ಮುದ್ದು ಸೊಸೆ: ಮುದ್ದಿನ ಮೇಕೆಯನ್ನು ಉಳಿಸಿಕೊಡುವಂತೆ ಮನವಿ ಮಾಡಿದ ವಿದ್ಯಾ; ಮನದನ್ನೆಗೆ ಕೊಟ್ಟ ಮಾತು ಉಳಿಸಿಕೊಳ್ತಾನಾ ಭದ್ರೇಗೌಡ?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಮುದ್ದಿನ ಮೇಕೆಯನ್ನು ಉಳಿಸಿಕೊಡುವಂತೆ ಮನವಿ ಮಾಡಿದ ವಿದ್ಯಾ; ಮನದನ್ನೆಗೆ ಕೊಟ್ಟ ಮಾತು ಉಳಿಸಿಕೊಳ್ತಾನಾ ಭದ್ರೇಗೌಡ?

ಮುದ್ದು ಸೊಸೆ: ಮುದ್ದಿನ ಮೇಕೆಯನ್ನು ಉಳಿಸಿಕೊಡುವಂತೆ ಮನವಿ ಮಾಡಿದ ವಿದ್ಯಾ; ಮನದನ್ನೆಗೆ ಕೊಟ್ಟ ಮಾತು ಉಳಿಸಿಕೊಳ್ತಾನಾ ಭದ್ರೇಗೌಡ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಎಪಿಸೋಡ್‌ 6ರಲ್ಲಿ ಶಿವರಾಮೇಗೌಡ ತನ್ನ ಮಗನಿಗಾಗಿ ಅದ್ದೂರಿ ಮೆರವಣಿಗೆ ಮೂಲಕ ಪೂಜೆಗೆ ಸಿದ್ದತೆ ಮಾಡುತ್ತಾನೆ. ಬಲಿಯಾಗುತ್ತಿರುವ ಮೇಕೆಯನ್ನು ಉಳಿಸಿಕೊಡುವಂತೆ ಭದ್ರೇಗೌಡನ ಬಳಿ ವಿದ್ಯಾ ಮನವಿ ಮಾಡುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ ಧಾರಾವಾಹಿ ಏಪ್ರಿಲ್ 21ರ ಸಂಚಿಕೆ
ಮುದ್ದು ಸೊಸೆ ಧಾರಾವಾಹಿ ಏಪ್ರಿಲ್ 21ರ ಸಂಚಿಕೆ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 6ನೇ ಎಪಿಸೋಡ್‌ ಕಥೆ ಹೀಗಿದೆ. ಶೀತದಿಂದ ಬಳಲುತ್ತಿದ್ದ ಭದ್ರೇಗೌಡನಿಗೆ ವಿದ್ಯಾ ನಾಟಿ ಸೊಪ್ಪು ತಂದುಕೊಡುತ್ತಾಳೆ. ಅದರಿಂದ ಭದ್ರನಿಗೆ ನೆಗಡಿ ವಾಸಿಯಾಗುತ್ತದೆ. ತಾನು ಮಾಡಿದ ತಪ್ಪನ್ನು ಕ್ಷಮಿಸಿಬಿಡಿ ಎಂದು ವಿದ್ಯಾ ಕ್ಷಮೆ ಕೇಳುತ್ತಾಳೆ. ಪ್ರೀತಿಯ ಹುಡುಗಿ ಹೆಸರು ವಿದ್ಯಾ ಎಂದು ತಿಳಿದು ಭದ್ರ ಖುಷಿಯಾಗುತ್ತಾನೆ. ಮಗಳು ಮಾಡಿದ ಅವಾಂತರ ತಿಳಿದು ರತ್ನ ಇಬ್ಬರೂ ಹೆಣ್ಣು ಮಕ್ಕಳಿಗೂ ಹೊಡೆಯುತ್ತಾಳೆ.

