ಮುದ್ದು ಸೊಸೆ: ವಿದ್ಯಾ ಕಾಲೇಜು ಸಮವಸ್ತ್ರ ಸುಟ್ಟು ಹಾಕಿದ ಚೆಲುವರಾಜ; ತನ್ನನ್ನು ಮದುವೆ ಆಗುವಂತೆ ಭದ್ರನ ಬಳಿ ಹಟ ಹಿಡಿದ ವಿನಂತಿ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 19ನೇ ಸಂಚಿಕೆಯಲ್ಲಿ ಮಗಳು ಇನ್ಮುಂದೆ ಕಾಲೇಜಿಗೆ ಹೋಗಬಾರದು ಎಂಬ ಕಾರಣಕ್ಕೆ ಚೆಲುವ, ಅವಳ ಕಾಲೇಜು ಸಮವಸ್ತ್ರವನ್ನು ಸುಡುತ್ತಾನೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 19ನೇ ಎಪಿಸೋಡ್ ಕಥೆ ಹೀಗಿದೆ. ಶಿವರಾಮೇಗೌಡ ಹಾಗೂ ಕುಟುಂಬ ಚೆಲುವನ ಮನೆಗೆ ಹೋಗಿ ಹೆಣ್ಣು ನೋಡಿ ತಾಂಬೂಲ ಬದಲಿಸಿಕೊಂಡು ಬರುತ್ತಾರೆ. ಮಗಳು ದೊಡ್ಡ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾಳೆ ಎಂದು ಚೆಲುವ ಖುಷಿ ಪಟ್ಟರೂ ವಿದ್ಯಾಗೆ ಮಾತ್ರ ಮದುವೆ ಆಗಲು ಇಷ್ಟವಿರುವುದಿಲ್ಲ. ಹೇಗಾದರೂ ಮಾಡಿ ಅಪ್ಪನನ್ನು ಒಪ್ಪಿಸೋಣ ಎಂದು ತನ್ನ ಮನಸ್ಸಿನ ಆಸೆಯನ್ನು ಅವನ ಬಳಿ ಹೇಳಿಕೊಳ್ಳುತ್ತಾನೆ. ಆದರೆ ಚೆಲುವ, ತನ್ನ ಹೆಂಡತಿ ರತ್ನಳನ್ನು ದಾಳವನ್ನಾಗಿಸಿಕೊಂಡು ಮಗಳನ್ನು ಮದುವೆಗೆ ಒಪ್ಪಿಸುತ್ತಾನೆ.
ವಿದ್ಯಾ ಕಾಲೇಜು ಬಟ್ಟೆಯನ್ನು ಒಲೆಗೆ ಹಾಕಿ ಸುಟ್ಟ ಚೆಲುವ
ನನ್ನ ಮೇಲೆ ಕರುಣೆ ತೋರಿಸು ಎಂದು ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದೆ, ಆದರೆ ಆ ದೇವರು ಈಗ ಕರುಣೆ ತೋರಿಸಿದ್ಧಾನೆ, ನಮಗೆ ಅದೃಷ್ಟ ಒಲಿದು ಬಂದಿದೆ. ಅದನ್ನು ಸಹಿಸಲಾಗದೆ ಹಲವರು ಈ ಮದುವೆ ನಿಂತರೆ ಸಾಕು ಎಂದು ಕಾಯುತ್ತಿದ್ಧಾರೆ. ಅಂತವರು ನನ್ನನ್ನು ವ್ಯಂಗ್ಯ ಮಾಡಿಕೊಂಡು ನಗುವಂತೆ ಮಾಡಬೇಕೆಂದು ನೀನು ಪ್ರಯತ್ನಿಸುತ್ತಿದ್ದೀಯ? ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೆಯೋ ಈ ಜನ್ಮದಲ್ಲಿ ಅಷ್ಟು ದೊಡ್ಡ ಮನೆಗೆ ಸೊಸೆಯಾಗಿ ಹೋಗುತ್ತಿದ್ದೀಯ. ಹೂವಿನ ಜೊತೆ ನಾರು ಕೂಡಾ ಸ್ವರ್ಗಕ್ಕೆ ಸೇರಿತು ಎನ್ನುವಂತೆ ನಿನ್ನಿಂದ ಈ ಮನೆಗೆ ಕೂಡಾ ಒಳ್ಳೆಯದಾಗುತ್ತಿದೆ. ಇನ್ಮುಂದೆ ಗಂಡನ ಮನೆಯಲ್ಲಿ ಹೇಗೆ ಸಂಸಾರ ಮಾಡುವುದು ಎಂಬುದನ್ನು ಕಲಿ, ಅದನ್ನು ಹೊರತುಪಡಿಸಿ ಮದುವೆ ಬೇಡ ಎಂದು ಹೇಳಿದರೆ ನಾನು ಸುಮ್ಮನಿರುವುದಿಲ್ಲ ಎಂದು ಚೆಲುವ ಎಚ್ಚರಿಸುತ್ತಾನೆ. ಚೆಲುವ ಹೇಗೆ ಎಂದು ಗೊತ್ತಿದ್ದರೂ ನೀವು ಇಷ್ಟು ಹಟ ಏಕೆ ಮಾಡುತ್ತೀರಿ, ಅವನು ಹೇಳಿದಂತೆ ಕೇಳಿದರೆ ನಿನ್ನ ಬಾಳು ಚೆನ್ನಾಗಿರುತ್ತದೆ, ಈ ಮನೆಯೂ ಚೆನ್ನಾಗಿರುತ್ತದೆ ಎಂದು ಚೆಲುವನ ತಾಯಿ ಕಾಳವ್ವ ಮೊಮ್ಮಗಳಿಗೆ ಬುದ್ಧಿ ಹೇಳುತ್ತಾಳೆ.
