State Film Awards: ಸುದೀಪ್, ಅನುಪಮಾ ಗೌಡ ಅತ್ಯುತ್ತಮ ನಟ-ನಟಿ: ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳು ಪ್ರಕಟ, ಇಲ್ಲಿದೆ ಸಮಗ್ರ ವಿವರ
Karnataka State Film Awards: 2019ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. ‘ಪೈಲ್ವಾನ್’ ಚಿತ್ರದ ಮೂಲಕ ಕಿಚ್ಚ ಸುದೀಪ್ ಅತ್ಯುತ್ತಮ ನಾಯಕ ನಟ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ತ್ರಯಂಬಕಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಭಾಜನರಾಗಿದ್ದಾರೆ.

ಕರ್ನಾಟಕ ಚಲನಚಿತ್ರ ಪ್ರಶಸ್ತಿ 2019 - ‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅತ್ಯುತ್ತಮ ನಟ ಮತ್ತು ‘ತ್ರಯಂಬಕಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಭಾಜನರಾಗಿದ್ದಾರೆ.
2019ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಬುಧವಾರ ಸಂಜೆ ಹೊರಬಿದ್ದಿದ್ದು, ಪಿ. ಶೇಷಾದ್ರಿ ನಿರ್ದೇಶನದ ‘ಮೋಹನ ದಾಸ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಎಂದು ಪರಿಗಣಿಸಲ್ಪಟ್ಟರೆ, ‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಎಂಬ ಮಕ್ಕಳ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿದೆ. ‘ಕನ್ನೇರಿ’ ಚಿತ್ರವು ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
2018ನೇ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ಕೆಲವು ವರ್ಷಗಳ ಹಿಂದೆ ಘೋಷಿಸಿದ ನಂತರ 2019 ಮತ್ತು ಅಲ್ಲಿಂದ ಮುಂದಿನ ವರ್ಷಗಳ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿರಲಿಲ್ಲ. ಕಳೆದ ವರ್ಷ ಸರ್ಕಾರವು ಸಬ್ಸಿಡಿ ಮತ್ತು ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗಳನ್ನು ರಚಿಸಿತ್ತು. ನಂಜುಂಡೇಗೌಡ ನೇತೃತ್ವದ ಈ ಸಮಿತಿಯಲ್ಲಿ ರಾಮನಾಥ ಋಗ್ವೇದಿ, ಮಳವಳ್ಳಿ ಸಾಯಿಕೃಷ್ಣ, ಪೂಜಾ ಗಾಂಧಿ, ಶ್ರೀಧರ್ ಸಂಭ್ರಮ್ ಮುಂತಾದವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸಮಿತಿಯ ಎದುರಿದ್ದ ಒಟ್ಟು 180 ಚಿತ್ರಗಳ ಪೈಕಿ, ನಿಮಾನುಸಾರ ಇಲ್ಲದಿರುವ ಎಂಟು ಚಿತ್ರಗಳನ್ನು ಹೊರತುಪಡಿಸಿ, 172 ಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
2019 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಕೆಳಕಂಡಂತಿದೆ
ಅತ್ಯುತ್ತಮ ಅತ್ಯುತ್ತಮ ಚಿತ್ರ: ಮೋಹನ ದಾಸ
ದ್ವಿತೀಯ ಅತ್ಯುತ್ತಮ ಚಿತ್ರ: ಲವ್ ಮಾಕ್ಟೈಲ್
ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್
ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲ ಗಾಂಧಿ (ನಾಗೇಶ್ ಎನ್)
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತಲಾಕ್ ತಲಾಕ್ ತಲಾಕ್ (ಬ್ಯಾರಿ ಭಾಷೆ)
ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕಾರ್ಯಪ್ಪ)
ಅತ್ಯುತ್ತಮ ಪೋಷಕ ನಟಿ: ಕುಮಾರಿ ಅನೂಷಾ ಕೃಷ್ಣ (ಬ್ರಾಹ್ಮಿ)
ಅತ್ಯುತ್ತಮ ಕಥೆ: ಜಯಂತ್ ಕಾಯ್ಕಿಣಿ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)
ಅತ್ಯುತ್ತಮ ಚಿತ್ರಕಥೆ: ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್)
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ)
ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್. ಭಾಸ್ಕರ್ (ಮೋಹನದಾಸ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿ ಹರಿಕೃಷ್ಣ (ಯಜಮಾನ)
ಅತ್ಯುತ್ತಮ ಸಂಕಲನ: ಜಿ. ಬಸವರಾಜ್ ಅರಸ್ (ಝಾನ್ಸಿ IPS)
ಅತ್ಯುತ್ತಮ ಬಾಲನಟ: ಮಾಸ್ಟರ್ ಪ್ರೀತಂ (ಮಿಂಚುಹುಳು)
ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)
ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನ ದಾಸ)
ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು (ಪೆನ್ಸಿಲ್ ಬಾಕ್ಸ್)
ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ (ಲವ್ ಮಾಕ್ಟೇಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಂಗಮ ಶೆಟ್ಟಿ (ರಾಗಭೈರವಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಮತ್ತು ತಮಟೆ ನಟಸಿಂಹಯ್ಯ
ವರದಿ: ಚೇತನ್ ನಾಡಿಗೇರ್
