ಮುದ್ದು ಸೊಸೆ: ಮನೆಗೆ ಹೆಣ್ಣು ನೋಡಲು ಬರುತ್ತಿದ್ದೇವೆಂದು ವಿದ್ಯಾ ತಂದೆಗೆ ತಿಳಿಸಿದ ಶಿವರಾಮೇಗೌಡ; ನಿಧಿ ಸಿಕ್ಕಂತೆ ಖುಷಿಪಟ್ಟ ಚೆಲುವ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 15ನೇ ಸಂಚಿಕೆಯಲ್ಲಿ ವಿದ್ಯಾ ತಂದೆ ಚೆಲುವನನ್ನು ತೋಟದ ಬಳಿ ಕರೆಸುವ ಶಿವರಾಮೇಗೌಡ ನಿಮ್ಮ ಮನೆಗೆ ಹೆಣ್ಣು ಕೇಳಲು ಬರುತ್ತಿದ್ದೇವೆಂದು ಹೇಳುತ್ತಾನೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 15ನೇ ಎಪಿಸೋಡ್ ಕಥೆ ಹೀಗಿದೆ. ಸಾವಿತ್ರಿ ಅವಮಾನ ಮಾಡಿದ್ದಕ್ಕೆ ರತ್ನ ಬಳಿ ಕ್ಷಮೆ ಕೇಳಲು ವಿದ್ಯಾ ಮನೆಗೆ ಭದ್ರ ಬರುತ್ತಾನೆ. ನಿಮಗೆ ನಿಜವಾಗಲೂ ನಮಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ಸಾಲ ತೀರಿಸಲು ಸಮಯಾವಕಾಶ ಕೊಡಿ ಎಂದು ರತ್ನ ಮನವಿ ಮಾಡುತ್ತಾಳೆ. ವಿನಂತಿಯನ್ನು ಭದ್ರನಿಗೆ ಕೊಟ್ಟು ಮದುವೆ ಮಾಡಿಕೊಡಲು ಸಾವಿತ್ರಿ ತನ್ನ ತಾಯಿಯನ್ನು ಅಣ್ಣ ಶಿವರಾಮೇಗೌಡನ ಬಳಿ ಸಂಧಾನಕ್ಕೆ ಕಳಿಸುತ್ತಾಳೆ.
ಗೋವಿಂದನ ಮಾತು ಕೇಳಿ ಕುಣಿದು ಕುಪ್ಪಳಿಸಿದ ಚೆಲುವ
ಯಾರಿಗೂ ಗೊತ್ತಿಲ್ಲದಂತೆ ತಮ್ಮ ಗೋವಿಂದೇಗೌಡನ ಜೊತೆ ತೋಟಕ್ಕೆ ಹೋಗುವ ಶಿವರಾಮೇಗೌಡ ಮಗ ಭದ್ರ ಪ್ರೀತಿ ಮಾಡುತ್ತಿರುವ ವಿದ್ಯಾ ತಂದೆಯನ್ನು ಅಲ್ಲಿಗೆ ಕರೆಸುತ್ತಾನೆ. ಭಯದಿಂದಲೇ ಗೌಡರ ಮುಂದೆ ಬಂದು ನಿಲ್ಲುವ ಚೆಲುವ, ಇವರು ನನಗೆ ಬೈಯ್ಯುವ ಮುನ್ನವೇ ನಾನೇ ಮನವಿ ಮಾಡಿಬಿಡುತ್ತೇನೆ ಎಂದು ದಯವಿಟ್ಟು ಸಾಲ ತೀರಿಸಲು ಸಮಯ ಕೊಡಿ ಎನ್ನುತ್ತಾನೆ, ನಾವು ಇಲ್ಲಿ ಕರೆಸಿರುವುದು ಸಾಲ ಕೇಳಲು ಅಲ್ಲ, ವಿಷಯ ಬೇರೆಯೇ ಇದೆ, ನಿನ್ನ ಮಕ್ಕಳ ಬಗ್ಗೆ ಹೇಳು ಎಂದು ಗೋವಿಂದೇಗೌಡ ಹೇಳುತ್ತಾನೆ. ಮೊದಲ ಮಗಳು ವಿದ್ಯಾ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಎರಡನೇ ಮಗಳು ಸರಸ್ವತಿ ಆದರೆ ಅವಳು ಏನು ಓದುತ್ತಿದ್ದಾಳೆ ಅನ್ನೋದು ನನಗೆ ನೆನಪಿಲ್ಲ ಎಂದು ಚೆಲುವ ಹೇಳುತ್ತಾನೆ.
