ಮುದ್ದು ಸೊಸೆ: ಪ್ರೀತಿಸಿದ ಹುಡುಗಿ ಮನೆಗೆ ಹೆಣ್ಣು ನೋಡಲು ಬಂದಿದ್ದಕ್ಕೆ ಖುಷಿಯಾದ ಭದ್ರೇಗೌಡ; ಮದುವೆ ಬೇಡವೆಂದು ಕಣ್ಣೀರಿಟ್ಟ ವಿದ್ಯಾ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 16ನೇ ಸಂಚಿಕೆಯಲ್ಲಿ ಇಷ್ಟಪಟ್ಟ ಹುಡುಗಿ ಮನೆಗೆ ಹೆಣ್ಣು ನೋಡಲು ಬಂದಿದ್ದಕ್ಕೆ ಭದ್ರೇಗೌಡ ಖುಷಿಯಾಗುತ್ತಾನೆ, ವಿಚಾರ ತಿಳಿದ ವಿದ್ಯಾ ಅಳುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 16ನೇ ಎಪಿಸೋಡ್ ಕಥೆ ಹೀಗಿದೆ. ಭದ್ರನ ಮದುವೆ ವಿಚಾರದಲ್ಲಿ ಶಿವರಾಮೇಗೌಡ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ರಾಜೇಗೌಡನ ಜೊತೆ ಸಂಬಂಧ ಮುಂದುವರೆಸುತ್ತಿಲ್ಲ ಎಂದು ಮನೆಯವರ ಮುಂದೆ ಶಿವರಾಮೇಗೌಡ ಹೇಳುತ್ತಾನೆ. ಹಾಗಾದರೆ ನನ್ನ ಮಗಳು ವಿನಂತಿಯನ್ನು ಅಣ್ಣ ಒಪ್ಪಿದ್ದಾನೆ ಎಂದು ಸಾವಿತ್ರಿ ತಪ್ಪು ತಿಳಿಯುತ್ತಾಳೆ. ಭದ್ರ-ವಿನಂತಿ ಮದುವೆ ವಿಚಾರ ಮುಗಿದುಹೋದ ಅಧ್ಯಾಯ ಎಂದು ಶಿವರಾಮೇಗೌಡ ಹೇಳುತ್ತಾನೆ.
ಟೀಚರ್ ಬಳಿ ಸುಳ್ಳು ಹೇಳಿ ಟ್ಯೂಷನ್ನಿಂದ ಮಕ್ಕಳನ್ನು ಮನೆಗೆ ಕರೆತಂದ ಚೆಲುವ
ಭದ್ರನಿಗೆ ನಾನು ಬೇರೆ ಕಡೆ ಹೆಣ್ಣು ನೋಡಿದ್ದೇನೆ. ಎಲ್ಲರೂ ನೋಡಲು ಹೋಗೋಣ ಎಂದು ಹೇಳುತ್ತಾನೆ. ರಾಜೇಗೌಡನ ಮನೆ ಸಂಬಂಧವೂ ಬೇಡ, ವಿನಂತಿಯೂ ಬೇಡ ಎಂದ ಮೇಲೆ ಈ ಶಿವರಾಮೇಗೌಡ ನೋಡಿರುವ ಆ ಹುಡುಗಿ ಯಾರಿರಬಹುದು ಎಂದು ಈಶ್ವರಿ ಯೋಚಿಸುತ್ತಾಳೆ. ಹೆತ್ತ ತಾಯಿಗೂ ಹೇಳದೆ ನನ್ನ ಮಗ ಏನು ಮಾಡಲು ಹೊರಟಿದ್ಧಾನೆ ಎಂದು ತಾಯಿ ಕೂಡಾ ಕುತೂಹಲ ವ್ಯಕ್ತಪಡಿಸುತ್ತಾಳೆ. ಸಾವಿತ್ರಿ ಹಾಗೂ ವಿನಂತಿ ಅಳುತ್ತಾ ರೂಮ್ ಸೇರುತ್ತಾರೆ. ಯಾರ ಮನೆಗೆ ಹೆಣ್ಣು ಕೇಳಲು ಹೋಗುತ್ತಿದ್ದೇವೆ ಎಂದು ತಿಳಿಯದೆ ಭದ್ರ ಕೂಡಾ ಗೊಂದಲಕ್ಕೊಳಗಾಗುತ್ತಾನೆ. ಆದರೂ ಅಪ್ಪನ ಮಾತಿಗೆ ಇಲ್ಲ ಎನ್ನದೆ ಹೆಣ್ಣು ನೋಡಲು ಹೊರಡುತ್ತಾನೆ. ಹಳೆ ಬಟ್ಟೆಯಲ್ಲಿರುವ ಮಗನನ್ನು ನೋಡಿದ ಶಿವರಾಮೇಗೌಡ, ಅವನಿಗೆ ನಾನು ತಂದ ಹೊಸ ಬಟ್ಟೆ ಕೊಡು ಎಂದು ಹೆಂಡತಿ ಮೋಹನಳಿಗೆ ಹೇಳುತ್ತಾನೆ. ಆ ಬಟ್ಟೆ ಧರಿಸಿ ಭದ್ರ ಕಾರು ಹತ್ತುತ್ತಾನೆ.