ಪೂಜೆಗೆ ಇಡೀ ಊರನ್ನೇ ಆಹ್ವಾನಿಸಿದ ಶಿವರಾಮೇಗೌಡ

ತಾನು ಪ್ರೀತಿಯಿಂದ ಸಾಕಿದ ಮೇಕೆ ಗೋಪಾಲನನ್ನು ಗೌಡರ ಮನೆಯವರು ಪೂಜೆಯಲ್ಲಿ ಬಲಿ ಕೊಡುತ್ತಿದ್ದಾರೆ ಎಂದು ತಿಳಿದ ವಿದ್ಯಾ ಬೇಸರಗೊಳ್ಳುತ್ತಾಳೆ. ತನ್ನ ನೋವನ್ನು ತಂಗಿ ಸರೂ ಬಳಿ ಹೇಳಿಕೊಳ್ಳುತ್ತಾಳೆ. ಇತ್ತ ಶಿವರಾಮೇಗೌಡನ ಮನೆಯಲ್ಲಿ ಪೂಜೆ ಆರಂಭವಾಗುತ್ತದೆ. ಇಬ್ಬರು ವ್ಯಕ್ತಿಗಳು ಮೇಕೆಯನ್ನು ಹಿಡಿದು ತರುತ್ತಾರೆ. ಶಿವರಾಮೇಗೌಡ ಅದಕ್ಕೆ ಪೂಜೆ ಮಾಡಿ, ಇದನ್ನೆಲ್ಲಾ ನನ್ನ ಮಗನಿಗಾಗಿ ಮಾಡುತ್ತಿದ್ದೇನೆ, ಅವನ ಮದುವೆ ವಿಚಾರವಾಗಿ ಎಲ್ಲವೂ ಒಳ್ಳೆಯದಾಗುವಂತೆ ಮಾಡು ಎಂದು ಬೇಡಿಕೊಳ್ಳುತ್ತಾನೆ. ಮೋನಾ ಕೂಡಾ ಭದ್ರೇಗೌಡನಿಗೆ ಒಳ್ಳೆಯದಾಗುವಂತೆ ಪ್ರಾರ್ಥಿಸುತ್ತಾಳೆ. ಆದರೆ ಈಶ್ವರಿ ಮಾತ್ರ ಈ ಪೂಜೆಗೆ ವಿಘ್ನ ಎದುರಾಗಲಿ ಎಂದು ಬೇಡಿಕೊಳ್ಳುತ್ತಾಳೆ.

ಶಿವರಾಮೇಗೌಡ ಪೂಜೆಯನ್ನು ದೊಡ್ಡ ಜಾತ್ರೆಯಂತೆ ಏರ್ಪಡಿಸಿರುತ್ತಾನೆ. ಊರ ಜನರನ್ನೆಲ್ಲಾ ಆಹ್ವಾನಿಸುತ್ತಾನೆ. ಶಿವರಾಮೇಗೌಡ ಪರವನ್ನೇ ಇಷ್ಟು ಜೋರಾಗಿ ಮಾಡುತ್ತಿದ್ದಾರೆ ಎಂದು ಊರ ಜನರು ಮಾತನಾಡಿಕೊಳ್ಳುತ್ತಾರೆ. ಮುಂದೆ ಎಂಎಲ್‌ಎ ಆಗುವವರು ಇಷ್ಟೆಲ್ಲಾ ಗಿಮಿಕ್‌ ಮಾಡದಿದ್ದರೆ ಹೇಗೆ ಎಂದು ಒಬ್ಬಾತ ಹೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಮತ್ತೊಬ್ಬ ವ್ಯಕ್ತಿ ಶಿವರಾಮೇಗೌಡರು ಮಗನಿಗಾಗಿ ಇದೆಲ್ಲಾ ಮಾಡುತ್ತಿರುವುದು ಎನ್ನುತ್ತಾನೆ. ಊರ ಜನರ ಕಣ್ಣು ಶಿವರಾಮೇಗೌಡ, ಭದ್ರೇಗೌಡನ ಮೇಲಿದ್ದರೆ ಭದ್ರನ ಕಣ್ಣು ವಿದ್ಯಾಗಾಗಿ ಹುಡುಕುತ್ತಿರುತ್ತದೆ. ಊರ ಜನರೆಲ್ಲಾ ಬಂದಿದ್ದಾರೆ. ಹಾಗಾದರೆ ವಿದ್ಯಾ ಕೂಡಾ ಬಂದಿರುತ್ತಾಳೆ ಎಂದುಕೊಳ್ಳುತ್ತಾನೆ.

