Brundavana Serial: ಅಪಾಯದಿಂದ ಪಾರಾದ್ರು ಸುಧಾಮೂರ್ತಿ; ಮಳ್ಳಿಯಂತೆ ಪುಷ್ಪಾ ಮನೆಯಿಂದ ಚಿನ್ನ ಕದ್ದು ತಂದ್ಲು ಗಿರಿಜಾ
Brindavana Kannada Serial Today Episode Mar 1: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್ನಲ್ಲಿ ಮನೆಯವರೆಲ್ಲರ ಹಾರೈಕೆಯಂತೆ ಸುಧಾಮೂರ್ತಿ ಅಪಾಯದಿಂದ ಪಾರಾಗಿ ಕಣ್ಣು ತೆರೆಯತ್ತಾರೆ. ಇತ್ತ ಪುಷ್ಪಾ ಮನೆಯಿಂದ ಕದ್ದು ತಂದ ಚಿನ್ನವನ್ನ ಮಾರಾಟ ಮಾಡುವ ಪ್ಲಾನ್ ಮಾಡಿದ್ದಾಳೆ ಗಿರಿಜಾ.

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.1) ಸಂಚಿಕೆಯಲ್ಲಿ ಮನೆಯಲ್ಲಿ ಎಲ್ಲರೂ ಅಜ್ಜಮ್ಮ ಯಾವಾಗ ಕಣ್ಣು ಬಿಡುತ್ತಾರೆ ಎಂದು ಕಾಯುತ್ತಿದ್ದರೆ ಪುಷ್ಪಾ ಮಾತ್ರ ಮನೆಯವರ ಹೊಟ್ಟೆಯ ಬಗ್ಗೆ ಚಿಂತಿಸಿ ಅಡುಗೆ ಮಾಡಲು ನಿರತಳಾಗಿರುತ್ತಾಳೆ. ಅದನ್ನು ನೋಡಿದ ಆಕಾಶ್ ಮಾವ ಸತ್ಯಮೂರ್ತಿ ಮನೆಯವರ ಮುಂದೆ ಬಂದು ಪುಷ್ಪಾಳ ಬಗ್ಗೆ ಮತ್ತೆ ಇಲ್ಲದನ್ನು ಹೇಳಿ ತಲೆ ಕೆಡಿಸುತ್ತಾರೆ. ʼನಾವೆಲ್ಲ ಇಲ್ಲಿ ಅತ್ತೆ (ಸುಧಾಮೂರ್ತಿ) ಯಾವಾಗ ಕಣ್ಣು ಬಿಡ್ತಾರೆ ಅಂತಾ ಕಾಯ್ತಾ ಇದ್ರೆ, ಆ ಪುಷ್ಪಾ ಅಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ನೋಡ್ತಿದ್ದಾಳೆ, ಎಲ್ಲೋ ಇರುವ ದರಿದ್ರವನ್ನು ಮನೆಗೆ ತಂದುಕೊಂಡಿದ್ದಕ್ಕೆ ಅತ್ತೆಗೆ ಈ ರೀತಿ ಆಗಿದ್ದುʼ ಎಂದು ವ್ಯಂಗ್ಯವಾಡಿ ಮಾತನಾಡುತ್ತಾರೆ.
ಮನೆಗೆ ವಾಪಾಸ್ ಬಂದ್ಲು ಗಿರಿಜಾ
ಮೂರು ದಿನಗಳ ಕಾಲ ಪುಷ್ಪಾಳ ಮನೆಯಲ್ಲೇ ಠಿಕಾಣಿ ಹೂಡಿದ್ದ ಗಿರಿಜಾ ಕೊನೆಗೂ ತನ್ನ ಮನೆಗೆ ಮರಳುತ್ತಾಳೆ. ಅಮ್ಮ ಮನೆಗೆ ಬಂದ ಖುಷಿಯಲ್ಲಿ ಮಗಳು ಅಮ್ಮನ ಬಳಿಗೆ ಓಡಿ ಹೋಗಿ ಅಮ್ಮ ಪೇಟೆಯಿಂದ ನಂಗೇನು ತಂದೆ ಎಂದು ಬ್ಯಾಗ್ ಮುಟ್ಟಲು ನೋಡಿದಾಗ ಗಾಬರಿಗೊಳ್ಳುವ ಗಿರಿಜಾ ಮಗಳ ಮೇಲೆ ರೇಗುತ್ತಾಳೆ. ಇದರಿಂದ ಕೋಪಗೊಳ್ಳುವ ಅಪ್ಪಣ್ಣ (ಗಿರಿಜಾಳ ಗಂಡ, ಪುಷ್ಪಾಳ ಸಹೋದರ), ಮಗುವಿನ ಮೇಲೆ ಯಾಕೆ ರೇಗ್ತಿಯಾ, ನಿನ್ನ ಬ್ಯಾಗ್ನಲ್ಲಿ ಏನಾದ್ರೂ ಒಡವೆ ವೈಡೂರ್ಯ ಇದ್ಯಾ ಅಂತ ಪ್ರಶ್ನೆ ಮಾಡ್ತಾನೆ, ಅದರಿಂದ ತಬ್ಬಿಬ್ಬಾಗುವ ಗಿರಿಜಾ ʼಬ್ಯಾಗ್ನಲ್ಲಿ ಏನಿರುತ್ತೆ, ನಾನು ಹೋಗುವಾಗ ತೆಗೆದುಕೊಂಡು ಹೋದ ಬಟ್ಟೆ ಇದೆ ಅಷ್ಟೇ, ಬೇರೆನೂ ಇಲ್ಲʼ ಎಂದು ಮುಗ್ಧಳಂತೆ ವರ್ತಿಸುತ್ತಾಳೆ, ಅಲ್ಲದೇ ಅಪ್ಪಣ್ಣನಿಗೆ ಬ್ಯಾಗ್ ಮುಟ್ಟಲು ಕೂಡ ಬಿಡುವುದಿಲ್ಲ.
