Puneetha Parva: ಕೈ ಕೈ ಒಂದಾದ್ರೆ ದೊಡ್ಡ ಫಲವೇ ದಕ್ಕಲಿದೆ ಎಂಬುದಕ್ಕೆ ಸಾಕ್ಷಿಯಾಯ್ತು ‘ಪುನೀತ ಪರ್ವ’; ಪ್ರಕಾಶ್ ರೈ, ಯಶ್, ಸೂರ್ಯ ಸಾಥ್..
ಅಪ್ಪು ಹೆಸರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಂಬುಲೆನ್ಸ್ ಸೇವೆ ಘೋಷಿಸಿದ ಪ್ರಕಾಶ್ ರೈ ಯಶ್, ಚಿರಂಜೀವಿ ಮತ್ತು ಸೂರ್ಯ
ಪುನೀತ್ ರಾಜ್ಕುಮಾರ್ ಇಲ್ಲವಾಗಿ ಇನ್ನೇನು ಇದೇ 29ಕ್ಕೆ ವರ್ಷ ತುಂಬಲಿದೆ. ಈ ಹಿನ್ನೆಯಲ್ಲಿ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಸಾಕ್ಷ್ಯಚಿತ್ರವೂ 28ರಂದು ಬಿಡುಗಡೆ ಆಗುತ್ತಿದೆ. ಅದರ ಪ್ರಯುಕ್ತ ಡಾ. ರಾಜ್ ಕುಟುಂಬ ಪುನೀತ ಪರ್ವ ಹೆಸರಿನ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿತ್ತು. ಅದರ ಕನ್ನಡ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಗಳ ಕಲಾವಿದರು ಈ ಕಾರ್ಯಕ್ರಮದಲ್ಲಿದ್ದರು. ಈ ವೇಳೆ ಪುನೀತ್ ಅವರ ತೆರೆಮರೆಯ ಜನಪರ ಕಾರ್ಯಗಳ ಬಗ್ಗೆಯೂ ಎಲ್ಲರೂ ಮಾತನಾಡಿದರು. ಹೀಗಿರುವಾಗಲೇ ನಟ ಪ್ರಕಾಶ್ ರೈ ಮತ್ತು ಯಶ್ ಅಪ್ಪು ಹೆಸರಿನಲ್ಲಿ ಜನಪರ ಕೆಲಸದ ಘೋಷಣೆಯೊಂದನ್ನು ಮಾಡಿದರು. ಅದಕ್ಕೆ ಇತರ ನಟರೂ ಸಾಥ್ ನೀಡಿದರು.
ರಾಜ್ಯದ ಪ್ರತಿ ಜಿಲ್ಲೆಗೊಂದು ಆಂಬುಲೆನ್ಸ್ ಸೇವೆ..
ವೇದಿಕೆ ಮೇಲೆ ಮೊದಲಿಗೆ ನಟ ಪ್ರಕಾಶ್ ರೈ ಈ ವಿಚಾರವನ್ನು ಹೇಳುತ್ತಿದ್ದಂತೆ, ನಟ ಶಿವರಾಜ್ಕುಮಾರ್ ಸಹ ತಮ್ಮ ಕುಟುಂಬದಿಂದ ಒಂದು ಆಂಬುಲೆನ್ಸ್ ನೀಡುವುದಾಗಿ ಹೇಳಿದರು. ಬಳಿಕ ಟಾಲಿವುಡ್ ನಟ ಚಿರಂಜೀವಿ ಮತ್ತು ಕಾಲಿವುಡ್ ಹೀರೋ ಸೂರ್ಯ ಸಹ ಆಂಬುಲೆನ್ಸ್ ನೀಡುವುದಾಗಿ ಹೇಳಿದರು. ಇದಕ್ಕೆ ಯಶ್ ಸಹ ಸಾಥ್ ನೀಡಿದರು. ‘ಬಡವರಿಗೋಸ್ಕರ ಕರ್ನಾಟದಲ್ಲಿ ಅಪ್ಪು ಎಕ್ಸ್ಪ್ರೆಸ್ ಎಂಬ ಆಂಬ್ಯುಲೆನ್ಸ್ ಸೇವೆ ಶುರುವಾಗಬೇಕು ಎಂಬುದು ನನ್ನ ಆಸೆ ಎಂದು ಶಿವಣ್ಣನ ಬಳಿ ಹೇಳಿದೆ. ಅವರ ಕುಟುಂಬದ ಕಡೆಯಿಂದ ಒಂದು ಆಂಬ್ಯುಲೆನ್ಸ್ ನೀಡಿದರು’ ಎಂದು ಪ್ರಕಾಶ್ ರೈ ಹೇಳಿಕೊಂಡರು.