ಇತ್ತ ಮಗಳನ್ನು ಈಗಲೇ ಮದುವೆ ಮಾಡುವುದು ಬೇಡ ಎಂದು ರತ್ನ ಹಟ ಹಿಡಿಯುತ್ತಾಳೆ. ಅವಳ ಮಾತಿಗೆ ಕೋಪಗೊಂಡ ಚೆಲುವ, ಈಳಿಗೆ ಮಣೆ ತೆಗೆದುಕೊಂಡು ನೀನು ಒಪ್ಪದಿದ್ದರೆ ನಾನು ಸಾಯುತ್ತೇನೆ ಎಂದು ಬೆದರಿಸುತ್ತಾನೆ. ಹೇಗಾದರೂ ಮಾಡಿ ನಿನ್ನ ಮಗಳನ್ನು ಒಪ್ಪಿಸಬೇಕು, ಇಲ್ಲದಿದ್ದರೆ ನಿನ್ನ ಮುತ್ತೈದೆತನ ಉಳಿಯುವುದಿಲ್ಲ. ಗೌಡರ ಮನೆಯವರು ಬಂದಾಗ ನಗುನಗುತ್ತಾ ಮಾತನಾಡು ನಾನು ಮಕ್ಕಳನ್ನು ಕರೆತರುತ್ತೇನೆ ಎಂದು ಹೇಳಿ ಮನೆಯಿಂದ ಹೊರಡುತ್ತಾನೆ. ವಿದ್ಯಾ ಹಾಗೂ ಸರಸ್ವತಿ ಟ್ಯೂಷನ್ಗೆ ಹೋಗಿರುತ್ತಾರೆ. ಅಲ್ಲಿಗೆ ಬರುವ ಚೆಲುವ, ನನ್ನ ತಾಯಿಯ ಆರೋಗ್ಯ ಗಂಭೀರವಾಗಿದೆ, ದಯವಿಟ್ಟು ಮಕ್ಕಳನ್ನು ಕಳಿಸಿಕೊಡಿ ಎಂದು ಮನವಿ ಮಾಡುತ್ತಾನೆ. ಅಕ್ಕ ತಂಗಿಯರು ಇಬ್ಬರೂ ಗಾಬರಿಯಾಗಿ ಅಪ್ಪನೊಂದಿಗೆ ಮನೆಗೆ ಬರುತ್ತಾರೆ. ಅಜ್ಜಿ ಆರೋಗ್ಯವಾಗಿ ಇರುವುದನ್ನು ನೀಡಿ ಆಶ್ಚರ್ಯಗೊಳ್ಳುತ್ತಾರೆ. ಅಪ್ಪ ಸುಳ್ಳು ಹೇಳಿ ಏಕೆ ಕರೆತಂದರು ಎಂದು ವಿದ್ಯಾ ಕೇಳುತ್ತಾಳೆ. ನಿಮ್ಮ ಅಪ್ಪ ಎಲ್ಲರನ್ನೂ ದೇವಸ್ಥಾನಕ್ಕೆ ಕರೆದೊಯ್ಯಬೇಕು ಎಂದುಕೊಂಡಿದ್ದಾರೆ, ಅದಕ್ಕೆ ಆ ರೀತಿ ಸುಳ್ಳು ಹೇಳಿದ್ದಾರೆ. ಹೋಗಿ ರೆಡಿ ಆಗಿ. ನಿನಗೆ ಸೀರೆ ಇಟ್ಟಿದ್ದೇನೆ ಅದನ್ನೇ ಉಟ್ಟುಕೋ ಎಂದು ವಿದ್ಯಾಗೆ ಹೇಳುತ್ತಾಳೆ. ಎಂದಿಗೂ ಇಲ್ಲದ್ದು ಇಂದು ಸೀರೆ ಏಕೆ ಎಂದು ವಿದ್ಯಾ ಅನುಮಾನದಿಂದ ಕೇಳುತ್ತಾಳೆ. ದೇವಸ್ಥಾನಕ್ಕೆ ಸೀರೆ ಉಟ್ಟು ಹೋದರೆ ಒಳ್ಳೆಯದು, ಹೋಗು ಎಂದು ರತ್ನ ಹೇಳುತ್ತಾಳೆ.
