ಮುದ್ದು ಸೊಸೆ: ವಿದ್ಯಾ ಮನೆ ಸಾಲ ತೀರಿಸಿ ಅಪ್ಪ ನೋಡಿದ ಹೆಣ್ಣು ನೋಡಲು ಹೊರಟ ಭದ್ರೇಗೌಡ; ಮಂಜಿನಂತೆ ಕರಗಿತು ಶಿವರಾಮೇಗೌಡನ ಸಿಟ್ಟು
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ವಿದ್ಯಾ ಮನೆ ಸಾಲ ತೀರಿಸಿ ಅಪ್ಪ ನೋಡಿದ ಹೆಣ್ಣು ನೋಡಲು ಹೊರಟ ಭದ್ರೇಗೌಡ; ಮಂಜಿನಂತೆ ಕರಗಿತು ಶಿವರಾಮೇಗೌಡನ ಸಿಟ್ಟು

ಮುದ್ದು ಸೊಸೆ: ವಿದ್ಯಾ ಮನೆ ಸಾಲ ತೀರಿಸಿ ಅಪ್ಪ ನೋಡಿದ ಹೆಣ್ಣು ನೋಡಲು ಹೊರಟ ಭದ್ರೇಗೌಡ; ಮಂಜಿನಂತೆ ಕರಗಿತು ಶಿವರಾಮೇಗೌಡನ ಸಿಟ್ಟು

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ ಎಪಿಸೋಡ್‌ 11ರಲ್ಲಿ ವಿದ್ಯಾಗೆ ಸಹಾಯ ಮಾಡಿದ ಮಗನ ಮೇಲೆ ಶಿವರಾಮೇಗೌಡ ಸಿಟ್ಟಾಗುತ್ತಾನೆ,ಭದ್ರನ ಒಂದು ನಿರ್ಧಾರ ಅಪ್ಪನ ಸಿಟ್ಟನ್ನು ಕರಗಿಸುತ್ತದೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ವಿದ್ಯಾ ಮನೆ ಸಾಲ ತೀರಿಸಿ ಅಪ್ಪ ನೋಡಿದ ಹೆಣ್ಣು ನೋಡಲು ಹೊರಟ ಭದ್ರೇಗೌಡ;
ಮುದ್ದು ಸೊಸೆ: ವಿದ್ಯಾ ಮನೆ ಸಾಲ ತೀರಿಸಿ ಅಪ್ಪ ನೋಡಿದ ಹೆಣ್ಣು ನೋಡಲು ಹೊರಟ ಭದ್ರೇಗೌಡ;

ಮುದ್ದು ಸೊಸೆ ಧಾರಾವಾಹಿ: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 11ನೇ ಎಪಿಸೋಡ್‌ ಕಥೆ ಹೀಗಿದೆ. ಹೆಂಡತಿ ಬಳಿ ಪಡೆದ ಓಲೆಯನ್ನು ಅಡವಿಟ್ಟು ಅದರಿಂದ ಬಂದ ಹಣವನ್ನು ಕುಡಿತಕ್ಕೆ ಬಳಸಿಕೊಳ್ಳಬೇಕು ಎಂದುಕೊಂಡಿದ್ದ ಚೆಲುವನ ಪ್ಲ್ಯಾನ್ ಉಲ್ಟಾ ಆಗುತ್ತದೆ. ಸಾಲ ಕೊಟ್ಟವನು ವಿದ್ಯಾಳ ಕೈ ಹಿಡಿದು ಎಳೆದೊಯ್ಯುವಾಗ ಅಲ್ಲಿಗೆ ಭದ್ರ ಬಂದು ರೌಡಿಗಳ ಜೊತೆ ಹೊಡೆದಾಡಿ ವಿದ್ಯಾಳನ್ನು ಕಾಪಾಡುತ್ತಾನೆ. ಚೆಲುವ ಸಾಲಗಾರನಿಗೆ ಕೊಡಬೇಕಾದ ದುಡ್ಡನ್ನು ತಾನು ಕೊಡುವುದಾಗಿ ಹೇಳುತ್ತಾನೆ.

