Darshan Thoogudeepa: ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನೊಟೀಸ್ ಜಾರಿ; ನಟನಿಗೆ ಮತ್ತೆ ಶುರುವಾಯ್ತು ಆತಂಕ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ಪಡೆದು ಹೊರಗಿದ್ದ ನಟ ದರ್ಶನ್ಗೆ ಆತಂಕ ಎದುರಾಗಿದೆ. ಆದರೆ ಜಾಮೀನು ರದ್ದು ಮಾಡಬೇಕೆಂದು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಆರೋಪಿಗಳಿಗೆ ನೋಟಿಸ್ ನೀಡಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ಪಡೆದು ಹೊರಗಿದ್ದ ನಟ ಹಾಗೂ ಉಳಿದ ಆರೋಪಿಗಳಿಗೆ ಮತ್ತೆ ಆತಂಕ ಆರಂಭವಾಗಿದೆ. ಆರೋಪಿಗಳಾದ ನಟ ದರ್ಶನ್ ಸೇರಿದಂತೆ ಇತರೆ 7 ಮಂದಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಗಿದ್ದ ನಟ ಹಾಗೂ ಎಲ್ಲ ಆರೋಪಿಗಳಿಗೆ ಮತ್ತೆ ಭೀತಿ ಕಾಡುತ್ತಿದೆ. ರಾಜ್ಯ ಸರ್ಕಾರ ನಟ ದರ್ಶನ್ ಜಾಮೀನು ರದ್ದು ಮಾಡಬೇಕು ಎಂದು ಮೇಲ್ಮನವಿ ಸಲ್ಲಿಸಿತ್ತು. ಆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ.
ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್
ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ತೀರ್ಪುನ್ನು ಕರ್ನಾಟಕ ಸರ್ಕಾರ ಪ್ರಶ್ನಿಸಿದೆ. ಒಂದಷ್ಟು ಕಾರಣಗಳನ್ನು ನೀಡಿ ದರ್ಶನ್ಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಮನವಿ ಕೂಡ ಸಲ್ಲಿಸಿದೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಇಂದು ಮೊದಲ ಹಿಯರಿಂಗ್ ನಡೆಸಿದೆ. 7 ಆರೋಪಿಗಳಿಗೆ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ.
ಜಾಮೀನು ರದ್ದಾದರೆ ಮತ್ತೆ ದರ್ಶನ್ ಜೈಲು ಸೇರಬೇಕಾದ ಪ್ರಸಂಗ ಎದುರಾಗುತ್ತದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ದೊರೆತಿಲ್ಲ ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇಲ್ಲಿವೆ ಕಾರಣಗಳು
1) ದರ್ಶನ್ ಸೆಲಿಬ್ರೆಟಿಯಾಗಿರುವ ಕಾರಣ ಜಾಮೀನು ಪಡೆದು ಹೊರ ಹೋದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಜಾಮೀನು ರದ್ದು ಮಾಡಬೇಕು
2) ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪ ಇನ್ನೂ ನಿಗದಿ ಹಂತಕ್ಕೆ ಬಂದಿಲ್ಲ ಆರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಉಲ್ಲೇಖ ಮಾಡಲಾಗಿದೆ. ವಿಚಾರಣೆಯು ವಿಳಂಬವಾಗುವುದರಿಂದ ಜಾಮೀನು ಮಂಜೂರು ಮಾಡಲಾಗಿದೆ ಇದು ಅವಸರದ ನಿರ್ಧಾರ ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿದೆ.
3) ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬಲವಂತವಾಗಿ ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದು ಐಪಿಸಿ ಸೆಕ್ಷನ್ 364ರ ಅಡಿ ಇದು ಅಪರಾಧ. ಆದರೆ ಕೋರ್ಟ್ ಇದನ್ನು ಪರಿಗಣಿಸಿಲ್ಲ.
4) 76 ಮತ್ತು 91ನೇ ಪ್ರತ್ಯಕ್ಷ ಸಾಕ್ಷಿಗಳು ಸಿಆರ್ಪಿಸಿ ಸೆಕ್ಷನ್ 164ರ ಅಡಿ ಆರೋಪಿಗಳು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿರುವುದರ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿರುವುದನ್ನು ಹೈಕೋರ್ಟ್ ಪರಿಗಣಿಸಲು ವಿಫಲವಾಗಿದೆ.
5) ಸಾಂದರ್ಭಿಕ ಸಾಕ್ಷಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಆರೋಪಿಗಳ ಬಟ್ಟೆ/ ಶೂ/ಚಪ್ಪಲಿಗಳಲ್ಲಿ ಸಂತ್ರಸ್ತನ ವಂಶವಾಹಿ ಗುರುತು, ಕರೆ ದಾಖಲೆ ವಿಶ್ಲೇಷಣೆ, ಸೆಲ್ ಟವರ್ ಸ್ಥಳ, ಸಿಸಿಟಿವಿ ತುಣುಕುಗಳು, ಅಪರಾಧದ ಸ್ಥಳದಲ್ಲಿ ಆರೋಪಿಗಳ ಓಡಾಟ, ಆರೋಪಿಗಳ ಮೊಬೈಲ್ನಲ್ಲಿ ಸಂತ್ರಸ್ತನ ಫೋಟೊಗಳು ಪತ್ತೆಯಾಗಿರುವುದನ್ನು ಹೈಕೋರ್ಟ್ ಪರಿಣಿಸಲು ವಿಫಲವಾಗಿದೆ.
6) ಕಾನೂನಿನ ಪ್ರಕಾರ ತನಿಖಾಧಿಕಾರಿಯು ಆರೋಪಿಗಳಿಗೆ ಏಕೆ ಬಂಧಿಸಲಾಗುತ್ತಿದೆ ಎಂಬುದರ ಸಾಮಾನ್ಯ ವಿಚಾರಗಳನ್ನು ತಿಳಿಸಬೇಕಿತ್ತು. ಎಲ್ಲಾ ಆರೋಪಿಗಳಿಗೆ ಒಂದೇ ತೆರನಾದ ಬಂಧನದ ಆಧಾರ ನೀಡಲಾಗಿದೆ.
7) ಮಧ್ಯಂತರ ಪರಿಹಾರದ ಭಾಗವಾಗಿ ಮಧ್ಯಂತರ ಏಕಪಕ್ಷೀಯ ಆದೇಶದ ಮೂಲಕ ಜಾಮೀನು ಆದೇಶವನ್ನು ತಡೆ ಹಿಡಿಯಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಇನ್ನು ಮುಂದೆ ವಿಚಾರಣೆ ನಡೆಯಲಿದೆ.
