ಮುದ್ದು ಸೊಸೆ: ಬಾಯಿ ಚಪ್ಪರಿಸಿಕೊಂಡು ಬಾಡೂಟ ಬಾರಿಸಿದ ವಿದ್ಯಾ; ಎಳೆನಿಂಬೆಕಾಯಿ ಮಾತು ಕೇಳಿ ಕೆಟ್ಟೆ ಎಂದುಕೊಂಡ ಭದ್ರೇಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಬಾಯಿ ಚಪ್ಪರಿಸಿಕೊಂಡು ಬಾಡೂಟ ಬಾರಿಸಿದ ವಿದ್ಯಾ; ಎಳೆನಿಂಬೆಕಾಯಿ ಮಾತು ಕೇಳಿ ಕೆಟ್ಟೆ ಎಂದುಕೊಂಡ ಭದ್ರೇಗೌಡ

ಮುದ್ದು ಸೊಸೆ: ಬಾಯಿ ಚಪ್ಪರಿಸಿಕೊಂಡು ಬಾಡೂಟ ಬಾರಿಸಿದ ವಿದ್ಯಾ; ಎಳೆನಿಂಬೆಕಾಯಿ ಮಾತು ಕೇಳಿ ಕೆಟ್ಟೆ ಎಂದುಕೊಂಡ ಭದ್ರೇಗೌಡ

Muddu Sose:ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಎಪಿಸೋಡ್‌ 7ರಲ್ಲಿ ವಿದ್ಯಾ ಸಾಕಿದ ಮೇಕೆ ಗೋಪಾಲ ದೇವರ ಪೂಜೆಗೆ ಬಲಿಯಾಗೇಬಿಡುತ್ತಾನೆ. ಇದರಿಂದ ವಿದ್ಯಾ ಬಹಳ ನೊಂದುಕೊಂಡಿರಬಹುದು ಎಂದು ತಿಳಿದ ಭದ್ರ, ಅವಳು ಬಾಡೂಟ ಸವಿಯುತ್ತಿರುವುದನ್ನು ನೋಡಿ ಕೋಪಗೊಳ್ಳುತ್ತಾನೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಬಾಯಿ ಚಪ್ಪರಿಸಿಕೊಂಡು ಬಾಡೂಟ ಬಾರಿಸಿದ ವಿದ್ಯಾ; ಎಳೆನಿಂಬೆಕಾಯಿ ಮಾತು ಕೇಳಿ ಕೆಟ್ಟೆ ಎಂದುಕೊಂಡ ಭದ್ರೇಗೌಡ
ಮುದ್ದು ಸೊಸೆ: ಬಾಯಿ ಚಪ್ಪರಿಸಿಕೊಂಡು ಬಾಡೂಟ ಬಾರಿಸಿದ ವಿದ್ಯಾ; ಎಳೆನಿಂಬೆಕಾಯಿ ಮಾತು ಕೇಳಿ ಕೆಟ್ಟೆ ಎಂದುಕೊಂಡ ಭದ್ರೇಗೌಡ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 7ನೇ ಎಪಿಸೋಡ್‌ ಕಥೆ ಹೀಗಿದೆ. ತಮ್ಮ ಮನೆಯ ಮೇಕೆಯನ್ನು ಹೇಗಾದರೂ ಮಾಡಿ ಉಳಿಸಿಕೊಡುವಂತೆ ವಿದ್ಯಾ ಮನವಿ ಮಾಡಿಕೊಳ್ಳುತ್ತಾಳೆ. ಒಂದು ಕಡೆ ವಿದ್ಯಾ ಅಳು, ಅವಳಿಗೆ ಕೊಟ್ಟ ಮಾತು, ಮತ್ತೊಂದು ಕಡೆ ಅಪ್ಪನ ಪ್ರೀತಿ ನಡುವೆ ಸಿಲುಕಿ ಭದ್ರೇಗೌಡ ಒದ್ದಾಡುತ್ತಾನೆ. ಮೇಕೆ ಉಳಿಸದಿದ್ದರೆ ವಿದ್ಯಾಗೆ ನೋವಾಗುತ್ತದೆ, ಅದನ್ನು ಉಳಿಸಲು ಹೋದರೆ ಅಪ್ಪ ನನ್ನ ಬಗ್ಗೆ ಬೇಸರ ಮಾಡಿಕೊಳ್ಳುತ್ತಾನೆ ಏನು ಮಾಡುವುದು ಎಂದು ಭದ್ರ ಯೋಚಿಸುತ್ತಾನೆ.

