ಮುದ್ದು ಸೊಸೆ: ತಾಂಬೂಲ ಬದಲಿಸಿಕೊಂಡ ಭದ್ರೇಗೌಡ-ವಿದ್ಯಾ ಕುಟುಂಬ; ನಮ್ಮನೆ ಸೊಸೆ ಇನ್ಮುಂದೆ ಓದುವುದು ಬೇಡವೆಂದು ಷರತ್ತು ವಿಧಿಸಿದ ಶಿವರಾಮೇಗೌಡ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 17ನೇ ಸಂಚಿಕೆಯಲ್ಲಿ ಭದ್ರೇಗೌಡ-ವಿದ್ಯಾ ಕುಟುಂಬದವರು ತಾಂಬೂಲ ಬದಲಿಸಿಕೊಳ್ಳುತ್ತಾರೆ. ಜೊತೆಗೆ ಶಿವರಾಮೇಗೌಡ ಒಂದು ಷರತ್ತು ವಿಧಿಸುತ್ತಾನೆ. ಇದು ವಿದ್ಯಾಳ ಕನಸಿಗೆ ವಿರುದ್ಧವಾಗಿರುತ್ತದೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 17ನೇ ಎಪಿಸೋಡ್ ಕಥೆ ಹೀಗಿದೆ. ಯಾರಿಗೂ ಹೇಳದೆ ಶಿವರಾಮೇಗೌಡ, ಮನೆಯವರನ್ನು ವಿದ್ಯಾ ಮನೆಗೆ ಹೆಣ್ಣು ನೋಡಲು ಕರೆತರುತ್ತಾನೆ. ತಾನು ಪ್ರೀತಿಸುತ್ತಿರುವ ವಿದ್ಯಾ ಮನೆಗೆ ನಾನು ಹೆಣ್ಣು ನೋಡಲು ಬಂದಿರುವುದು ಎಂದು ತಿಳಿದು ಭದ್ರ ಖುಷಿಯಾಗುತ್ತಾನೆ. ಶಿವರಾಮನ ತಾಯಿ, ಈಶ್ವರಿ ಮಾತ್ರ ಕೊಂಕು ಮಾತನಾಡುತ್ತಾರೆ. ಗೌಡರ ಮನೆಯವರು ಬಂದಿರುವುದು ಹೆಣ್ಣು ಕೇಳಲು ಎಂದು ತಿಳಿದು ವಿದ್ಯಾ ಕಣ್ಣೀರಿಡುತ್ತಾಳೆ.
ಅಮ್ಮನ ಮಾತಿಗೆ ಬೆಲೆ ಕೊಟ್ಟು ಎಲ್ಲರ ಮುಂದೆ ಬಂದು ನಿಂತ ವಿದ್ಯಾ
ಹುಡುಗಿಯನ್ನು ಕರೆಸಿ ಎಂದು ಗೌಡರ ಮನೆಯವರು ಹೇಳುತ್ತಾರೆ. ವಿದ್ಯಾಳನ್ನು ಕರೆದುಕೊಂಡು ಬಾ ಎಂದು ಚೆಲುವ ತನ್ನ ಹೆಂಡತಿ ರತ್ನಳಿಗೆ ಹೇಳುತ್ತಾನೆ. ರತ್ನ ಮಗಳನ್ನು ಕರೆತರಲು ಒಳಗೆ ಹೋಗುತ್ತಾಳೆ. ಆದರೆ ವಿದ್ಯಾ ಮಾತ್ರ ನನಗೆ ಮದುವೆ ಬೇಡ, ನಾನು ಹೊರಗೆ ಬರುವುದಿಲ್ಲ ಎಂದು ಹಟ ಹಿಡಿದು ನಿಲ್ಲುತ್ತಾಳೆ. ಎಷ್ಟು ಹೊತ್ತಾದರೂ ವಿದ್ಯಾ ಬರದಿದ್ದಾಗ ಚೆಲುವ ಒಳಗೆ ಹೋಗುತ್ತಾನೆ. ಗೌಡರ ಮನೆಯವರು ಕರೆಯುತ್ತಿದ್ದಾರೆ. ಜ್ಯೂಸ್ ತೆಗೆದುಕೊಂಡು ಬಾ ಎನ್ನುತ್ತಾನೆ. ಅಪ್ಪ ಇದೊಂದು ಬಾರಿ ನನ್ನ ಮಾತು ಕೇಳು, ನನಗೆ ಓದಬೇಕೆಂದು ಬಹಳ ಆಸೆ, ನನಗೆ ಮದುವೆ ಬೇಡ, ಅವರಿಗೆ ಹೇಳಿಬಿಡು ಎನ್ನುತ್ತಾಳೆ. ಹೆಣ್ಣು ನೋಡಿದ ಮಾತ್ರಕ್ಕೆ ಮದುವೆ ಆಗುವುದಿಲ್ಲ. ನೀನು ಒಮ್ಮೆ ಹೊರಗೆ ಬಂದು ಹೋಗು, ಅವರ ಜೊತೆ ನಾನು ಮಾತನಾಡುತ್ತೇನೆ ಎನ್ನುತ್ತಾನೆ.