ವಿದ್ಯಾ ಮನೆಗೆ ಹೆಣ್ಣು ಕೇಳಲು ಬಂದಿದ್ದಕ್ಕೆ ಖುಷಿಯಾದ ಭದ್ರ
ಶಿವರಾಮೇಗೌಡ ಕುಟುಂಬಸಮೇತ ವಿದ್ಯಾ ಮನೆ ಬಳಿ ಬರುತ್ತಾನೆ. ಎಲ್ಲರೂ ಕಾರು ಇಳಿದರೂ ಭದ್ರ ಮಾತ್ರ ತಲೆ ತಗ್ಗಿಸಿ ಕುಳಿತುಕೊಂಡಿರುತ್ತಾನೆ. ಭದ್ರ, ಯಾರ ಮನೆಗೆ ಬಂದಿದ್ದೇವೆ ಎಂದು ಈಗಲಾದರೂ ಕತ್ತು ಎತ್ತಿ ನೋಡು ಎಂದು ಚಿಕ್ಕೇಗೌಡ ಹೇಳುತ್ತಾನೆ. ವಿದ್ಯಾ ಮನೆ ಬಳಿ ಕಾರು ನಿಂತಿರುವುದನ್ನು ನೋಡಿ ಭದ್ರ ಖುಷಿಯಾಗುತ್ತಾನೆ. ಎಲ್ಲರೂ ನನ್ನಿಂದ ಏಕೆ ವಿಚಾರ ಮುಚ್ಚಿಟ್ರಿ ಎಂದು ಕೇಳುತ್ತಾನೆ. ನಿನಗೆ ಸರ್ಪ್ರೈಸ್ ಕೊಡೋಕೆ ಎಂದು ಗೋವೀಂದೇಗೌಡ ಹೇಳುತ್ತಾನೆ. ನೀನು ಮಾತ್ರ ಒಳ್ಳೆ ಮಗ ಎಂದು ನಿರೂಪಿಸಿದೆ, ನಾನೂ ಕೂಡಾ ನಿನಗೆ ಒಳ್ಳೆ ಅಪ್ಪ ಎಂದು ನಿರೂಪಿಸಬೇಕು ತಾನೇ? ಅದಕ್ಕೆ ನಿನ್ನ ಬಳಿ ಮೊದಲೇ ಹೇಳಲಿಲ್ಲ ಎಂದು ಶಿವರಾಮೇಗೌಡ ಹೇಳುತ್ತಾನೆ. ಭದ್ರ ಖುಷಿಯಿಂದ ಅಪ್ಪನನ್ನು ಅಪ್ಪಿಕೊಳ್ಳುತ್ತಾನೆ. ರತ್ನ, ಚೆಲುವ ಹಾಗೂ ಅವನ ತಾಯಿ ಗೌಡರನ್ನು ಬರಮಾಡಿಕೊಳ್ಳಲು ಮನೆ ಹೊರಗೆ ಬರುತ್ತಾರೆ. ಪರವಾಗಿಲ್ಲ ರತ್ನ ಊಟ ಕೊಡುವ ನೆಪದಲ್ಲಿ ಮಕ್ಕಳನ್ನು ತೋರಿಸಿ ಸಂಬಂಧ ಬೆಳೆಸಿಬಿಟ್ಟೆ ಎಂದು ಈಶ್ವರಿ ಕೊಂಕು ಮಾತನಾಡುತ್ತಾಳೆ.
