ಮುದ್ದು ಸೊಸೆ: ಅಪ್ಪನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಭದ್ರ; ವಿದ್ಯಾ ತಾಯಿ ರತ್ನಳಿಗೆ ಬಾಯಿಗೆ ಬಂದಂತೆ ಬೈದು ಹಣ ವಾಪಸ್‌ ಕೇಳಿದ ಸಾವಿತ್ರಿ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಅಪ್ಪನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಭದ್ರ; ವಿದ್ಯಾ ತಾಯಿ ರತ್ನಳಿಗೆ ಬಾಯಿಗೆ ಬಂದಂತೆ ಬೈದು ಹಣ ವಾಪಸ್‌ ಕೇಳಿದ ಸಾವಿತ್ರಿ

ಮುದ್ದು ಸೊಸೆ: ಅಪ್ಪನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಭದ್ರ; ವಿದ್ಯಾ ತಾಯಿ ರತ್ನಳಿಗೆ ಬಾಯಿಗೆ ಬಂದಂತೆ ಬೈದು ಹಣ ವಾಪಸ್‌ ಕೇಳಿದ ಸಾವಿತ್ರಿ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ ಎಪಿಸೋಡ್‌ 12ರಲ್ಲಿ ಅಪ್ಪ ನೋಡಿದ ಹೆಣ್ಣನ್ನು ಭದ್ರ ಒಪ್ಪಿಕೊಳ್ಳುತ್ತಾನೆ. ವಿದ್ಯಾ ತಾಯಿ ರತ್ನಾಗೆ ಸಾವಿತ್ರಿ ಅವಮಾನ ಮಾಡುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಅಪ್ಪನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಭದ್ರ; ವಿದ್ಯಾ ತಾಯಿ ರತ್ನಳಿಗೆ ಬಾಯಿಗೆ ಬಂದಂತೆ ಬೈದು ಹಣ ವಾಪಸ್‌ ಕೇಳಿದ ಸಾವಿತ್ರಿ
ಮುದ್ದು ಸೊಸೆ: ಅಪ್ಪನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದ ಭದ್ರ; ವಿದ್ಯಾ ತಾಯಿ ರತ್ನಳಿಗೆ ಬಾಯಿಗೆ ಬಂದಂತೆ ಬೈದು ಹಣ ವಾಪಸ್‌ ಕೇಳಿದ ಸಾವಿತ್ರಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 12ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ತಂದೆ ಚೆಲುವನಿಗೆ ಭದ್ರೇಗೌಡ ದುಡ್ಡು ಕೊಟ್ಟಿದ್ದನ್ನು ಸಾವಿತ್ರಿ ನೋಡುತ್ತಾಳೆ. ಯಾರೋ ಮಾಡಿದ ಸಾಲವನ್ನು ಇವನು ಏಕೆ ತೀರಿಸಬೇಕು? ಅಣ್ಣ ಅಷ್ಟೆಲ್ಲಾ ಹೇಳಿದ್ದರೂ ಮತ್ತೆ ಆ ಹುಡುಗಿ ಸಹವಾಸ ಮಾಡಿದ್ದಾನೆ, ಇದೆಲ್ಲಾ ಅಣ್ಣನಿಗೆ ಹೇಳಿ ನಿನಗೆ ಪಾಠ ಕಲಿಸುತ್ತೇನೆ ಎಂದು ಸಿಟ್ಟಾಗುತ್ತಾಳೆ. ಮನೆಗೆ ಬಂದು ಎಲ್ಲಾ ವಿಚಾರವನ್ನು ಅಣ್ಣನ ಬಳಿ ಹೇಳುತ್ತಾಳೆ.