ಪ್ರತಿ ಜಿಲ್ಲೆಗೆ ಒಂದೊಂದು ಆಂಬ್ಯುಲೆನ್ಸ್
‘ಇಡೀ ಕರುನಾಡಿಗೆ ಪ್ರಕಾಶ್ ರಾಜ್ ಅವರು ಆಂಬ್ಯುಲೆನ್ಸ್ ನೀಡಲು ಮುಂದಾಗಿರುವುದು ಈಗ ಗೊತ್ತಾಯಿತು. ಈಗ ಎಷ್ಟು ಆಂಬ್ಯುಲೆನ್ಸ್ ಆಗಿದೆಯೋ ಅದನ್ನು ಬಿಟ್ಟು ಇನ್ನುಳಿದ ಎಲ್ಲ ಜಿಲ್ಲೆಗಳಿಗೂ ನಾನು ಮತ್ತು ಕೆವಿಎನ್ ಪ್ರೊಡಕ್ಷನ್ನವರು ಜೊತೆ ಸೇರಿ ಆಂಬ್ಯುಲೆನ್ಸ್ ನೀಡುತ್ತೇನೆ. ಅಪ್ಪು ಅವ್ರು ವ್ಯಕ್ತಿಯಲ್ಲ ಶಕ್ತಿ.. ಕನಸು ನನಸಾಗಬೇಕು’ ಎಂದು ಯಶ್ ಸಹ ಭರವಸೆ ನೀಡಿದರು.
ಅಶ್ವಿನಿ ಪುನೀತ್ ಮತ್ತೆ ಭಾವುಕ..
ಇನ್ನು ಹತ್ತು ಹಲವು ವಿಶೇಷತೆಗಳಿಂದ ಕೂಡಿದ ಪುನೀತ ಪರ್ವ ಕಾರ್ಯಕ್ರಮದಲ್ಲಿ ದಕ್ಷಿಣದ ಕಲಾವಿದರು ಮಾತ್ರವಲ್ಲದೆ, ಬಾಲಿವುಡ್ ಬಿಗ್ ಬಿ ಅಮಿತಾಬ್ ಸಹ ವಿಡಿಯೋ ಮೂಲಕ ಪುನೀತ್ ಅವರನ್ನು ನೆನಪು ಮಾಡಿಕೊಂಡರು. ನಟಿಯರಾದ ರಮ್ಯಾ, ಅದಿತಿ ಪ್ರಭುದೇವ ವೇದಿಕೆ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಶಿವಣ್ಣ ಸಹ ಕುಣಿದು ಅಪ್ಪುವನ್ನು ಎಲ್ಲರೂ ಸೆಲೆಬ್ರೇಟ್ ಮಾಡೋಣ ಎಂದು ಮಗದೊಮ್ಮೆ ಹೇಳಿಕೊಂಡರು. ಸಂಭ್ರಮದ ಈ ಕ್ಷಣದಲ್ಲಿ ಪುನೀತ್ ಪತ್ನಿ ಅಶ್ವಿನಿ ಮತ್ತೆ ಕಣ್ಣೀರಾದರು. ವಿಜಯ್ ಪ್ರಕಾಶ್ ಅವರು ಬೊಂಬೆ ಹೇಳುತೈತೆ.. ಹಾಡನ್ನು ಹಾಡುತ್ತಿದ್ದಂತೆ, ವೇದಿಕೆ ಮೇಲಿದ್ದ ಅಶ್ವಿನಿ ಭಾವುಕರಾಗಿ ಹೊರ ನಡೆದರು.