ಮುದ್ದು ಸೊಸೆ: ಮುಗಿಯಿತು ಚಪ್ಪರ ಶಾಸ್ತ್ರ, ಮಲ್ಹಾರ ಪೂಜೆ; ಪೊಲೀಸರಿಗೆ ಫೋನ್ ಮಾಡಿದ್ದು ನಾನೇ ಎಂದು ಒಪ್ಪಿಕೊಳ್ಳಲು ನಿರ್ಧರಿಸಿದ ವಿದ್ಯಾ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 35 ನೇ ಸಂಚಿಕೆಯಲ್ಲಿ, ಪೊಲೀಸರಿಗೆ ಪೋನ್ ಮಾಡಿದ್ದು ನಾನೇ ಎಂದು ಭದ್ರನ ಬಳಿ ನಿಜ ಒಪ್ಪಿಕೊಳ್ಳಲು ವಿದ್ಯಾ ನಿರ್ಧರಿಸುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 35ನೇ ಎಪಿಸೋಡ್ ಕಥೆ ಹೀಗಿದೆ. ತಂದೆ ಶಿವರಾಮೇಗೌಡನಿಗೆ ಭದ್ರ ಹಾಲಿನ ಅಭಿಷೇಕ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾನೆ. 6 ತಿಂಗಳ ನಂತರ ಮತ್ತೆ ಶಿವರಾಮೇಗೌಡ ಅದೇ ಗತ್ತಿನಿಂದ ಸಿಂಹಾಸನದ ಮೇಲೆ ಬಂದು ಕೂರುತ್ತಾನೆ. ಮೊದಲು ಭದ್ರನಿಗೆ ಗೊತ್ತು ಪಡಿಸಿದ ಹುಡುಗಿ ಜೊತೆಯೇ ಅವನ ಮದುವೆ ಎಂದು ಹೇಳುತ್ತಾನೆ. ಅದೇ ದಿನ ವಿದ್ಯಾಗೆ 18 ವರ್ಷ ತುಂಬಿರುವ ವಿಚಾರ ಗೊತ್ತಾಗುತ್ತದೆ. ಎಲ್ಲರೂ ಮತ್ತೆ ದೇವಲಾಪುರಕ್ಕೆ ಹೊರಡುತ್ತಾರೆ. ವಿದ್ಯಾ ಮನೆಗೆ ಭದ್ರ ವಿದ್ಯುತ್ ಅಲಂಕಾರ ಮಾಡಿಸಿ, ಮನೆ ಬಳಿ ಪಟಾಕಿ ಹೊಡೆಸುತ್ತಾನೆ. ವಿದ್ಯಾಗೆ ಬರ್ತ್ಡೇ ಶುಭ ಕೋರಿ ಸೀರೆ, ಹೂವು, ಬಳೆ ಕೊಟ್ಟು ಅದನ್ನು ಧರಿಸಿ ಬರುವಂತೆ ಹೇಳುತ್ತಾನೆ.
ಚೆಲುವನ ಕುಟುಂಬಕ್ಕೆ ಆತಂಕ ಮೂಡಿಸಿದೆ ಭದ್ರನಿಗೆ ಬಂದ ಫೋನ್ ಕರೆ
ಈ ಬಾರಿಯೂ ಮದುವೆ ನಿಲ್ಲುತ್ತದೆ. ಕಾಲ್ಗುಣ ಸರಿ ಇಲ್ಲ ಎಂದು ಗೌಡರ ಮನೆಯವರು ಖಂಡಿತ ಸಂಬಂಧ ಬೇಡವೆಂದು ಹೇಳುತ್ತಾರೆ ಎಂದುಕೊಂಡಿದ್ದ ವಿದ್ಯಾಗೆ ಮತ್ತೆ ಮದುವೆ ಕೆಲಸಗಳು ನಡೆಯುತ್ತಿರುವುದು ಆತಂಕ ಉಂಟು ಮಾಡುತ್ತದೆ. ಅಳಿಯಂದಿರು ವಿದ್ಯಾ ಹುಟ್ಟುಹಬ್ಬಕ್ಕೆ ಮಾಡಿರುವ ಅಲಂಕಾರ ಬಹಳ ಚೆನ್ನಾಗಿದೆ, ಇದುವರೆಗೂ ನಾವು ಈ ರೀತಿ ನೋಡಿರಲಿಲ್ಲ ಎಂದು ಚೆಲುವ ಹಾಗೂ ಕಾಳವ್ವ ಖುಷಿ ಪಡುತ್ತಾರೆ. ರತ್ನ ಕೂಡಾ ಮಗಳು ಒಳ್ಳೆ ಮನೆ ಸೇರುತ್ತಿದ್ದಾಳೆ. ಎಂದು ಖುಷಿಯಾಗುತ್ತಾಳೆ. ವಿದ್ಯಾಗೆ ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಭದ್ರ ಕೊಟ್ಟ ಸೀರೆ ಉಟ್ಟು, ಹೂವು ಮುಡಿದು ಬರುತ್ತಾಳೆ. ಅವಳನ್ನು ನೋಡಿ ಭದ್ರ ಖುಷಿಯಾಗುತ್ತಾನೆ. ವಿದ್ಯಾಗಾಗಿ ಭದ್ರ ಕೇಕ್ ಕೂಡಾ ಆರ್ಡರ್ ಮಾಡಿ ತರಿಸುತ್ತಾನೆ.