ಭದ್ರನನ್ನು ಒಪ್ಪಿಕೊಂಡ ರಾಜೇಗೌಡ ಮನೆಯವರು

ಆ ಹುಡುಗಿಯನ್ನು ಮರೆತುಬಿಡು ಎಂದು ಹೇಳಿದರೂ ಭದ್ರ ಮತ್ತೆ ಅವಳ ತಂದೆಗೆ ಹಣ ನೀಡಿದ್ದನ್ನು ಕೇಳಿ ಶಿವರಾಮೇಗೌಡ ಕೆಂಡಾಮಂಡಲವಾಗುತ್ತಾನೆ. ಭದ್ರನನ್ನು ಕರೆಯುತ್ತಾನೆ, ಭದ್ರ ಮೌನವಾಗಿ ಅಪ್ಪನ ಮುಂದೆ ಬಂದು ನಿಲ್ಲುತ್ತಾನೆ. ಶಿವರಾಮ ಕೋಪದಿಂದ ಭದ್ರ ಎಂದು ಅರಚುತ್ತಾನೆ. ಅಪ್ಪಯ್ಯ, ಹೆಣ್ಣು ನೋಡಲು ಹೋಗೋಣ ಎಂದಿರಲ್ಲ, ನಾನು ಸಿದ್ಧನಿದ್ದೇನೆ ಎನ್ನುತ್ತಾನೆ. ಆ ಮಾತು ಕೇಳಿ ಶಿವರಾಮೇಗೌಡನಿಗೆ ಖುಷಿಯಾಗುತ್ತದೆ. ಮಗನ ಮೇಲಿದ್ದ ಕೋಪ ಮಂಜಿನಂತೆ ಕರಗುತ್ತದೆ. ಸರಿ ನಡಿ ಮಗ ಹೋಗೋಣ ಎನ್ನುತ್ತಾನೆ. ವಿದ್ಯಾ ತಂದೆಗೆ ದುಡ್ಡು ಕೊಟ್ಟಿದ ವಿಚಾರವಾಗಿ ಭದ್ರನ ಬಳಿ ಏನೂ ಕೇಳದಿದ್ದನ್ನು ಕಂಡು ಸಾವಿತ್ರಿ ಪ್ರಶ್ನಾರ್ಥಕವಾಗಿ ಅಣ್ಣ ಎಂದು ಕರೆಯುತ್ತಾಳೆ. ಏನು ಸರಿ ಏನು ತಪ್ಪು ಅನ್ನೋದು ನನಗೆ ಗೊತ್ತು ಸಾವಿತ್ರಿ ಎಂದು ಶಿವರಾಮೇಗೌಡ ಹೇಳುತ್ತಾನೆ. ಅಣ್ಣನ ಮಾತಿಗೆ ಸಾವಿತ್ರಿ ಮರುಮಾತನಾಡದೆ ಸುಮ್ಮನಾಗುತ್ತಾಳೆ.

ಸಾವಿತ್ರಿ, ವಿನಂತಿ ಹೊರತುಪಡಿಸಿ ಉಳಿದವರೆಲ್ಲಾ ರಾಜೇಗೌಡನ ಮನೆಗೆ ಹೆಣ್ಣು ನೋಡಲು ಹೋಗುತ್ತಾರೆ. ಶಿವರಾಮೇಗೌಡನ ಮನೆ ಸಂಬಂಧ ಬೆಳೆಸಲು ರಾಜೇಗೌಡ ಕೂಡಾ ಖುಷಿಯಾಗುತ್ತಾನೆ. ಆತನ ಮಗಳು ಎಲ್ಲರಿಗೂ ಕಾಫಿ ತಂದು ಕೊಡುತ್ತಾಳೆ. ಭದ್ರನ ಮುಂದೆ ಕಾಫಿ ಹಿಡಿಯುತ್ತಾಳೆ. ಆದರೆ ಭದ್ರ ಮಾತ್ರ ವಿದ್ಯಾ ನೆನಪಿನಲ್ಲಿ ಮುಳುಗಿರುತ್ತಾನೆ. ಹೆಣ್ಣನ್ನು ಕತ್ತು ಎತ್ತಿ ಕೂಡಾ ನೋಡುವುದಿಲ್ಲ. ಕಾಫಿ ತೆಗೆದುಕೊಳ್ಳುವಂತೆ ಭದ್ರನಿಗೆ ಕ್ವಾಟ್ಲೆ ಸನ್ನೆ ಮಾಡುತ್ತಾನೆ. ಆಗ ಭದ್ರ ಕಾಫಿ ತೆಗೆದುಕೊಳ್ಳುತ್ತಾನೆ. ನನಗೆ ನಿಮ್ಮ ಹುಡುಗ ಇಷ್ಟವಾಗಿದ್ದಾನೆ, ಹುಡುಗನಿಗೆ ಹುಡುಗಿ ಇಷ್ಟ ಆದರೆ ಮುಂದುವರೆಯೋಣ ಎಂದು ರಾಜೇಗೌಡ ಹೇಳುತ್ತಾನೆ. ನನ್ನ ಅಪ್ಪಯ್ಯನ ತೀರ್ಮಾನವೇ ನನ್ನ ತೀರ್ಮಾನ ಎಂದು ಭದ್ರ ಹೇಳುತ್ತಾನೆ. ಮನೆಯವರ ಜೊತೆ ಮಾತನಾಡಿ ನಿಮಗೆ ನಾಳೆ ತಿಳಿಸುತ್ತೇನೆ ಎಂದು ಶಿವರಾಮ ಹೇಳುತ್ತಾನೆ.

