ಮುದ್ದು ಸೊಸೆ: ವಿದ್ಯಾಗೆ ದುಬಾರಿ ಬೆಲೆಯ ಸೀರೆ, ಒಡವೆ ಖರೀದಿಸಿದ ಶಿವರಾಮೇಗೌಡ; ಮದುವೆ ನಿಲ್ಲಿಸಿ ಎಂದು ಈಶ್ವರಿ ಬಳಿ ಮನವಿ ಮಾಡಿದ ವಿದ್ಯಾ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 20 ನೇ ಸಂಚಿಕೆಯಲ್ಲಿ ವಿದ್ಯಾಗಾಗಿ ಶಿವರಾಮೇಗೌಡ ದುಬಾರಿ ಬೆಲೆಯ ಸೀರೆ, ಒಡವೆ ಖರೀದಿಸುತ್ತಾನೆ. ಈಶ್ವರಿ ಅದನ್ನು ವಿದ್ಯಾಗೆ ತಂದುಕೊಡುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 20ನೇ ಎಪಿಸೋಡ್ ಕಥೆ ಹೀಗಿದೆ. ವಿದ್ಯಾಗೆ ಮದುವೆ ಗೊತ್ತಾದ ನಂತರ ಚೆಲುವರಾಜ ಅವಳ ಕಾಲೇಜು ಸಮವಸ್ತ್ರವನ್ನು ಸುಡುತ್ತಾನೆ. ಅದು ಗೊತ್ತಾಗಿ ವಿದ್ಯಾ ಕಣ್ಣೀರಿಡುತ್ತಾಳೆ. ಅಪ್ಪ, ನೀನು ಸುಟ್ಟಿದ್ದು ಬಟ್ಟೆಯನ್ನಲ್ಲ, ನನ್ನ ಆಸೆ ಹಾಗೂ ಕನಸುಗಳನ್ನು ಎಂದು ನೋವು ಅನುಭವಿಸುತ್ತಾಳೆ. ಮತ್ತೊಂದೆಡೆ ಭದ್ರನ ರೂಮ್ಗೆ ಹೋಗುವ ವಿನಂತಿ ಅವನನ್ನು ಅಪ್ಪಿಕೊಂಡು ನನ್ನನ್ನು ಮದುವೆಯಾಗು ಎಂದು ಬೇಡಿಕೊಳ್ಳುತ್ತಾಳೆ. ಆದರೆ ಅವಳ ವರ್ತನೆಯಿಂದ ಭದ್ರ ಕೋಪಗೊಂಡು ಬೈದು ಕಳಿಸುತ್ತಾನೆ.
ಅಪ್ಪ, ತನ್ನ ಯೂನಿಫಾರ್ಮ್ ಸುಟ್ಟಿದ್ದನ್ನು ನೆನಪಿಸಿಕೊಂಡು ವಿದ್ಯಾ ಅಳುತ್ತಾ ಕೂರುತ್ತಾಳೆ. ತನ್ನ ಬ್ಯಾಗಿನಲ್ಲಿದ್ದ ಪುಸ್ತಕಗಳನ್ನು ಎದೆಗೆ ಅವುಚಿಕೊಳ್ಳುತ್ತಾಳೆ. ಕಾಲೇಜಿನಲ್ಲಿ ಕಳೆದ ಹಳೆದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾಳೆ. ಒಂದೆಡೆ ವಿದ್ಯಾಗೆ ಮದುವೆ ಇಷ್ಟ ಇಲ್ಲದೆ ಅಳುತ್ತಿದ್ದರೆ, ಮತ್ತೊಂದೆಡೆ ಭದ್ರೇಗೌಡ ತನ್ನ ಪ್ರೀತಿಯ ಭಾವೀ ಪತ್ನಿಯನ್ನು ನೆನೆದು ಖುಷಿಯಾಗಿರುತ್ತಾನೆ. ಇತ್ತ ಕಾಲೇಜಿನಲ್ಲಿ ಪ್ರಿನ್ಸಿಪಲ್ ಎಲ್ಲಾ ತರಗತಿಗಳಿಗೂ ತೆರಳಿ ಪರೀಕ್ಷೆ ಹತ್ತಿರ ಬರುತ್ತಿದೆ ಎಲ್ಲರೂ ಚೆನ್ನಾಗಿ ಓದಿ, ಹಾಗೇ ಯಾರೂ ಕಾಲೇಜಿಗೆ ತಪ್ಪಿಸಿಕೊಳ್ಳಬಾರದು ಎಂದು ಸಲಹೆ ನೀಡುತ್ತಾರೆ. ವಿದ್ಯಾ ಗೈರಾಗಿರುವುದು ಅವಳ ಕ್ಲಾಸ್ ಟೀಚರ್ ಮೂಲಕ ಗೊತ್ತಾಗುತ್ತದೆ. ಸರಿ ನಾನು ಇದರ ಬಗ್ಗೆ ವಿಚಾರಿಸುತ್ತೇನೆ ಎಂದು ಪ್ರಿನ್ಸಿಪಲ್ ಹೇಳುತ್ತಾರೆ.