ನನ್ನ ಮಗಳು ಹುಟ್ಟಿ 18 ವರ್ಷಗಳಾದರೂ ಇದನ್ನೆಲ್ಲಾ ಮಾಡುತ್ತಿರುವುದು ಇದೇ ಮೊದಲು ಎಂದು ಚೆಲುವ ಹೇಳುತ್ತಾನೆ. ವಿದ್ಯಾ ಕೇಕ್ ಕಟ್ ಮಾಡಿ ಅಮ್ಮನಿಗೆ ತಿನ್ನಿಸಲು ಬರುತ್ತಾಳೆ. ಇದನ್ನೆಲ್ಲಾ ಅರೇಂಜ್ ಮಾಡಿರುವುದು ಅಳಿಯಂದಿರು. ಅವರಿಗೆ ಮೊದಲು ತಿನ್ನಿಸು ಎಂದು ಚೆಲುವ ಹೇಳುತ್ತಾನೆ. ವಿದ್ಯಾ ಹಾಗೂ ಚೆಲುವ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಾರೆ. ಕ್ವಾಟ್ಲೆ ಗ್ರೂಪ್ ಫೋಟೋ ಹಾಗೂ ವಿದ್ಯಾ-ಭದ್ರನ ಫೋಟೋಗಳನ್ನು ಕ್ಲಿಕ್ ಮಾಡುತ್ತಾನೆ. ಅಷ್ಟರಲ್ಲಿ ಭದ್ರನ ಪರಿಯಸ್ಥರೊಬ್ಬರು ಅವನಿಗೆ ಕರೆ ಮಾಡುತ್ತಾರೆ. ಪೊಲೀಸರಿಗೆ ಫೋನ್ ಮಾಡಿದ್ದು ಯಾರು ಎಂದು ಗೊತ್ತಾಗಿದ್ದಾಗಿ ಆ ವ್ಯಕ್ತಿ ಹೇಳುತ್ತಾರೆ. ಅವರು ಯಾರು ಹೇಳಿ ಎಂದು ಭದ್ರ ಹೇಳುತ್ತಾನೆ. ಕೆಲವೊಂದು ವಿಚಾರಗಳನ್ನು ಫೋನ್ನಲ್ಲಿ ಹೇಳಲಾಗುವುದಿಲ್ಲ. ನೀವು ನಾಳೆ ನನ್ನನ್ನು ಭೇಟಿ ಆಗಿ, ಅವರ ಮನೆ ವಿಳಾಸ ಕೊಡುತ್ತೇನೆ ಎಂದು ಆ ವ್ಯಕ್ತಿ ಹೇಳುತ್ತಾನೆ.