ಪೂಜೆಗೆ ಬಲಿಯಾಗಿ ಜನರಿಗೆ ಆಹಾರವಾದ ಗೋಪಾಲ

ಅದೇ ಸಮಯಕ್ಕೆ ಪೂಜೆ ಮುಗಿಯುತ್ತದೆ. ಮೇಕೆಯನ್ನು ಬಲಿ ಕೊಡಲು ಸಿದ್ಧತೆ ನಡೆಯುತ್ತದೆ. ಆದರೆ ಮೇಕೆ ತಲೆ ಒದರುವುದಿಲ್ಲ. ಇದರಿಂದ ಶಿವರಾಮೇಗೌಡ ಬೇಸರಗೊಳ್ಳುತ್ತಾನೆ. ಮೇಕೆ ತಲೆ ಒದರದಿದ್ದರೆ ಅದನ್ನು ಬಲಿ ಕೊಡುವುದಿಲ್ಲ ಆಗ ವಿದ್ಯಾ ಖುಷಿಯಾಗುತ್ತಾಳೆ ಎಂದು ಭದ್ರೇಗೌಡ ಅಂದುಕೊಳ್ಳುತ್ತಾನೆ. ಮೇಕೆ ಬಲಿ ಕೊಡದಿದ್ದರೆ ಖಂಡಿತ ಶಿವರಾಮೇಗೌಡನ ಮರ್ಯಾದೆ ಹಾಳಾಗುತ್ತದೆ ಎಂದು ಈಶ್ವರಿ ಕೂಡಾ ಖುಷಿಯಾಗುತ್ತಾಳೆ. ಆದರೆ ಮಗನಿಗೆ ಒಳ್ಳೆಯದಾಗಲಿ ಎಂದು ಮಾಡುತ್ತಿರುವ ಪೂಜೆಯಲ್ಲಿ ವಿಘ್ನ ಬರಬಾರದು ಎಂಬ ಕಾರಣಕ್ಕೆ ಶಿವರಾಮೇಗೌಡ ದೇವಿ ಬಳಿ ಪ್ರಾರ್ಥಿಸುತ್ತಾನೆ. ಆಗ ಮೇಕೆ ತಲೆ ಒದರುತ್ತದೆ. ಇದರಿಂದ ಶಿವರಾಮೇಗೌಡನಿಗೆ ಸಮಾಧಾನವಾಗುತ್ತದೆ. ಮೇಕೆ ಬಲಿಯಾಗುತ್ತದೆ.

ಅಡುಗೆ ಎಲ್ಲಾ ತಯಾರಾಗಿದೆ ಎಂದು ಗೋವಿಂದೇಗೌಡ ಬಂದು ಅಣ್ಣನ ಬಳಿ ಹೇಳುತ್ತಾನೆ. ಸರಿ ಹಾಗಾದರೆ ಎಲ್ಲರನ್ನೂ ಊಟಕ್ಕೆ ಕೂರಿಸು, ನಮ್ಮ ಮನೆಯವರೇ ಎಲ್ಲರಿಗೂ ಊಟ ಬಡಿಸಬೇಕು ಎಂದು ಅಜ್ಜಿ ಹೇಳುತ್ತಾರೆ. ಊರ ಜನರು ಊಟಕ್ಕೆ ಕೂರುತ್ತಾರೆ. ಇತ್ತ ವಿದ್ಯಾ ತನ್ನ ಪ್ರೀತಿಯ ಮೇಕೆಯನ್ನು ನೆನಪಿಸಿಕೊಂಡು ಅಳುತ್ತಾಳೆ. ಅವಳ ಬಳಿ ಬರುವ ರತ್ನ ಸಮಾಧಾನ ಮಾಡುತ್ತಾಳೆ. ನಾನು ಮೇಕೆಯನ್ನು ಸಾಕಿದ್ದೇ ಮತ್ತೊಬ್ಬರಿಗೆ ಮಾರಿ ಹಣ ಗಳಿಸಲು, ಗೋಪಾಲ ಅದೃಷ್ಟ ಮಾಡಿದ್ದ ಅದಕ್ಕೆ ಅವನು ದೇವರ ಪೂಜೆಗೆ ಬಲಿಯಾದ. ಆ ತ್ಯಾಗದ ಹಿಂದೆ ಮತ್ತೊಬ್ಬರಿಗೆ ಒಳ್ಳೆಯದಾಗುತ್ತದೆ. ಅದಕ್ಕೆಲ್ಲಾ ಅಳಬಾರದು ಎಂದು ಹೇಳಿ ತನ್ನೊಂದಿಗೆ ಊಟಕ್ಕೆ ಕರೆದೊಯ್ಯುತ್ತಾಳೆ.

ದುಃಖವನ್ನು ಮರೆತು ಬಾಡೂಟ ಸವಿದ ವಿದ್ಯಾ

ಮೇಕೆಯನ್ನು ಉಳಿಸುತ್ತೇನೆ ಎಂದು ವಿದ್ಯಾಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂದು ಭದ್ರ ಸಂಕಟಪಡುತ್ತಾನೆ. ಅವನ ಬಳಿ ಬರುವ ಕ್ವಾಟ್ಲೆ ಎಲ್ಲರೂ ಊಟಕ್ಕೆ ಕೂತಿದ್ದಾರೆ, ಬಂದು ಊಟ ಬಡಿಸು ಎನ್ನುತ್ತಾನೆ. ನಾನು ಇನ್ಮುಂದೆ ಮಾಂಸಾಹಾರ ತಿನ್ನುವುದಿಲ್ಲ ಎಂದು ಭದ್ರ ಹೇಳುತ್ತಾನೆ. ಆ ನಾನ್‌ವೆಜ್‌ ಇಲ್ಲದಿದ್ದರೆ ನಿನ್ನ ಕೈಯ್ಯನ್ನೇ ಕಚ್ಚಿಕೊಳ್ಳುವವನು ನೀನು ಇನ್ಮುಂದೆ ಮಾಂಸ ತಿನ್ನುವುದಿಲ್ಲವೇ ಎಂದು ಕ್ವಾಟ್ಲೆ ಕಾಲೆಳೆಯುತ್ತಾನೆ. ನೀನು ಆ ಹುಡುಗಿ ಮಾತು ಕೇಳಿ ಈ ರೀತಿ ನಿರ್ಧಾರ ತೆಗೆದುಕೊಳ್ಳಬೇಡ ಎನ್ನುತ್ತಾನೆ. ವಿದ್ಯಾ ಬಳಿ ಕ್ಷಮೆ ಕೇಳಬೇಕು, ಅವಳು ಯಾವ ಮರದ ಕೆಳಗೆ ಕುಳಿತು ಅಳುತ್ತಿದ್ದಾಳೋ ಏನೋ ಎಂದು ಭದ್ರ ಹೇಳುತ್ತಾನೆ. ವಿದ್ಯಾ ಏನು ಮಾಡುತ್ತಿದ್ದಾಳೆ ಎಂದು ಗೊತ್ತಿದ್ದ ಕ್ವಾಟ್ಲೆ, ನಾನು ಅವಳ ಬಳಿ ಕರೆದೊಯ್ಯುತ್ತೇನೆ ಬಾ ಎಂದು ಭದ್ರನನ್ನು ಕರೆದೊಯ್ಯುತ್ತಾನೆ.

ಅಲ್ಲಿ ನೋಡಿದರೆ ವಿದ್ಯಾ ತನ್ನ ತಂಗಿ ಹಾಗೂ ಅಮ್ಮನೊಂದಿಗೆ ಕುಳಿತು ಬಾಡೂಟ ಸವಿಯುತ್ತಿರುತ್ತಾಳೆ. ಅದನ್ನು ನೋಡಿ ಭದ್ರನಿಗೆ ಒಮ್ಮೆಲೇ ಕೋಪ ಬರುತ್ತದೆ. ಎಲಾ ಇವಳಾ, ಗೋಪಾಲ, ಗೋಪಾಲ ಅಂತ ಕಣ್ಣೀರಿಡುತ್ತಿದ್ದವಳು ಈಗ ನೋಡಿದರೆ ಖುಷಿಯಾಗಿ ತಿನ್ನುತ್ತಿದ್ದಾಳಲ್ಲಾ, ಈ ಎಳೆನಿಂಬೆಕಾಯಿ ಮಾತು ಕೇಳಿ ನಾನು ಕೆಟ್ಟೆ ಎಂದುಕೊಂಡು ತಾನೇ ಹೋಗಿ ಅವಳಿಗೆ ಊಟ ಬಡಿಸುತ್ತಾನೆ. ಭದ್ರನನ್ನು ನೋಡಿದೊಡನೆ ವಿದ್ಯಾ ಗಾಬರಿಯಾಗುತ್ತಾಳೆ. ಬಿಕ್ಕಳಿಸುತ್ತಿದ್ದ ಅವಳಿಗೆ ನೀರು ಕೊಡುವ ಭದ್ರ, ಇರಲಿ ನೆಮ್ಮದಿಯಿಂದ ಊಟ ಮಾಡಿ ಎನ್ನುತ್ತಾನೆ. ಗೋಪಾಲ ರುಚಿಯಾಗಿದ್ದಾನಾ ಎಂದು ಕ್ವಾಟ್ಲೆ ಕೇಳುತ್ತಾನೆ. ವಿದ್ಯಾ ಮುಜುಗರದಿಂದಲೇ ಊಟ ಮುಗಿಸಿ ಹೊರಡುತ್ತಾಳೆ. ಜನರು ತಿಂದ ಎಲೆಯನ್ನು ಭದ್ರ ಒಬ್ಬನೇ ತೆಗೆಯುತ್ತಾನೆ. ವಿದ್ಯಾ ತಿಂದ ಎಲೆ ಕೆಳಗೆ ಮಾಂಗಲ್ಯ ಕ್ಯಾಟರಿಂಗ್‌ ಎಂದು ಬರೆದಿರುವುದನ್ನು ನೋಡಿ, ವಿದ್ಯಾಗೆ ತಾಳಿ ಕಟ್ಟುತ್ತಿರುವಂತೆ ಭದ್ರ ಕನಸು ಕಾಣುತ್ತಾನೆ.

ವಿದ್ಯಾ ಮೇಲೆ ಮನಸ್ಸಾಗಿರುವ ವಿಚಾರವನ್ನು ಭದ್ರ ತನ್ನ ತಂದೆ ಶಿವರಾಮೇಗೌಡನಿಗೆ ಹೇಳುತ್ತಾನಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.