ಕದ್ದು ಊಟ ತಿನ್ನುವ ಸತ್ಯಮೂರ್ತಿ
ಇತ್ತ ಪುಷ್ಪಾ ಅಡುಗೆ ಮಾಡಿ ಮಕ್ಕಳಿಗೆ ಊಟ ಮಾಡಿಸಲು ತಯಾರಿ ಮಾಡುತ್ತಿರುತ್ತಾಳೆ, ಆ ಹೊತ್ತಿಗೆ ಅಲ್ಲಿಗೆ ಬರುವ ಸತ್ಯಮೂರ್ತಿ ʼಹೊಟ್ಟೆ ಹಸಿವಾಗ್ತಾ ಇದೆ ಏನ್ ಮಾಡೋದುʼ ಅಂತ ತನಗೆ ತಾನೇ ಹೇಳಿಕೊಳ್ಳುತ್ತಾರೆ. ಊಟದ ಟೇಬಲ್ ಕಡೆಯಿಂದ ಹರಡುವ ಘಮ ಅವರನ್ನು ಅಲ್ಲಿಗೆ ಎಳೆದುಕೊಂಡು ಬರುತ್ತದೆ. ಆದರೆ ಅಲ್ಲಿ ಮಕ್ಕಳು ಕೂತಿದ್ದು, ಹೇಗಾದ್ರೂ ಊಟ ಮಾಡ್ಬೇಕು ಎಂದು ಮಕ್ಕಳಿಗೆ ಅನ್ನದ ಬಗ್ಗೆ ಲೆಕ್ಚರ್ ಕೊಡುತ್ತಾರೆ. ಮಾತ್ರವಲ್ಲ ಪ್ಲೇಟ್ನಲ್ಲಿ ಹಾಕಿದ್ದ ಊಟವನ್ನು ಕದ್ದು ತೆಗೆದುಕೊಂಡು ಹೋಗಿ ತಿಂದು ತೇಗುತ್ತಾರೆ.
ಚಿನ್ನ ಸೇಲ್ ಮಾಡಲು ಗಿರಿಜಾ-ಲಲಿತಾ ಪ್ಲಾನ್
ಗಿರಿಜಾ ಮನೆಗೆ ಬಂದಿದ್ದು ಗೊತ್ತಾಗಿದ್ದೇ ತಡ ಅವಳ ಮನೆಗೆ ಓಡಿ ಬರುವ ಲಲಿತಾ ʼಗಿರಿಜಾ ಈ ಸಲನೂ ಎರಡು ಕೋಟಿ ತಂದಿದ್ದೀಯಾʼ ಅಂತ ಕೇಳ್ತಾಳೆ, ಆಗ ಗಿರಿಜಾ ʼಈ ಸಲ 50 ಲಕ್ಷ ತರೋಣ ಅಂತ ಎಲ್ಲಾ ಪ್ಲಾನ್ ಮಾಡಿದ್ದೆ, ಆದ್ರೆ ಅಷ್ಟ್ರಲ್ಲಿ ಆಕಾಶಪ್ಪ ಎಲ್ಲಾದಕ್ಕೂ ಕಲ್ ಹಾಕ್ದಾ, ಅದಕ್ಕೆ ಸಿಕ್ಕಿರೋ ಚಿನ್ನ ಎತ್ಕೊಂಡ್ ಬಂದೆ, ಪುಷ್ಪಾಳ ಬಳಿ ಅತ್ತು ಕರೆದು ಒಂದಿಷ್ಟು ಚಿನ್ನ ತಂದಿದ್ರೆ, ಅವಳಿಗೆ ಗೊತ್ತಾದ್ದೆ ಇರೋ ಹಾಗೆ ಒಂದಿಷ್ಟು ಎತ್ತಾಕೊಂಡ್ ಬಂದೆʼ ಅಂತಾಳೆ. ಲಲಿತಾ ಗಿರಿಜಾ ಬಳಿ ಒಂದೇ ಒಂದ್ ಸಲ ಚಿನ್ನ ತೋರ್ಸು ಯಾವ ಡಿಸೈನ್ ಒಡವೆಗಳು ನೋಡೋಣ ಅಂತ ಆಸೆಯಲ್ಲಿ ಹೇಳ್ತಾಳೆ, ಗಿರಿಜಾ ಚಿನ್ನ ತಂದು ಇನ್ನೇನು ಲಿಲಿತಾ ಮುಂದೆ ಇಡಬೇಕು, ಅಷ್ಟೊತ್ತಿಗೆ ಸರಿಯಾಗಿ ಅಪ್ಪಣ್ಣ ಮಗಳ ಜೊತೆ ಮನೆಯೊಳಗೆ ಬರುತ್ತಾನೆ. ಅಡುಗೆಮನೆಯಲ್ಲಿ ಚಿನ್ನವನ್ನು ಅವಿತು ಇಡುತ್ತಾಳೆ ಗಿರಿಜಾ. ಗಿರಿಜಾ ಹಾಗೂ ಲಲಿತಾರ ವರ್ತನೆ ಅಪ್ಪಣ್ಣನಿಗೆ ಅನುಮಾನ ಮೂಡಿಸುತ್ತದೆ.