ಭದ್ರನ ಮುಂದೆ ನಿಜ ಒಪ್ಪಿಕೊಳ್ಳಲು ಮುಂದಾದ ವಿದ್ಯಾ
ಅಪ್ಪ ಇಂದು ಜೈಲಿನಿಂದ ರಿಲೀಸ್ ಆದರು. ಇಂದು ವಿದ್ಯಾಗೆ 18 ವರ್ಷ ತುಂಬಿದೆ, ಮದುವೆಗೆ ಅಪ್ಪ ಒಪ್ಪಿಗೆ ಕೊಟ್ಟಿದ್ಧಾರೆ ಇಷ್ಟೆಲ್ಲಾ ಖುಷಿ ನಡುವೆ ಪೊಲೀಸರಿಗೆ ಪೋನ್ ಮಾಡಿದ್ದು ಯಾರು ಎಂಬ ವಿಚಾರ ಕೂಡಾ ಗೊತ್ತಾಗಿದೆ ಎಂದು ಭದ್ರ ಹೇಳುತ್ತಾನೆ. ಆ ಮಾತು ಕೇಳಿ ವಿದ್ಯಾ ಹಾಗೂ ಮನೆಯವರು ಶಾಕ್ ಆಗುತ್ತಾರೆ. ಈ ಖುಷಿ ನಡುವೆ ಆ ಸುದ್ದಿ ಏಕೆ ಅಳಿಯಂದಿರೇ, ಅವರು ಯಾರೋ ಏನೋ ಎಂದು ಭದ್ರ ಮಾತು ಮರೆಸಲು ಪ್ರಯತ್ನಿಸುತ್ತಾನೆ. ಅದು ಆ ದೇವರೇ ಆಗಿದ್ದರೂ ನಾನು ಬಿಡುವುದಿಲ್ಲ. ನಾಳೆ ವಿಷಯ ಗೊತ್ತಾಗುತ್ತದೆ. ಫೋನ್ ಮಾಡಿದವರ ಇಡೀ ಕುಟುಂಬವನ್ನು ನಾನು ಸುಮ್ಮನೆ ಬಿಡುವುದಿಲ್ಲ, ಅವರನ್ನೆಲ್ಲಾ ಸುಟ್ಟು ಬೂದಿ ಮಾಡುತ್ತೇನೆ ಎಂದು ಕೋಪದಿಂದ ಹೇಳಿ ಅಲ್ಲಿಂದ ಹೊರಡುತ್ತಾನೆ.
ಭದ್ರ ಹೇಳಿದ ಮಾತುಗಳನ್ನು ನೆನಪಿಸಿಕೊಂಡು ಚೆಲುವನಿಗೆ ನಿದ್ರೆ ಬರುವುದಿಲ್ಲ. ನಾಳೆ ವಿಷಯ ಗೊತ್ತಾದರೆ ಖಂಡಿತ ಅವರು ನಮ್ಮನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲ ಎಂದು ಗೋಳಾಡುತ್ತಾನೆ. ಮರುದಿನ ಭದ್ರನ ಮನೆಯಲ್ಲಿ ಚಪ್ಪರದ ಶಾಸ್ತ್ರ ನಡೆಯುತ್ತದೆ. ವಿದ್ಯಾ ಮನೆಯಲ್ಲಿ ಮಲ್ಹಾರ ಪೂಜೆ ನಡೆಯುತ್ತದೆ. ಸಂಭ್ರಮದ ನಡುವೆಯೂ ಚೆಲುವನಿಗೆ ಆತಂಕ ತುಂಬಿರುತ್ತದೆ. ಕೆಲಸ ಇದೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಗೆ ಹೋಗುತ್ತಾನೆ. ವಿದ್ಯಾ ಬಳೆ ತೊಡಿಸಿಕೊಂಡು ಮನೆಯಿಂದ ಹೊರಗೆ ಬಂದು ಕೂರುತ್ತಾಳೆ. ಸರಸ್ವತಿ ಕೂಡಾ ಅಕ್ಕನ ಬಳಿ ಬರುತ್ತಾಳೆ. ನಾನು ಪೊಲೀಸರಿಗೆ ಫೋನ್ ಮಾಡಿದ್ದರಿಂದ ಮನೆಯಲ್ಲಿ ಎಲ್ಲರೂ ಆತಂಕದಿಂದ ಯೋಚನೆ ಮಾಡುವಂತಾಯ್ತು. ಅವರು ಮನೆವರೆಗೂ ಬಂದು ರಾದ್ಧಾಂತ ಮಾಡುವ ಬದಲಿಗೆ ನಾನೇ ಪೊಲೀಸರಿಗೆ ಕರೆ ಮಾಡಿದ್ದು ಎಂದು ಹೇಳುವುದಾಗಿ ವಿದ್ಯಾ ಹೇಳುತ್ತಾಳೆ. ಅಕ್ಕನ ನಿರ್ಧಾರ ಕೇಳಿ ಸರಸ್ವತಿ ಶಾಕ್ ಆಗುತ್ತಾಳೆ.
ಪೊಲೀಸರಿಗೆ ಫೋನ್ ಮಾಡಿ ಮದುವೆ ನಿಲ್ಲಿಸಿದ್ದು ನಾನೇ ಎಂಬ ವಿಚಾರವನ್ನು ಭದ್ರನ ಬಳಿ ವಿದ್ಯಾ ಹೇಳುತ್ತಾಳಾ? ಈ ಬಾರಿಯೂ ಮದುವೆ ನಿಲ್ಲುವುದಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ
ವಿಭಾಗ