ಮರುದಿನ ವಿದ್ಯಾ ಎಂದಿನಂತೆ ಎದ್ದ ಕೂಡಲೇ ಸ್ನಾನಕ್ಕೆ ಹೋಗಲು ಕಾಲೇಜು ಯೂನಿಫಾರ್ಮ್ ತೆಗೆದುಕೊಳ್ಳಲು ಹೋಗುತ್ತಾಳೆ. ಆದರೆ ಅದು ಎಲ್ಲಿಯೂ ಕಾಣುವುದಿಲ್ಲ. ಇತ್ತ ಚೆಲುವ ಮಗಳು ಕಾಲೇಜಿಗೆ ಹೋಗಬಾರದು ಎಂಬ ಕಾರಣಕ್ಕೆ ಅವಳ ಯೂನಿಫಾರ್ಮ್, ಪೆನ್ ಎಲ್ಲವನ್ನೂ ಒಲೆಗೆ ಹಾಕಿ ಸುಡುತ್ತಾನೆ. ಅದನ್ನು ರತ್ನ ನೋಡುತ್ತಾಳೆ. ಏನು ಮಾಡುತ್ತಿದ್ದೀಯ, ಮಗಳ ಕಾಲೇಜು ಬಟ್ಟೆ ಏಕೆ ಸುಡುತ್ತಿದ್ದೀಯ ಎಂದು ಕೇಳುತ್ತಾಳೆ. ತಾಂಬೂಲ ಬದಲಿಸಿಕೊಳ್ಳುತ್ತಿದ್ದಂತೆ ವಿದ್ಯಾ, ಗೌಡರ ಮನೆ ಸೊಸೆಯಾಗಿಬಿಟ್ಟಳು. ಅಂದರೆ ಅವಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವರದ್ದು. ವಿದ್ಯಾ ಕಾಲೇಜಿಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ಆ ಮಾತನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತನ್ನೂ ಮೀರಿ ವಿದ್ಯಾಳನ್ನು ಹೇಗೆ ಕಾಲೇಜಿಗೆ ಕಳಿಸುವುದು. ನಿನ್ನ ಮಗಳಿಗೆ ಬುದ್ಧಿ ಹೇಳು, ಇಲ್ಲವಾದರೆ ನಾನು ಫೋಟೋದಲ್ಲಿ ಇರುತ್ತೇನೆ ಎನ್ನುತ್ತಾನೆ. ಕಾಲೇಜು ಬಟ್ಟೆ, ಪೆನ್ ಎಲ್ಲವೂ ಭಸ್ಮವಾಗಿದ್ದನ್ನು ನೋಡಿ ವಿದ್ಯಾ ಶಾಕ್ ಆಗುತ್ತಾಳೆ. ಅಪ್ಪ ಸುಟ್ಟು ಹಾಕಿದ್ದು ನನ್ನ ಸಮವಸ್ತ್ರವನ್ನಲ್ಲ, ನನ್ನ ಆಸೆ, ಕನಸುಗಳನ್ನು ಎಂದು ವಿದ್ಯಾ ಅಳುತ್ತಾಳೆ. ಮಗಳಿಗೆ ಸಮಾಧಾನ ಮಾಡುವ ರತ್ನ, ನಿನ್ನ ಅಪ್ಪ ಹೇಳಿದಂತೆ ಈ ಮದುವೆಗೆ ಒಪ್ಪಿಕೋ, ಇಲ್ಲವಾದರೆ ಅವರು ನನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಮನವಿ ಮಾಡುತ್ತಾಳೆ.