ಮದುವೆಯೇ ಬೇಡ ಅಂದ ಮೇಲೆ ಜ್ಯೂಸ್ ಏಕೆ ಕೊಡಬೇಕು ಎಂದು ವಿದ್ಯಾ ಕೇಳುತ್ತಾಳೆ. ಹೆಣ್ಣು ಮಕ್ಕಳಿಗೆ ಇಷ್ಟು ಹಟ ಇರಬಾರದು. ಸುಮ್ಮನೆ ಬಂದು ಜ್ಯೂಸ್ ಕೊಟ್ಟು ಹೋಗು ಎನ್ನುತ್ತಾನೆ, ವಿದ್ಯಾ ಹಟ ನಿಲ್ಲಿಸದೆ ಇದ್ದಾಗ ರತ್ನಳನ್ನು ಹಿಂಸಿಸುತ್ತಾನೆ. ಅಮ್ಮನಿಗೆ ಏನೂ ಮಾಡಬೇಡ ಬಿಟ್ಟುಬಿಡು ಎಂದು ವಿದ್ಯಾ ಮನವಿ ಮಾಡುತ್ತಾಳೆ. ನಾನು ಸುಮ್ಮನಿರಬೇಕು ಎಂದರೆ ನೀನು ಹೊರಗೆ ಬರಬೇಕು ಎನ್ನುತ್ತಾನೆ. ಅವಳನ್ನು ಕರೆತರುವ ಜವಾಬ್ದಾರಿ ನಿನ್ನದು ಎಂದು ಹೇಳಿ ಚೆಲುವ ಹೊರಗೆ ಬರುತ್ತಾನೆ. ರತ್ನ ಮಗಳಿಗೆ ಸಮಾಧಾನ ಮಾಡಿ ಮುಂದೆ ನೋಡೋಣ, ಈಗ ಹೋಗಿ ಜ್ಯೂಸ್ ಕೊಟ್ಟು ಬಾ ಎನ್ನುತ್ತಾಳೆ. ಅಮ್ಮನ ಮಾತಿಗೆ ಒಪ್ಪಿ ವಿದ್ಯಾ ಜ್ಯೂಸ್ ತೆಗೆದುಕೊಂಡು ಹೊರಗೆ ಬರುತ್ತಾಳೆ.
ವಿದ್ಯಾ-ಭದ್ರೇಗೌಡ ಮದುವೆ ಫಿಕ್ಸ್
ಮನಸ್ಸು ಕದ್ದ ಹುಡುಗಿಯನ್ನು ನೋಡಿ ಭದ್ರ ನಾಚಿಕೊಳ್ಳುತ್ತಾನೆ, ತನ್ನ ಮೊಬೈಲ್ನಲ್ಲಿ ಅವಳ ಫೋಟೋ ಕ್ಲಿಕ್ ಮಾಡುತ್ತಾನೆ. ವಿದ್ಯಾ ಎಲ್ಲರಿಗೂ ಜ್ಯೂಸ್ ಕೊಡುತ್ತಾಳೆ. ವಿದ್ಯಾಳನ್ನು ನೋಡಿ ಈಶ್ವರಿ, ಇವಳು ಏನು ಚೆನ್ನಾಗಿದ್ದಾಳೆ ಎಂದು ಭದ್ರ ಇವಳನ್ನು ಒಪ್ಪಿಕೊಂಡ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ. ನನಗಂತೂ ಹುಡುಗಿ ಒಪ್ಪಿಗೆಯಾಗಿದ್ದಾಳೆ. ನಿಮಗೆಲ್ಲಾ ಒಪ್ಪಿಗೆಯಾ ಎಂದು ಶಿವರಾಮೇಗೌಡ ಮನೆಯವರನ್ನು ಕೇಳುತ್ತಾನೆ. ಇಬ್ಬರ ಜೋಡಿ ಚೆನ್ನಾಗಿದೆ ಎಂದು ಮೋಹನ ಹೇಳುತ್ತಾಳೆ. ಗೋವಿಂದ ಪುರೋಹಿತರನ್ನು ಕೇಳಿ ಒಂದು ಒಳ್ಳೆ ದಿನ ಗೊತ್ತು ಮಾಡು, ಆದಷ್ಟು ಬೇಗ ಮದುವೆ ಮಾಡೋಣ ಎಂದು ಶಿವರಾಮೇಗೌಡ, ತಮ್ಮನಿಗೆ ಹೇಳುತ್ತಾನೆ. ನಾನು ಆಗಲೇ ಕೇಳಿದ್ದೇನೆ, ಮುಂದಿನ ಬುಧವಾರ ಒಳ್ಳೆ ದಿನವಿದೆ, ಅದನ್ನು ಬಿಟ್ಟರೆ ಇನ್ನು 6 ತಿಂಗಳು ಯಾವ ಮುಹೂರ್ತವೂ ಇಲ್ಲ ಎಂದು ಹೇಳಿದ್ದಾಗಿ ಗೋವಿಂದ ಹೇಳುತ್ತಾನೆ.