ವಿದ್ಯಾಗಾಗಿ 2 ಲಕ್ಷ ರೂ ಸೀರೆ, 60 ತೊಲ ಬಂಗಾರ ಖರೀದಿಸಿದ ಶಿವರಾಮೇಗೌಡ
ಇತ್ತ ಶಿವರಾಮೇಗೌಡ ಮದುವೆಗಾಗಿ ಸೀರೆ, ಒಡವೆ ಮಾರುವವನನ್ನು ಮನೆಗೆ ಖರೀದಿಸುತ್ತಾನೆ. ಸೀರೆ ಅಂಗಡಿಯವನು 56 ಸಾವಿರ ಬೆಲೆಯ ಸೀರೆ ತೋರಿಸುತ್ತಾನೆ. ಅದು ಬೇಡ 2 ಲಕ್ಷದ್ದು ಇದ್ದರೆ ನೋಡಿ ಎನ್ನುತ್ತಾನೆ. ಅದನ್ನು ಕೇಳಿ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ಸಾವಿತ್ರಿ ಹಾಗೂ ವಿನಂತಿ ಅಂತೂ ಇದನ್ನು ಸಹಿಸಿಕೊಳ್ಳಲೂ ಆಗದೆ, ಅಣ್ಣನಿಗೆ ಎದುರು ಮಾತನಾಡಲೂ ಆಗದೆ ಸುಮ್ಮನೆ ನೋಡುತ್ತಾ ನಿಲ್ಲುತ್ತಾರೆ. ಅಲ್ಲ ಧಾರೆಗೆ 2 ಲಕ್ಷದ ಸೀರೆ ಅವಶ್ಯಕತೆ ಇದೆಯೇ? ಶ್ರೀಮಂತರ ಮನೆಯಿಂದ ಹೆಣ್ಣು ತಂದಿದ್ದರೆ ಅವರೇ ಇದೆಲ್ಲವನ್ನೂ ನಮಗೆ ಕೊಡುತ್ತಿದ್ದರು. ಆದರೆ ನೀನು ಸಂಬಂಧ ಬೆಳೆಸಿರುವುದು ಕುಡುಕನ ಮನೆಯಲ್ಲಿ, ಈಗ ನೋಡು ನಾವೇ ಎಲ್ಲವನ್ನೂ ಕೊಡಬೇಕು ಎಂದು ಶಿವರಾಮೇಗೌಡನ ತಾಯಿ ಕೊಂಕು ಮಾತನಾಡುತ್ತಾಳೆ.
ಶ್ರೀಮಂತಿಕೆ ಮುಖ್ಯವಲ್ಲ, ನನ್ನ ಮಗ ಇಷ್ಟಪಟ್ಟಿದ್ದಾನೆ ಎಂದರೆ ಅವನಿಗಾಗಿ ನಾನು ಏನನ್ನಾದರೂ ಮಾಡಲು ಸಿದ್ಧನಿದ್ದೇನೆ, ಈ ಶಿವರಾಮೇಗೌಡನ ಸೊಸೆ ಯಾವುದೂ ಕಡಿಮೆ ಬೆಲೆಯ ಸೀರೆ ಧರಿಸುವುದು ನನಗೆ ಇಷ್ಟವಿಲ್ಲ ಎನ್ನುತ್ತಾನೆ. ಜೊತೆಗೆ ಸೊಸೆಗೆ 60 ತೊಲ ಬಂಗಾರವನ್ನು ಖರೀದಿಸುತ್ತಾನೆ. ಸೀರೆ, ಒಡವೆ ಚೆನ್ನಾಗಿದೆ ಎಂದು ಈಶ್ವರಿ ಬಾಯಿ ಮಾತಿನಲ್ಲಿ ಹೇಳಿದರೂ, ಒಳಗೆ ಮಾತ್ರ ದೀಪ ಉರಿಯುವಾಗ ಜೋರಾಗಿ ಉರಿಯುತ್ತದೆ, ಹಾಗೇ ನಿನ್ನ ಅಂತ್ಯಕಾಲ ಸಮೀಪಿಸಿತು ಎನ್ನಿಸುತ್ತಿದೆ, ಆದಕ್ಕೆ ನೀನು ಹೀಗೆಲ್ಲಾ ವರ್ತಿಸುತ್ತಿದ್ದೀಯ ಎಂದು ಶಿವರಾಮೇಗೌಡನನ್ನು ಬೈದುಕೊಳ್ಳುತ್ತಾಳೆ. ಈ ಸೀರೆ ಒಡವೆಯನ್ನು ನೀನೇ ಹೋಗಿ ವಿದ್ಯಾಗೆ ಕೊಟ್ಟು ಬಾ ಎಂದು ಈಶ್ವರಿಗೆ ಶಿವರಾಮೇಗೌಡ ಹೇಳುತ್ತಾನೆ.