ನಿನ್ನ ಹಿರಿಯ ಮಗಳು ವಿದ್ಯಾ ಮನೆಗೆ ಎಷ್ಟೊತ್ತಿಗೆ ಬರುತ್ತಾಳೆ? ಇವತ್ತು ನಿನಗೆ ಬೇರೆ ಏನಾದರೂ ಕೆಲಸ ಇದೆಯೇ ಎಂದು ಗೋವಿಂದೇಗೌಡ ಕೇಳುತ್ತಾನೆ, ಸಂಜೆ 4 ಗಂಟೆ ಹೊತ್ತಿಗೆ ಮನೆಗೆ ಬರುತ್ತಾಳೆ, ನನಗೆ ಇಂದು ಅಂಥ ಕೆಲಸವೇನಿಲ್ಲ ಎಂದು ಚೆಲುವ ಉತ್ತರಿಸುತ್ತಾನೆ. ಹಾಗಾದರೆ ಇಂದು ನಾವು ನಿಮ್ಮ ಮನೆಗೆ ಬರುತ್ತೇವೆ. ನಮ್ಮೆಲ್ಲರಿಗೂ ನಿಮ್ಮ ಮಗಳು ಒಪ್ಪಿಗೆ ಆಗಿದ್ದಾಳೆ. ನಮ್ಮ ಅಣ್ಣನ ಮಗ ಭದ್ರನಿಗೆ ನಿನ್ನ ಮಗಳು ವಿದ್ಯಾಳನ್ನು ಕೇಳಲು ಬರುತ್ತಿದ್ದೇವೆ ಎಂದು ಗೋವಿಂದ ಹೇಳುತ್ತಾನೆ. ಆ ಮಾತು ಕೇಳಿ ಚೆಲುವನಿಗೆ ನಿಧಿ ಸಿಕ್ಕಂತೆ ಆಗುತ್ತದೆ. ನೀವು ನಮ್ಮ ಮನೆ ಸಂಬಂಧ ಬೆಳೆಸುತ್ತಿದ್ದೀರ? ಇದು ನಿಜಕ್ಕೂ ನನ್ನ ಪುಣ್ಯ ನಿಮ್ಮ ದಾರಿಯನ್ನೇ ಕಾಯುತ್ತಿರುತ್ತೇನೆ ಎನ್ನುತ್ತಾನೆ. ನಮ್ಮ ಮನೆ ಸಂಬಂಧ ಬೆಳೆಸುತ್ತಿದ್ದೀಯ, ಇನ್ಮುಂದೆಯಾದರೂ ನೀನು ಕುಡಿದು ಎಲ್ಲರೊಂದಿಗೆ ಜಗಳ ಮಾಡುವುದನ್ನು ಬಿಡು, ನಮ್ಮ ಘನತೆಗೆ ತಕ್ಕಂತೆ ಇರು ಎಂದು ಶಿವರಾಮೇಗೌಡ ಬುದ್ಧಿ ಹೇಳುತ್ತಾನೆ. ಇನ್ಮುಂದೆ ನಾನು ಸಾರಾಯಿ ಅಂಗಡಿ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಂದು ಹೇಳಿ ಚೆಲುವ ಅಲ್ಲಿಂದ ಹೊರಡುತ್ತಾನೆ.
ಮಗಳಿಗೆ ಇಷ್ಟು ಚಿಕ್ಕ ವಯಸ್ಸಿಗೆ ಮದುವೆ ಬೇಡ ಎಂದ ರತ್ನ
ಚೆಲುವ ಮನೆಗೆ ಬಂದು ಖುಷಿಯಿಂದ ಕುಣಿದಾಡುತ್ತಾನೆ, ಗೌಡರು ಏನು ಹೇಳಿದರು? ಸಾಲ ತೀರಿಸಲು ಸಮಯ ಕೊಟ್ಟರೇ ಎಂದು ರತ್ನ ಕೇಳುತ್ತಾಳೆ. ಗೌಡರು ಕರೆದದ್ದು ದುಡ್ಡು ಕೇಳೋಕೆ ಅಲ್ಲ, ನಾನು ಇನ್ನು ಕೆಲವೇ ದಿನಗಳಲ್ಲಿ ಮಹಾರಾಜನಂತೆ ಬದುಕುತ್ತೇನೆ ಎಂದು ಆ ಬುಡುಬುಡಕೆಯವನು ಹೇಳಿದ ಮಾತು ನಿಜವಾಗುತ್ತಿದೆ ಎಂದು ಗೌಡರ ಜೊತೆ ನಡೆದ ಮಾತುಕತೆಯನ್ನು ಚೆಲುವ ಹೇಳುತ್ತಾನೆ. ಆ ಮಾತು ಕೇಳಿ ಚೆಲುವನ ತಾಯಿ ಖುಷಿಯಾದರೆ ರತ್ನ ಗಾಬರಿಯಾಗುತ್ತಾಳೆ. ವಿದ್ಯಾ ಇನ್ನೂ ಚಿಕ್ಕ ಹುಡುಗಿ, ಅವಳಿಗೆ ಮದುವೆ ಆಗುವ ವಯಸ್ಸು ಆಗಿಲ್ಲ. ಅದೂ ಅಲ್ಲದೆ ಅವಳು ಚೆನ್ನಾಗಿ ಓದಿ ದೊಡ್ಡ ಡಾಕ್ಟರ್ ಆಗಬೇಕೆಂದು ಕನಸು ಕಾಣುತ್ತಿದ್ದಾಳೆ. ನಾನು ಅವಳ ಬಳಿ ಈ ಮಾತನ್ನು ಹೇಗೆ ಹೇಳುವುದು? ಇನ್ನೂ ಕಾಲ ಮಿಂಚಿಲ್ಲ, ನನ್ನ ಮಗಳನ್ನು ಓದಿಸಬೇಕು, ಮದುವೆ ಮಾಡುವುದಿಲ್ಲ ಎಂದು ಗೌಡರಿಗೆ ಹೇಳಿಬಿಡು ಎನ್ನುತ್ತಾಳೆ. ಅದರ ಬದಲಿಗೆ ವಿಷ ಕುಡಿ ಎಂದರೆ ಕುಡಿಯುತ್ತೇನೆ, ಆದರೆ ಗೌಡರ ಮನೆ ಸಂಬಂಧ ಮಾತ್ರ ಬಿಡುವುದಿಲ್ಲ ಎಂದು ಚೆಲುವ ಖಡಕ್ ಆಗಿ ಹೇಳುತ್ತಾನೆ.
ಇತ್ತ ಶಿವರಾಮೇಗೌಡ ಮನೆಯವರನ್ನು ಒಂದೆಡೆ ಕರೆಯುತ್ತಾನೆ. ನಿನ್ನೆ ರಾಜೇಗೌಡನ ಮನೆಗೆ ಹೆಣ್ಣು ನೋಡಲು ಹೋಗಿದ್ದೆವು, ಅವರು ಎಲ್ಲಾ ವಿಚಾರದಲ್ಲೂ ನಮಗಿಂತ ಒಂದು ಪಟ್ಟು ಮೇಲೆ ಇದ್ದಾರೆ, ಆದರೂ ನಾಳೆ ಹೇಳುತ್ತೇನೆ ಎಂದು ಅಲ್ಲಿಂದ ಬಂದೆ. ಆದರೆ ಆ ಸಂಬಂಧವನ್ನು ನಾನು ಮುಂದುವರೆಸುತ್ತಿಲ್ಲ, ಅವರಿಗೆ ವಿಷಯ ತಿಳಿಸಿಬಿಡು ಎಂದು ಗೋವಿಂದನಿಗೆ ಹೇಳುತ್ತಾನೆ. ಆ ವಿಚಾರ ಕೇಳಿ ಸಾವಿತ್ರಿ, ವಿನಂತಿ ಖುಷಿಯಾಗುತ್ತಾರೆ. ಹಾಗಾದರೆ ನಾನು ಪುರೋಹಿತರನ್ನು ಕರೆಸುತ್ತೇನೆ, ಆದಷ್ಟು ಬೇಗ ಮದುವೆ ಮಾಡೋಣ ಎಂದು ಸಾವಿತ್ರಿ ಒಂದೇ ಸಮಯ ಮಾತನಾಡಲು ಆರಂಭಿಸುತ್ತಾಳೆ. ಇದರಿಂದ ಶಿವರಾಮೇಗೌಡ ಸಿಟ್ಟಾಗುತ್ತಾನೆ. ಭದ್ರ ಹಾಗೂ ವಿನಂತಿ ಮದುವೆ ಮುಗಿದ ವಿಚಾರ, ಅದರ ಬಗ್ಗೆ ಮಾತನಾಡಬೇಡ ಎಂದು ಹೇಳಿದರೂ ಪದೇ ಪದೆ ಅದನ್ನೇ ಮಾತನಾಡುತ್ತಿದ್ದೀಯ. ಭದ್ರನಿಗೆ ಬೇರೆ ಕಡೆ ಹೆಣ್ಣು ನೋಡಿದ್ದೇನೆ, ಸಂಜೆ ನಾವೆಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಶಿವರಾಮೇಗೌಡ ಹೇಳುತ್ತಾನೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ.
ಮಗಳ ಓದಿಗೆ ರತ್ನ ಸಂಬಂಧವನ್ನು ನಿರಾಕರಿಸುತ್ತಾಳಾ? ಚೆಲುವನ ಮನೆ ಸಂಬಂಧ ಎಂದು ತಿಳಿದು ಸಾವಿತ್ರಿ ಹೇಗೆ ಪ್ರತಿಕ್ರಿಯಿಸುತ್ತಾಳೆ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