ಎಲ್ಲರೂ ಒಳಗೆ ಬರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ಶಿವರಾಮೇಗೌಡನ ತಾಯಿ, ಮನೆ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾಳೆ. ಕ್ವಾಟ್ಲೆ ಹಾಗೂ ಭದ್ರ ಅವಳನನು ಸುಮ್ಮನಿರಲು ಸೂಚಿಸುತ್ತಾರೆ. ಎಲ್ಲರ ಮಾತನ್ನು ಕೇಳಿಸಿಕೊಳ್ಳುವ ಸರಸ್ವತಿ ಬೇಸರಗೊಳ್ಳುತ್ತಾಳೆ. ಇವರು ಬಂದಿರುವುದು ಹೆಣ್ಣು ನೋಡಲು, ಈ ವಿಚಾರವನ್ನು ಮೊದಲು ಅಕ್ಕನ ಬಳಿ ಹೇಳಬೇಕು ಎಂದು ವಿದ್ಯಾ ಬಳಿ ಎಲ್ಲವನ್ನೂ ಹೇಳುತ್ತಾಳೆ. ಅದನ್ನು ಕೇಳಿ ವಿದ್ಯಾ ಶಾಕ್ ಆಗುತ್ತಾಳೆ. ಅವಳನ್ನು ಹೊರಗೆ ಕರೆದೊಯ್ಯಲು ರತ್ನ ಬರುತ್ತಾಳೆ. ನನಗೆ ಈಗಲೇ ಮದುವೆ ಬೇಡ, ನಾನು ಹೊರಗೆ ಬರುವುದಿಲ್ಲ, ನಾನು ಓದಬೇಕು, ಡಾಕ್ಟರ್ ಆಗಬೇಕು ಎಂದು ವಿದ್ಯಾ ಅಳಲು ಶುರು ಮಾಡುತ್ತಾಳೆ. ಚೆಲುವ ಕೂಡಾ ಅಲ್ಲಿಗೆ ಬರುತ್ತಾನೆ. ಹೆಂಡತಿ ಮೇಲೆ ಕೋಪಗೊಳ್ಳುತ್ತಾನೆ. ಮಗಳನ್ನು ಸಮಾಧಾನ ಮಾಡುವ ಚೆಲುವ, ಅವರು ಬಂದಿರುವುದು ಹೆಣ್ಣು ಕೇಳಲು ಅಷ್ಟೇ, ಮುಂದಿನದ್ದು ನಂತರ ನೋಡಿಕೊಳ್ಳೋಣ. ಗೌಡರ ಮನೆಯವರಿಗೆ ಅವಮಾನ ಮಾಡುವುದು ಬೇಡ ಮಗಳೇ, ಹೊರಗೆ ಬಾ ಎಂದು ಮನವಿ ಮಾಡುತ್ತಾನೆ.
ಅಪ್ಪನ ಮಾತಿಗೆ ಒಪ್ಪಿ ವಿದ್ಯಾ ಹೊರಗೆ ಬರುತ್ತಾಳಾ? ವಿದ್ಯಾಳನ್ನು ನೋಡಿ ಶಿವರಾಮೇಗೌಡನ ತಾಯಿ ಮೆಚ್ಚಿಕೊಳ್ಳುತ್ತಾಳಾ? ಭಾನುವಾರದ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