ಮದುವೆ ನಿಲ್ಲಿಸಿ ಎಂದು ಈಶ್ವರಿ ಬಳಿ ಕೈಮುಗಿದು ಮನವಿ ಮಾಡಿದ ವಿದ್ಯಾ
ಶಿವರಾಮೇಗೌಡ ಖರೀದಿಸಿದ ಸೀರೆ, ಒಡವೆಯನ್ನು ತೆಗೆದುಕೊಂಡು ಈಶ್ವರಿ ತನ್ನ ಮಗಳು ಚಿತ್ರಾ ಜೊತೆ ವಿದ್ಯಾ ಮನೆಗೆ ಬರುತ್ತಾಳೆ. ಚೆಲುವರಾಜ, ರತ್ನ ಹಾಗೂ ಕಾಳವ್ವ ಅವರನ್ನು ಸ್ವಾಗತಿಸುತ್ತಾರೆ. ಇದ್ದಕ್ಕಿದ್ದಂತೆ ಬಂದಿದ್ದೀರಿ, ನೀವು ಹೇಳಿ ಕಳಿಸಿದ್ದರೆ ನಾನೇ ಬರುತ್ತಿದ್ದೆ ಎನ್ನುತ್ತಾನೆ. ಇಲ್ಲ ನಾವೇ ಬರಬೇಕಾಗಿ ಬಂತು. ಇದರಲ್ಲಿ ವಿದ್ಯಾಗೆ ಬೇಕಾದ ಸೀರೆ, ಒಡವೆ ಇದೆ ಎಂದು ಬ್ಯಾಗ್ ಕೊಡುತ್ತಾಳೆ. ಅದನ್ನು ಕೇಳಿ ಚೆಲುವ ಖುಷಿಯಾಗುತ್ತಾನೆ. ವಿದ್ಯಾಳನ್ನು ಮಾತನಾಡಿಸಲು ಈಶ್ವರಿ ರೂಮ್ಗೆ ಬರುತ್ತಾಳೆ. ವಿದ್ಯಾ ಬೇಸರದಲ್ಲಿರುವುದನ್ನು ನೋಡಿ ಏನಾಯ್ತು ಎಂದು ಕೇಳುತ್ತಾಳೆ. ಮದುವೆ ಫಿಕ್ಸ್ ಆಗಿದೆಯಲ್ಲ, ತವರು ಮನೆ ಬಿಟ್ಟು ಹೋಗಬೇಕಲ್ಲ ಎಂದು ಅಳುತ್ತಿರುವುದಾಗಿ ರತ್ನ ಹೇಳುತ್ತಾಳೆ. ಅಪ್ಪ ನೋಡಿದರೆ ನಾಚಿಕೆ ಎನ್ನುತ್ತಾನೆ, ಅಮ್ಮ ನೋಡಿದರೆ ಬೇಸರ ಎನ್ನುತ್ತಾಳೆ. ಇದರಲ್ಲಿ ಏನೋ ವಿಷಯ ಇದೆ, ಅದನ್ನು ತಿಳಿದುಕೊಳ್ಳಲೇಬೇಕು ಎಂದು ಏನೋ ನೆಪ ಹೇಳಿ ಅವಳು ಹೊರಗೆ ಹೋಗುವಂತೆ ಮಾಡುತ್ತಾಳೆ.
ರತ್ನ ಹೊರಗೆ ಹೋದ ನಂತರ ವಿದ್ಯಾ ಬಳಿ ಮಾತನಾಡುವ ಈಶ್ವರಿ ಏನೇ ಇದ್ದರೂ ನನ್ನ ಬಳಿ ಹೇಳಿಕೋ ಎನ್ನುತ್ತಾಳೆ. ಇದೇ ಸರಿಯಾದ ಸಮಯ ಎಂದು ವಿದ್ಯಾ ನನಗೆ ಈ ಮದುವೆ ಇಷ್ಟವಿಲ್ಲ ಎನ್ನುತ್ತಾಳೆ. ಆ ಮಾತು ಕೇಳಿ ಈಶ್ಚರಿಗೆ ಶಾಕ್ ಆಗುತ್ತದೆ. ನಾನು ಓದಬೇಕು, ಓದಿ ಡಾಕ್ಟರ್ ಆಗಿ ಸಾಧನೆ ಮಾಡಬೇಕು, ದಯವಿಟ್ಟು ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಿಬಿಡಿ ಎಂದು ಮನವಿ ಮಾಡುತ್ತಾಳೆ. ಶಿವರಾಮೇಗೌಡನಿಗೆ ಇವಳೇ ತಕ್ಕ ಸೊಸೆ ಎಂದು ಈಶ್ವರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಅಷ್ಟರಲ್ಲಿ ರತ್ನ ಜ್ಯೂಸ್ ತೆಗೆದುಕೊಂಡು ಅಲ್ಲಿಗೆ ಬರುತ್ತಾಳೆ. ಈಶ್ವರಿ ಮತ್ತೇನೂ ಮಾತನಾಡದೆ ಅವರ ಮನೆಯಿಂದ ಹೊರಡುತ್ತಾಳೆ.
ಈಶ್ವರಿ ಮುಂದಿನ ನಡೆ ಏನು? ಮದುವೆ ಇಷ್ಟ ಇಲ್ಲ ಅನ್ನೋದು ಮನೆಯವರಿಗೆ ಗೊತ್ತಾಗುವುದಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