ಶುಭ ಕಾರ್ಯ ಮಾಡಲು ತಡ ಮಾಡಬಾರದು, ಮುಂದಿನ ಬುಧವಾರವೇ ಮದುವೆ ಮಾಡೋಣ, ನಿನಗೆ ಒಪ್ಪಿಗೆಯೇ ಚೆಲುವ ಎಂದು ಶಿವರಾಮೇಗೌಡ ಕೇಳುತ್ತಾನೆ. ತಕ್ಷಣ ಸಾಧ್ಯವಿಲ್ಲ. ನಿಮ್ಮ ಮಟ್ಟಿಗೆ ಅಲ್ಲದಿದ್ದರೂ, ನಮಗೆ ಸಾಧ್ಯವಾದಷ್ಟು ತಯಾರಿ ಮಾಡಿಕೊಳ್ಳಬೇಕು, ಹಣ ಹೊಂದಿಸಲು ಸಮಯ ಬೇಕು ಎಂದು ಚೆಲುವ ಹೇಳುತ್ತಾನೆ. ನೀನು ಅದರ ಬಗ್ಗೆ ಯೋಚಿಸಬೇಡ, ನಿನ್ನ ಮಗಳನ್ನು ಉಟ್ಟ ಬಟ್ಟೆಯಲ್ಲಿ ದೇವಸ್ಥಾನದವರೆಗೂ ಕರೆದುಕೊಂಡ ಬಾ. ಉಳಿದದ್ದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾನೆ. ಹಾಗಾದರೆ ಈಗ ತಾಂಬೂಲ ಬದಲಿಸಿಕೊಳ್ಳೋಣ ಎನ್ನುತ್ತಾನೆ. ಇವರ ಮಾತುಗಳನ್ನು ಕೇಳಿಸಿಕೊಳ್ಳುವ ವಿದ್ಯಾ, ತನ್ನ ಕನಸು ನುಚ್ಚು ನೂರಾಯ್ತಲ್ಲ ಎಂದು ಅಳುತ್ತಾಳೆ. ಇಬ್ಬರ ಮನೆಯವರು ತಾಂಬೂಲ ಬದಲಿಸಿಕೊಳ್ಳುತ್ತಾರೆ. ಇನ್ಮುಂದೆ ವಿದ್ಯಾ ಓದಲು ಹೋಗುವುದು ಬೇಡ, ನಮ್ಮ ಮನೆ ಸೊಸೆ ಇನ್ಮುಂದೆ ಮನೆಯಲ್ಲೇ ಇರಲಿ ಎಂದು ಶಿವರಾಮೇಗೌಡ ಷರತ್ತು ವಿಧಿಸುತ್ತಾನೆ, ಆ ಮಾತು ಕೇಳಿ ವಿದ್ಯಾ ಕಣ್ಣೀರ ಕಟ್ಟೆ ಒಡೆಯುತ್ತದೆ.
ಪುರೋಹಿತರು ಹೇಳಿದ ದಿನಾಂಕದಲ್ಲೇ ವಿದ್ಯಾ-ಭದ್ರನ ಮದುವೆ ಆಗುವುದಾ? ವಿದ್ಯಾ ಓದಿನ ಕನಸು ಇನ್ನು ಕನಸಾಗೇ ಉಳಿಯುವುದಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ
ವಿಭಾಗ