ದಾರೆ ಚಿತ್ರಾಲ್.
ಆಡುವ ಮಾತು ರಿಯಾಲಿಟಿಗೂ ತರಬೇಕು..
ಮುಂದುವರಿದು ಮಾತನಾಡುವ ಅವರು, "ಸುದೀಪ್ ಸರ್ ತಾವು ನೀಡುವ ಸಂದರ್ಶನಗಳಲ್ಲಿ ಅವರು ಏನೆಲ್ಲ ಮಾತನಾಡ್ತಾರೋ ಅದನ್ನು ರಿಯಾಲಿಟಿಗೂ ತಂದ್ರೆ ಒಳ್ಳೆಯದು. ಅವರ ಮಾತು ಸಂದರ್ಶನಗಳನ್ನು ನೋಡಿ ಹಾಗೆ ಅನಿಸುತ್ತಿದೆ. ಹಾಗಾಗಿ ನಾನು ಹೇಳುತ್ತಿದ್ದೇನೆ. ಯಾಕೆಂದರೆ, ವೈಯಕ್ತಿಕವಾಗಿ ನಾನು ಬಿಗ್ ಬಾಸ್ ಸಲುವಾಗಿ ವೇದಿಕೆ ಏರಿದಾಗ, ನನ್ನನ್ನು ವೋಟ್ ಬರಲಿಲ್ಲ ಅಂತ ರಿಜೆಕ್ಟ್ ಮಾಡಿದ್ರು. ನನ್ನನ್ನು ರಿಜೆಕ್ಟ್ ಮಾಡೋಕೆಂದೇ ಸೆಲೆಕ್ಟ್ ಮಾಡಿದ್ರಾ? ಎಂದು ಬೇಸರ ಹೊರಹಾಕಿದ್ದಾರೆ ಚಿತ್ರಾಲ್.
ಯಾಕೆ ರಿಜೆಕ್ಟ್ ಅಂತ ಒಂದೇ ಮಾತೂ ಕೇಳಲಿಲ್ಲ..
"ನಾನೂ ಸುದೀಪ್ ಅವರ ಅಭಿಮಾನಿ, ಆದರೆ ಆ ವೇದಿಕೆ ಮೇಲೆ ನಾನು ರಿಜೆಕ್ಟ್ ಆಗಲು ಕಾರಣ ಏನು ಅಂತ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಷ್ಟು ದೊಡ್ಡ ಹೀರೋ ಆಗಿ, ಅವರಿಂದ ಒಂದೇ ಒಂದು ಮಾತೂ ನನ್ನ ರಿಜೆಕ್ಷನ್ಗೆ ಅವರ ಬಾಯಿಂದ ಮಾತು ಬರಲಿಲ್ಲ. ಯಾಕೆ ಈ ಹುಡುಗಿಯನ್ನ ಕರೆಸಿದ್ರು? ಯಾಕೆ ರಿಜೆಕ್ಟ್ ಮಾಡಿದ್ರು? ವಿಟಿ ಸಲುವಾಗಿ ಬಾಡಿ ಬಿಲ್ಡಿಂಗ್ ವಿಡಿಯೋ ಕೊಟ್ಟಿದ್ದೆ, ಚಾನೆಲ್ನವರು ಯಾವುದೋ ಸಿಲ್ಲಿ ವಿಡಿಯೋ ಹಾಕಿದ್ದಾರೆ. ರಾತ್ರಿ 3 ಗಂಟೆಯಷ್ಟೊತ್ತಿಗೆ ಪುಷ್ಅಪ್ ಮಾಡೋಕೆ ಹೇಳ್ತಾರೆ, ಚಕ್ರಾಸನ ಮಾಡು ಅಂತಾರೆ, ಎಲ್ಲ ಮಾಡಿದೆ. ಆದ್ರೂ ರಿಜೆಕ್ಟ್ ಆದೆ" ಎಂದಿದ್ದಾರೆ ಚಿತ್ರಾಲ್.
ನಾವು ಯಾರಿಗೂ ಫ್ಯಾನ್ ಆಗಿರಬಾರ್ದು ಅನಿಸ್ತು..