ರತ್ನ ಬಳಿ ಹಣ ವಾಪಸ್‌ ಕೇಳಿದ ಸಾವಿತ್ರಿ

ಇತ್ತ ಮೋಹನಳನ್ನು ಭೇಟಿ ಆಗಲು ರತ್ನ, ಮನೆಗೆ ಬರುತ್ತಾಳೆ. ಆಕೆ ಬರುವ ಮುನ್ನ ವಿನಂತಿ, ಸಾವಿತ್ರಿ ಇಬ್ಬರೂ ಅವರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಅಷ್ಟರಲ್ಲಿ ಗೇಟ್‌ ಸದ್ದಾಗಿದ್ದನ್ನು ನೋಡುವ ವಿನಂತಿ, ನೋಡು ಅವಳೇ ಬಂದಳು, ಅದೇನು ಮಾತನಾಡುತ್ತೀಯೋ ಮಾತನಾಡು ಎಂದು ಸಾವಿತ್ರಿಗೆ ಹೇಳುತ್ತಾಳೆ. ನಿನಗೋಸ್ಕರವೇ ಕಾಯುತ್ತಿದ್ದೆ. ಭದ್ರ ನಿಮ್ಮ ಮನೆ ಸಾಲ ತೀರಿಸಲು ಕಾರಣವೇನು? ಇಷ್ಟು ದಿನ ನಿನ್ನ ಜೊತೆ ಬಾಲಗಳಂತೆ ಕರೆದುಕೊಂಡು ಬರುತ್ತಿದ್ದೆಯಲ್ಲ ನಿನ್ನ ಹೆಣ್ಣು ಮಕ್ಕಳು ಅವರು ಎಲ್ಲಿ? ಬೇರೆಯವರನ್ನು ಬುಟ್ಟಿಗೆ ಹಾಕಿಕೊಳ್ಳಲು ಕಳಿಸಿದ್ದೀಯ ಎಂದು ಸಾವಿತ್ರಿ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ಅವಳ ಚುಚ್ಚು ಮಾತುಗಳನ್ನು ಕೇಳಿ ರತ್ನ ಅಳುತ್ತಾಳೆ. ಹಾಗೆಲ್ಲಾ ಮಾತನಾಡಬೇಡಿ, ನನ್ನ ಹೆಣ್ಣು ಮಕ್ಕಳನ್ನು ಆ ರೀತಿ ಬೆಳೆಸಿಲ್ಲ ಎನ್ನುತ್ತಾಳೆ. ನನಗೆ ಅದೆಲ್ಲಾ ಗೊತ್ತಿಲ್ಲ. ಭದ್ರ ನಿಮ್ಮ ಮನೆಗೆ ಕೊಟ್ಟಿದ್ದ ದುಡ್ಡನ್ನು ನಾಳೆ ಬೆಳಗ್ಗೆ ಒಳಗೆ ತಂದುಕೊಡಬೇಕು, ಇಲ್ಲದಿದ್ದರೆ ಪಂಚಾಯ್ತಿ ಸೇರಿಸಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಸಾವಿತ್ರಿ ಧಮ್ಕಿ ಹಾಕುತ್ತಾಳೆ.

ರತ್ನ, ಗೌಡರ ಮನೆಯಿಂದ ಹೋಗುತ್ತಿದ್ದಂತೆ ಹೆಣ್ಣು ನೋಡಲು ಹೋಗಿದ್ದವರೆಲ್ಲಾ ವಾಪಸ್‌ ಬರುತ್ತಾರೆ. ಅವರೆಲ್ಲಾ ಸಪ್ಪೆ ಮೋರೆ ಹಾಕಿದ್ದನ್ನು ನೋಡಿ ಏನು ವಿಚಾರ ಎಂದು ಈಶ್ವರಿ ಬಳಿ ಸಾವಿತ್ರಿ ಕೇಳುತ್ತಾಳೆ. ಅಲ್ಲಿ ನಡೆದ ವಿಚಾರವನ್ನು ಈಶ್ವರಿ ವಿವರಿಸುತ್ತಾಳೆ. ಇಷ್ಟು ದಿನ ಕಡ್ಡಿ ತುಂಡಾದಂತೆ ಮಾತನಾಡುತ್ತಿದ್ದಿರಿ, ಇವತ್ತು ಏಕೆ ಈ ರೀತಿ ಇದ್ದೀರ ಎಂದು ಮೋಹನ ತನ್ನ ಗಂಡನ ಬಳಿ ಕೇಳುತ್ತಾಳೆ. ಇಷ್ಟು ದಿನ ಭದ್ರ ಯಾವುದೇ ಹೆಣ್ಣು ನೋಡಲು ಹೋದಾಗ ಖುಷಿಯಿಂದ ಬರುತ್ತಿದ್ದ, ಆದರೆ ಇಂದು ಅವನ ಮುಖದಲ್ಲಿ ಆ ನಗು ಇರಲಿಲ್ಲ. ಅವನು ಬಂದಿದ್ದು ಅವನಿಗಲ್ಲ, ನನಗೋಸ್ಕರ, ನಾನು ಅವನ ಮನಸ್ಸನ್ನು ಓದಿದ್ದೇನೆ ಎನ್ನುತ್ತಾನೆ.

ಮಗನ ಮನಸ್ಸನ್ನು ಶಿವರಾಮೇಗೌಡ ಅರ್ಥ ಮಾಡಿಕೊಂಡು ಅವನ ಪ್ರೀತಿಯನ್ನು ಒಪ್ಪುತ್ತಾನಾ? ಸಾವಿತ್ರಿ ಹೇಳಿದಂತೆ ರತ್ನ ದುಡ್ಡು ಹೊಂದಿಸುವ ಪ್ರಯತ್ನ ಮಾಡುತ್ತಾಳಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.