ಮೇಕೆಯನ್ನು ಉಳಿಸಿಕೊಡಿ ಎಂದು ಕೈ ಮುಗಿದು ಮನವಿ ಮಾಡಿದ ವಿದ್ಯಾ

ಗೌಡರ ಮನೆ ಪೂಜೆಗೆ ಹೋಗುತ್ತೇವೆ ಎಂದು ಅಮ್ಮನ ಬಳಿ ಹೇಳಿ ವಿದ್ಯಾ ಹಾಗೂ ಸರೂ ಪೂಜೆ ನಡೆಯುತ್ತಿರುವ ಸ್ಥಳಕ್ಕೆ ಬರುತ್ತಾರೆ. ದೂರದಲ್ಲಿ ಕಟ್ಟಿ ಹಾಕಿದ್ದ ತನ್ನ ಪ್ರೀತಿಯ ಮೇಕೆಯನ್ನು ನೋಡಿ ವಿದ್ಯಾ ಕಣ್ಣೀರಿಡುತ್ತಾಳೆ. ಅಳುತ್ತಿರುವ ವಿದ್ಯಾಳನ್ನು ಭದ್ರೇಗೌಡ ನೋಡುತ್ತಾನೆ. ಏನಾಗಿರಬಹುದು ಕೇಳೋಣ ಎಂದುಕೊಂಡು ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಮಗನನ್ನು ತಡೆಯುವ ಭದ್ರ, ನಿನಗಾಗಿ ನಾನು ಪೂಜೆ ಮಾಡಿಸುತ್ತಿರುವುದು, ನೀನು ಇಲ್ಲೇ ಇರು ಎಲ್ಲೂ ಹೋಗಬೇಡ ಎನ್ನುತ್ತಾನೆ. ಆದರೂ ಭದ್ರ ಅಪ್ಪನ ಕಣ್ತಪ್ಪಿಸಿ ವಿದ್ಯಾ ಬಳಿ ಹೋಗುತ್ತಾನೆ.

ನಿಮ್ಮ ಕಡೆಯವರು ನಮ್ಮ ಗೋಪಾಲನನ್ನು ಕಟ್ಟಿ ಹಾಕಿದ್ದಾರೆ ದಯವಿಟ್ಟು ಬಿಟ್ಟುಬಿಡುವಂತೆ ಹೇಳಿ ಎಂದು ಮನವಿ ಮಾಡುತ್ತಾಳೆ. ಗೋಪಾಲ ಎಂದರೆ ವ್ಯಕ್ತಿ ಎಂದು ಕ್ವಾಟ್ಲೆ ಹಾಗೂ ಭದ್ರ ತಿಳಿಯುತ್ತಾರೆ. ಅದು ಮೇಕೆ ಎಂದು ತಿಳಿದು ಅವರಿಗೆ ನಗು ಬರುತ್ತದೆ. ಆದರೆ ವಿದ್ಯಾ ಅಳುವುದನ್ನು ನೋಡಿ ಭದ್ರನಿಗೆ ಕನಿಕರ ಉಂಟಾಗುತ್ತದೆ. ನೀವು ಅಳಬೇಡಿ, ನಿಮ್ಮ ಗೋಪಾಲನನ್ನು ನಾನು ಉಳಿಸಿಕೊಡುತ್ತೇನೆ ಎಂದು ಹೇಳಿ ಪೂಜೆ ನಡೆಯುವ ಸ್ಥಳಕ್ಕೆ ಬರುತ್ತಾನೆ. ಆಗಲೇ ಅದು ಬಲಿಗೆ ಸಿದ್ಧವಿದೆ, ಆ ಹುಡುಗಿ ಕಣ್ಣೀರು ಒರೆಸಲು ನೀನು ಮನೆಯವರಿಗೆ ನೋವು ಕೊಡಬೇಡ ಎಂದು ಕ್ವಾಟ್ಲೆ ಹೇಳುತ್ತಾನೆ.

ವಿದ್ಯಾಗೆ ಕೊಟ್ಟ ಮಾತನ್ನು ಭದ್ರಾ ಉಳಿಸಿಕೊಳ್ಳುತ್ತಾನಾ? ಅಪ್ಪನಿಗೆ ಎದುರು ಮಾತನಾಡದೆ ಸುಮ್ಮನಾಗುತ್ತಾನಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.