"ಅಲ್ಲಿಂದ ನನಗೆ ಸುದೀಪ್ ಸರ್ ಮೇಲೆ ಬೇಸರವಾಯ್ತು. ನನಗನಿಸಿದ್ದು ಯಾರಿಗೂ ಫ್ಯಾನ್ ಆಗಿ ಇರಬಾರದು. ಅವರ ಅಭಿಮಾನಿ ಆಗಿ ಇದ್ದೀವಿ ಅಂದರೆ ನಮಗೋಸ್ಕರವೂ ಅವರು ಮಾತಾಡೋ ಹಾಗಿರಬೇಕು. ನಾನು ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿ, ಮದ್ಯಪಾನ, ಜ್ಯೋತೀಷ್ಯ, ವಶೀಕರಣ, ಗೇಮಿಂಗ್ ಟ್ರೇಡಿಂಗ್ ಇದ್ಯಾವುದನ್ನೂ ನಾನು ಪ್ರಮೋಟ್ ಮಾಡುವ ಕೆಲಸ ಮಾಡಲ್ಲ. ಯಾಕೆಂದರೆ, ಯಾವುದು ಒಳ್ಳೆಯದು, ಯಾವ್ದು ಕೆಟ್ಟದ್ದು ಅನ್ನೋದು ನನಗೂ ಗೊತ್ತಿದೆ. ಒಂದಷ್ಟು ಎಥಿಕ್ಸ್ ಇಟ್ಟುಕೊಂಡೇ ಸಮಾಜದಲ್ಲಿದ್ದೀವಿ" ಎಂದಿದ್ದಾರೆ.
ಆ ಸುದೀಪ್ ನನಗೆ ಕಾಣಲಿಲ್ಲ..
"ನನಗೆ ಸಂದರ್ಶನಗಳಲ್ಲಿ ಕಂಡಂಥ ಸುದೀಪ್ ಅವರು ಕಾಣಲಿಲ್ಲ. ನನಗೆ ಅವರ ಬಗ್ಗೆ ತುಂಬ ನಿರೀಕ್ಷೆ ಇತ್ತು, ಆದರೆ ನಾನು ರಿಜೆಕ್ಟ್ ಆದ ಮೇಲೆ, ಯಾಕೆ ಅವರು ಪ್ರಶ್ನೆ ಮಾಡಲಿಲ್ಲ? ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಸಂದರ್ಶನ ನೋಡಿ ನೋಡಿ, ಸುದೀಪ್ ಅವರು ಇರೋ ಕಡೆ ಅನ್ಯಾಯ ಆಗಲ್ಲ ಅನ್ನೋದು ನನ್ನ ತಲೆಯಲ್ಲಿತ್ತು. ಆದರೆ, ಅವರು ಆ ಕ್ಷಣ ಏನನ್ನೂ ಕೇಳಲಿಲ್ಲ. ಅಷ್ಟಕ್ಕೂ ಈ ವಿಚಾರ ಪಾಪ ಅವರ ಗಮನಕ್ಕೂ ಇರಲ್ಲ"
ಯಾರೇನೂ ಬಿಟ್ಟಿ ಎಂಟರ್ಟೈನ್ಮೆಂಟ್ ಮಾಡಲ್ಲ..
"ಇದೆನ್ನೆಲ್ಲ ನೋಡಿ ನಾನು ನನ್ನ ಲೈಫ್ನಲ್ಲಿ ಅಂದುಕೊಂಡಿದ್ದು ಏನೆಂದರೆ, ಅಭಿಮಾನ ಇರಬೇಕೇ ಹೊರತು ಅಂಧಾಭಿಮಾನ ಇರಬಾರದು ಎಂದು. ಅವರೂ ಕೂಡ ಮೇಕಪ್ ಹಾಕ್ಕೊಂಡು ಎಂಟರ್ಟೈನ್ ಮಾಡ್ತಿದ್ದಾರೆ. ಅದು ಅವರ ಕೆಲಸ. ಅವರಿಗೂ ಆ ಕೆಲಸಕ್ಕೆ ಪೇಮೆಂಟ್ ಸಿಗುತ್ತೆ. ಹಾಗಂತ ಯಾರೇನು ಬಿಟ್ಟಿ ಎಂಟರ್ಟೈನ್ಮೆಂಟ್ ಮಾಡಲ್ಲ. ಯಾರಿಗಾದರೂ ಬಿಟ್ಟಿ ಮನರಂಜನೆ ಕೊಡೋಕೆ ಹೇಳಿ ನೋಡೋಣ? ಆಗುತ್ತಾ? ಆಗಲ್ಲ. ನಮಗೆ ಅನ್ಯಾಯವಾದಾಗ ಅವರು ಮುಂದೆ ಬಂದು ಮಾತಾಡ್ತಾರೆ ಅಂತ ಅಂದುಕೊಂಡು ಕೂತ್ರೆ ಅಷ್ಟೇ. ಹಾಗಾಗಿ ಫ್ಯಾನ್ ಆಗೋಕೆ ಹೋಗಬಾರದು" ಎಂದಿದ್ದಾರೆ ಚಿತ್ರಾಲ್ ರಂಗಸ್ವಾಮಿ.