ಭದ್ರ ನನ್ನನ್ನು ಹೊಡೆದಿದ್ದಾಗಿ ಸಾವಿತ್ರಿ ಬಳಿ ಸುಳ್ಳು ಹೇಳಿದ ವಿನಂತಿ
ಭದ್ರನ ಮದುವೆ ಫಿಕ್ಸ್ ಆಗಿದ್ದಕ್ಕೆ ವಿನಂತಿ ದುಃಖ ವ್ಯಕ್ತಪಡಿಸುತ್ತಾಳೆ. ಅವನ ಬಳಿ ಹೋಗಿ ಮತ್ತೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ನನಗೆ ನಿನ್ನ ಮೇಲೆ ಎಂದಿಗೂ ಆ ಭಾವನೆ ಇಲ್ಲ, ನಿನ್ನನ್ನು ಮದುವೆ ಆಗಬೇಕೆಂದು ಎಂದಿಗೂ ನಾನು ಅಂದುಕೊಂಡಿಲ್ಲ ಎನ್ನುತ್ತಾನೆ. ಅವನನ್ನು ಅಪ್ಪಿಕೊಳ್ಳುವ ವಿನಂತಿ ದಯವಿಟ್ಟು ನನ್ನನ್ನು ಮದುವೆ ಆಗು ಎನ್ನುತ್ತಾಳೆ. ನನ್ನನ್ನು ಬಿಡು ಎಂದು ಭದ್ರ ಮನವಿ ಮಾಡುತ್ತಾನೆ. ನೀನು ನನ್ನನ್ನು ಮದುವೆ ಆಗಲು ಒಪ್ಪಿಕೊಳ್ಳುವವರೆಗೂ ನಾನು ಬಿಡುವುದಿಲ್ಲ ಎಂದು ಹಟ ಮಾಡುತ್ತಾಳೆ. ಅವಳಿಂದ ಬಿಡಿಸಿಕೊಳ್ಳುವ ಭದ್ರ ಇದು ಆಗದ ವಿಷಯ, ಎಷ್ಟು ಹೇಳಿದರೂ ಈ ರೀತಿ ವರ್ತಿಸುವುದು ಸರಿಯಲ್ಲ, ಇಲ್ಲಿಂದ ಹೋಗು ಎಂದು ಗದರುತ್ತಾನೆ.
ವಿನಂತಿ ಅಳುತ್ತಲೇ ಸಾವಿತ್ರಿ ಬಳಿ ಬರುತ್ತಾಳೆ. ಮಗಳು ಕಣ್ಣೀರಿಡುವುದನ್ನು ನೋಡಿ ಸಾವಿತ್ರಿ ಗಾಬರಿ ಆಗುತ್ತಾಳೆ. ಭದ್ರನ ಬಳಿ ಮಾತನಾಡಲು ಹೋಗಿದ್ದೆ, ಆದರೆ ಅವನು ಬಾಯಿಗೆ ಬಂದಂತೆ ಬೈದುಬಿಟ್ಟ, ನನ್ನ ಕೆನ್ನೆಗೆ ಹೊಡೆದ. ನಿನ್ನ ಅಮ್ಮ ಇಲ್ಲದ್ದನ್ನೆಲ್ಲಾ ನಿನ್ನ ತಲೆಗೆ ತುಂಬಿರುವುದಕ್ಕೆ ಈ ರೀತಿ ವರ್ತಿಸುತ್ತೀದ್ದೀಯ ಎಂದು ಹೇಳಿದ್ದಾಗಿ ಸುಳ್ಳು ಹೇಳುತ್ತಾಳೆ. ಅಮ್ಮ ಮಗಳು ಗಂಭೀರವಾಗಿ ಮಾತನಾಡುವುದನ್ನು ಈಶ್ವರಿ ಹಾಗೂ ಚಿತ್ರ ನೋಡುತ್ತಾರೆ. ಅವಳ ಬಳಿ ಬಂದು ಏನಾಯ್ತು ಎಂದು ಈಶ್ವರಿ ಕೇಳುತ್ತಾಳೆ. ಆದರೆ ಸಾವಿತ್ರಿ ಸತ್ಯವನ್ನು ಮುಚ್ಚಿಡುತ್ತಾಳೆ. ಏನಿಲ್ಲ ಬಿಸಿಲು ಹೆಚ್ಚಾಗಿದೆ ಅದಕ್ಕೆ ಕಾರಿನಲ್ಲಿ ಎಸಿ ಹಾಕಿ ಕೂರೋಣ ಎಂದು ಮಾತನಾಡಿಕೊಳ್ಳುತ್ತಿದ್ದೆವು ಅಷ್ಟೇ ಎಂದು ಮಗಳನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾಳೆ.
ವಿದ್ಯಾ ತನ್ನ ಅಸಹಾಯಕತೆಯನ್ನು ಯಾರ ಬಳಿ ಹೇಳಿಕೊಳ್ಳುತ್ತಾಳೆ? ಮಗಳು ಮಾತನ್ನು ನಂಬಿ ಸಾವಿತ್ರಿ ಭದ್ರನನ್ನು ಪ್ರಶ್ನಿಸುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