ಗೋವಿಂದನನ್ನು ಹಿಂಬಾಲಿಸಿದ ಸಾವಿತ್ರಿ

ಇತ್ತ ಮನೆಯಲ್ಲಿ ಚಿಕ್ಕೇಗೌಡ ಹಾಗೂ ಶಿವರಾಮೇಗೌಡ ವಿದ್ಯಾ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ವಿದ್ಯಾ ಬಹಳ ಒಳ್ಳೆ ಹೆಣ್ಣು ಮಗಳು, ಅವಳ ವಿಚಾರದಲ್ಲಿ ಯಾರೂ ಬೆರಳು ತೋರಿಸಲು ಸಾಧ್ಯವಿಲ್ಲ, ಆದರೆ ಅವರಪ್ಪ ಮಾತ್ರ ಕುಡುಕ ಎಂದು ಚಿಕ್ಕೇಗೌಡ ಹೇಳುತ್ತಾನೆ. ಎಲ್ಲವನ್ನೂ ಆರಂಭದಲ್ಲೇ ಚಿವುಟಿ ಹಾಕಬೇಕು, ಬೆಳೆಯಲು ಬಿಟ್ಟರೆ ನಮಗೆ ಸಮಸ್ಯೆ ಆಗುತ್ತದೆ. ಇನ್ಮುಂದೆ ಆ ರತ್ನಳನ್ನು ಅಡುಗೆ ಮಾಡಿ ತರಬೇಡ ಎಂದು ಹೇಳು ಎಂದು ಗೋವಿಂದನಿಗೆ ಅಜ್ಜಿ ಹೇಳುತ್ತಾಳೆ. ಅಷ್ಟರಲ್ಲಿ ಕ್ವಾಟ್ಲೆ ಅಲ್ಲಿಗೆ ಬಂದು ಭದ್ರನಿಗಾಗಿ ಹಣ ಕೇಳುತ್ತಾನೆ. ನಾನೂ ಬರುವೆ ನಡಿ ಎಂದು ಗೋವಿಂದ 3 ಲಕ್ಷ ರೂ ತೆಗೆದುಕೊಂಡು ಕ್ವಾಟ್ಲೆ ಜೊತೆ ಹೋಗುತ್ತಾನೆ. ದುಡ್ಡು ತೆಗೆದುಕೊಂಡುಹೋಗುವುದನ್ನು ಸಾವಿತ್ರಿ ನೋಡುತ್ತಾಳೆ. ಅವರನ್ನೇ ಹಿಂಬಾಲಿಸುತ್ತಾಳೆ.

ಗೋವಿಂದೇಗೌಡ ದುಡ್ಡನ್ನು ಭದ್ರನಿಗೆ ಕೊಡುತ್ತಾನೆ. ಭದ್ರ ಅದನ್ನು ಚೆಲುವನಿಗೆ ಸಾಲ ಕೊಟ್ಟಾತನಿಗೆ ಕೊಡುತ್ತಾನೆ. ಸಾಲ ಮಾಡುವುದು ತಪ್ಪಲ್ಲ ಆದರೆ ಸಾಲದ ವಿಚಾರಕ್ಕಾಗಿ ಮನೆ ಹೆಣ್ಣು ಮಕ್ಕಳನ್ನು ಮಧ್ಯೆ ತರುವುದು ತಪ್ಪು, ಮಗಳನ್ನು ಮನೆಗೆ ಕರೆದುಕೊಂಡು ಹೋಗು ಎಂದು ಚೆಲುವನಿಗೆ ಹೇಳುತ್ತಾನೆ. ಸಾಲ ತೀರಿದ ಖುಷಿಗೆ ಚೆಲುವ ಅಲ್ಲಿಂದ ಮನೆಗೆ ಹೋಗುತ್ತಾನೆ. ನೀನು ಮಾಡಿದ್ದು ಸರಿಯೇ? ಆ ಹುಡುಗಿ ಸಹವಾಸಕ್ಕೆ ಹೋಗಬೇಡ ಎಂದು ಅಣ್ಣ ಹೇಳಿದ್ದರು, ಅವರಿಗೆ ಗೊತ್ತಾದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಗೋವಿಂದೇಗೌಡ ಭದ್ರನಿಗೆ ಕೇಳುತ್ತಾನೆ, ಸಹವಾಸ ಮಾಡಬೇಡ ಎಂದು ಹೇಳಿದ್ದರು, ಆದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಡ ಎಂದು ಹೇಳಿರಲಿಲ್ಲ. ಇಷ್ಟಪಟ್ಟವಳನ್ನು ಮದುವೆಯಾಗಿ ಬಾಳುವ ಅದೃಷ್ಟ ಇಲ್ಲ, ಅವಳು ಕಷ್ಟಪಡುವುದನ್ನು ನೋಡಿಕೊಂಡು ಸುಮ್ಮನೆ ಇರಲಾಗುವುದಿಲ್ಲ ಚಿಕ್ಕಪ್ಪ ಎಂದು ಭದ್ರ ಹೇಳುತ್ತಾನೆ.