ಮಧ್ಯರಾತ್ರಿ ಹೊತ್ತಿಗೆ ಗಿರಿಜಾಳಿಗೆ ಚಿನ್ನ ಹಾಕಿ ನೋಡುವ ಮನಸ್ಸಾಗುತ್ತದೆ. ನಿಧಾನಕ್ಕೆ ಅಡುಗೆಮನೆಗೆ ಹೋಗಿ ಬಚ್ಚಿಟ್ಟ ಚಿನ್ನವನ್ನು ತೆಗೆಯುತ್ತಾಳೆ. ಅಷ್ಟೊತ್ತಿಗೆ ಸರಿಯಾಗಿ ಅಪ್ಪಣ್ಣನಿಗೆ ಎಚ್ಚರವಾಗುತ್ತದೆ. ಅಡುಗೆಮನೆಯಲ್ಲೇ ಮಲಗಿದಂತೆ ನಾಟಕ ಮಾಡುವ ಗಿರಿಜಾಳನ್ನು ಬೈದು ಎಬ್ಬಿಸುತ್ತಾನೆ ಅಪ್ಪಣ್ಣ.
ನಿಧಾನಕ್ಕೆ ಕಣ್ಣು ತೆರೆಯುವ ಸುಧಾಮೂರ್ತಿ
ಸುಧಾಮೂರ್ತಿ ಮರುದಿನ ನಿಧಾನಕ್ಕೆ ಕಣ್ಣು ಬಿಡುತ್ತಾರೆ. ಆಗ ಮನೆಯವರೆಲ್ಲಾ ಖುಷಿಯಿಂದ ಅವರ ಕೋಣೆಗೆ ಓಡಿ ಬರುತ್ತಾರೆ. ಅಲ್ಲದೇ ನಿನ್ನೆ ಆಗಿರುವ ಘಟನೆಯ ಬಗ್ಗೆ ಮನೆಯವರು ಸುಧಾಮೂರ್ತಿಯ ಬಳಿ ವಿಚಾರಿಸುತ್ತಾರೆ. ಆಗ ಸುಧಾಮೂರ್ತಿ ನಡೆದ ಘಟನೆಯನ್ನು ವಿವರಿಸುತ್ತಾರೆ. ಕೋಣೆಯ ಬಳಿ ಪುಷ್ಪಾ ಬಂದ್ಲು ಎಂದು ಹೇಳುವಲ್ಲಿಗೆ ಇಂದಿನ ಸಂಚಿಕೆ ಮುಗಿಯುತ್ತದೆ.
ಪುಷ್ಪಾ ತನ್ನ ಜೀವ ಉಳಿಸಲು ನೋಡಿದ್ದನ್ನು ಸುಧಾಮೂರ್ತಿ ಮನೆಯವರಿಗೆ ಹೇಳುವ ಮೂಲಕ ಪುಷ್ಪಾಳ ಮೇಲಿನ ಅಪವಾದ ಹೋಗುವಂತೆ ಮಾಡ್ತಾರಾ, ಮೈ ತುಂಬಾ ಚಿನ್ನ ಹಾಕಿ ನೋಡುವ ಗಿರಿಜಾ ಆಸೆ ನೆರವೇರುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನೋಡೋಣ.
(This copy first appeared in Hindustan Times Kannada website. To read more like this please logon to kannada.hindustantimes.com)