ಅಪ್ಪನ ಜೊತೆ ಹೆಣ್ಣು ನೋಡಲು ಹೊರಟ ಭದ್ರ

ಚೆಲುವನಿಗೆ ದುಡ್ಡು ಕೊಡುವುದನ್ನು ನೋಡುವ ಸಾವಿತ್ರಿ ಕೋಪಗೊಳ್ಳುತ್ತಾನೆ, ಈ ವಿಚಾರವನ್ನು ಅಣ್ಣನ ಬಳಿ ಹೇಳುತ್ತೇನೆ, ಅವನು ನಿನಗೆ ಪಾಠ ಕಲಿಸುತ್ತಾನೆ ಎಂದು ಮನೆಗೆ ಹೋಗಿ ಶಿವರಾಮೇಗೌಡನ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಆ ಮಾತು ಕೇಳಿ ಶಿವರಾಮೇಗೌಡ ಸಿಟ್ಟಾಗುತ್ತಾನೆ. ಭದ್ರನನ್ನು ಕರೆಯುವಂತೆ ತಮ್ಮನಿಗೆ ಹೇಳುತ್ತಾನೆ, ಭದ್ರ ಮೌನವಾಗಿ ಅಪ್ಪನ ಮುಂದೆ ಬಂದು ನಿಲ್ಲುತ್ತಾನೆ. ಶಿವರಾಮೇಗೌಡ ಕೋಪದಿಂದ ಭದ್ರ ಎಂದು ಅರಚುತ್ತಾನೆ, ಅಪ್ಪಯ್ಯ ಹೆಣ್ಣು ನೋಡಲು ಹೋಗೋಣ ಎಂದು ಹೇಳಿದ್ದೀರಲಲ್ಲ, ನಾನು ರೆಡಿ ಇದ್ದೇನೆ ಹೋಗೋಣ ಬನ್ನಿ ಎನ್ನುತ್ತಾನೆ, ಆ ಮಾತು ಕೇಳಿ ಶಿವರಾಮೇಗೌಡನಿಗೆ ಮಗನ ಮೇಲಿದ್ದ ಸಿಟ್ಟು ಕ್ಷಣ ಮಾತ್ರದಲ್ಲಿ ಕರಗಿಹೋಗುತ್ತದೆ. ಆಯ್ತು ಮಗ ನಡಿ ಹೋಗೋಣ ಎನ್ನುತ್ತಾನೆ.

ರತ್ನಾಗೆ ಅಡುಗೆ ಕೆಲಸ ಹೇಳಿದ್ದ ವೆಂಕಟೇಶ ಅವಳಿಗೆ ಕರೆ ಮಾಡಿ ಇನ್ಮುಂದೆ ನೀನು ಗೌಡರ ಮನೆಗೆ ಊಟ ತರಬಾರದಂತೆ, ಆ ಮನೆ ಕಡೆ ಕೂಡಾ ಹೋಗಬಾರದಂತೆ ಎನ್ನುತ್ತಾನೆ. ಮಕ್ಕಳು ಏನೋ ಮಾಡಬಾರದ ಕೆಲಸ ಮಾಡಿಕೊಂಡಿದ್ದಾರೆ, ಅದಕ್ಕೆ ಗೌಡರ ಮನೆಯವರು ಕೋಪ ಮಾಡಿಕೊಂಡು ಅಡುಗೆ ಬೇಡ ಎನ್ನುತ್ತಿದ್ದಾರೆ ಎಂದು ರತ್ನ ಕೋಪಗೊಳ್ಳುತ್ತಾಳೆ. ನಾವು ನಿಜಕ್ಕೂ ಏನೂ ಮಾಡಿಲ್ಲ ಎಂದು ಸರೂ ಹೇಳುತ್ತಾಳೆ. ಅಷ್ಟರಲ್ಲಿ ಚೆಲುವ ಮನೆಗೆ ಬಂದು ಭದ್ರ ಸಾಲ ತೀರಿಸಿದ ವಿಚಾರವನ್ನು ಹೇಳುತ್ತಾನೆ. ಅದನ್ನು ಕೇಳಿ ರತ್ನಳಿಗೆ ಆಶ್ಚರ್ಯವಾಗುತ್ತದೆ. ಭದ್ರ ಏಕೆ ನಮ್ಮ ಮನೆ ಸಾಲ ತೀರಿಸಬೇಕು? ಅಡುಗೆ ಬೇಡ ಎಂದು ಹೇಳಿದರೆ ಸರಿ, ಆದರೆ ಮನೆ ಕಡೆಗೂ ಬರಬೇಡ ಎಂದು ಹೇಳಲು ಕಾರಣವೇನು? ಎಂಬ ಪ್ರಶ್ನೆಗಳು ರತ್ನಗೆ ಕಾಡುತ್ತದೆ. ತನ್ನನ್ನು ಪ್ರೀತಿಯಿಂದ ಮಾತನಾಡಿಸಿದ ಶಿವರಾಮೇಗೌಡನ ಹೆಂಡತಿ ಮೋಹನಳನ್ನು ಕೇಳಿದರೆ ವಿಚಾರ ಗೊತ್ತಾಗುತ್ತದೆ ಎಂದು ರತ್ನ ಮತ್ತೆ ಗೌಡರ ಮನೆ ಬಳಿ ಹೋಗುತ್ತಾಳೆ.

ಶಿವರಾಮೇಗೌಡ ನೋಡಿದ ಹುಡುಗಿ ಜೊತೆ ಭದ್ರನ ಮದುವೆ ಫಿಕ್ಸ್‌ ಆಗುವುದಾ? ರತ್ನ ಕೇಳುವ ಪ್ರಶ್ನೆಗಳಿಗೆ ಮೋಹನ ಉತ್ತರ ಕೊಡುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.